ಬೆಂಗಳೂರು ರೋಡ್ ರೇಜ್ : ಜಸ್ಟ್ ಮಿರರ್ ಗುದ್ದಿದ್ದಕ್ಕೆ ಹೋಯ್ತು ಬೈಕ್ ಸವಾರನ ಜೀವ
ಬೆಂಗಳೂರಿನಲ್ಲಿ ದಿನೇ ದಿನೇ ರೋಡ್ ರೇಜ್ ಪ್ರಕರಣಗಳು ಹೆಚ್ಚುತ್ತಿದೆ. ಪ್ರಯಾಣಿಕರಲ್ಲಿ ಆತಂಕ ಮನೆಮಾಡಿದೆ. ಇದಕ್ಕೆ ಪೂರಕವಾಗಿ ಪುಟ್ಟೇನಹಳ್ಳಿಯಲ್ಲಿ ಕಾರಿನ ಮಿರರ್ಗೆ ದರ್ಶನ್ ಎಂಬಾತನ ಬೈಕ್ ತಾಗಿದ ಸಲುವಾಗಿ ಕೋಪಗೊಂಡ ದಂಪತಿ, ದರ್ಶನ್ ಅನ್ನು ಹಿಂಬಾಲಿಸಿ ಕಾರಿನಿಂದ ಗುದ್ದಿದ್ದು, ಯುವಕ ಜೀವ ಕಳೆದುಕೊಂಡಿದ್ದಾನೆ.ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು, ಅಕ್ಟೋಬರ್ 29: ಇತ್ತೀಚೆಗೆ ಬೆಂಗಳೂರಿನಲ್ಲಿ (Bengaluru) ರೋಡ್ ರೇಜ್ (Road Rage cases) ಪ್ರಕರಣಗಳು ಹೆಚ್ಚಿದ್ದು, ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಪ್ರಶ್ನೆ ಮೂಡಿಸಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಒಂದು ರೋಡ್ ರೇಜ್ ಘಟನೆ ಯುವಕನ ಜೀವ ಕಸಿದುಕೊಂಡಿದೆ. ಕಾರಿನ ಮಿರರ್ ಬೈಕ್ಗೆ ಟಚ್ ಆಗಿದ್ದಕ್ಕೆ ಕೋಪಗೊಂಡು ಹಿಂಬಾಲಿಸಿ ಡಿಕ್ಕಿ ಹೊಡೆದ ಪರಿಣಾಮ, ದರ್ಶನ್ ಎಂಬ ಯುವಕ ಮೃತಪಟ್ಟಿದ್ದಾನೆ. ವರುಣ್ ಎಂಬ ಮತ್ತೊಬ್ಬ ಯುವಕ ಗಾಯಗೊಂಡಿದ್ದಾನೆ.
ಕಾರಿನ ಮಿರರ್ಗೆ ಹೊಡೆದಿದ್ದಕ್ಕೆ ಕೊಲೆ
ಅಕ್ಟೋಬರ್ 27ರ ರಾತ್ರಿ 11.30ರ ಸುಮಾರಿಗೆ ಶ್ರೀರಾಮ ಲೇಔಟ್ನಲ್ಲಿ ಈ ಘಟನೆ ನಡೆದಿದೆ. ದರ್ಶನ್ ಮತ್ತು ವರುಣ್ ಇಬ್ಬರೂ ಬೈಕ್ನಲ್ಲಿ ಹೋಗುತ್ತಿದ್ದು, ಬೈಕ್ ಮುಂದೆ ಹೋಗುತ್ತಿದ್ದ ಕಾರಿನ ಮಿರರ್ಗೆ ಹೊಡೆದಿತ್ತು. ಈ ವೇಳೆ ಮಿರರ್ ನ ಗಾಜು ಒಡೆದಿದ್ದು, ಕಾರಿನಲ್ಲಿದ್ದ ಮನೋಜ್ ಕುಮಾರ್ ಮತ್ತು ಆರತಿ ಶರ್ಮ ದಂಪತಿ ಇದರಿಂದ ಕೋಪಗೊಂಡು, ಸುಮಾರು ಎರಡು ಕಿಲೋಮೀಟರ್ಗಳಷ್ಟು ಹಿಂಬಾಲಿಸಿ ಬೈಕ್ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ತನಿಖೆಯಲ್ಲಿ ಪತ್ತೆಯಾಗಿದೆ.
ಡಿಕ್ಕಿ ಹೊಡೆದ ರಭಸಕ್ಕೆ ದರ್ಶನ್ ಮತ್ತು ವರುಣ್ ಇಬ್ಬರೂ ರಸ್ತೆಗುರುಳಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ದರ್ಶನ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಪ್ರಾಥಮಿಕವಾಗಿ ಅಪಘಾತ ಎಂದು ಜೆಪಿ ನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಯೂ ಟರ್ನ್ ತೆಗೆದುಕೊಂಡು ಬಂದು ಮತ್ತೊಮ್ಮೆ ಡಿಕ್ಕಿ ಹೊಡೆದಿದ್ದ ದಂಪತಿ
ಮೊದಲು ಇಬ್ಬರಿಗೂ ಡಿಕ್ಕಿ ಹೊಡೆದ ನಂತರ ತಪ್ಪಿಸಿಕೊಂಡ ದಂಪತಿ, ಮತ್ತೆ ಯೂ ಟರ್ನ್ ತೆಗೆದುಕೊಂಡು ಬಂದು ಮತ್ತೊಮ್ಮೆ ಡಿಕ್ಕಿ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಸ್ಥಳದಿಂದ ಪಲಾಯನ ಮಾಡಿ, ಕೆಲ ಸಮಯದ ಬಳಿಕ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸ್ಥಳಕ್ಕೆ ಮರಳಿ ಕಾರಿನ ಬಿಡಿ ಭಾಗಗಳನ್ನು ತೆಗೆದುಕೊಂಡು ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸ್ ತನಿಖೆಯ ವೇಳೆ ತಿಳಿದುಬಂದಿದೆ.
ಆರೋಪಿಗಳಾದ ಮನೋಜ್ ಕುಮಾರ್ ಕಳರಿಪಯಟ್ಟು ಶಿಕ್ಷಕನಾಗಿದ್ದು, ಬನ್ನೇರುಘಟ್ಟ ರಸ್ತೆಯಲ್ಲಿ ಅಕಾಡೆಮಿ ನಡೆಸುತ್ತಿದ್ದಾನೆ. ಘಟನೆ ಬಳಿಕ ಸ್ಥಳದಿಂದ ಪಲಾಯನ ಮಾಡಿದ ಈ ದಂಪತಿಯನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



