ಒಂದು ಅಡಿ ಜಾಗಕ್ಕೆ ಕೊಲೆ ಮಾಡಿದ್ದ ಆರೋಪಿಗಳು ಅರೆಸ್ಟ್; ಹತ್ಯೆಯ ಹಿಂದಿದೆ ಒಂದು ವರ್ಷ ಹಳೆಯ ಸೇಡು

ಹಳೆ ವೈಷಮ್ಯದ ನೆಪದಲ್ಲಿ ಜಾಗದ ವಿಚಾರವಾಗಿ ಕಿರಿಕ್ ಮಾಡಿ ಪಕ್ಕದ ಮನೆಯ ರಮೇಶ್‌‌‌‌ ಎಂಬ ವ್ಯಕ್ತಿಯನ್ನು ಜಗದೀಶ್, ಮೋಸಿಸ್, ಕೃಷ್ಣಪ್ಪ ಅಲಿಯಾಸ್ ಜೋಸೆಫ್ ಎಂಬುವವರು ಕೊಚ್ಚಿ ಕೊಲೆ ಮಾಡಿದ್ದರು. ಸದ್ಯ ಈಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕೊಲೆಗೆ ಕಾರಣವಾಗಿರುವ ಒಂದು ವರ್ಷ ಹಳೆಯ ಸೇಡು ಹಾಗೂ ಕೊಲೆಗೆ ಮಾಡಲಾಗಿದ್ದ ಮಾಸ್ಟರ್ ಪ್ಲಾನ್ ಬಗ್ಗೆ ಆರೋಪಿಗಳು ಎಲೆ ಎಲೆಯಾಗಿ ಬಿಚ್ಚಿಟ್ಟಿದ್ದಾರೆ.

ಒಂದು ಅಡಿ ಜಾಗಕ್ಕೆ ಕೊಲೆ ಮಾಡಿದ್ದ ಆರೋಪಿಗಳು ಅರೆಸ್ಟ್; ಹತ್ಯೆಯ ಹಿಂದಿದೆ ಒಂದು ವರ್ಷ ಹಳೆಯ ಸೇಡು
ಬಂಧಿತ ಕೊಲೆ ಆರೋಪಿಗಳು
Follow us
| Updated By: ಆಯೇಷಾ ಬಾನು

Updated on: Nov 05, 2023 | 12:03 PM

ಆನೇಕಲ್, ನ.05: ಕೇವಲ ಒಂದು ಅಡಿ ಜಾಗಕ್ಕೆ ವ್ಯಕ್ತಿಯನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ (Murder) ಮಾಡಿದ್ದ ಆರೋಪಿಗಳನ್ನು ಆನೇಕಲ್ ಉಪವಿಭಾಗದ ಹೆಬ್ಬಗೋಡಿ ಪೊಲೀಸರು (Hebbagodi Police) ಬಂಧಿಸಿದ್ದಾರೆ. ಆರೋಪಿಗಳ ಬಂಧನದ ಬಳಿಕ ಕೊಲೆ ಅಸಲಿ ಸತ್ಯ ಬಯಲಾಗಿದೆ. ಕಳೆದ ತಿಂಗಳ (ಅ.29) 29ನೇ ತಾರೀಖಿನಂದು ಹಳೆ ವೈಷಮ್ಯದ ನೆಪದಲ್ಲಿ ಜಾಗದ ವಿಚಾರವಾಗಿ ಕಿರಿಕ್ ಮಾಡಿ ಪಕ್ಕದ ಮನೆಯ ರಮೇಶ್‌‌‌‌ ಎಂಬ ವ್ಯಕ್ತಿಯನ್ನು ಜಗದೀಶ್, ಮೋಸಿಸ್, ಕೃಷ್ಣಪ್ಪ ಅಲಿಯಾಸ್ ಜೋಸೆಫ್ ಎಂಬುವವರು ಕೊಚ್ಚಿ ಕೊಲೆ ಮಾಡಿದ್ದರು. ಸದ್ಯ ಈಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಜಗದೀಶ್, ಮೋಸಿಸ್ ಇಬ್ಬರೂ ಹೆಬ್ಬಗೋಡಿ ಸ್ಟೇಷನ್​ನಲ್ಲಿ ರೌಡಿ ಶೀಟರ್​ಗಳಾಗಿದ್ದು ಕೊಲೆ, ಕಳ್ಳತನ, ದರೋಡೆ, ಹಲ್ಲೆ ಇತ್ಯಾದಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ.

ಹಳೆಯ ಜಗಳದ ನೆಪದಲ್ಲಿ ಕಿರಿಕ್ ಮಾಡಿ ಕೊಲೆ

ಕಳೆದ ಒಂದು ವರ್ಷದ ಹಿಂದೆ ಪಟಾಕಿ ಹೊಡೆಯುವ ವಿಚಾರಕ್ಕೆ ಗಲಾಟೆ ನಡೆದಿತ್ತು. ಆಗ ಜೋಸೆಫ್, ಶೋಭಿತ, ಜಗದೀಶ್ ಹಾಗೂ ಮೋಸಿಸ್ ಎಂಬುವವರು ಮೃತ ರಮೇಶ್ ಪತ್ನಿ ಕಾವ್ಯಳ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ರಮೇಶ್ ಪತ್ನಿ ಕಾವ್ಯ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಜಗದೀಶ್ ಹಾಗೂ ಮೋಸಿಸ್ ಇಬ್ಬರನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು. ಜೈಲಿನಿಂದ ಬೇಲ್ ಮೇಲೆ ಬಂದ ಜಗದೀಶ್ ಹಾಗೂ ಮೋಸಿಸ್ ಪ್ರತಿ ದಿನ ರಮೇಶ್ ಕುಟುಂಬಕ್ಕೆ ಟಾರ್ಚರ್ ಕೊಡುತ್ತಿದ್ದರು. ಪತ್ನಿ ಮತ್ತು ಮಕ್ಕಳೊಂದಿಗೆ ಹೆಬ್ಬಗೋಡಿಯಲ್ಲಿ ವಾಸವಾಗಿದ್ದ ರಮೇಶ್ ತನ್ನ ಹಳೆ ಮನೆ ಕೆಡವಿ ಹೊಸ ಮನೆ ಕಟ್ಟಲು ಮುಂದಾಗಿದ್ದರು. ಆದರೆ ಈ ಆರೋಪಿಗಳು ಹಳೆ ವೈಷಮ್ಯದ ನೆಪದಲ್ಲಿ ಜಾಗದ ವಿಚಾರವಾಗಿ ರಮೇಶ್ ಕುಟುಂಬದ ಜೊತೆ ಕಿರಿಕ್ ಮಾಡಿಕೊಂಡಿದ್ದರು.

ಇದನ್ನೂ ಓದಿ: ಹೆಲ್ಮೆಟ್​ ಇಲ್ಲ, ಸಿಗ್ನಲ್​ ಜಂಪ್; ಈ ವರ್ಷ ಬೆಂಗಳೂರಿನಲ್ಲಿ ಲಕ್ಷ ಲಕ್ಷ ಟ್ರಾಫಿಕ್ ಬ್ರೇಕ್ ಕೇಸ್​ ದಾಖಲು

ಹೊಂಚು ಹಾಕಿ ಕೊಲೆ

ಇನ್ನು ಜೋಸೆಫ್, ಜಗದೀಶ್, ಮೋಸಿಸ್ ರಮೇಶ್ ಕೊಲೆ ಮಾಡಲು ಪ್ಲಾನ್ ರೂಪಿಸಿದ್ದರು. ಹೊಂಚು ಹಾಕಿ ಬಾತ್ ರೂಮ್ ನಲ್ಲಿ ಅವಿತುಕೊಂಡಿದ್ದರು. ರಮೇಶ್ ಹೊರ ಬರುತ್ತಿದ್ದಂತೆ ಕೊಲೆ ಮಾಡಿದ್ದಾರೆ. ತಾನು ಕಟ್ಟುತ್ತಿದ್ದ ನಿರ್ಮಾಣ ಹಂತದ ಮನೆಯ ಜಾಗದಲ್ಲೇ ರಮೇಶ್​ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಪತ್ನಿ, ಮಕ್ಕಳ ಎದುರಲ್ಲೆ ಹಂತಕರು ಪ್ರಾಣ ತೆಗೆದಿದ್ದಾರೆ. ಕೊಲೆಯ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದ್ದು ಕೃತ್ಯ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ