
ಬೆಂಗಳೂರು, ಮೇ 17: ಸಮಾಜದಲ್ಲಿ ಹಳೆಯ ದ್ವೇಷಕ್ಕೆ, ರೋಷಕ್ಕೆ ಕೊಲೆ ನಡೆದ ಉದಾಹರಣೆಗಳಿವೆ. ಹೆಣ್ಣಿಗಾಗಿ, ಹಣಕ್ಕಾಗಿಯೂ ಕೊಲೆ, ಸುಲಿಗೆಗಳು ನಡೆಯುತ್ತವೆ. ಆದರೆ ಕೇವಲ 200 ರೂ. ಸಾಲ (Loan) ವಾಪಸ್ ಕೇಳಿದ್ದಕ್ಕೆ ಕೊಲೆ ಮಾಡಿದ ಪ್ರಕರಣ ಇದೇ ಮೊದಲಿರಬಹುದು. ಹೌದು, ಟೀ ಅಂಗಡಿ ಮಾಲೀಕ ಬಾಕಿ ಇರುವ ಹಣ ನೀಡುವಂತೆ ಕೇಳಿದ ಕಾರಣಕ್ಕೇ ದೊಡ್ಡಬಳ್ಳಾಪುರ ತಾಲೂಕಿನ ಅಪ್ಪಕಾರನಹಳ್ಳಿ ಗೇಟ್ನಲ್ಲಿ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದಾನೆ.
ದ್ಯಾವಸಂದ್ರ ಗ್ರಾಮದ ಮಂಜುನಾಥ (40) ಕೊಲೆಯಾದ ದುರ್ದೈವಿ. ಮೇ 12 ರಂದು ಅಪ್ಪಕಾರನಹಳ್ಳಿಯ ಮುನಿಯಪ್ಪ ಎಂಬಾತ ಮಂಜುನಾಥ್ ಅವರ ಟೀ ಅಂಗಡಿಗೆ ಬಂದು ಮತ್ತೆ ಸಾಲ ಕೇಳಿದ್ದ. ಈ ವೇಳೆ ಮಾಲೀಕ ಮಂಜುನಾಥ್, ಹಳೆಯ ಟೀ ಸಾಲದ ಬಾಕಿ ಹಣ 200 ರೂ.ಕೊಡು, ಇನ್ನು ಮುಂದೆ ಸಾಲ ಕೊಡುವುದಿಲ್ಲ ಎಂದು ಹೇಳಿದ್ದ.
ಈ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಆರೋಪಿ ಮುನಿಯಪ್ಪ, ಪಕ್ಕದಲ್ಲೇ ಇದ್ದ ನೀಲಗಿರಿ ದೊಣ್ಣೆಯನ್ನು ತೆಗೆದುಕೊಂಡು ಮಂಜುನಾಥ್ ತಲೆಗೆ ಮನಸೋಇಚ್ಛೆ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದ. ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಂಜುನಾಥ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಆರೋಪಿ ಮುನಿಯಪ್ಪ ಈ ಹಿಂದೆ ಹೆತ್ತ ತಾಯಿಗೂ ಚಾಕು ಹಾಕಿ ಜೈಲು ಸೇರಿದ್ದ. ಇತ್ತೀಚೆಗಷ್ಟೇ ಬೇಲ್ ಮೇಲೆ ಹೊರಗೆ ಬಂದಿದ್ದ ಈತ ಈಗ ಮತ್ತೊಂದು ಕೊಲೆ ಮಾಡಿದ್ದಾನೆ. ದೊಡ್ಡಬೆಳವಂಗಲ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಕಲಬುರಗಿ ನಗರದ ರಾಮಮಂದಿರದ ಬಳಿ ನಿವೃತ್ತ ಸೈನಿಕ ರವಿಚಂದ್ರ ಖೇಡ್ (45) ಎಂಬುವವರನ್ನು ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದು ಬರ್ಬರ ಹತ್ಯೆ ಮಾಡಲಾಗಿದೆ. ನಾಲ್ಕು ವರ್ಷಗಳ ಹಿಂದೆ ಬಿಎಸ್ಎಫ್ನಿಂದ (BSF) ನಿವೃತ್ತಿಯಾಗಿದ್ದ ಇವರು, ಪ್ರಸ್ತುತ ಇಂಡಿಯನ್ ಆಯಿಲ್ ಡಿಪೋದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ ಪೋಕ್ಸೋ ಕೇಸ್ನಲ್ಲಿ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಪುತ್ರ ಭಗೀರಥ್ ಸಾಯಿ ಅರೆಸ್ಟ್
ರವಿಚಂದ್ರ ನೈಟ್ ಶಿಫ್ಟ್ನಲ್ಲಿದ್ದಾಗ ಖಾಸಗಿ ಜಾಗದಲ್ಲಿ ಈ ಕೊಲೆ ನಡೆದಿದೆ. ಕಳೆದ ತಿಂಗಳು ಈ ವಿವಾದಿತ ಜಾಗದಲ್ಲಿ ಟಿನ್ ಶೆಡ್ ಕಾಂಪ್ಲೆಕ್ಸ್ ನಿರ್ಮಿಸಲಾಗಿತ್ತು. ಆದರೆ ವಿರೋಧಿ ಗುಂಪೊಂದು ರಾತ್ರೋರಾತ್ರಿ ಜೆಸಿಬಿ ತಂದು ಅದನ್ನು ಕೆಡವಿ ಹಾಕಿತ್ತು. ಇದೇ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಮಾಜಿ ಸೈನಿಕನನ್ನು ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ