ನೆಲಮಂಗಲ, ಫೆ.25: ಕಾಯಿಸಿದ ಕಬ್ಬಿಣದಿಂದ ಬರೆ ಎಳೆದು ಮಗಳಿಗೆ ಮೇಲೆ ಮಲತಾಯಿಯೊಬ್ಬಳು ಕ್ರೌರ್ಯ ಮೆರೆದ ಪ್ರಕರಣ ಬೆಂಗಳೂರು (Bengaluru) ಉತ್ತರ ತಾಲೂಕಿನ ಅಂಚೆಪಾಳ್ಯದಲ್ಲಿ ನಡೆದಿದೆ. ಪತಿ ಕೆಲಸಕ್ಕೆ ತೆರಳಿದ ಬಳಿಕ ಮಹಿಳೆ ಏನೇನೋ ನೆಪವೊಡ್ಡಿ ಬಾಲಕಿಗೆ ಚಿತ್ರಹಿಂಸೆ ನೀಡುತ್ತಿದ್ದಳು.
ಶ್ರೀನಿವಾಸ್ ಪವಿತ್ರಾ ಎಂಬಾಕೆಯನ್ನು ವಿವಾಹವಾಗಿದ್ದರು. ದಂಪತಿಗೆ ಒಬ್ಬಳು ಹೆಣ್ಣು ಮಗು ಕೂಡ ಜನಿಸಿದೆ. ಐದು ವರ್ಷಗಳ ಹಿಂದೆ ಪವಿತಾಳಿಗೆ ಶ್ರೀನಿವಾಸ್ ವಿಚ್ಛೇದನವನ್ನೂ ನೀಡಿದ್ದರು. ಬಳಿಕ ಮಮತಾ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದರು. ಆದರೆ, ಏನೇನೋ ನೆಪವೊಡ್ಡಿ ನಾಲ್ಕನೇ ತರಗತಿ ಓದುತ್ತಿರುವ ಬಾಲಕಿಗೆ ಮಮತಾ ಚಿತ್ರಹಿಂಸೆ ನೀಡಲು ಆರಂಭಿಸಿದ್ದಾಳೆ. ಬಾಲಕಿ ತುಂಬ ಹಠ ಮಾಡುತ್ತಾಳೆ ಎಂದು ಗಂಡನಿಗೆ ದೂರು ನೀಡುವ ಆಕೆ, ಪತಿ ಕೆಲಸಕ್ಕೆ ತೆರಳಿದ ನಂತರ ಮಗು ಎಂಬುದನ್ನು ಮರೆದು ಕಬ್ಬಿಣ ಕಾಯಿಸಿ ಬಾಲಕಿ ಮೈಮೇಲೆ ಬರೆ ಎಳೆದು ಅಮಾನವೀಯವಾಗಿ ವರ್ತಿಸುತ್ತಿದ್ದಾಳೆ.
ಇದನ್ನೂ ಓದಿ: ಧಾರವಾಡ: ಮಕ್ಕಳ ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಆತ್ಮಹತ್ಯೆಗೆ ಶರಣಾದ ತಾಯಿ
ಮಲತಾಯಿಯ ಚಿತ್ರಹಿಂಸೆ ಬಗ್ಗೆ ಮಾತನಾಡಿದ ಬಾಲಕಿ, ನನ್ನ ಮೇಲೆ ತಾಯಿ ಯಾಕೆ ಹಲ್ಲೆ ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ. ಶಾಲೆಯಲ್ಲಿ ಹೊಡೆದಿದ್ದಾರೆ ಎಂದು ತಾಯಿ ತಂದೆಗೆ ಸುಳ್ಳು ಹೇಳುತ್ತಿದ್ದಾಳೆ. ಅಜ್ಜಿ ಮನೆಯಲ್ಲಿ ಇದ್ದಾಗಲೂ ಗಲಾಟೆ ಮಾಡಿ ಕಡೆದುಕೊಂಡು ಬರಲು ತಾಯಿ ಹೇಳಿದ್ದಳು ಎಂದು ಹೇಳಿದ್ದಾಳೆ.
ಮಲತಾಯಿ ಮಗಳ ಮೇಲೆ ಕ್ರೌರ್ಯ ಮೆರೆದ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯನ್ನು ನಿನ್ನೆ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕಿಯನ್ನು ನಿನ್ನೆ ರಾತ್ರಿ ನೆಲಮಂಗಲದ ದತ್ತು ಕೇಂದ್ರದಲ್ಲಿ ಇರಿಸಲಾಗಿತ್ತು. ಇದೀಗ ವಿಚಾರಣೆಗೆಂದು ಬಾಲಕಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:55 am, Sun, 25 February 24