
ನೆಲಮಂಗಲ, ನವೆಂಬರ್ 28: ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಯಾದಗಿರಿ ಮೂಲದ ಬಸವರಾಜು (28) ಕೊಲೆಯಾದ ವ್ಯಕ್ತಿಯಾಗಿದ್ದು, ಪ್ರಕರಣ ಸಂಬಂಧ ಬಸವರಾಜು ಪತ್ನಿ ಶರಣಮ್ಮ(25), ಪ್ರಿಯಕರ ವೀರಭದ್ರ (19) ಮತ್ತು ಅನಿಲ್ ಎಂಬಾತನನ್ನು ಬಂಧಿಸಲಾಗಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿ ಎಂಬ ಕಾರಣಕ್ಕೆ ಪತಿಯನ್ನೇ ಪತ್ನಿ ಕೊಲೆ ಮಾಡಿಸೋರೋದು ತನಿಖೆ ವೇಳೆ ಬಯಲಾಗಿದೆ.
ನಾಲ್ಕು ವರ್ಷಗಳ ಹಿಂದೆ ಮದುವೆ ಆಗಿದ್ದ ಬಸವರಾಜು, ಶರಣಮ್ಮ ದಂಪತಿ ತಿಗಳರಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆರೋಪಿಗಳಲ್ಲಿ ಓರ್ವನಾದ ವೀರಭದ್ರ ತಂದೆ ಬಳಿ ಈ ದಂಪತಿ ಗಾರೆ ಕೆಲಸ ಮಾಡಿಕೊಂಡಿದ್ದು, ವೀರಭದ್ರ ಕೆಲಸಗಾರರನ್ನು ನೋಡಿಕೊಳ್ಳುತ್ತಿದ್ದ. ಈ ವೇಳೆ ವೀರಭದ್ರ ಮತ್ತು ಶರಣಮ್ಮ ನಡುವೆ ಸಲುಗೆ ಬೆಳೆದಿದೆ. ಆ ಸಲುಗೆ ಅಕ್ರಮ ಸಂಬಂಧದ ವರೆಗೆ ಹೋಗಿದೆ. ಹೀಗಾಗಿ ನ.19ರಂದು ಮದ್ಯ ಸೇವಿಸಿ ಬಸವರಾಜು ಮಲಗಿದ್ದ ವೇಳೆ ಪ್ರಿಯಕರನನ್ನ ಮನೆಗೆ ಕರೆಸಿಕೊಂಡು ಶರಣಮ್ಮ ಕೊಲ್ಲಿಸಿದ್ದಾಳೆ.
ತಲೆ ಮೇಲೆ ಕಲ್ಲು ಎತ್ತಿಹಾಕಿ, ನಂತರ ನೇಣು ಬಿಗಿದು ಬರ್ಬರವಾಗಿ ಬಸವರಾಜು ಕೊಲೆ ಮಾಡಲಾಗಿದೆ. ಬಳಿಕ ಶವವನ್ನ ಗಂಗೊಂಡಹಳ್ಳಿ ನಿರ್ಜನ ಪ್ರದೇಶಕ್ಕೆ ಆರೋಪಿಗಳು ಸಾಗಿಸಿದ್ದು, ಪೆಟ್ರೋಲ್ ಸುರಿದು ಶವವನ್ನು ಸುಟ್ಟುಹಾಕಿದ್ದಾರೆ.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪ್ರೇಯಸಿಯನ್ನು ಕೊಂದು, ಆಕೆಯ ಶವವನ್ನು ಕಾರಲ್ಲೇ ಬಿಟ್ಟು ಮಲಗಿದ ಆಸಾಮಿ!
ಬಸವರಾಜು ಕೊಲೆಗೆ ಒಂದು ತಿಂಗಳ ಹಿಂದೆಯೇ ಪ್ಲ್ಯಾನ್ ನಡೆದಿತ್ತು. ಸುರೇಶ್ ಮೃತದೇಹ ಸುಟ್ಟ ಮರುದಿನ ಅದೇ ಸ್ಥಳಕ್ಕೆ ಬಂದು ಆರೋಪಿಗಳು ನೋಡಿ ಹೋಗಿದ್ದರು. ಈ ವೇಳೆ ಮೃತದೇಹ ಇಲ್ಲದನ್ನ ಕಂಡು ಹೋಗಲಿ ಬಿಡು ಎಂದುಕೊಂಡಿದ್ದರು. ಆ ಬಳಿಕ ಮನೆಯಲ್ಲಿ ಚೆಲ್ಲಿದ್ದ ನೆತ್ತರು ತೊಳೆದ ಶರಣಮ್ಮ, ನನ್ನ ಗಂಡ ಕಾಣೆಯಾಗಿದ್ದಾನೆ ಹುಡುಕಿಕೊಡಿ ಎಂದು ಬ್ಯಾಡರಹಳ್ಳಿ ಠಾಣೆ ಮೆಟ್ಟಿಲೇರಿದ್ದಳು. ಆದರೆ ಅಷ್ಟರಲ್ಲಾಗಲೇ ಪೊಲೀಸರಿಗೆ ಕೊಲೆ ಬಗ್ಗೆ ಮಾಹಿತಿ ಸಿಕ್ಕಿತ್ತು ಎನ್ನಲಾಗಿದೆ. ಬಸವರಾಜು ಕೊಲೆ ಬಳಿಕ ಬಿಳಿ ಬಣ್ಣದ ಕಾರ್ನಲ್ಲಿ ಆರೋಪಿಗಳು ಮೃತದೇಹ ಸಾಗಿಸಿರುವ ದೃಶ್ಯ ಕೂಡ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಇದೇ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನ ಹೆಡೆಮುರಿ ಕಟ್ಟಿದ್ದಾರೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.