ಆ್ಯಂಬುಲೆನ್ಸ್ ಸಂಚಾರಕ್ಕೆ 1,800 ಕೋಟಿ ಟೆಂಡರ್ ವಿಚಾರ; ಸರ್ಕಾರದ ಕಾರ್ಯವೈಖರಿಗೆ ಹೈಕೋರ್ಟ್ ತರಾಟೆ

ಅನುಮೋದನೆಗೆ ವಿಳಂಬ ಮಾಡುತ್ತಿರುವುದೇಕೆ? ಅಂತ ಪ್ರಶ್ನಿಸಿದ ಹೈಕೋರ್ಟ್ 10 ದಿನಗಳಲ್ಲಿ ಉತ್ತರಿಸುವಂತೆ ತಾಕೀತು ಮಾಡಿದೆ.

ಆ್ಯಂಬುಲೆನ್ಸ್ ಸಂಚಾರಕ್ಕೆ 1,800 ಕೋಟಿ ಟೆಂಡರ್ ವಿಚಾರ; ಸರ್ಕಾರದ ಕಾರ್ಯವೈಖರಿಗೆ ಹೈಕೋರ್ಟ್ ತರಾಟೆ
ಕರ್ನಾಟಕ ಹೈಕೋರ್ಟ್​
Edited By: sandhya thejappa

Updated on: Nov 10, 2021 | 2:41 PM

ಬೆಂಗಳೂರು: ಆ್ಯಂಬುಲೆನ್ಸ್ ಸಂಚಾರಕ್ಕೆ 1,800 ಕೋಟಿ ಟೆಂಡರ್​ಗೆ ಈವರೆಗೆ ಅನುಮೋದನೆ ಸಿಗದ ಹಿನ್ನೆಲೆ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಸರ್ಕಾರ ತಾನಾಗಿಯೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿಯೇ ಹೈಕೋರ್ಟ್​ಗೆ ಇಷ್ಟು ಪಿಐಎಲ್ ದಾಖಲಾಗುತ್ತಿವೆ. ಈಗಿರುವ ಆ್ಯಂಬುಲೆನ್ಸ್​ಗಳಿಗೆ ಏಕೆ ಜಿಪಿಎಸ್ ಅಳವಡಿಸಿಲ್ಲ? ಆ್ಯಂಬುಲೆನ್ಸ್​ಗಳಿಗೆ ಏಕೆ ಕಂಟ್ರೋಲ್ ರೂಮ್ ಸ್ಥಾಪಿಸಿಲ್ಲ? ಟೆಂಡರ್ ಅನುಮೋದನೆಗೆ ವಿಳಂಬ ಮಾಡುತ್ತಿರುವುದೇಕೆ? ಅಂತ ಪ್ರಶ್ನಿಸಿದ ಹೈಕೋರ್ಟ್ 10 ದಿನಗಳಲ್ಲಿ ಉತ್ತರಿಸುವಂತೆ ತಾಕೀತು ಮಾಡಿದೆ.

ಅಸಮಾಧಾನ ಹೊರಹಾಕಿದ್ದ ಹೈಕೋರ್ಟ್
ಆ್ಯಂಬುಲೆನ್ಸ್​ಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ರೂಪಿಸಲು ನಿಗದಿಪಡಿಸಿದ್ದ 1,800 ಕೋಟಿ ಟೆಂಡರ್ ಅನ್ನು ಆರೋಗ್ಯ ಸಚಿವರ ಸೂಚನೆಯಂತೆ ರದ್ದುಗೊಳಿಸಿದ್ದರಿಂದ ಹೈಕೋರ್ಟ್ ಈ ಹಿಂದೆ ಅಸಮಾಧಾನ ವ್ಯಕ್ತಪಡಿಸಿತ್ತು. ಯಾವುದೇ ಕಾರಣವಿಲ್ಲದೆ ಜನೋಪಯೋಗಿ ಟೆಂಡರ್ ಪ್ರಕ್ರಿಯೆ ರದ್ದು ಮಾಡಿದ್ದಕ್ಕೆ ಹೊಣೆ ಯಾರು? ಈ ಬಗ್ಗೆ ಸಾರ್ವಜನಿಕರಿಗೆ ಸರ್ಕಾರ ಉತ್ತರ ಹೇಳಬೇಕು. ಟೆಂಡರ್ ಆಗಿದ್ದರೆ ಇಷ್ಟರಲ್ಲಿ ಆ್ಯಂಬುಲೆನ್ಸ್ ಲಭ್ಯವಾಗುತ್ತಿತ್ತು. ಕೊವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ನೆರವಾಗುತ್ತಿತ್ತು ಅಂತ ಸಿಜೆ ಅಭಯ್ ಶ್ರೀನಿವಾಸ್ ಒಕಾ‌ ಅಸಮಾಧಾನ ಹೊರ ಹಾಕಿದ್ದರು.

ಈ ಹಿಂದೆ ಏನಾಗಿತ್ತು?
ಬೆಂಗಳೂರಿನ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪೋ ರೋಗಿಗಳ ಸಂಖ್ಯೆ ಹೆಚ್ಚಾಗ್ತಿದೆ. ತುರ್ತು ಸ್ಥಿತಿಯಲ್ಲಿ ರೋಗಿಗಳನ್ನ ಉಳಿಸೋದಕ್ಕೆ ಗೋಲ್ಡನ್‌ ಹವರ್‌ನಲ್ಲಿ ಚಿಕಿತ್ಸೆ ಅಗತ್ಯ. ಟ್ರಾಫಿಕ್‌ ಜಾಮ್‌ನಲ್ಲಿ ಆ್ಯಂಬುಲೆನ್ಸ್‌ ಸಿಲುಕಿಯೇ ಹಲವು ರೋಗಿಗಳ ಜೀವ ಹೋಗ್ತಿದೆ. ಇದನ್ನ ತಪ್ಪಿಸೋಕೆ ಕ್ರಮಕೈಗೊಳ್ಳುವಂತೆ ನಿರ್ದೇಶನ ಕೋರಿ ಭಾರತ ಪುನರುತ್ಥಾನ ಟ್ರಸ್ಟ್ ಪಿಐಎಲ್‌ ಸಲ್ಲಿಸಿತ್ತು. ಹೈಕೋರ್ಟ್‌ ನೋಟಿಸ್‌ಗೆ ಉತ್ತರಿಸಿದ್ದ ಸರ್ಕಾರ ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆಂದು ಸರ್ಕಾರ 1800 ಕೋಟಿ ರೂಪಾಯಿಗಳ ಯೋಜನೆ ರೂಪಿಸಲಾಗಿದೆ ಅಂತ ತಿಳಿಸಿತ್ತು. ಇದಕ್ಕಾಗಿ ಟೆಂಡರ್‌ ಕೂಡ ಕರೆದಿರೋ ಮಾಹಿತಿಯನ್ನ ಹೈಕೋರ್ಟ್‌ಗೆ ಸಲ್ಲಿಸಿತ್ತು.

ಟೆಂಡರ್‌ ರದ್ದಾಗಿದ್ದೇಕೆ?
ರೋಗಿಗಳಿಗೆ ತಕ್ಷಣ ಚಿಕಿತ್ಸೆ ಒದಗಿಸಲು ಆ್ಯಂಬುಲೆನ್ಸ್ ಸಂಖ್ಯೆ ಹೆಚ್ಚಳ. ಕರೆ ಮಾಡಿದ ಕೆಲವೇ ಕ್ಷಣಗಳಲ್ಲಿ ಆ್ಯಂಬುಲೆನ್ಸ್ ಲಭ್ಯವಾಗುವಂತೆ ಮಾಡುವುದು. ಟ್ರಾಫಿಕ್ ಸಿಗ್ನಲ್ ರಹಿತ ಆ್ಯಂಬುಲೆನ್ಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವುದು ಯೋಜನೆಯ ಉದ್ದೇಶ. ಆರೋಗ್ಯ ಸಚಿವರಾಗಿದ್ದ ಶ್ರೀರಾಮುಲು ಹುದ್ದೆ ಡಾ. ಸುಧಾಕರ್ ಪಾಲಾದ ಕೂಡಲೇ ಯೋಜನೆಯೂ ಹಳ್ಳ ಹಿಡಿಯಿತು. ಯೋಜನೆಯಲ್ಲಿ ಲೋಪವಿರುವುದಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಿರುವ ಕಾರಣ ಕೊಟ್ಟು ಡಾ. ಸುಧಾಕರ್ ಟೆಂಡರ್ ರದ್ದುಪಡಿಸುವಂತೆ ಸೂಚಿಸಿದ್ದರು. ಇದರಿಂದ ಯೋಜನೆಯ ವಿಳಂಬವಾಗುವುದಾಗಿ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಆರೋಗ್ಯ ಸಚಿವರನ್ನು ಪ್ರತಿವಾದಿಯಾಗಿಸುವುದಾಗಿ ಎಚ್ಚರಿಸಿತ್ತು.

ಇದನ್ನೂ ಓದಿ

ಸಿದ್ದರಾಮಯ್ಯ ಹೆಸರು ಹೇಳಿ ನಾಲಿಗೆ ಹೊಲಸು ಮಾಡಿಕೊಳ್ಳಲ್ಲ: ಸಚಿವ ಕೆ.ಎಸ್.ಈಶ್ವರಪ್ಪ

ಸಿಂಗಾಪುರ್​ ಪ್ರಾಣಿ ಸಂಗ್ರಹಾಲಯದಲ್ಲಿರುವ ನಾಲ್ಕು ಸಿಂಹಗಳಿಗೆ ಕೊವಿಡ್​ ಸೋಂಕು; ಕೆಮ್ಮಿನಿಂದ ಬಳಲುತ್ತಿರುವ ಪ್ರಾಣಿಗಳು

Published On - 2:35 pm, Wed, 10 November 21

Web contact

TV9 Kannada

Read More
Follow Us