ಬಿಡಿಎ ಕಡತಗಳ ಒಂದೊಂದು ಹಾಳೆಯನ್ನೂ ಜಾಲಾಡುತ್ತಿರುವ ಎಸಿಬಿ, ಬ್ರೋಕರ್‌ಗಳಿಂದ ತುಂಬಿದ್ದ ಆವರಣದಲ್ಲಿ ಸ್ಮಶಾನ ಮೌನ

TV9 Digital Desk

| Edited By: ಸಾಧು ಶ್ರೀನಾಥ್​

Updated on:Nov 20, 2021 | 1:46 PM

ಬಿಡಿಎ ಕಚೇರಿಯಲ್ಲಿ ನಿನ್ನೆಯಿಂದ ಭ್ರಷ್ಟಾಚಾರ ನಿಗ್ರಹ ದಳ- ಎಸಿಬಿ ದಾಳಿ ಮುಂದುವರಿದಿದ್ದು ಸದಾ ಬ್ರೋಕರ್​​ಗಳಿಂದ ಗಿಜಿಗುಡುತ್ತಿದ್ದ ಸಂಸ್ಥೆ ಈಗ ಭಣಗುಡುತ್ತಿದೆ. ಬ್ರೋಕರ್​​ಗಳು ಯಾರೂ ಬಿಡಿಎ ಕಚೇರಿಯತ್ತ ಸುಳಿದಿಲ್ಲ. ತಂಡೋಪಾದಿಯಲ್ಲಿ ಆಗಮಿಸಿರುವ ಎಸಿಬಿ ಅಧಿಕಾರಿಗಳು ಎಲ್ಲ ವಾಹನಗಳನ್ನೂ ತಪಾಸಣೆ ಮಾಡುತ್ತಿದ್ದಾರೆ. ಇದರಿಂದ ಬ್ರೋಕರ್​​ಗಳಿಗೆ ಭಾರೀ ಟೆನ್ಶನ್​ ಶುರುವಾಗಿದೆ.

ಬಿಡಿಎ ಕಡತಗಳ ಒಂದೊಂದು ಹಾಳೆಯನ್ನೂ ಜಾಲಾಡುತ್ತಿರುವ ಎಸಿಬಿ, ಬ್ರೋಕರ್‌ಗಳಿಂದ ತುಂಬಿದ್ದ ಆವರಣದಲ್ಲಿ ಸ್ಮಶಾನ ಮೌನ
ಸಾಂಕೇತಿಕ ಚಿತ್ರ
Follow us

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಂದರೆ ಬಿಡಿಎ ಎಂದೇ ಖ್ಯಾತಿ-ಕುಖ್ಯಾತಿಗಳನ್ನು ಪಡೆದಿರುವ ರಾಜಧಾನಿ ಬೆಂಗಳೂರಿನಲ್ಲಿ ಸೈಟ್​ ಹಂಚಿಕೆ ಮಾಡುವ ಗುರುತರ ಜವಾಬ್ದಾರಿ ಹೊತ್ತಿರುವ ಸರಕಾರಿ ಸಂಸ್ಥೆ ಬಿಡಿಎ. ಆದರೆ ಈ ಬಿಡಿಎ ಗೂ ಅಕ್ರಮಗಳಿಗೂ ಅವಿನಾಭಾವ ಸಂಬಂಧ. ಈ ಸಂಬಂಧಕ್ಕೆ ತಳುಕು ಹಾಕಿಕೊಳ್ಳುವವರು ಅಲ್ಲಿಯೇ ಬಿಡಾರ ಹೂಡುವ ಬ್ರೋಕರ್‌ಗಳು. ಇದೀಗ, ನಿನ್ನೆ ಸಂಜೆಯಿಂದ ಅತ್ಯಂತ ವ್ಯವಸ್ಥಿತವಾಗಿ ಎಸಿಬಿ ಅಧಿಕಾರಿಗಳು ಕಡತಗಳ ಒಂದೊಂದು ಹಾಳೆಯನ್ನೂ ಜಾಲಾಡುತ್ತಿದ್ದಾರೆ. ಬಗೆದಷ್ಟೂ ಬಯಲಾಗುತ್ತಿದೆ ಬಿಡಿಎ ಕರ್ಮಕಾಂಡ. ಎಸಿಬಿ ಪರಿಶೀಲನೆ ವೇಳೆ ಬೃಹತ್ ಅಕ್ರಮಗಳು ಬಯಲಾಗುತ್ತಿವೆ. ಯಾರದೋ ವ್ಯಕ್ತಿ, ಸಂಸ್ಥೆಯ ಹೆಸರಿಗೆ ಹತ್ತಾರು ನಿವೇಶನಗಳ ಹಂಚಿಕೆಯಾಗಿರುವ ವ್ಯವಸ್ಥಿತ ಅಕ್ರಮ ಬೆಳಕಿಗೆ ಬಂದಿದೆ. ನಂತರ ಬ್ರೋಕರ್‌ಗಳ ಹೆಸರಿಗೂ ಸೇಲ್ ಡೀಡ್ ಮಾಡಿ ವ್ಯಾಪಕ ಭ್ರಷ್ಟಾಚಾರ ಎಸಗಿರುವುದು ಗಮನಕ್ಕೆ ಬಂದಿದೆ. ಮಹಿಳೆಯೊಬ್ಬರ ಹೆಸರಿಗೆ 8 ನಿವೇಶನ ಹಂಚಿಕೆಯಾಗಿದೆ. ಆದರೆ ಸೈಟ್ ಹಂಚಿಕೆಯಾಗುರುವುದು ಆ ’ಫಲಾನುಭವಿ’ ಮಹಿಳೆಗೇ ಗೊತ್ತಿಲ್ಲ! ಬದಲಿ ಸೈಟ್‌ಗಳ ಹಂಚಿಕೆಯಲ್ಲೂ ಆಕ್ರಮಗಳು ನುಸುಳಿವೆ. ಸದ್ಯ ಎಸಿಬಿ ಅಧಿಕಾರಿಗಳು ಕಡತಗಳ ಪರಿಶೀಲನೆ ಮುಂದುವರಿಸಿದ್ದಾರೆ.

ಬಿಡಿಎ ಕಚೇರಿಯಲ್ಲಿ ನಿನ್ನೆಯಿಂದ ಭ್ರಷ್ಟಾಚಾರ ನಿಗ್ರಹ ದಳ- ಎಸಿಬಿ ದಾಳಿ ಮುಂದುವರಿದಿದ್ದು ಸದಾ ಬ್ರೋಕರ್​​ಗಳಿಂದ ಗಿಜಿಗುಡುತ್ತಿದ್ದ ಸಂಸ್ಥೆ ಈಗ ಭಣಗುಡುತ್ತಿದೆ. ಬ್ರೋಕರ್​​ಗಳು ಯಾರೂ ಬಿಡಿಎ ಕಚೇರಿಯತ್ತ ಸುಳಿದಿಲ್ಲ. ತಂಡೋಪಾದಿಯಲ್ಲಿ ಆಗಮಿಸಿರುವ ಎಸಿಬಿ ಅಧಿಕಾರಿಗಳು ಎಲ್ಲ ವಾಹನಗಳನ್ನೂ ತಪಾಸಣೆ ಮಾಡುತ್ತಿದ್ದಾರೆ. ಇದರಿಂದ ಬ್ರೋಕರ್​​ಗಳಿಗೆ ಭಾರೀ ಟೆನ್ಶನ್​ ಶುರುವಾಗಿದೆ. ಎಸಿಬಿ ದಾಳಿ ವೇಳೆ ನೂರಾರು ಕೋಟಿ ರೂ ಮೊತ್ತದ ಹಗರಣಗಳು ಬಯಲಾಗಿವೆ ಎಂಬ ಮಾಹಿತಿ ಲಭಿಸುತ್ತಿದೆ.

ಬಿಡಿಎ ಕಚೇರಿಗೆ ಆಗಮಿಸಿದ 8 ಅಧಿಕಾರಿಗಳ ಎಸಿಬಿ ತಂಡ ಎಸ್.ಪಿ ಅಬ್ದುಲ್ ಅಹಮದ್ ನೇತೃತ್ವದಲ್ಲಿ ಪ್ರಸ್ತುತ ಡಿಎಸ್ 4 (DS-4) ಗೀತಾ ಹುಡೇದ್ ಕಚೇರಿಯಲ್ಲಿ ಪರಿಶೀಲನೆ ನಡೆಸುತ್ತಿದೆ. ಇನ್ಸ್ ಪೆಕ್ಟರ್ ಗಳಾದ ದಯಾನಂದ್, ಕುಮಾರ್ ಸ್ವಾಮಿ, ನಯಾಜ್ ಅವರಿಂದ ಪರಿಶೀಲನಾ ಕಾರ್ಯ ನಡೆದಿದೆ. ಬಿಡಿಎ ಉಪಕಾರ್ಯದರ್ಶಿಗಳಾದ ಗೀತಾ, ಸುಮಾ ಅನುಪಸ್ಥಿತಿಯಲ್ಲಿ ಪರಿಶೀಲನಾ ಕಾರ್ಯ ನಡೆಯುತ್ತಿದೆ.

ಬಿಡಿಎ ಕಚೇರಿ ಮೇಲೆ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಿಡಿಎ ಉಪಕಾರ್ಯದರ್ಶಿ (Ds1)​ ನವೀನ್ ಜೋಸೆಫ್​ ಅವರನ್ನು ಬಿಡಿಎ ಕಚೇರಿಯಲ್ಲೇ ವಿಚಾರಣೆಗೊಳಪಡಿಸಿದ್ದಾರೆ. ಜೊಸೆಫ್ ಕಚೇರಿಯಲ್ಲಿ ಬಹುತೇಕ ಪರಿಶೀಲನೆ ಅಂತ್ಯವಾಗಿದ್ದು, ಹೆಚ್ಚಿನ ವಿಚಾರಣೆಗೆ ಎಸಿಬಿ ಕಚೇರಿಗೆ ಹಾಜರಾಗುವಂತೆ ಅವರಿಗೆ ನೋಟಿಸ್​ ಜಾರಿ ಮಾಡುವ ಸಾಧ್ಯತೆಯಿದೆ.

ಎಸಿಬಿ ದಾಳಿ ಸ್ವಾಗತಿಸುವೆ, ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯಲಿ -ಬಿಡಿಎ ಅಧ್ಯಕ್ಷ ವಿಶ್ವನಾಥ್ ಬಿಡಿಎನಲ್ಲಿ ದಾಖಲೆಗಳೇ ಮಾಯವಾಗುತ್ತವೆ. ನಕಲಿ ದಾಖಲೆ ಕೊಟ್ಟು ನಿವೇಶನ ಪಡೆದವರಿದ್ದಾರೆ. ಏನೇ ಕ್ರಮ ಮಾಡಿದರೂ ಕೋರ್ಟ್ ನಲ್ಲಿ ಸ್ಟೇ ತೆಗೆದುಕೊಳ್ಳುತ್ತಾರೆ. ಕೆಲವು ಭ್ರಷ್ಟಾಚಾರಗಳನ್ನು ನಾನೂ ಕೂಡಾ ತಡೆಯಲು ಆಗಿಲ್ಲ. ಈಗ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯಲಿ. ನಿನ್ನೆಯ ದಾಳಿಯಲ್ಲಿ ನಗದು ಹಣ ಸಿಕ್ಕಿಲ್ಲ‌ ಅನ್ನಿಸುತ್ತದೆ. ನಿನ್ನೆ ಜನ ಬಂದಿದ್ದಾಗ ದಾಳಿ ಆಗಿದೆ. ಬ್ರೋಕರ್ ಗಳು ಇದ್ದಾಗ ದಾಳಿ ನಡೆಯಬೇಕಿತ್ತು. ನಾನೂ ಸಹ ಸಿಎಂಗೆ ವಿವರಣೆ ನೀಡಿದ್ದೇನೆ ಎಂದು ಬಿಡಿಎ ಅಧ್ಯಕ್ಷ ವಿಶ್ವನಾಥ್​ ಹೇಳಿದ್ದಾರೆ.

ಇದನ್ನೂ ಓದಿ: ಎಸಿಬಿ ದಾಳಿ ಸ್ವಾಗತಿಸುವೆ, ದಾಖಲೆಗಳ ನೀಡಿ ಸಹಕರಿಸುವೆ, ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯಲಿ -ಬಿಡಿಎ ಅಧ್ಯಕ್ಷ ವಿಶ್ವನಾಥ್

ತಾಜಾ ಸುದ್ದಿ

Related Stories

Click on your DTH Provider to Add TV9 Kannada