ಆನೇಕಲ್​ ಅಪಹರಣ ಕೇಸ್ ಭೇದಿಸಿದ ಪೊಲೀಸರು: ಕಿಡ್ನ್ಯಾಪರ್ಸ್​ ಮಾಸ್ಟರ್​​ ಪ್ಲ್ಯಾನ್​​​ ಬಿಚ್ಚಿಟ್ಟ ಡಿಸಿಪಿ

ಹಣಕ್ಕಾಗಿ ಸ್ಪಾ ನಡೆಸುತ್ತಿದ್ದ ವ್ಯಕ್ತಿಯನ್ನ ಕಿಡ್ನ್ಯಾಪ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ. ಸದ್ಯ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ರಿವಾರ್ಡ್ ನೀಡಲಾಗುವುದು ಎಂದು ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ಹೇಳಿದ್ದಾರೆ.

ಆನೇಕಲ್​ ಅಪಹರಣ ಕೇಸ್ ಭೇದಿಸಿದ ಪೊಲೀಸರು: ಕಿಡ್ನ್ಯಾಪರ್ಸ್​ ಮಾಸ್ಟರ್​​ ಪ್ಲ್ಯಾನ್​​​ ಬಿಚ್ಚಿಟ್ಟ ಡಿಸಿಪಿ
ಬಂಧಿತರು
Image Credit source: tv9 kannada
Edited By:

Updated on: Feb 18, 2026 | 4:16 PM

ಆನೇಕಲ್​​, ಫೆಬ್ರವರಿ 18: ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟದಾಸನಪುರ ಸಮೀಪದಲ್ಲಿ  ಸಿನಿಮಾ ಸ್ಟೈಲ್​​ನಲ್ಲಿ ಮೂವರು ದುಷ್ಕರ್ಮಿಗಳು ಓರ್ವ ವ್ಯಕ್ತಿಯನ್ನ ಕಿಡ್ನ್ಯಾಪ್ (Kidnap)​​​ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ (Arrested). ಜಿಗಣಿ ಮೂಲದ ಅಕ್ಷಯ್, ಜಿಗಣಿ ಮಂಟಪ ಗ್ರಾಮದ ಮಂಜುನಾಥ್ ಮತ್ತು ಆನೇಕಲ್ ತಾಲ್ಲೂಕಿನ ಹೊಂಪಲಘಟ್ಟ ಮೂಲದ ಪ್ರಜ್ವಲ್​​ ಬಂಧಿತರು. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ಹೇಳಿದ್ದಿಷ್ಟು 

ಪ್ರಕರಣ ಕುರಿತಾಗಿ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ಪ್ರತಿಕ್ರಿಯಿಸಿದ್ದು, ಅಶೀತ್ ಜ್ಹಾ ಎಂಬಾತನನ್ನ ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಲಾಗಿತ್ತು. ಮ್ಯಾನೇಜರ್​ ಮನ್ನುಕುಮಾರ್ ಎಂಬಾತ ದೂರು ನೀಡಿದ್ದರು. ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಬಂಧನವಾಗಿದೆ ಎಂದರು.

ಕಿಡ್ನ್ಯಾಪ್​​​ಗೆ ಮಾಸ್ಟರ್ ಪ್ಲ್ಯಾನ್​

ಆರೋಪಿ ಮಂಜುನಾಥ್ ಅಪಾರ್ಟ್ಮೆಂಟ್​ನಲ್ಲಿ ಕೆಲಸ ಮಾಡುತ್ತಿದ್ದ. ಅಪಾರ್ಟ್ಮೆಂಟ್​​ನ ಹಣವನ್ನ ದುರ್ಬಳಕೆ ಮಾಡಿಕೊಂಡಿದ್ದ. ಬಳಿಕ ಹಣ ಹೊಂದಿಸಲು ಪ್ರಜ್ವಲ್ ಮತ್ತು ಅಕ್ಷಯ್ ಬಳಿ ಸಹಾಯ ಕೇಳಿದ್ದ. ಮೂರು ಜನ ಸೇರಿ ಮಾಸ್ಟರ್ ಪ್ಲ್ಯಾನ್​ ರೂಪಿಸಿದ್ದರು. ಸ್ಪಾ ಮಾಲೀಕರ ಬಳಿ ಹಣ ಇರುತ್ತೆ ಅಂತ ಕಿಡ್ನ್ಯಾಪ್ ಮಾಡುವುದಕ್ಕೆ ಹೊಂಚು ಹಾಕಿದ್ದರು. ಅದರಂತೆಯೇ ಸ್ಪಾ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಅಶೀತ್ ಜ್ಹಾ, ಮನ್ನುಕುಮಾರ್​​​​​​​​​ರನ್ನ ಹಿಂಬಾಲಿಸಿ ಅಶೀತ್​​ರನ್ನ ಕಿಡ್ನ್ಯಾಪ್​ ಮಾಡಿದ್ದರು.  ಬಳಿಕ ಎರಡು ಲಕ್ಷ ರೂ ಹಣಕ್ಕೆ ಬೇಡಿಕೆಯಿಟ್ಟಿದ್ದರು ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸಿನಿಮಾ ಸ್ಟೈಲ್​​ನಲ್ಲಿ ಕಿಡ್ನ್ಯಾಪ್: ಸ್ಪಾ ನಡೆಸುತ್ತಿದ್ದವನನ್ನ ಹೊತ್ತೊಯ್ದು ಹಣಕ್ಕೆ ಡಿಮ್ಯಾಂಡ್

ಎಸಿಪಿ ಸತೀಶ್, ಇನ್ಸ್‌ಪೆಕ್ಟರ್‌ ನವೀನ್, ಪಿಎಸ್ಐ ದರ್ಶನ್ ತಂಡ ಕಾರ್ಯ ಪ್ರವೃತ್ತರಾಗಿದ್ದರು. ಲೊಕೇಶನ್ ಆಧರಿಸಿ ಆರೋಪಿಗಳನ್ನ ಬಂಧಿಸಲಾಗಿದೆ. ಆರೋಪಿ ಅಕ್ಷಯ್ ಈ ಹಿಂದೆ ಕೊಲೆ ಕೇಸ್​ನಲ್ಲಿ ಭಾಗಿಯಾಗಿದ್ದ. ಆರೋಪಿ ಪ್ರಜ್ವಲ್​​ಗೆ ಕೂಡ ಕ್ರಿಮಿನಲ್ ಬ್ಯಾಗ್ರೌಂಡ್​​​ ಇದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ 01 ಕಾರು, 1 ಲಾಂಗ್, 2 ಡ್ರಾಗರ್
03 ಮೊಬೈಲ್ ಫೋನ್‌ ಮತ್ತು 9,700 ರೂ. ಹಣ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಭೇದಿಸಿದ ಪೊಲೀಸರಿಗೆ ರಿವಾರ್ಡ್ ನೀಡಲಾಗುತ್ತೆ ಎಂದು ಡಿಸಿಪಿ ನಾರಾಯಣ್ ಹೇಳಿದ್ದಾರೆ.

ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದ ಅಶೀತ್

ಇನ್ನು ಕಿಡ್ನ್ಯಾಪ್ ಆಗಿದ್ದ ಅಶೀತ್​ ಮಾತನಾಡಿದ್ದು, ಸ್ಪಾ ಕೆಲಸ ಮುಗಿಸಿಕೊಂಡು ಬೈಕ್​ನಲ್ಲಿ ಬರುತ್ತಿದ್ದೇವು. ಬೆಟ್ಟದಾಸನಪುರ ಬಳಿ ಕಾರಿನಲ್ಲಿ ಬೈಕ್​​ ಡಿಕ್ಕಿ ಹೊಡೆದರು. ಏಕಾಏಕಿ ಲಾಂಗ್​ನಿಂದ ಹಲ್ಲೆ ಮಾಡಿದರು. ಮುಖ ಮತ್ತು ಕಾಲಿಗೆ ಹಲ್ಲೆ ನಡೆಸಿ ಕಿಡ್ನ್ಯಾಪ್ ಮಾಡಿದರು. ಜೊತೆಯಲ್ಲಿದ್ದ ಮನ್ನುಕುಮಾರ್​​ನನ್ನ ಕಿಡ್ನ್ಯಾಪ್ ಮಾಡಲು ನೋಡಿದರು, ಆಗ ರಸ್ತೆಯಲ್ಲಿ ಯಾವುದೋ ವಾಹನ ಬಂದಿದ್ದರಿಂದ ಆತನನ್ನ ಬಿಟ್ಟು ನನ್ನ ಕಿಡ್ನ್ಯಾಪ್ ಮಾಡಿದರು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಮಹಿಳೆ ನಾಪತ್ತೆ ಕೇಸ್​​ಗೆ ಟ್ವಿಸ್ಟ್​​: ಏಕಪತ್ನಿ ವ್ರತಸ್ಥನಂತೆ ಪೋಸ್​​ ಕೊಟ್ಟವ ಸಿಕ್ಕಿಬಿದ್ದಿದ್ದು ಮತ್ತೊಬ್ಬಳ ಜೊತೆ

ಕಿಡ್ನ್ಯಾಪ್ ಮಾಡಿ, ಯಾವುದೇ ಗುಡಿಸಲಿನಲ್ಲಿ ಕೂಡಿ ಹಾಕಿದ್ದರು. ನನ್ನ ಫೋನ್​ ಮೂಲಕವೇ ಎಲ್ಲರಿಗೂ ಫೋನ್​​ ಮಾಡುವುದಕ್ಕೆ ಹೇಳಿದರು. ಕುತ್ತಿಗೆಗೆ ಚಾಕು ಇಟ್ಟು ಹೆದರಿಸಿ, ಫೋನ್​ ಮಾಡಿಸಿದರು. ಸ್ನೇಹಿತರು, ಸಂಬಂಧಿಕರಿಗೆ ಫೋನ್​ ಮಾಡಿದ್ದೆ. ಎರಡು ಲಕ್ಷ ರೂ ಹಣ ಕೊಟ್ಟರೆ ಬಿಡುತ್ತೇವೆ, ಇಲ್ಲಾ ಕೊಲೆ ಮಾಡುವುದಾಗಿ ಹೇಳಿದ್ದರು. ಕೊನೆಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂದು ನನ್ನ ಕಾಪಾಡಿದರು. ಅವರಿಗೆ ಧನ್ಯವಾದ ತಿಳಿಸುತ್ತೇನೆ. ಆರೋಪಿಗಳನ್ನ ಬಂಧನ ಮಾಡಿದ್ದಾರೆ, ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅಶೀತ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.