ಬೆಂಗಳೂರು: ಒಂದೇ ಅಂಗಡಿ ಎರಡು ಬಾರಿ ಲೂಟಿ; ಕಳ್ಳನ ಹಿಡಿಯಲು ಸಿಸಿಟಿವಿ ಹಾಕಿದ್ರೆ, ದುಡ್ಡಿನ ಜೊತೆ ಸಿಸಿಟಿಯೂ ಮಾಯ

ಅದು ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಅಂಗಡಿ, ಆದರೂ ಕಳ್ಳತನ ಆಗದೇ ಇರಲಿ ಅಂತ ಅಂಗಡಿ ಮಾಲಿಕ ಸಿಸಿಟಿವಿ ಹಾಕಿಸಿದ್ದ. ಆದರೆ ಸಿಸಿಟಿವಿ ಹಾಕಿದ ಮಧ್ಯೆ ರಾತ್ರಿಯೇ ಖತರ್ನಾಕ್ ಕಳ್ಳ ದುಡ್ಡಿನ ಜೊತೆ ಸಿಸಿಟಿವಿಯನ್ನು ಕೂಡ ಕಳ್ಳತನ ಮಾಡುವ ಮೂಲಕ ಪೊಲೀಸರಿಗೆ ಸವಾಲ್ ಹಾಕಿದ್ದಾನೆ.

ಬೆಂಗಳೂರು: ಒಂದೇ ಅಂಗಡಿ ಎರಡು ಬಾರಿ ಲೂಟಿ; ಕಳ್ಳನ ಹಿಡಿಯಲು ಸಿಸಿಟಿವಿ ಹಾಕಿದ್ರೆ, ದುಡ್ಡಿನ ಜೊತೆ ಸಿಸಿಟಿಯೂ ಮಾಯ
ಬನ್ನೇರುಘಟ್ಟದಲ್ಲಿ ಸತತ ಎರಡು ಬಾರಿ ಕಳ್ಳತನ ಮಾಡುವ ಪೊಲೀಸರಿಗೆ ಸವಾಲ್​ ಹಾಕಿದ ಕಳ್ಳ
Updated By: ಕಿರಣ್ ಹನುಮಂತ್​ ಮಾದಾರ್

Updated on: Feb 17, 2023 | 8:41 AM

ಬೆಂಗಳೂರು: ಜಿಲ್ಲೆಯ ಆನೇಕಲ್ ತಾಲೂಕಿನ ಬನ್ನೇರುಘಟ್ಟದಲ್ಲಿ ಕಳ್ಳರ ಉಪಟಳ ಹೆಚ್ಚಾಗಿದ್ದು, ಕಿರಾಣಿ ಅಂಗಡಿಗಳ ಮಾಲಿಕರು ನಿದ್ದೆ ಬಿಟ್ಟು ತಮ್ಮ ಅಂಗಡಿ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ದುಡ್ಡು ಹಾಗೂ ಸಿಗರೇಟ್ ಪ್ಯಾಕೇಟ್​ಗಳ ಮೇಲೆ ಟಾರ್ಗೆಟ್ ಮಾಡುತ್ತಿರುವ ಕಳ್ಳರ ಗ್ಯಾಂಗ್, ಪೊಲೀಸ್ ಠಾಣೆ ಪಕ್ಕದಲ್ಲಿದ್ರೂ ಯಾವುದೇ ಭಯವಿಲ್ಲದೇ ಬೀಗ ಮುರಿದು ಶಟರ್ ಕಟ್ ಮಾಡಿ ಅಂಗಡಿ ಒಳಗೆ ನುಗ್ಗಿ ಕಳ್ಳತನ ಮಾಡುತ್ತಿದ್ದಾರೆ. ಬನ್ನೇರುಘಟ್ಟ ಮುಖ್ಯ ರಸ್ತೆಯ, ಪೊಲೀಸ್ ಠಾಣಾ ಪಕ್ಕದಲ್ಲಿರುವ ಕಿರಾಣಿ ಅಂಗಡಿಯನ್ನು ಟಾರ್ಗೆಟ್ ಮಾಡಿರುವ ಕಳ್ಳ ಎರಡು ದಿನಗಳ ಹಿಂದೆ ಕೀಲಿ ಮುರಿದು ಒಂದು ಲಕ್ಷದಷ್ಟು ನಗದು, ಲಕ್ಷಾಂತರ ಮೌಲ್ಯದ ಸಿಗರೇಟ್ ದೋಚಿದ್ದ. ಈ ಬಗ್ಗೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದ ಅಂಗಡಿ ಮಾಲಿಕ ಮರಿಯಪ್ಪ ಸೂಕ್ತ ಭದ್ರತೆ‌ ನೀಡುವಂತೆ ಪೊಲೀಸರಿಗೆ ವಿನಂತಿ ಮಾಡಿದ್ದಾರೆ.

ಇನ್ನು ಅಂಗಡಿಯ ಭದ್ರತೆಗೆ ಸಿಸಿಟಿವಿ ಹಾಕಿಸಲು ಮುಂದಾಗಿದ್ದ ಅಂಗಡಿ ಮಾಲಿಕ, ಮಧ್ಯೆ ರಾತ್ರಿ‌ 1 ಗಂಟೆಯವರೆಗೂ ಸಿಸಿಟಿವಿ ಹಾಕಿ ಮನೆಗೆ ಹೋಗಿದ್ದಾರೆ. ಆದರೆ ಬೆಳಿಗ್ಗೆ ಬಂದು ನೋಡೊದ್ರಲ್ಲಿ, ಸಿಸಿಟಿವಿ ಜೊತೆ ಡಿಪಿಆರ್ ಕೂಡ ಕಳ್ಳ ಕದ್ದು ಹೋಗಿದ್ದಾನೆ. ಅಂದರೆ ಎರಡು ಕಡೆ ಕಳ್ಳತನ ಮಾಡುವ ಮೂಲಕ ಒಟ್ಟು 7 ರಿಂದ 8 ಲಕ್ಷ ದಷ್ಟು ಹಣ ಮತ್ತು ಸಾಮಗ್ರಿ ದೋಚಿದ್ದಾನೆ. ಸಿಸಿಟಿವಿಯಲ್ಲಿ ಬಂದ ಕಳ್ಳನೇ ಎರಡೂ ಕಡೆ ಕಳ್ಳತನ ಮಾಡಿದ್ದಾನೆ ಅನ್ನೋ ಅನುಮಾನ ವ್ಯಕ್ತವಾಗಿದೆ. ಇನ್ನು ಕಿರಾಣಿ ಅಂಗಡಿಯನ್ನು ಲೂಟಿ ಮಾಡೋದನ್ನು ಕಂಡು ಬನ್ನೇರುಘಟ್ಟ ಜನರು ಆತಂಕಗೊಂಡಿದ್ದಾರೆ.‌ ಪೊಲೀಸ್ ಠಾಣೆಯ ಪಕ್ಕದಲ್ಲೇ ಇದ್ರೂ ಯಾವುದೇ ಭಯವಿಲ್ಲದೇ ಕಳ್ಳರು ಅಂಗಡಿಗೆ ನುಗ್ಗಿ ಕಳ್ಳತನ ಮಾಡುತ್ತಿರೋದು ಬಹಳ ಆತಂಕ ತಂದಿದೆ ಎಂದು ಸಾರ್ವಜನಿಕರು ಮಾತನ್ನಾಡುತ್ತಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಸೀರಿಯಸ್ ಆಗಿ ತೆಗೆದುಕೊಂಡಿರುವ ಬನ್ನೇರುಘಟ್ಟ ಪೊಲೀಸರು ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಕರೆಸಿ‌ ಕಳ್ಳರ ಪತ್ತೆಗೆ ಮುಂದಾಗಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ