
ಬೆಂಗಳೂರು, ಮಾರ್ಚ್ 18: ಆನ್ಲೈನ್ ಜೂಜಿನ (Online Gambling) ವ್ಯಸನಕ್ಕೆ ಒಳಗಾಗಿ, ತಾವೇ ಕೆಲಸ ಮಾಡುತ್ತಿದ್ದ ಆಭರಣ ಪಾಲಿಷ್ ಅಂಗಡಿಯಲ್ಲಿ ವ್ಯಕ್ತಿಗಳಿಬ್ಬರು ಕಳ್ಳತನ ನಡೆಸಿದ ಘಟನೆ ಬೆಂಗಳೂರಿನಲ್ಲಿ (Bangalore) ನಡೆದಿದೆ. ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ನರೇಂದ್ರ ಮತ್ತು ಕುಲ್ದೀಪ್ ಎಂದು ಗುರುತಿಸಲಾಗಿದೆ. ನರೇಂದ್ರ ಕಳೆದ ಒಂದು ತಿಂಗಳಿನಿಂದ ಧನಲಕ್ಷ್ಮೀ ರೋಡಿಯಂ ಎಂಬ ಆಭರಣ ಪಾಲಿಷ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅಂಗಡಿಗೆ ಬಂದ ಬೆಳ್ಳಿ ಆಭರಣಗಳನ್ನು ಪಾಲಿಷ್ ಮಾಡುವ ಜವಾಬ್ದಾರಿ ಅವನಿಗೆ ನೀಡಲಾಗಿತ್ತು.
ಆನ್ಲೈನ್ ಜೂಜಿನ ಹುಚ್ಚಿಗೆ ಬಿದ್ದಿದ್ದ ನರೇಂದ್ರ, ಇದರಿಂದಾಗಿ ಭಾರೀ ನಷ್ಟ ಅನುಭವಿಸಿದ್ದ. ಒಂದು ಬಾರಿ ದೊಡ್ಡ ಮೊತ್ತ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುತ್ತದೆ ಎಂಬ ಆಸೆಯಿಂದ, ತಾನೇ ಕೆಲಸ ಮಾಡುತ್ತಿದ್ದ ಅಂಗಡಿಗೆ ಕನ್ನ ಹಾಕಲು ಯೋಜನೆ ರೂಪಿಸಿದ್ದಾನೆ. ಅಂಗಡಿಯ ಕೀ ಅವನ ಬಳಿ ಇದ್ದುದರಿಂದ ಸುಲಭವಾಗಿ ಬಾಗಿಲು ತೆಗೆದುಕೊಂಡು, ಸುಮಾರು 10.12 ಕೆಜಿ ತೂಕದ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ್ದಾನೆ. ಈ ಆಭರಣಗಳ ಮೌಲ್ಯ ಸುಮಾರು 35 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಕಳ್ಳತನದ ಬಳಿಕ ನರೇಂದ್ರ ರೈಲಿನಲ್ಲಿ ರಾಜಸ್ಥಾನಕ್ಕೆ ಪರಾರಿಯಾಗಿದ್ದಾನೆ. ಅಲ್ಲಿ ತನ್ನ ಸ್ನೇಹಿತ ಕುಲ್ದೀಪ್ ಜೊತೆ ಸೇರಿ ಸುಮಾರು 3 ಕೆಜಿ ಬೆಳ್ಳಿ ಆಭರಣಗಳನ್ನು ಮಾರಾಟ ಮಾಡಿದ್ದಾನೆ. ಮಾರಾಟದಿಂದ ಬಂದ ಹಣದಲ್ಲಿ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನ ಹಾಗೂ ಪ್ರಯಾಗ್ ರಾಜ್ಗೆ ತೆರಳಿ ಪೂಜೆ ಸಲ್ಲಿಸಿದ್ದಾನೆ. ಬಳಿಕ ಉಳಿದ ಆಭರಣಗಳನ್ನು ಮಾರಾಟ ಮಾಡುವ ಯತ್ನದಲ್ಲಿದ್ದಾಗಲೇ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಭರ್ಜರಿ ಕಾರ್ಯಾಚರಣೆ: 2.34 ಕೋಟಿ ರೂ. ಹಣ ಸೀಜ್
ಹಲಸೂರು ಗೇಟ್ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರನ್ನೂ ಬಂಧಿಸಲಾಗಿದ್ದು, 35 ಲಕ್ಷ ರೂ. ಮೌಲ್ಯದ 10.12 ಕೆಜಿ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಇನ್ನೋರ್ವ ಆರೋಪಿಗಾಗಿ ಹುಡುಕಾಟ ಮುಂದುವರಿದಿದೆ. ಪ್ರಕರಣ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 12:33 pm, Wed, 18 March 26