ಬೆಂಗಳೂರು, ಅಕ್ಟೋಬರ್ 14: ಬೆಂಗಳೂರಿನ ಸುಲ್ತಾನ್ಪೇಟೆ ಮತ್ತು ಚಿಕ್ಕಪೇಟೆ ಜಂಕ್ಷನ್ಗಳ ನಡುವಿನ ಬಿವಿಕೆ ಅಯ್ಯಂಗಾರ್ ರಸ್ತೆಯ 300 ಮೀಟರ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವೈಟ್ಟಾಪ್ ಯೋಜನೆ ಏಳು ತಿಂಗಳಿಂದ ಭಾಗಶಃ ಸ್ಥಗಿತಗೊಂಡಿದೆ. ಇದರಿಂದ ಸಾರ್ವಜನಿಕ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು, ಟ್ರಾಫಿಕ್ ಜಾಮ್ ಸಹ ಉಂಟಾಗುತ್ತಿದೆ. ಅಪೂರ್ಣ ಕಾಮಗಾರಿ ಜಾಗದಲ್ಲೀಗ ಬೀದಿ ಬದಿಯ ಅಕ್ರಮ ಅಂಗಡಿಗಳು ತಲೆ ಎತ್ತಿವೆ. ಇದರಿಂದ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ಕಾಯಂ ವ್ಯಾಪಾರಿಗಳು ಅಸಮಾಧಾನ ತೋಡಿಕೊಂಡಿದ್ದಾರೆ.
ಕಳೆದ ತಿಂಗಳಷ್ಟೇ ರಸ್ತೆಯ ಒಂದು ಬದಿಯ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿತ್ತು. ಇನ್ನೊಂದು ಬದಿ ನಿರ್ಮಾಣ ಹಂತದಲ್ಲಿದೆ. ಸ್ಥಳೀಯ ಮಾರಾಟಗಾರರು ಮತ್ತು ಅಂಗಡಿ ಮಾಲೀಕರು ಈ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದಾರೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಕಾರ್ಮಿಕರ ಅನಿಯಮಿತ ಹಾಜರಾತಿ ಮತ್ತು ನಿಧಾನಗತಿಯ ಪ್ರಗತಿಯಿಂದ ತೊಂದರೆಯಾಗುತ್ತಿದೆ ಎಂದು ಅಂಗಡಿ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾರ್ಮಿಕರು ಈ ಭಾಗದಲ್ಲಿ ಅಗೆಯಲು ಪ್ರಾರಂಭಿಸಿ ಒಂದು ತಿಂಗಳಿಗಿಂತ ಹೆಚ್ಚು ಸಮಯ ಕಳೆದಿದೆ, ಆದರೆ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಟ್ಟೆ ಅಂಗಡಿಯ ಮಾರಾಟಗಾರರೊಬ್ಬರು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಅರ್ಧಂಬರ್ಧ ಕಾಮಗಾರಿಯ ಲಾಭ ಪಡೆಯುತ್ತಿರುವ ಬೀದಿಬದಿ ವ್ಯಾಪಾರಿಗಳು, ಅಪೂರ್ಣಗೊಂಡಿರುವ ರಸ್ತೆಯಲ್ಲಿ ಅಂಗಡಿಗಳನ್ನು ಸ್ಥಾಪಿಸುತ್ತಿದ್ದಾರೆ ಎಂದು ಇಲೆಕ್ಟ್ರಾನಿಕ್ ಅಂಗಡಿಯೊಂದರ ಮಾರಾಟಗಾರ ರಮೇಶ್ ಎಂಬವರು ತಿಳಿಸಿದ್ದಾರೆ.
ನಿರ್ಮಾಣ ಚಟುವಟಿಕೆಗಳು ಮತ್ತು ಬೀದಿ ಅಂಗಡಿಗಳಿಂದ ವಾಹನಗಳು ಮತ್ತು ಪಾದಚಾರಿಗಳಿಗೆ ಗಮನಾರ್ಹ ತೊಂದರೆಯಾಗುತ್ತಿದೆ. ಕಿರಿದಾದ ಫುಟ್ಪಾತ್ಗಳು ಪಾದಚಾರಿಗಳಿಗೆ ಸಂಚರಿಸಲು ಕಷ್ಟಕರವಾಗುವಂತಿವೆ. ಆದರೆ ಭಾಗಶಃ ರಸ್ತೆ ಬಂದ್ ಆಗಿರುವುದರಿಂದ ವಾಹನಗಳು ಸುಲ್ತಾನ್ಪೇಟೆ ಜಂಕ್ಷನ್ನಿಂದ ಚಿಕ್ಕಪೇಟೆ ಜಂಕ್ಷನ್ಗೆ ಬಳೇಪೇಟೆ ಮುಖ್ಯ ರಸ್ತೆಯ ಮೂಲಕ ಹೋಗುವಂತೆ ಮಾಡಿದೆ.
ಇದನ್ನೂ ಓದಿ: ದುಬಾರಿ ಆನ್ಲೈನ್ ಆ್ಯಪ್ಗಳಿಗೆ ಟಕ್ಕರ್ ಕೊಡಲು ಬರುತ್ತಿದೆ ಹೊಸ ಆ್ಯಪ್; ಸರ್ಕಾರದಿಂದಲೇ ಫುಡ್ ಆ್ಯಪ್ಗೆ ಸಿದ್ಧತೆ
ಈ ಮಧ್ಯೆ, ಸುಲ್ತಾನಪೇಟೆ ಜಂಕ್ಷನ್ನಲ್ಲಿ ಠಿಕಾಣಿ ಹೂಡಿರುವ ಟ್ರಾಫಿಕ್ ಪೊಲೀಸರು, ದಟ್ಟಣೆಯನ್ನು ನಿರ್ವಹಿಸಲು ಪೀಕ್ ಅವರ್ಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ. ಮತ್ತೊಂದೆಡೆ, ಈ ಪ್ರದೇಶವು ಕಸದ ರಾಶಿಯಿಂದ ತುಂಬಿದೆ. ಮಾರಾಟಗಾರರು ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ