
ಬೆಂಗಳೂರು, ಮೇ 28: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಬ್ಬರಿಸುತ್ತಿರುವ ಮುಂಗಾರು ಮಳೆ (Monsoon Rain) ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಬೆಂಗಳೂರಿನಲ್ಲಿ (Bengaluru) ಮಳೆ ಅಬ್ಬರ ಕಡಿಮೆಯಾಗಿದೆ. ಆದರೆ, ಎರಡು ದಿನಗಳ ಹಿಂದೆ ಸುರಿದ ಮಳೆ ಮಹಾನಗರ ಬೆಂಗಳೂರಿನಲ್ಲಿ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿತ್ತು. ರಸ್ತೆಗಳ ಮೇಲೆ ನೀರು ನಿಂತಿತ್ತು. ವಾಹನ ಸವಾರರು ಪರದಾಡಿದ್ದರು. ಮನೆಯೊಳಗೆ ನೀರು ನುಗ್ಗಿತ್ತು. ಮನೆಗಳ ಮುಂದೆ ನಿಲ್ಲಿಸಿದ್ದ ಕಾರು, ಬೈಕ್ ಸೇರಿದಂತೆ ಹಲವು ವಾಹನಗಳು ನೀರಿನಲ್ಲಿ ಮುಳುಗಡೆಯಾಗಿದ್ದವು. ವಾಹನಗಳಿಗೆ ಹಾನಿಯಗಿದ್ದು, ಮಾಲೀಕರಿಗೆ ಸಾಕಷ್ಟು ನಷ್ಟವಾಗಿದೆ. ಇದರಿಂದ ವಾಹನಗಳು ತಮ್ಮ ಅಸಲಿ ಮೌಲ್ಯವನ್ನು ಕಳೆದುಕೊಂಡಿವೆ. ಹೀಗಾಗಿ, ಮಾಲೀಕರು ತಮ್ಮ ಕಾರುಗಳನ್ನು ಅರ್ಧ ರೇಟ್ಗೆ ಮಾರಲು ಮುಂದಾಗಿದ್ದಾರೆ.
ಕಳೆದ ವರ್ಷ ವರುಣಾರ್ಭಟಕ್ಕೆ ಯಲಹಂಕದ ಕೇಂದ್ರಿಯ ಅಪಾರ್ಟ್ಮೆಂಟ್ ಅಕ್ಷರಶಃ ನಲುಗಿ ಹೋಗಿತ್ತು. 2500 ಜನರನ್ನು ಅಪಾರ್ಟ್ಮೆಂಟ್ನಿಂದ ಶಿಫ್ಟ್ ಮಾಡಲಾಗಿತ್ತು. 300ಕ್ಕೂ ಅಧಿಕ ಕಾರುಗಳು ಮುಳುಗಡೆಯಾಗಿದ್ದವು. ಹೀಗೆ ಮುಳುಗಡೆಯಾಗಿ ಕೆಟ್ಟು ಹೋದ ಕಾರುಗಳಿಗೆ ವಿಮೆ ಕೂಡ ಕ್ಲೈಂ ಆಗಲ್ವಂತೆ.
ಉದಯ ಎಂಬುವರ ಹನ್ನೆರಡುವರೆ ಲಕ್ಷ ಮೌಲ್ಯದ ಬೊಲೆರೊ ಕಂಪನಿಯ ಕಾರು ನೀರಲ್ಲಿ ಮುಳುಗಿತ್ತು. ಇದರಿಂದ ಕಾರಿಗೆ ಸಾಕಷ್ಟು ಹಾನಿಯಾದ ಕಾರಣ ಉದಯ ಅವರು ಅದನ್ನು 6.80 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ. ಇನ್ನು, 10 ಸಾವಿರ ಕಿಮಿ ಓಡಿದ್ದ ಮಾರುತಿ ಝನ್ ಕಾರನ್ನು ಕೃಷ್ಣ ಎಂಬುವರು 70 ಸಾವಿರ ರೂ.ಗೆ ಮಾರಾಟ ಮಾಡಿದ್ದಾರೆ. 18-20 ಲಕ್ಷ ರೂ. ಮೌಲ್ಯದ ಹೋಂಡಾ ಸಿಟಿ ಕಾರು ಮಳೆ ನೀರಲ್ಲಿ ಮುಳುಗಡೆಯಾದ ಕಾರಣ, ಮಾಲೀಕ ಸುನಿಲ್ ಅವರು ಅನಿವಾರ್ಯವಾಗಿ 7 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ.
ಮೊನ್ನೆ ಸುರಿದ ಮುಂಗಾರು ಮಳೆಗೆ ಸಾಯಿ ಲೇಔಟ್, ಕೋರಮಂಗಲ, ಬಿಟಿಎಂ ಲೇಔಟ್, ಹೆಚ್ ಬಿ ಆರ್ ಲೇಔಟ್ ಅಪಾರ್ಟ್ಮೆಂಟ್ಗಳಲ್ಲಿ ಪಾರ್ಕ್ ಮಾಡಿದ್ದ ಕಾರುಗಳು ಮುಳುಗಡೆಯಾಗಿದ್ದವು. ಅಪಾರ್ಟ್ಮೆಂಟ್ ಬೇಸ್ಮೆಂಟ್ ಮತ್ತು ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳಿಗೆ ಜಲದಿಗ್ಭಂಧನ ಎದುರಾಗಿತ್ತು. ಇದೀಗ, ಅಂತಹ ಕಾರುಗಳನ್ನು ಕೂಡ ಕೆಲ ಮಾಲೀಕರು ಅರ್ಧ ಬೆಲೆಗೆ ಮಾರಾಟ ಮಾಡಲು ಮುಂದಾಗಿದ್ದಾರೆ.
ಇದನ್ನೂ ಓದಿ: ಮಳೆ ಅನಾಹುತಕ್ಕೆ ಕರ್ನಾಟಕದಲ್ಲಿ 8 ಮಂದಿ ಸಾವು, ಎತ್ತಿನಗಾಡಿ ಮುಗುಚಿಬಿದ್ದು ಇಬ್ಬರು ಮಕ್ಕಳ ಸಾವು
ಒಟ್ಟಿನಲ್ಲಿ ಪ್ರತಿ ವರ್ಷ ಮಳೆ ಬಂದಾಗಲೂ ಬೆಂಗಳೂರಿನ ಜನರಿಗೆ ಒಂದಲ್ಲಾ ಒಂದು ಸಂಕಷ್ಟು ಎದುರಾಗುತ್ತವೆ. ಮಳೆಯಿಂದ ಆಗುತ್ತಿರುವ ತೊಂದರೆಗಳನ್ನು ಶಾಶ್ವತವಾಗಿ ತಡೆಯಿರಿ ಎಂದು ಜನರು ಅದೆಷ್ಟು ಬಾರಿ ಮನವಿ ಮಾಡಿಕೊಂಡರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾತ್ರ ಇನ್ನೂವರೆಗೂ ಎಚ್ಚೆತ್ತುಕೊಂಡಂತೆ ಕಾಣಿಸುತ್ತಿಲ್ಲ.