AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್​ಪಿಜಿ ಸಿಲಿಂಡರ್ ಕೊರತೆ ಬೆನ್ನಲ್ಲೇ ಅರಣ್ಯ ಇಲಾಖೆ ಹೈ ಅಲರ್ಟ್​ ಆಗಿದ್ಯಾಕೆ ಗೊತ್ತಾ?

ಇರಾನ್-ಇಸ್ರೇಲ್ ಯುದ್ಧದಿಂದ ಬೆಂಗಳೂರಿನಲ್ಲಿ LPG ಸಿಲಿಂಡರ್ ಕೊರತೆ ತೀವ್ರವಾಗಿದೆ. ವಾಣಿಜ್ಯ ಸಿಲಿಂಡರ್ ಸಿಗದೆ ಹೋಟೆಲ್‌ಗಳು ಸೌದೆ ಬಳಕೆಗೆ ಮೊರೆ ಹೋಗಿವೆ. ಇದರಿಂದ ಮರದ ಇಂಧನಕ್ಕೆ ಬೇಡಿಕೆ ಹೆಚ್ಚಿದೆ. ಇದು ಅಕ್ರಮವಾಗಿ ಮರ ಕಡಿಯುವಿಕೆ ಹೆಚ್ಚಿಸುವ ಆತಂಕ ಮೂಡಿಸಿದ್ದು, ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಅರಣ್ಯ ಇಲಾಖೆ ಅಕ್ರಮ ಮರ ಕಡಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಜ್ಜಾಗಿದೆ.

ಎಲ್​ಪಿಜಿ ಸಿಲಿಂಡರ್ ಕೊರತೆ ಬೆನ್ನಲ್ಲೇ ಅರಣ್ಯ ಇಲಾಖೆ ಹೈ ಅಲರ್ಟ್​ ಆಗಿದ್ಯಾಕೆ ಗೊತ್ತಾ?
ಎಲ್​ಪಿಜಿ ಸಿಲಿಂಡರ್ ಕೊರತೆ ಬೆನ್ನಲ್ಲೇ ಅರಣ್ಯ ಇಲಾಖೆ ಹೈ ಅಲರ್ಟ್​ ಆಗಿದ್ಯಾಕೆ ಗೊತ್ತಾ?
ಭಾವನಾ ಹೆಗಡೆ
|

Updated on: Mar 13, 2026 | 12:20 PM

Share

ಬೆಂಗಳೂರು, ಮಾರ್ಚ್​ 13: ಇರಾನ್, ಇಸ್ರೇಲ್ ಯುದ್ಧದ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ದೇಶದೆಲ್ಲೆಡೆ ಎಲ್​ಪಿಜಿ ಸಿಲಿಂಡರ್ ಕೊರತೆ (LPG cylinder crisis) ತೀವ್ರವಾಗಿದೆ. ವಾಣಿಜ್ಯ ಸಿಲಿಂಡರ್ ಸಿಗದೆ ಅದೆಷ್ಟೋ ಹೋಟೆಲ್​ಗಳು ಸಮಸ್ಯೆಗೀಡಾಗಿವೆ. ಅಡುಗೆ ಮಾಡಲು ಇಂಧನವಿಲ್ಲದೆ ಹೋಟೆಲ್​ಗಳು ಬಾಗಿಲು ಮುಚ್ಚುವ ಹಂತಕ್ಕೆ ತಲುಪಿವೆ. ಈ ಸಮಸ್ಯೆಗೆ ಪರಿಹಾರವಾಗಿ ಕೆಲವು ಕಡೆ ಎಲ್​ಪಿಜಿ ಸಿಲಿಂಡರ್ ಬದಲಾಗಿ ಸೌದೆ ಬಳಸಿಯೂ ಅಡುಗೆ ಮಾಡಲಾಗುತ್ತಿದೆ. ಇದರಿಂದಾಗಿ ನಗರದಲ್ಲಿ ಮರದ ಇಂಧನದ ಬೇಡಿಕೆ ಹೆಚ್ಚಾಗಿದೆ. ಹೀಗೆ ಅಕ್ರಮವಾಗಿ ಮರ ಕಡಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಇಲಾಖೆ ಸಜ್ಜಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೌದೆ ಒಲೆ ಬಳಸುವವರಿಗೆ ಅರಣ್ಯ ಇಲಾಖೆ ಎಚ್ಚರಿಕೆ

ಅನೇಕ ಹೋಟೆಲ್‌ಗಳು, ಪಿಜಿಗಳು ಹಾಗೂ ಇತರ ಅಡುಗೆ ಕೇಂದ್ರಗಳು ಮತ್ತೆ ಸಾಂಪ್ರದಾಯಿಕ ಸೌದೆ ಒಲೆಯತ್ತ ಮುಖ ಮಾಡುತ್ತಿರುವುದರಿಂದ ಮರದ ಬಳಕೆ ಹೆಚ್ಚುತ್ತಿರುವುದು ಕಂಡುಬಂದಿದೆ. ಸಧ್ಯದ ಮಟ್ಟಿಗೆ ಇದು ಇಂಧನ ಸಮಸ್ಯೆಗೆ ಸಿಕ್ಕ ದೊಡ್ಡ ಪರಿಹಾರವೆನಿಸಿದರೂ ಈ ಪರಿಸ್ಥಿತಿ ಮುಂದುವರಿದರೆ ಅಕ್ರಮವಾಗಿ ಮರ ಕಡಿಯುವ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ Iran-Israel War: ಯುದ್ಧದ ಪರಿಣಾಮ ಯಾದಗಿರಿಯ 28 ರೈಸ್ ಮಿಲ್‌ಗಳಿಗೆ ಭಾರೀ ಹೊಡೆತ!

ಗುರುವಾರ ಅರಣ್ಯ ಸಚಿವ ಈಶ್ವರ ಖಂಡ್ರೆ ಈ ಕುರಿತು ಆದೇಶ ಹೊರಡಿಸಿದ್ದು, ಅರಣ್ಯ ಪ್ರದೇಶಗಳಲ್ಲಷ್ಟೇ ಅಲ್ಲದೆ ಸರ್ಕಾರದ ಜಾಗಗಳು, ಉದ್ಯಾನವನಗಳು ಹಾಗೂ ಇತರ ಹಸಿರು ಪ್ರದೇಶಗಳಲ್ಲಿಯೂ ಅಕ್ರಮ ಮರ ಕಡಿಯುವ ಘಟನೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಎಲ್‌ಪಿಜಿ ಕೊರತೆಯಿಂದ ಅನೇಕ ಹೋಟೆಲ್ ಮಾಲೀಕರು ಮತ್ತು ಅಡುಗೆ ಕೇಂದ್ರಗಳು ಮರದ ಇಂಧನ ಬಳಕೆಗೆ ಮರಳುತ್ತಿರುವುದರಿಂದ ಕಟ್ಟಿಗೆಗೆ ಬೇಡಿಕೆ ಏರಿಕೆಯಾಗಿದೆ. ಹೀಗೆ ಹೆಚ್ಚು ಮರಗಳನ್ನು ಕಡಿದರೆ ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಅರಣ್ಯ ಪ್ರದೇಶಗಳು ಹಾಗೂ ಹಸಿರು ವಲಯಗಳಲ್ಲಿ ಹೆಚ್ಚುವರಿ ಪೆಟ್ರೋಲಿಂಗ್ ನಡೆಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us