ಬೆಂಗಳೂರಿನ ಮತ್ತೊಂದು ಕಡೆ ಹಸಿರು ಧ್ವಜ ಹಾರಾಟ, ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ

| Updated By: ವಿವೇಕ ಬಿರಾದಾರ

Updated on: Jan 31, 2024 | 10:04 AM

ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಧ್ವಜಸ್ತಂಬದಲ್ಲಿ ಹಾರಿಸಲಾಗಿದ್ದ ಹನುಮ ಧ್ವಜವನ್ನು ಪೊಲೀಸರು ತೆರವುಗೊಳಿಸಿದ್ದರು. ಇದಕ್ಕೆ ಗ್ರಾಮಸ್ಥರು ಮತ್ತು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಈ ಬೆನ್ನಲ್ಲೆ ಧಾರ್ಮಿಕ ಧ್ವಜ ಹಾರಾಟ ವಿಚಾರ ಬೆಂಗಳೂರಿಗೂಹಬ್ಬಿದೆ.

ಬೆಂಗಳೂರಿನ ಮತ್ತೊಂದು ಕಡೆ ಹಸಿರು ಧ್ವಜ ಹಾರಾಟ, ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ
ಜೆಜೆ ನಗರ ಹಸಿರು ಧ್ವಜ
Follow us on

ಬೆಂಗಳೂರು, ಜನವರಿ 31: ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಧ್ವಜಗಳನ್ನು (Flag) ಹಾರಿಸಿರುವ ವಿಚಾರವಾಗಿ ರಾಜ್ಯದಲ್ಲಿ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ವಿಚಾರ ಸದ್ಯ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಇದೀಗ ಬೆಂಗಳೂರಿನ ಚಾವರಾಜಪೇಟೆ ವಿಧಾನಸಭಾ ಕ್ಷೇತ್ರದ (Chamarajpet Assembly Constituency) ಜೆಜೆ ನಗರದಲ್ಲಿ (JJ Nagar) ಸಾರ್ವಜನಿಕ ಸ್ಥಳದಲ್ಲಿ ಹಸಿರು ಮತ್ತು ಹಳದಿ‌ ಬಣ್ಣದ ಧ್ವಜ (Green Flag) ಹಾರಿಸಿರುವ ವಿಚಾರವಾಗಿ ಆಕ್ಷೇಪ ವ್ಯಕ್ತವಾಗಿದೆ.

ಈ ಬಗ್ಗೆ ಶಶಾಂಕ್​ ಜೆಎಸ್​ ಎಂಬುವರು ಟ್ವೀಟ್ ಮಾಡಿ “ಚಾವರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಜೆ ನಗರ ಪೊಲೀಸ್​ ಠಾಣೆ ಎದುರಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಹಸಿರು ಧ್ವಜ ಹಾರಿಸಲಾಗಿದೆ. ಇದಕ್ಕೆ ಹೇಗೆ ಅವಕಾಶ ಮಾಡಿಕೊಟ್ಟಿದ್ದೀರಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರಿಗೆ ಪ್ರಶ್ನಿಸಿದ್ದಾರೆ. ಹಾಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಅವರಿಗೆ ಟ್ಯಾಗ್​ ಮಾಡಿದ್ದಾರೆ.

ಶಿವಾಜಿ ನಗರದ ಚಾಂದನಿ ಚೌಕ್​ನ ಬೀದಿ ದೀಪದ ಮೇಲೆ ಹಸಿರು ಧ್ವಜ

ಶಿವಾಜಿನಗರದ ಚಾಂದಿನಿ ಚೌಕ್​ನ ಬೀದಿ ದೀಪದ ಮೇಲೆ ಹಾರಿಸಲಾಗಿದ್ದ ಹಸಿರು ಧ್ವಜ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಹಸಿರು ಬಾವುಟ ತೆಗೆಸುವ ತಾಕತ್ ನಿಮಗೆ ಇಲ್ಲವಾ ಎಂದು ಬಿಜೆಪಿ ನಾಯಕರು ಟ್ವೀಟ್‌ ಮಾಡಿ ಸವಾಲು ಹಾಕಿದ್ದರು. ಮೊದಲಿಗೆ ವಿಕಾಸ್ ವಿಕ್ಕಿ ಎಂಬುವರು ಟ್ವೀಟ್‌ ಮಾಡಿ “ಈ ಬಾವುಟ ಯಾವ ಧರ್ಮದ್ದು ಅಂತ ‘ಕೈ’ ನಾಯಕರು ಉತ್ತರಿಸಬೇಕು. ಹಸಿರು ಬಾವುಟ ತೆಗೆಸುವ ತಾಕತ್ ನಿಮಗೆ ಇಲ್ಲವಾ. ಹಿಂದೂ ಗ್ರಾಮಸ್ಥರ ಮೇಲೆ ಮಾತ್ರ ನಿಮ್ಮ ಅಟ್ಟಹಾಸವೆ” ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: ಕೆರಗೋಡು ಹನುಮ ಧ್ವಜಕ್ಕೆ ಅನುಮತಿ ಕೊಟ್ಟ ಗ್ರಾ.ಪಂ ನಡಾವಳಿ ಪುಸ್ತಕ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಇದರ ಬೆನ್ನಲ್ಲೇ ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಸಹ ಟ್ವೀಟ್ ಮಾಡಿ, ಪೂರ್ವ ವಿಭಾಗ ಡಿಸಿಪಿಯವರೇ ಶತ್ರು ದೇಶದ ಬಣ್ಣ ಹೋಲುವ ಧ್ವಜ ಹಾರಾಟ. ಸಾರ್ವಜನಿಕ ಪ್ರದೇಶದಲ್ಲಿ ಧ್ವಜ ನಿಯಮಕ್ಕೆ ವಿರುದ್ಧವಾದದ್ದು ಅಲ್ಲವೇ. ಶಿವಾಜಿನಗರ ಇರುವುದು ಭಾರತದಲ್ಲಿ, ಪಾಕಿಸ್ತಾನದಲ್ಲಿ ಅಲ್ಲ ಎಂದು ಬರೆದುಕೊಂಡಿದ್ದರು.

ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸರು, ಚಾಂದಿನಿ ಚೌಕ್​ನ ಬೀದಿ ದೀಪದ ಮೇಲಿದ್ದ ಹಸಿರು ಧ್ವಜ ತೆರವು ಮಾಡಿ ತ್ರಿವರ್ಣ ಧ್ವಜ ಹಾರಿಸಿದ್ದರು.

ಕೆರಗೋಡಿನಿಂದ ಶುರುವಾದ ಧ್ವಜ ವಿವಾದ

ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಧ್ವಜಸ್ತಂಬದಲ್ಲಿ ಹಾರಿಸಲಾಗಿದ್ದ ಹನುಮ ಧ್ವಜವನ್ನು ಪೊಲೀಸರು ತೆರವುಗೊಳಿಸಿದ್ದರು. ಇದಕ್ಕೆ ಗ್ರಾಮಸ್ಥರು ಮತ್ತು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್​ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದಾರೆ. ಮಂಗಳವಾರ (ಜ.29) ರಂದು ಕೆರೆಗೋಡಿನಿಂದ ಮಂಡ್ಯದ ವರೆಗು ಬಿಜೆಪಿ ಮತ್ತು ಜೆಡಿಎಸ್​ ನಾಯಕರು ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಬಿಜೆಪಿ ನಾಯಕರು ದೂರಿದರು. ಈ ಘಟನೆ ನಂತರ ಧ್ವಜ ವಿವಾದ ಬೆಂಗಳೂರಿಗೂ ಹಬ್ಬಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:54 am, Wed, 31 January 24