
ಬೆಂಗಳೂರು, ಜುಲೈ 27: ಬೆಂಗಳೂರು (Bengaluru) ನಗರದಲ್ಲಿ ಕಳೆದೊಂದು ವಾರದಿಂದ ಹವಾಮಾನ ಬದಲಾವಣೆಯಾಗುತ್ತಿದೆ. ಇರಿಂದ ಬೆಂಗಳೂರಿನ ಜನರು ಸಾರಿ, ಮಲೇರಿಯಾ (Malaria) ರೋಗಕ್ಕೆ ತುತ್ತಾಗುತ್ತಿದ್ದಾರೆ. ಕಳೆದೊಂದು ವಾರದಲ್ಲಿ 173 ಜನರು ಸಾರಿ, 53 ಜನರು ಮಲೇರಿಯಾ ಹಾಗೂ 32 ಜನರು ಚಿಕನ್ ಗುನ್ಯಾ ರೋಗದಿಂದ ಬಳಲುತ್ತಿದ್ದಾರೆ.
ಬೆಂಗಳೂರಿನಲ್ಲಿ ಸದ್ಯ ಚಳಿ ಜೊತೆಗೆ ಮೋಡಮುಸಿಕಿದ ವಾತವರಣ, ಬಿಟ್ಟು ಬಿಟ್ಟು ಮಳೆ, ಆಗೊಮ್ಮೆ ಈಗೊಮ್ಮೆ ಬಿಸಿಲು, ಸಂಜೆಯಾದರೆ ಮಳೆ, ಚಳಿ ಹೀಗೆ ಹವಾಮಾನ ವೈಪರಿತ್ಯದಿಂದ ಜನರಿಗೆ ರೋಗಗಳು ತಗಲುತ್ತಿವೆ. ಬೆಂಗಳೂರಿನಲ್ಲಿ ಕಳೆದ 15 ದಿನಗಳಲ್ಲಿ ಶೇ. 15 ರಿಂದ 20 ರಷ್ಟು ಜನ ಜ್ವರಕ್ಕೆ ತುತ್ತಾದರು. ಮಕ್ಕಳು ಜ್ವರ, ಕೆಮ್ಮು, ಗಂಟಲು ನೋವು, ಕೆಮ್ಮು, ಶೀತ, ನೆಗಡಿ, ವಾಂತಿಯಿಂದ ಬಳುತ್ತಿದ್ದಾರೆ. ಬದಲಾದ ಹವಾಮಾನ ಹಿನ್ನೆಲೆಯಲ್ಲಿ ಡೆಂಗಿ, ಟೈಫಾಯ್ಡ್, ವೈರಲ್ ಜ್ವರ ಕೂಡ ಕಾಣಿಸಿಕೊಳ್ಳುತ್ತಿದೆ. ಆರೋಗ್ಯ ಇಲಾಖೆ ಕೂಡ ಕ್ರಮವಹಿಸಲು ಮುಂದಾಗಿದೆ.
ಜ್ವರ, ಕೆಮ್ಮು, ನೆಗಡಿ, ಅತಿಸಾರ, ವಾಂತಿ, ಬೇಧಿ ಪ್ರಕರಣಗಳು ಹೆಚ್ಚಿವೆ. ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗದಲ್ಲಿ ಶೇ. 15 ರಷ್ಟು ಜ್ವರದ ಪ್ರಕರಣ ಏರಿಕೆ ಕಂಡ ಬರುತ್ತಿದೆ. ಇದಕ್ಕೆಲ್ಲ ಬೆಂಗಳೂರಿನಲ್ಲಿ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಹವಮಾನದ ಎಫೆಕ್ಟ್ ಕಾರಣ. ಜ್ವರದ ಜೊತೆ ILI ಸಾರಿ ಪ್ರಕರಣಗಳ ಏರಿಕೆಯೂ ಕಂಡು ಬರುತ್ತಿದ್ದು. ಮಲೇರಿಯಾ, ಡೆಂಗಿ ಕೇಸ್ ಕೂಡ ದಾಖಲಾಗುತ್ತಿವೆ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: ನಾಳೆಯ ಹವಾಮಾನ: ಕರ್ನಾಟಕದಲ್ಲಿ ಮುಂದುವರಿಯಲಿದೆ ಮಳೆ ಅಬ್ಬರ, ಹಲವೆಡೆ ಆರೆಂಜ್-ಯೆಲ್ಲೋ ಅಲರ್ಟ್
ಕೆ ಸಿ ಜನರಲ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಸಿವಿ ರಾಮನ್ ನಗರ ಆಸ್ಪತ್ರೆ, ವಾಣಿವಿಲಾಸ್ ಆಸ್ಪತ್ರೆ ಸೇರಿದ್ದಂತೆ ಬಹುತೇಕ ಆಸ್ಪತ್ರೆಗಳಲ್ಲಿ ದಾಖಲಾಗುವ ಅರ್ಧದಷ್ಟು ರೋಗಿಗಳು ವೈರಾಣು ಜ್ವರದಿಂದ ಬಳಲುತ್ತಿದ್ದಾರೆ. ಹೀಗಾಗಿ ಆರೋಗ್ಯದ ಬಗ್ಗೆ ಜನರು ಕೊಂಚ ಎಚ್ಚರ ವಹಿಸಿ ಎಂದು ವೈದ್ಯರು ಸೂಚನೆ ನೀಡಿದ್ದಾರೆ.
ಒಟ್ಟಿನಲ್ಲಿ ಬದಲಾಗುತ್ತಿರುವ ವಾತವರಣ ಹಿನ್ನೆಲೆಯಲ್ಲಿ ಜನರು ಸ್ವಚ್ಛತೆ ಕಾಪಾಡುವುದು, ಬಿಸಿ ನೀರು ಕುಡಿಯುವುದು, ಆರೋಗ್ಯಕರ ಆಹಾರ ಸೇವನೆ ಅಗತ್ಯ ಎಂಬ ಸಲಹೆಯನ್ನ ವೈದ್ಯರು ನೀಡಿದ್ದಾರೆ.
Published On - 8:37 pm, Sun, 27 July 25