ಮದುವೆ ಮನೆಗಳೇ ಈತನ ಟಾರ್ಗೆಟ್: ಕುಖ್ಯಾತ ಕಳ್ಳ ಪಲ್ಸರ್ ಬಾಬು ಅರೆಸ್ಟ್; 42 ಲಕ್ಷ ರೂ.ಗೂ ಅಧಿಕ ಮೌಲ್ಯದ ಸ್ವತ್ತು ವಶ!

ಮದುವೆ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಖತರ್ನಾಕ್ ಕಳ್ಳ ಪಲ್ಸರ್ ಬಾಬು ಕೊನೆಗೂ ಬೆಂಗಳೂರಿನ ಸದಾಶಿವನಗರ ಪೊಲೀಸರ ಅತಿಥಿಯಾಗಿದ್ದಾನೆ. ಮಕ್ಕಳ ಒಡವೆ ಹಾಗೂ ಬೆಲೆಬಾಳುವ ಕ್ಯಾಮರಾಗಳನ್ನು ಕದ್ದು 42 ಲಕ್ಷಕ್ಕೂ ಅಧಿಕ ಮೌಲ್ಯದ ಕಾರು, ಚಿನ್ನದೊಂದಿಗೆ ಮೋಜು ಮಾಡುತ್ತಿದ್ದ ಈತನ ಶೋಕಿ ಜೀವನದ ಕರಾಳ ಮುಖ ಇಲ್ಲಿದೆ ನೋಡಿ.

ಮದುವೆ ಮನೆಗಳೇ ಈತನ ಟಾರ್ಗೆಟ್: ಕುಖ್ಯಾತ ಕಳ್ಳ ಪಲ್ಸರ್ ಬಾಬು ಅರೆಸ್ಟ್; 42 ಲಕ್ಷ ರೂ.ಗೂ ಅಧಿಕ ಮೌಲ್ಯದ ಸ್ವತ್ತು ವಶ!
ಕುಖ್ಯಾತ ಕಳ್ಳ ಪಲ್ಸರ್ ಬಾಬು ಅರೆಸ್ಟ್ (ಸಾಂದರ್ಭಿಕ ಚಿತ್ರ)
Image Credit source: TV9 Network
Edited By:

Updated on: Mar 18, 2026 | 1:10 PM

ಬೆಂಗಳೂರು, ಮಾರ್ಚ್​ 18: ಮದುವೆ ಸಮಾರಂಭಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಚನ್ನಪಟ್ಟಣ ಮೂಲದ ಕುಖ್ಯಾತ ಕಳ್ಳ ‘ಪಲ್ಸರ್ ಬಾಬು’ ಅಲಿಯಾಸ್ ಬಾಬುನನ್ನು (Pulsar Babu) ಬೆಂಗಳೂರಿನ (Bangalore) ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆದ ಮದುವೆಯೊಂದರಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ ಈತ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಈತನ ವಿರುದ್ಧ ಈಗಾಗಲೇ 19 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ. ಅಂದಹಾಗೆ, ಈತ ಈ ಹಿಂದೆ ಕೂಡ ಇಂಥದ್ದೇ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಬಿಡುಗಡೆಯಾಗಿದ್ದ.

ಪಲ್ಸರ್ ಬಾಬುಗೆ ವರದಾನವಾಗಿದ್ದ ಕೊರೊನಾ

ಬಂಧಿತ ಆರೋಪಿ ಪಲ್ಸರ್ ಬಾಬು ವಿವಿಧ ಪೊಲೀಸ್ ಠಾಣೆಗಳ 19ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ. ಈ ಹಿಂದೆ ಈತ ಜೈಲು ಸೇರಿದ್ದ. ಕೊರೊನಾ ಸಮಯದಲ್ಲಿ ಸಣ್ಣಪುಟ್ಟ ಅಪರಾಧಗಳಡಿ ಜೈಲಲ್ಲಿದ್ದ ಸುಮಾರು 2,000 ಕೈದಿಗಳನ್ನು ಬಿಡುಗಡೆ ಮಾಡಿದಾಗ ಪಲ್ಸರ್ ಬಾಬುಗೂ ಹೊರಬರುವ ಅವಕಾಶ ಸಿಕ್ಕಿತ್ತು. ಆದರೆ, ಜೈಲಿನಿಂದ ಹೊರಬಂದ ಮೇಲೆ ಸುಧಾರಿಸುವ ಬದಲು ತನ್ನ ಹಳೆ ಚಾಳಿಯನ್ನೇ ಮುಂದುವರಿಸಿದ್ದ.

ಮಕ್ಕಳೇ ಈತನ ಟಾರ್ಗೆಟ್

ಐಷಾರಾಮಿ ಜೀವನ ಮತ್ತು ಮೋಜು-ಮಸ್ತಿಗೆ ದಾಸನಾಗಿದ್ದ ಈತ, ಮದುವೆ ಮನೆಗಳಲ್ಲಿ ಓಡಾಡುವ ಸಣ್ಣ ಮಕ್ಕಳನ್ನು ಟಾರ್ಗೆಟ್ ಮಾಡುತ್ತಿದ್ದ. ಮಕ್ಕಳ ಬಳಿ ಇರುವ ಚಿನ್ನಾಭರಣ ಹಾಗೂ ಮೊಬೈಲ್‌ಗಳನ್ನು ನಯವಾಗಿಯೇ ಎಗರಿಸಿ ಪರಾರಿಯಾಗುತ್ತಿದ್ದ. ಅಷ್ಟೇ ಅಲ್ಲದೆ, ಮದುವೆ ಮನೆಯಲ್ಲಿರುವ ಬೆಲೆಬಾಳುವ ಕ್ಯಾಮರಾ, ಲ್ಯಾಪ್‌ಟಾಪ್ ಹಾಗೂ ಪಾರ್ಕಿಂಗ್‌ನಲ್ಲಿರುವ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ.

ಕದ್ದ ಚಿನ್ನದಲ್ಲಿ ಶೋಕಿ!

ಆರೋಪಿ ಕದ್ದ ಚಿನ್ನವನ್ನು ಮಾರಾಟ ಮಾಡುವ ಬದಲು, ಅದನ್ನು ಕರಗಿಸಿ ತನಗೆ ಬೇಕಾದ ವಿನ್ಯಾಸದ ತಿರುಪತಿ ಲಾಕೆಟ್ ಮತ್ತು ಉಂಗುರಗಳನ್ನು ಮಾಡಿಸಿಕೊಂಡು ಶೋಕಿ ಮಾಡುತ್ತಿದ್ದ. ಅಲ್ಲದೆ, ಕದ್ದ ಹಣದಲ್ಲಿ ಕಾರುಗಳನ್ನು ಖರೀದಿ ಮಾಡಿ ಮೋಜು-ಮಸ್ತಿ ಮಾಡುತ್ತಿದ್ದ.

42 ಲಕ್ಷ ರೂ. ಮೌಲ್ಯದ ವಸ್ತುಗಳ ಜಪ್ತಿ

ಬಂಧಿತನಿಂದ ಪೊಲೀಸರು ಒಟ್ಟು 42.38 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 2 ಕಾರುಗಳು ಹಾಗೂ 4 ಬೈಕ್‌ಗಳು, 132 ಗ್ರಾಂ ಚಿನ್ನಾಭರಣ, 7 ಮೊಬೈಲ್ ಫೋನ್‌ಗಳು, 1 ಹೈ ಎಂಡ್ ಕ್ಯಾಮರಾ ಮತ್ತು 2 ಲೆನ್ಸ್‌ಗಳು, 2 ಲ್ಯಾಪ್‌ಟಾಪ್‌ಗಳು ಹಾಗೂ 1.20 ಲಕ್ಷ ರೂ. ನಗದು ಸೇರಿವೆ.

ಇದನ್ನೂ ಓದಿ: ಕೆಲಸ ಮಾಡ್ತಿದ್ದ ಅಂಗಡಿಗೇ ಕನ್ನ: ಕದ್ದ ಆಭರಣ ಮಾರಿ ಮಹಾಕಾಳೇಶ್ವರನಿಗೆ ಪೂಜೆ ಸಲ್ಲಿಸಿದ್ದವರು ಲಾಕ್!

ಆರೋಪಿ ಬಂಧನದಿಂದ ಸದಾಶಿವನಗರ, ವರ್ತೂರು, ಜಾಲಹಳ್ಳಿ, ಹೆಣ್ಣೂರು ಹಾಗೂ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಒಟ್ಟು 8 ಪ್ರಕರಣಗಳು ಬೆಳಕಿಗೆ ಬಂದಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us