ಅಯ್ಯೋ ಪಾಪ ಅಂದಿದ್ದೇ ತಪ್ಪಾಯ್ತು: ಎಂಬಿಬಿಎಸ್ ವಿದ್ಯಾರ್ಥಿನಿ ಸ್ನೇಹಿತೆಯ ಸೋಗಿನಲ್ಲಿ ಒಂದು ಲಕ್ಷ ರೂ. ವಂಚನೆ!

ವಿದೇಶದಲ್ಲಿ ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿನಿಯ ಕಾಲೇಜು ಶುಲ್ಕ ಪಾವತಿಯ ಗಡುವಿನ ಆತಂಕವನ್ನು ಬಳಸಿಕೊಂಡು ಬೆಂಗಳೂರಿನಲ್ಲಿ ಸೈಬರ್ ವಂಚಕರು ಒಂದು ಲಕ್ಷ ರೂಪಾಯಿ ಲೂಟಿ ಮಾಡಿದ್ದಾರೆ. ವಿದ್ಯಾರ್ಥಿನಿಯ ಸ್ನೇಹಿತೆಯ ಸೋಗಿನಲ್ಲಿ ಮಾತನಾಡಿದ ಮಹಿಳೆ, ವಿದೇಶಿ ವಿನಿಮಯ ದರ ಕಡಿತವಿಲ್ಲದೆ ಹಣ ತಲುಪಿಸುವುದಾಗಿ ನಂಬಿಸಿ ಗೂಗಲ್ ಪೇ ಮೂಲಕ ಹಣ ಪಡೆದು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಸಿ.ಕೆ. ಅಚುಕಟ್ಟು ಠಾಣೆಯಲ್ಲಿ ದೂರು ದಾಖಲಾಗಿದೆ.

ಅಯ್ಯೋ ಪಾಪ ಅಂದಿದ್ದೇ ತಪ್ಪಾಯ್ತು: ಎಂಬಿಬಿಎಸ್ ವಿದ್ಯಾರ್ಥಿನಿ ಸ್ನೇಹಿತೆಯ ಸೋಗಿನಲ್ಲಿ ಒಂದು ಲಕ್ಷ ರೂ. ವಂಚನೆ!
ಸಾಂದರ್ಭಿಕ ಚಿತ್ರ
Image Credit source: information age

Updated on: Jun 07, 2026 | 3:07 PM

ಬೆಂಗಳೂರು, ಜೂನ್ 07: ಕಾಲೇಜು ಶುಲ್ಕ ಪಾವತಿಸುವ ಗಡುವಿನ ತುರ್ತು ಪರಿಸ್ಥಿತಿಯನ್ನು ಬಳಸಿಕೊಂಡು ವಿದ್ಯಾರ್ಥಿನಿಯೊಬ್ಬರ ಕುಟುಂಬಕ್ಕೆ ಸೈಬರ್ ವಂಚಕರು (Cyber Crime) ಒಂದು ಲಕ್ಷ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ವಿದೇಶದಲ್ಲಿ ಎಂಬಿಬಿಎಸ್ ಓದುತ್ತಿರುವ ಯುವತಿಯ ಕಾಲೇಜು ಫೀಸ್ ಕಟ್ಟುವ ನೆಪದಲ್ಲಿ ಈ ವಂಚನೆ ಎಸಗಲಾಗಿದೆ.

ಮುಖ್ಯಾಂಶಗಳು

  • ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಯ ಕುಟುಂಬಕ್ಕೆ ವಂಚನೆ ಮಾಡಲಾಗಿದೆ.
  • ಪರೀಕ್ಷೆಯ ಶುಲ್ಕ ಪಾವತಿಸುವ ತುರ್ತು ಪರಿಸ್ಥಿತಿಯನ್ನು ಸೈಬರ್ ಖದೀಮರು ದುರುಪಯೋಗಪಡಿಸಿಕೊಂಡಿದ್ದಾರೆ.
  • ಸ್ನೇಹಿತೆಯ ಸೋಗಿನಲ್ಲಿ ಬಂದು ಒಂದು ಲಕ್ಷ ರೂಪಾಯಿ ಪಡೆದು ನಾಪತ್ತೆಯಾಗಿದ್ದಾರೆ.

ಪರೀಕ್ಷೆಯ ನೆಪ ಹೇಳಿ ವಂಚನೆ

ಬೆಂಗಳೂರು ನಿವಾಸಿಯೊಬ್ಬರ ಸಂಬಂಧಿಕರ ಮಗಳು ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಅವರಿಗೆ ಪರೀಕ್ಷೆಗಳು ಹತ್ತಿರ ಬರುತ್ತಿದ್ದರಿಂದ ತುರ್ತಾಗಿ ಕಾಲೇಜು ಶುಲ್ಕ ಪಾವತಿಸಬೇಕಾಗಿತ್ತು. ನಿಗದಿತ ಸಮಯಕ್ಕೆ ಹಣ ಪಾವತಿಸದಿದ್ದರೆ ಪರೀಕ್ಷೆಗೆ ಕುಳಿತುಕೊಳ್ಳಲು ಅನುಮತಿ ಸಿಗುವುದಿಲ್ಲ ಎಂದು ವಿದ್ಯಾರ್ಥಿನಿ ತನ್ನ ಕುಟುಂಬಕ್ಕೆ ತಿಳಿಸಿದ್ದರು. ಈ ಸಂದರ್ಭವನ್ನು ಸೈಬರ್ ಅಪರಾಧಿಗಳು ತಮಗೆ ಪೂರಕವಾಗಿ ಬಳಸಿಕೊಂಡಿದ್ದಾರೆ.

ಸ್ನೇಹಿತೆಯ ಸೋಗಿನಲ್ಲಿ ವಂಚನೆ

ಹಣ ವರ್ಗಾವಣೆಯ ತುರ್ತಿನಲ್ಲಿದ್ದ ನವೀನ್ ಕುಟುಂಬವನ್ನು ದೀಪಿಕಾ ಎಂದು ಪರಿಚಯಿಸಿಕೊಂಡ ಮಹಿಳೆಯೊಬ್ಬಳು ಸಂಪರ್ಕಿಸಿದ್ದಾಳೆ. ತಾನು ವಿದ್ಯಾರ್ಥಿನಿಯ ಸ್ನೇಹಿತೆ ಎಂದು ನಂಬಿಸಿದ ಆಕೆ, ವಿದೇಶಿ ವಿನಿಮಯದ (ಫಾರೆಕ್ಸ್) ಯಾವುದೇ ಕಡಿತವಿಲ್ಲದೆ ನೇರವಾಗಿ ಹಣವನ್ನು ತಲುಪಿಸಲು ಒಂದು ಪರ್ಯಾಯ ಮಾರ್ಗವನ್ನು ಸೂಚಿಸಿದ್ದಾಳೆ. ತನ್ನ ಪರಿಚಿತರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಿದರೆ, ಯಾವುದೇ ಶುಲ್ಕ ಕಡಿತವಾಗದೆ ಸಂಪೂರ್ಣ ಮೊತ್ತ ವಿದ್ಯಾರ್ಥಿನಿಗೆ ತಲುಪುತ್ತದೆ ಎಂದು ಆಕೆ ನಂಬಿಸಿದ್ದಾಳೆ.

ದೂರು ದಾಖಲು

ಆಕೆಯ ಮಾತನ್ನು ನಿಜವೆಂದು ನಂಬಿದ ನವೀನ್ ಮೇ 9 ರಂದು ಗೂಗಲ್ ಪೇ (Google Pay) ಮೂಲಕ ಆಕೆ ನೀಡಿದ ಖಾತೆಗೆ ಹಂತ ಹಂತವಾಗಿ ಒಟ್ಟು ಒಂದು ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದಾರೆ. ಆದರೆ ಹಣ ಕೈ ಸೇರಿದ ಬೆನ್ನಲ್ಲೇ ಆ ಮಹಿಳೆ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾಳೆ. ಎಷ್ಟು ಪ್ರಯತ್ನಿಸಿದರೂ ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ ತಮಗೆ ವಂಚನೆಯಾಗಿರುವುದು ಕುಟುಂಬಕ್ಕೆ ಮನವರಿಕೆಯಾಗಿದೆ.

ಕುಟುಂಬದ ಸದಸ್ಯರೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರಿಂದ ದೂರು ನೀಡಲು ಕೊಂಚ ತಡವಾಗಿದೆ. ಸದ್ಯ ಹಣ ಕಳೆದುಕೊಂಡ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಬಿಎನ್ಎಸ್ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Follow Us