
ಬೆಂಗಳೂರು, ಮಾರ್ಚ್ 24: ನಗರದಲ್ಲಿ ತ್ಯಾಜ್ಯ ಸಂಗ್ರಹಣೆಯಲ್ಲಿ (Waste Management) ಅಡಚಣೆ ಉಂಟಾಗಿದ್ದು, ಕನಿಷ್ಠ 50 ವಾರ್ಡ್ಗಳಲ್ಲಿ ಕಸದ ಸಂಗ್ರಹಣೆ ಸೋಮವಾರ ಸ್ಥಗಿತಗೊಂಡಿತ್ತು. ವೇತನ ಬಾಕಿ ಹಾಗೂ ಕಸ ವಿಂಗಡಣೆ ಕುರಿತ ಹೊಸ ನಿಯಮದ ವಿರುದ್ಧ ಪ್ರತಿಭಟನೆಯಾಗಿ ಆಟೋ ಟಿಪ್ಪರ್ ಚಾಲಕರು ಮತ್ತು ಲೋಡರ್ಗಳು ಸಾಮೂಹಿಕ ರಜೆ ಹಾಕಿದ್ದರಿಂದ ಈ ಅವ್ಯವಸ್ಥೆ ಉಂಟಾಗಿದೆ.
ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಮೂಲದಲ್ಲೇ ಕಸದ ವಿಂಗಡಣೆ ಕಡ್ಡಾಯವಾಗಬೇಕು ಎಂದು ಒತ್ತಾಯಿಸುತ್ತಿದ್ದು, ಗುತ್ತಿಗೆದಾರರು ಇದನ್ನು ವಿರೋಧಿಸಿದ್ದಾರೆ. ಕಸ ವಿಂಗಡಿಸುವ ಜವಾಬ್ದಾರಿ ಕಸ ಉತ್ಪಾದಕರದ್ದೇ ಹೊರತು ಕಸ ಸಂಗ್ರಹಿಸುವವರದ್ದಲ್ಲವೆಂಬುದು ಇವರ ವಾದ. BSWML ಸಿಇಒ ಕರೀಗೌಡ, ಸುಮಾರು 40–50 ವಾರ್ಡ್ಗಳಲ್ಲಿ ಮಾತ್ರ ಸಮಸ್ಯೆ ಉಂಟಾಗಿದ್ದು, ನಗರದ ಉಳಿದ ಭಾಗಗಳಲ್ಲಿ ಸಂಗ್ರಹಣೆ ಸಾಮಾನ್ಯವಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಕಳೆದ ನಾಲ್ಕು ತಿಂಗಳ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದೂ ಸಹ ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ, ಕಸ ಸಂಗ್ರಹಿಸದ ಗುತ್ತಿಗೆದಾರರ ವಿರುದ್ಧ ಅಗತ್ಯ ಸೇವೆಗಳ ಕಾಯ್ದೆ (ESMA) ಅಡಿಯಲ್ಲಿ 35 ಎಫ್ಐಆರ್ಗಳು ದಾಖಲಾಗಿವೆ. ಗುತ್ತಿಗೆದಾರರ ಸಂಘವು ಹೊಸ ನಿಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಬಿಬಿಎಂಪಿ ಕಸ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಸ್ಎನ್ ಬಾಲಸುಬ್ರಮಣಿಯನ್, ತ್ಯಾಜ್ಯವನ್ನು ಬೇರ್ಪಡಿಸುವ ಜವಾಬ್ದಾರಿ ತ್ಯಾಜ್ಯ ಉತ್ಪಾದಕರ ಮೇಲಿದೆ ಎಂದು ಹೇಳಿದ್ದಾರೆ.
ತ್ಯಾಜ್ಯವನ್ನು ಬೇರ್ಪಡಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಬಿಎಸ್ಡಬ್ಲ್ಯೂಎಂಎಲ್ ನಮ್ಮ ಆಟೋ ಚಾಲಕರು ಮತ್ತು ಲೋಡರ್ಗಳಿಗೆ ಹೇಳಲಾಗಿದೆ. ನಾವು ತ್ಯಾಜ್ಯವನ್ನು ಹೇಗೆ ಬೇರ್ಪಡಿಸಬಹುದು? ಇದು ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಕಾಯ್ದೆಯ ಉಲ್ಲಂಘನೆಗೆ ಸಮನಾಗುವುದಿಲ್ಲವೇ? ಎಂದಿದ್ದಾರೆ. ಟೆಂಡರ್ ಷರತ್ತುಗಳ ಪ್ರಕಾರ ಗುತ್ತಿಗೆದಾರರು ಬೇರ್ಪಡಿಸಿದ ತ್ಯಾಜ್ಯವನ್ನು ಮಾತ್ರ ಸಂಗ್ರಹಿಸಬೇಕು ಎಂದು ಬಿಎಸ್ಡಬ್ಲ್ಯೂಎಂಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.