ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಯುವತಿಯ ಕಿಡ್ನಾಪ್​ಗೆ ಯತ್ನ, ಪೊಲೀಸ್-ಜಡ್ಜ್ ಕಾರು ಸೇರಿ ನೂರಾರು ವಾಹನಗಳಿಗೆ ಡಿಕ್ಕಿ!

ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯಲ್ಲಿ ಪ್ರೇಮ ವಿವಾಹವಾಗಿದ್ದ 21 ವರ್ಷದ ಯುವತಿಯನ್ನು ಅಪಹರಿಸಲು ಯತ್ನಿಸಿದ ಆರೋಪಿಗಳು, ಪರಾರಿಯಾಗುವ ವೇಳೆ 35ಕ್ಕೂ ಹೆಚ್ಚು ವಾಹನಗಳು ಹಾಗೂ 100ಕ್ಕೂ ಹೆಚ್ಚು ಬೈಕ್‌ಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಯುವತಿಯನ್ನು ರಕ್ಷಿಸಿ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಯುವತಿಯ ಕಿಡ್ನಾಪ್​ಗೆ ಯತ್ನ, ಪೊಲೀಸ್-ಜಡ್ಜ್ ಕಾರು ಸೇರಿ ನೂರಾರು ವಾಹನಗಳಿಗೆ ಡಿಕ್ಕಿ!
ಕಿಡ್ನಾಪರ್ಸ್ ಮಾಡಿದ ಸರಣಿ ಅಪಘಾತದಲ್ಲಿ ರಸ್ತೆ ಬದಿ ಇದ್ದ ದ್ವಿಚಕ್ರ ವಾಹನಗಳಿಗೂ ಹಾನಿಯಾಗಿದೆ
Image Credit source: tv9
Edited By:

Updated on: Sep 17, 2026 | 6:58 AM

ಮುಖ್ಯಾಂಶಗಳು

  • ಯುವತಿ ಕಿಡ್ನಾಪ್‌ ಯತ್ನದಲ್ಲಿ ಸರಣಿ ಅಪಘಾತ
  • 35ಕ್ಕೂ ಹೆಚ್ಚು ವಾಹನಗಳಿಗೆ ಕಾರು ಡಿಕ್ಕಿ
  • ಮೂವರು ಆರೋಪಿಗಳು ಪೊಲೀಸರ ವಶಕ್ಕೆ

ಬೆಂಗಳೂರು, ಸೆಪ್ಟೆಂಬರ್ 17: ಪ್ರೇಮ ವಿವಾಹವಾಗಿದ್ದ ಯುವತಿಯನ್ನು ಕುಟುಂಬದವರು ಅಪಹರಿಸಲು ಸುಪಾರಿ ನೀಡಿದ ಆರೋಪ ಕೇಳಿಬಂದಿದ್ದು, ಬೆಂಗಳೂರಿನಲ್ಲಿ ಸಿನಿಮೀಯ ರೀತಿಯ ಕಿಡ್ನಾಪ್‌ ಯತ್ನ ನಡೆದಿದೆ. ಅಗ್ರಹಾರ ದಾಸರಹಳ್ಳಿಯ ಮನೆಗೆ ನುಗ್ಗಿದ ಆರೋಪಿಗಳು ಪೂಜಾ ಎಂಬ 21 ವರ್ಷದ ಯುವತಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ಯಲು ಮುಂದಾಗಿದ್ದಾರೆ. ಈ ವೇಳೆ ಸ್ಥಳೀಯರು ತಡೆಯಲು ಬಂದಾಗ, ಆರೋಪಿಗಳು ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಸರಣಿ ಅಪಘಾತಕ್ಕೆ ಕಾರಣರಾಗಿದ್ದಾರೆ.

ರಾಜಸ್ಥಾನ ಮೂಲದ ಪೂಜಾ, ಓಂ ಪ್ರಕಾಶ್ ಎಂಬ ಯುವಕನನ್ನು ಪ್ರೀತಿಸಿ ಸುಮಾರು 9 ತಿಂಗಳ ಹಿಂದೆ ವಿವಾಹವಾಗಿದ್ದರು. ಮದುವೆಯ ಬಳಿಕ ಇಬ್ಬರೂ ರಾಜಸ್ಥಾನ ತೊರೆದು ಬೆಂಗಳೂರಿಗೆ ಬಂದು, ಅಗ್ರಹಾರ ದಾಸರಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದರೆ, ಮಗಳ ಪ್ರೇಮ ವಿವಾಹವನ್ನು ಕುಟುಂಬದವರು ಒಪ್ಪಿರಲಿಲ್ಲ ಎನ್ನಲಾಗಿದೆ.

ಯುವತಿಯ ಅಪಹರಣ ಯತ್ನದಲ್ಲಿ ಸರಣಿ ಅಪಘಾತ

ರಾತ್ರಿ ಕಾರಿನಲ್ಲಿ ಬೆಂಗಳೂರಿಗೆ ಬಂದಿದ್ದ ಆರೋಪಿಗಳು, ಪೂಜಾ ವಾಸವಿದ್ದ ಮನೆಗೆ ನುಗ್ಗಿ ಆಕೆಯನ್ನು ಬಲವಂತವಾಗಿ ಹೊರಗೆ ಕರೆತಂದಿದ್ದಾರೆ. ಯುವತಿ ಚೀರಾಟ ಕೇಳಿ ಸ್ಥಳೀಯರು ರಕ್ಷಣೆಗೆ ಧಾವಿಸಿದಾಗ, ಆರೋಪಿಗಳು ಆಕೆಯನ್ನು ಕಾರಿನಲ್ಲಿ ಹತ್ತಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಕಾರು ಚಾಲಕ ಸದ್ದಾಂ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ್ದು, ದಾರಿಯುದ್ದಕ್ಕೂ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ.

100ಕ್ಕೂ ಹೆಚ್ಚು ಬೈಕ್​ಗಳಿಗೆ ಡಿಕ್ಕಿಹೊಡೆದ ಕಾರು: ಆರು ಮಂದಿಯ ಸ್ಥಿತಿ ಗಂಭೀರ

ದಾಸರಹಳ್ಳಿಯಿಂದ ಗೋವಿಂದರಾಜನಗರ, ವಿಜಯನಗರ ಮಾರ್ಗವಾಗಿ ಹೊಸಹಳ್ಳಿ ಕಡೆಗೆ ಸಾಗಿದ ಕಾರು, ಪೊಲೀಸ್ ವಾಹನ, ನ್ಯಾಯಾಧೀಶರ ಕಾರು ಸೇರಿದಂತೆ 35ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಅಲ್ಲದೆ, 100ಕ್ಕೂ ಹೆಚ್ಚು ಬೈಕ್‌ಗಳಿಗೂ ಡಿಕ್ಕಿ ಹೊಡೆದಿರುವ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಪೃಥ್ವಿರಾಜ್ (12), ಯಶಿಕಾ (9), ಅಮುಲ್ (25), ಮಣಿ (64), ಸಂತೋಷ್ (33) ಮತ್ತು ಜಯಲಕ್ಷ್ಮೀ (57) ಎಂದು ಗುರುತಿಸಲಾಗಿದೆ. ಜಯಲಕ್ಷ್ಮೀ ಅವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿಗಳ ಕಾರು ಬೆನ್ನಟ್ಟಿಕೊಂಡು ಹೋಗಿ ಹೆಡೆಮುರಿ ಕಟ್ಟಿದ ಸ್ಥಳೀಯರು!

ಸ್ಥಳೀಯರು ಆರೋಪಿಗಳ ಕಾರನ್ನು ಬೆನ್ನಟ್ಟಿಕೊಂಡು ಹೋಗಿ ಹೊಸಹಳ್ಳಿ ಬಳಿ ಅಡ್ಡಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಕಾರಿನಲ್ಲಿದ್ದ ಪೂಜಾಳನ್ನು ರಕ್ಷಿಸಿ, ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಕ್ರೋಶಗೊಂಡ ಸ್ಥಳೀಯರು ಕಾರಿನ ಗಾಜುಗಳನ್ನು ಕಲ್ಲಿನಿಂದ ಒಡೆದು ಹಾಕಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮೂಲದ ರಾಕೇಶ್ (31), ಕರಣ್ (25) ಮತ್ತು ಆಯನ್ (18) ಎಂಬ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ. ಅಪಹರಣಕ್ಕೆ ಬಳಸಿದ್ದ ಕಾರಿನ ಚಾಲಕ ಸದ್ದಾಂ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಗೆ ಸುಪಾರಿ ನೀಡಿದ್ದ ಕುಟುಂಬದವರು

ಮಗಳ ಪ್ರೇಮ ವಿವಾಹವನ್ನು ಒಪ್ಪದ ಕುಟುಂಬದವರು, ಆಕೆಯನ್ನು ಬೆಂಗಳೂರಿನಿಂದ ಕರೆದುಕೊಂಡು ಬರಲು ಆರೋಪಿಗಳಿಗೆ ಸುಪಾರಿ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ. ಪ್ರಕರಣದ ಕುರಿತು ಮಾಗಡಿ ರೋಡ್ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us