ಕೋಗಿಲು ಮನೆಗಳ ತೆರವು: ಕೇರಳ ಸಿಎಂ, ಎಂಪಿ ಎಂಟ್ರಿ ಬೆನ್ನಲ್ಲೇ ಹೊಸ ಮನೆ ನೀಡಲು ತೀರ್ಮಾನ

ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಅನಧಿಕೃತ ಮನೆ ತೆರವು ಕಾರ್ಯಾಚರಣೆ ಬಳಿಕ ಸಂತ್ರಸ್ತರಿಗೆ ಬೈಯಪ್ಪನಹಳ್ಳಿ ಬಳಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ 180 ಮನೆಗಳನ್ನು ನೀಡಲು ಸರ್ಕಾರ ಭರವಸೆ ನೀಡಿದೆ. ಕೇರಳ ಸಿಎಂ ಮತ್ತು ಎಂಪಿ ಎಂಟ್ರಿ ಬೆನ್ನಲ್ಲೇ ಹೊಸ ಮನೆ ನೀಡಲು ತೀರ್ಮಾನಿಸಲಾಗಿದೆ.

ಕೋಗಿಲು ಮನೆಗಳ ತೆರವು: ಕೇರಳ ಸಿಎಂ, ಎಂಪಿ ಎಂಟ್ರಿ ಬೆನ್ನಲ್ಲೇ ಹೊಸ ಮನೆ ನೀಡಲು ತೀರ್ಮಾನ
ಕೋಗಿಲು ಮನೆಗಳ ತೆರವು
Edited By:

Updated on: Dec 28, 2025 | 5:14 PM

ಬೆಂಗಳೂರು, ಡಿಸೆಂಬರ್​ 28: ನಗರದ ಕೋಗಿಲು (kogilu) ಲೇಔಟ್​​ನ ಅಕ್ರಮ ಒತ್ತುವರಿ ತೆರವು ಕಾರ್ಯಚರಣೆ, ಸದ್ಯ ರಾಷ್ಟ್ರ ರಾಜಕಾರಣದಲ್ಲಿ ಕದನ ಸೃಷ್ಟಿಸಿದೆ. ನಿನ್ನೆಯಿಂದ ಈ ವಿಚಾರಕ್ಕೆ ಕೇರಳ ಸರ್ಕಾರ ಎಂಟ್ರಿ ಕೊಟ್ಟಿದ್ದು, ಹಂತಹಂತವಾಗಿ ರಾಜ್ಯ ಸರ್ಕಾರವನ್ನ ಟೀಕಿಸುವ ಕೆಲಸ ಮಾಡುತ್ತಿದೆ. ಈ ಮಧ್ಯೆ ಕೋಗಿಲು ಲೇಔಟ್ ಸಂತ್ರಸ್ತರಿಗೆ ಬೇರೆ ಕಡೆ ವಸತಿ ನೀಡಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ವಸತಿ ಸಚಿವ ಜಮೀರ್ ಅಹ್ಮದ್ (Zameer Ahmed)​​ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

180 ಮನೆ ನೀಡಲು ಒಪ್ಪಿಗೆ

ಬೈಯಪ್ಪನಹಳ್ಳಿ ಬಳಿ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ 1200 ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು, ಆ ಮನೆಗಳಲ್ಲಿ ಇಲ್ಲಿರುವ ನಿವಾಸಿಗಳಿಗೆ ಮನೆಗಳನ್ನು ನೀಡಲು ಸರ್ಕಾರ ತಿರ್ಮಾನಿಸಿದೆ. ಹೋರಾಟಗಾರರು 250 ಮನೆಗಳನ್ನು ಕೇಳಿದ್ದರು. ಆದರೆ ವಸತಿ ಇಲಾಖೆಯಿಂದ 180 ಮನೆ ನೀಡಲು ಒಪ್ಪಿಗೆ ನೀಡಲಾಗಿದ್ದು, ರಿಜಿಸ್ಟರ್ ಮಾಡಿಕೊಡುವುದಾಗಿಯೂ ಭರವಸೆ ನೀಡಲಾಗಿದೆ.

ಕೇರಳ ಸಿಎಂ ಪಿಣರಾಯಿ ಮಾತಿಗೆ ಡಿಸಿಎಂ ಡಿಕೆ ಶಿವಕುಮಾರ್​ ತಿರುಗೇಟು

ಸದ್ಯ ಕೋಗಿಲು ಲೇಔಟ್ ತೆರವು ಪ್ರಕರಣ ಕರ್ನಾಟಕ ಮತ್ತು ಕೇರಳ ಸರ್ಕಾರದ ಮಧ್ಯೆ ವಾಗ್ಯುದ್ಧಕ್ಕೆ ಕಾರಣವಾಗಿದೆ. ಕೇರಳ ಸಿಎಂ ಪಿಣರಾಯಿ ಕರ್ನಾಟಕ ಸರ್ಕಾರವನ್ನು ಬುಲ್ಡೋಜರ್ ಸರ್ಕಾರ ಎಂದಿದ್ದರು. ಕೇರಳ ಸಿಎಂ ಪಿಣರಾಯಿ ಮಾತಿಗೆ ಡಿಸಿಎಂ ಡಿಕೆ ಶಿವಕುಮಾರ್​ ತಿರುಗೇಟು ನೀಡಿದ್ದಾರೆ. ಈ ವಿಷಯದಲ್ಲಿ ಮೂಗು ತೂರಿಸಬೇಡಿ. ಈ ಮಧ್ಯೆ ಕರ್ನಾಟಕ ಸರ್ಕಾರಕ್ಕೆ ವೇಣುಗೋಪಾಲ್ ಸಲಹೆ ನೀಡಿದ್ದರು. ವೇಣುಗೋಪಾಲ್ ಸಲಹೆ ನೀಡುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಸಭೆ ಕರೆದಿದ್ದಾರೆ.

ಸರ್ಕಾರದ ವಿರುದ್ಧ ಸಿ.ಟಿ.ರವಿ ಕಿಡಿ

ಇನ್ನು ಈ ವಿಚಾರವಾಗಿ ಬಿಜೆಪಿ MLC ಸಿ.ಟಿ.ರವಿ ಮಾತನಾಡಿದ್ದು, ಕೇರಳ ಸಂಸದ ಇಲ್ಲಿ ಬಂದು ನಮಗೆ ಪಾಠ ಹೇಳುವ ಅಗತ್ಯವಿಲ್ಲ. ಸಿಎಂ ಸಿದ್ದರಾಮಯ್ಯ ಅವರೇ ನಿಮ್ಮ ರಾಜಕೀಯ ಸ್ವಾರ್ಥಕ್ಕೆ ಕನ್ನಡಿಗರ, ಕನ್ನಡದ ಹಿತಾಸಕ್ತಿ ಒತ್ತೆ ಇಡಬೇಡಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಕೋಗಿಲು ಲೇಔಟ್​ನಲ್ಲಿ ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು

ಕೋಗಿಲು ಲೇಔಟ್​ನಲ್ಲಿ ಅಕ್ರಮ ಮನೆಗಳ ತೆರವಾಗಿದೆ. ಈಗ ಯಾಕೆ ನೀವು ಆ ಅಕ್ರಮವನ್ನು ಸಮರ್ಥಿಸುತ್ತಿದ್ದೀರಿ? ಅಕ್ರಮ‌ ಅಂದ್ಮೇಲೆ ಅದನ್ನ ಸಮರ್ಥನೆ ಮಾಡುವ ಅಗತ್ಯವಿಲ್ಲ. ಅಕ್ರಮ ಯಾರು ಮಾಡಿದರೂ ಅಕ್ರಮವೇ. ಸಿಎಂ ಹಾಗೂ ಡಿಸಿಎಂ ಕನ್ನಡ, ಕರ್ನಾಟಕವನ್ನು ಕಡೆಗಣಿಸಿ, ರಾಜಕಾರಣ ಮಾಡಿದರೆ ಕರ್ನಾಟಕದ ಜನರು ಕ್ಷಮಿಸಲ್ಲ. ನಿಮ್ಮ ರಾಜಕೀಯಕ್ಕೆ ರಾಜ್ಯದ ಸ್ವಾಭಿಮಾನ ಒತ್ತೆ ಇಡಬೇಡಿ ಎಂದು ವಾಗ್ದಾಳಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:14 pm, Sun, 28 December 25