AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋರಮಂಗಲದ ಪಿಜಿಯಲ್ಲಿ ಯುವತಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಮಧ್ಯ ಪ್ರದೇಶದಲ್ಲಿ ಅರೆಸ್ಟ್

ಜುಲೈ 23ರ ರಾತ್ರಿ ಕೋರಮಂಗಲದ ಪಿಜಿಗೆ ನುಗ್ಗಿ ಚಾಕುವಿನಿಂದ ಇರಿದು ಕೃತಿ ಕುಮಾರಿಯನ್ನು ಹತ್ಯೆಗೈದಿದ್ದ ಅಭಿಷೇಕ್ ಕೊಲೆ ನಂತರ ಮಧ್ಯ ಪ್ರದೇಶಕ್ಕೆ ಹೋಗಿ ತಲೆ ಮರೆಸಿಕೊಂಡಿದ್ದ. ಸದ್ಯ ಪೊಲೀಸರು ಮಧ್ಯ ಪ್ರದೇಶದಲ್ಲೇ ಆರೋಪಿಯನ್ನು ಬಂಧಿಸಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಕೋರಮಂಗಲದ ಪಿಜಿಯಲ್ಲಿ ಯುವತಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಮಧ್ಯ ಪ್ರದೇಶದಲ್ಲಿ ಅರೆಸ್ಟ್
ಕೊಲೆ ವೇಳೆಯ ದೃಶ್ಯಗಳು
Shivaprasad B
| Edited By: |

Updated on:Jul 27, 2024 | 10:47 AM

Share

ಬೆಂಗಳೂರು, ಜುಲೈ.27: ನಗರದ ಕೋರಮಂಗಲದ ಪಿಜಿಯಲ್ಲಿ ಕೃತಿ ಕುಮಾರಿ ಎಂಬ ಯುವತಿಯ ಕೊಲೆ (Murder) ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಆರೋಪಿ ಅಭಿಷೇಕ್​ನನ್ನು ಕೋರಮಂಗಲ ಪೊಲೀಸರು (Koramangala Police) ಬಂಧಿಸಿದ್ದಾರೆ. ಜುಲೈ 23ರ ರಾತ್ರಿ ಚಾಕುವಿನಿಂದ ಇರಿದು ಕೃತಿ ಕುಮಾರಿಯನ್ನು ಹತ್ಯೆಗೈದಿದ್ದ ಅಭಿಷೇಕ್, ಮಧ್ಯ ಪ್ರದೇಶಕ್ಕೆ ಹೋಗಿ ತಲೆ ಮರೆಸಿಕೊಂಡಿದ್ದ. ಸದ್ಯ ಮಧ್ಯ ಪ್ರದೇಶದಲ್ಲೇ ಆರೋಪಿಯನ್ನು ಬಂಧಿಸಿ ಬೆಂಗಳೂರಿಗೆ ಕರೆದುಕೊಂಡು ಬರಲಾಗಿದೆ.

ಜುಲೈ 23ರ ರಾತ್ರಿ 11.13ಕ್ಕೆ ಪಿಜಿಗೆ ನುಗ್ಗಿದ್ದ ಅಭಿಷೇಕ್, 3ನೇ ಮಹಡಿಯ ಕೊಠಡಿ ಬಳಿಗೆ ಬಂದು ಕೃತಿ ಕುಮಾರಿ ಕೊಠಡಿ ಬಾಗಿಲು ತೆಗೆಯುತ್ತಿದ್ದಂತೆ ಏಕಾಏಕಿ ಮನಸೋಇಚ್ಛೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ. ಆರೋಪಿಗಾಗಿ ಹುಡುಕಾಟ ನಡೆಸಿದ್ದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮಧ್ಯ ಪ್ರದೇಶಕ್ಕೆ ಹೋಗಿದ್ದ ಆರೋಪಿಯನ್ನು ಅಲ್ಲೇ ಬಂಧಿಸಿದ್ದಾರೆ. ಸದ್ಯ ಈಗ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಮೃತಪಟ್ಟ ಗಂಡನ ನಕಲಿ ದಾಖಲೆ ನೀಡಿ, ಮೂರು ಕೋಟಿ ವಿಮೆ ಕ್ಲೈಮ್! ಪತ್ನಿಗಾಗಿ ಕೋರಮಂಗಲ ಪೊಲೀಸರಿಂದ ಹುಡುಕಾಟ

ಕೊಲೆಗೆ ಕಾರಣವೇನು?

ಮಧ್ಯಪ್ರದೇಶದ ಭೋಪಾಲ್ ಮೂಲದ ಕೊಲೆ ಆರೋಪಿ ಅಭಿಷೇಕ್​, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಕೃತಿ ಕುಮಾರಿ ಸ್ನೇಹಿತೆಯನ್ನು ಪ್ರೀತಿಸುತ್ತಿದ್ದ. ಕೃತಿ ಕುಮಾರಿ ನೆಲೆಸಿದ್ದ ಪಿಜಿಗೆ ಆಗಾಗ ಬಂದು ಹೋಗುತ್ತಿದ್ದ. ಇತ್ತೀಚೆಗೆ ಅಭಿಷೇಕ್, ಕೃತಿ ಸ್ನೇಹಿತೆ ಪ್ರೀತಿಯಲ್ಲಿ ಬಿರುಕು ಮೂಡಿತ್ತು. ಯಾವುದೇ ಕೆಲಸ ಕಾರ್ಯ ಮಾಡದೆ ಓಡಾಡಿಕೊಂಡಿದ್ದ ಅಭಿಷೇಕ್​ ಭೋಪಾಲ್​ನಿಂದ ಬೆಂಗಳೂರಿಗೆ ಬಂದು ಪ್ರಿಯತಮೆ ಜತೆ ಸುತ್ತಾಡುತ್ತಿದ್ದ. ಎಲ್ಲಾದರೂ ಕೆಲಸಕ್ಕೆ ಸೇರುವಂತೆ ಅಭಿಷೇಕ್​ಗೆ ಆತನ ಪ್ರಿಯತಮೆ ಬುದ್ದಿ ಹೇಳಿದ್ದರು. ಪ್ರಿಯತಮೆ ಹೇಳಿದಾಗ ಕೆಲಸಕ್ಕೆ ಸೇರಿದ್ದೇನೆಂದು ಅಭಿಷೇಕ್ ಸುಳ್ಳು ಹೇಳಿದ್ದ, ಈ ವಿಚಾರ ಪ್ರಿಯತಮೆಗೆ ಗೊತ್ತಾಗಿತ್ತು. ಹೀಗಾಗಿ ಆತನ ಪ್ರೇಯಸಿ ಅಭಿಷೇಕ್​ನನ್ನು ದೂರ ಮಾಡಲು ಪ್ರಯತ್ನಿಸುತ್ತಿದ್ದಳು.

ಬಳಿಕ ಕೃತಿ ಕುಮಾರಿ ನೆಲೆಸಿದ್ದ ಪಿಜಿ ಬಳಿ ಬಂದು ಅಭಿಷೇಕ್ ಗಲಾಟೆಮಾಡಿದ್ದ. ನಿನ್ನಿಂದ ನನ್ನ ಪ್ರೇಯಸಿ ಅವಾಯ್ಡ್ ಮಾಡುತ್ತಿದ್ದಾಳೆಂದು ಜಗಳವಾಡಿದ್ದ. ಹೀಗಾಗಿ ಸ್ನೇಹಿತೆಯನ್ನು ಬೇರೆ ಪಿಜಿಗೆ ಕೃತಿ ಸ್ಥಳಾಂತರಿಸಿದ್ದಳು. ಅಭಿಷೇಕ್ ಕರೆ ಮಾಡಿದರೆ ಸ್ವೀಕರಿಸದೆ ಅವಾಯ್ಡ್ ಮಾಡುವಂತೆ ತನ್ನ ಸ್ನೇಹಿತೆಗೆ ಹೇಳಿದ್ದಳು. ತನ್ನ ಪ್ರಿಯತಮೆ ಕೃತಿಯ ಮಾತು ಕೇಳಿ ತನನ್ನು ದೂರ ಮಾಡುತ್ತಿದ್ದಾಳೆ ಎಂದು ಕುಪಿತಗೊಂಡ ಅಭಿಷೇಕ್, ಕೃತಿ ಕುಮಾರಿ ನೆಲೆಸಿದ್ದ ಪಿಜಿ ಕೊಠಡಿ ಬಳಿಗೆ ಬಂದು ಕೊಲೆ ಮಾಡಿದ್ದ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:14 am, Sat, 27 July 24