ಜಿಬಿಎನ ಟಿವಿಸಿಸಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಕಾರಣ ಏನು?

ಆರ್. ಆರ್. ನಗರ ರಸ್ತೆ ಕಾಮಗಾರಿ ಅಕ್ರಮಕ್ಕೆ ಸಂಬಂಧಿಸಿ ಲೋಕಾಯುಕ್ತ ಅಧಿಕಾರಿಗಳು ಜಿಬಿಎ ಕಚೇರಿ ಹಾಗೂ ನಿವೃತ್ತ ಎಂಜಿನಿಯರ್‌ಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. 126 ಕಾಮಗಾರಿಗಳಲ್ಲಿ ಕಳಪೆ ಗುಣಮಟ್ಟದ ಕೆಲಸ ಮತ್ತು ಕೆಲಸ ಮಾಡದೆಯೇ ಬಿಲ್ ಪಾವತಿ ಮಾಡಿರುವ ಆರೋಪಗಳಿವೆ. ದಕ್ಷಿಣ, ಉತ್ತರ, ಪಶ್ಚಿಮ ಪಾಲಿಕೆಗಳ ವ್ಯಾಪ್ತಿಯಲ್ಲೂ ತನಿಖೆ ನಡೆದಿದೆ. 250 ಕೋಟಿ ಮೌಲ್ಯದ ಹಗರಣದ ತನಿಖೆಗಾಗಿ ಒಟ್ಟು 12 ಕಡೆಗಳಲ್ಲಿ ರೇಡ್ ನಡೆಸಲಾಗಿದೆ.

ಜಿಬಿಎನ ಟಿವಿಸಿಸಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಕಾರಣ ಏನು?
ಲೋಕಾಯುಕ್ತ ದಾಳಿ

Updated on: Nov 11, 2025 | 2:36 PM

ಬೆಂಗಳೂರು, ನವೆಂಬರ್​ 11: ಆರ್. ಆರ್. ನಗರ ರಸ್ತೆ ಕಾಮಗಾರಿ ಅಕ್ರಮದ ಕುರಿತು ಜಿಬಿಎನ ಟಿವಿಸಿಸಿ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಇನ್ಸ್​ಪೆಕ್ಟರ್​​ ಗೋವಿಂದರಾಜು ನೇತೃತ್ವದಲ್ಲಿ ಕಾರ್ಪೋರೇಷನ್ ಸರ್ಕಲ್ ಬಳಿ ಇರುವ ಕಚೇರಿ ಮೇಲೆ ರೇಡ್​ ನಡೆದಿದ್ದು, ಒಟ್ಟು 5 ಅಧಿಕಾರಿಗಳ ತಂಡ ಕಡತಗಳ ಪರಿಶೀಲನೆ ನಡೆಸಿದೆ. ಆರ್. ಆರ್. ನಗರ ವ್ಯಾಪ್ತಿಯಲ್ಲಿ ಆಗಿರುವ ಕಾಮಗಾರಿಯ ಫೈಲ್​ಗಾಗಿ ತಲಾಶ್​ ನಡೆಸಿದೆ.

ಒಟ್ಟು 12 ಕಡೆ ಲೋಕಾಯುಕ್ತ ರೇಡ್​

ಒಟ್ಟು 126 ಕಾಮಗಾರಿಗಳಲ್ಲಿ ಕಳಪೆ ಕಾಮಗಾರಿ ಆಗಿರುವ ಬಗ್ಗೆ ಶಂಕೆ ಇದ್ದು, ಈ ಹಿನ್ನಲೆ ಕಾಮಗಾರಿ ಕಡತಗಳ ಸಂಪೂರ್ಣ ಪರಿಶೀಲನೆಗೆ ಲೋಕಾಯುಕ್ತ ಮುಂದಾಗಿದೆ. ಕಳಪೆ ಕಾಮಗಾರಿ ಹಾಗೂ ಕಾಮಗಾರಿ ನಡೆಸದೇ ಬಿಲ್​ಗೆ ಅನುಮೋದನೆ ನೀಡಿರುವ ಹಿನ್ನಲೆ ತನಿಖೆ ನಡೆಸಲಾಗುತ್ತಿದೆ. ಜಿಬಿಎ ಜೊತೆಗೆ ಇದರ ವ್ಯಾಪ್ತಿಯ ಮೂರು ನಗರ ಪಾಲಿಕೆಗಳ ಮೇಲೂ ದಾಳಿ ನಡೆದಿದ್ದು, ದಕ್ಷಿಣ, ಉತ್ತರ ಹಾಗೂ ಪಶ್ಚಿಮ ನಗರ ಪಾಲಿಕೆಗಳಲ್ಲೂ ತಲಾಶ್​ ನಡೆಸಲಾಗಿದೆ. 7 ಕಡೆಗಳಲ್ಲಿ ಪಾಲಿಕೆ ಇಂಜಿನಿಯರ್​ಗಳ ಮನೆ ಮೇಲೂ‌ ಲೋಕಾಯುಕ್ತ ರೇಡ್ ನಡೆದಿದ್ದು, ಡಿ.ಕೆ. ಸುರೇಶ್ ದೂರಿನ ಹಿನ್ನಲೆ ಲೋಕಾಯುಕ್ತ ದಾಳಿ ಮಾಡಿದೆ. ಒಟ್ಟು 12 ಕಡೆ ರೇಡ್​ ನಡೆದಿದೆ. ಸುಮಾರು 250 ಕೋಟಿ ಮೌಲ್ಯದ ಹಗರಣ ನಡೆದಿರವ ಆರೋಪ ಹಿನ್ನಲೆ ದಾಳಿ ನಡೆಸಲಾಗಿದ್ದು, 2020-2021ನೇ ಸಾಲಿನಲ್ಲಿ ನಡೆದ ರಸ್ತೆ ಕೆಲಸ ಸೇರಿ ಹಲವು ಕಾಮಗಾರಿ ಬಗ್ಗೆ ದೂರು ಬಂದಿತ್ತು. ಈ ಹಿನ್ನಲೆ ನಿವೃತ್ತಿಯಾಗಿರೋ ಇಂಜಿನಿಯರ್​ಗಳ ಮನೆ ಮೇಲೂ ಅಧಿಕಾರಿಗಳು ರೇಡ್​ ಮಾಡಿದ್ದು, ಸತೀಶ್, ಶಿಲ್ಪ,ಬಸವರಾಜ್, ಸಿದ್ದರಾಮಯ್ಯ ಸೇರಿ ಹಲವರ ಮನೆ ಶೋಧ ಮಾಡಿದ್ದಾರೆ.

ಇದನ್ನೂ ಓದಿ: ನಕಲಿ ಬಿಲ್​ ಸೃಷ್ಟಿಸಿ ಸಿಎಂ ಪರಿಹಾರ ನಿಧಿ ಪಡೆಯುತ್ತಿದ್ದ ಆರೋಪಿ ಅಂದರ್​

ಜಿಬಿಎ ಮೇಲೆ ಲೋಕಾ‌ ರೇಡ್ ವಿಚಾರ ಸಂಬಂಧ ಗ್ರೇಟರ್​ ಬೆಂಗಳೂರು ಪ್ರಾಧಿಕಾರದ ಚೀಫ್ ಕಮಿಷನರ್ ಮಹೇಶ್ವರ್ ರಾವ್ ಪ್ರತಿಕ್ರಿಯೆ ನೀಡಿದ್ದಾರೆ.ಲೋಕಾಯುಕ್ತ ಅಧಿಕಾರಿಗಳು ಬಂದು ಕೆಲವು ಮಾಹಿತಿ ಕೇಳಿದ್ದು, ಅವರಿಗೆ ಬೇಕಾದ ಮಾಹಿತಿಗಳನ್ನು ನಮ್ಮ ಅಧಿಕಾರಿಗಳು ಒದಗಿಸ್ತಾರೆ. ಕಳಪೆ ಕಾಮಗಾರಿ ಆಗಿದೆ ಎನ್ನುವ ವಿಚಾರ ಸಂಬಂಧ ಬಿಬಿಎಂಪಿ ಇದ್ದಾಗಲೂ ಆಂತರಿಕ ತನಿಖೆ ನಡೆದಿತ್ತು. ಆ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದಿದ್ದಾರೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.