ಪಾಳು ಮನೆಯಲ್ಲಿ ಅಪ್ರಾಪ್ತೆಯ ಭೀಕರ ಕೊಲೆ: ಭಾವಿ ಪತಿಯಿಂದಲೇ ನಡೀತು ಹತ್ಯೆ!; ಕಾರಣ ನಿಗೂಢ

ಬೆಂಗಳೂರಿನ ಡಿ.ಜೆ.ಹಳ್ಳಿ ಸಕ್ಕರೆ ಮಂಡಿಯ ಪಾಳುಮನೆಯಲ್ಲಿ ನಿಶ್ಚಿತಾರ್ಥ ಆಗಿದ್ದ ಅಪ್ರಾಪ್ತೆಯನ್ನು ಆಕೆಯ ಭಾವಿ ಪತಿಯೇ ಕತ್ತುಕೊಯ್ದು ಭೀಕರವಾಗಿ ಕೊಲೆ ಮಾಡಿದ್ದಾನೆ. ಬೆಳಗ್ಗೆ 6.30ರ ಸುಮಾರಿಗೆ ನಡೆದ ಈ ಘಟನೆ ಬೆಳಗ್ಗೆ 11 ಗಂಟೆಗೆ ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿ ಬಂಧನಕ್ಕೆ ಶೋಧ ನಡೆಸುತ್ತಿದ್ದು, ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮತ್ತೊಂದೆಡೆ ಯುವತಿ ಜೊತೆ ಮದುವೆ ವಿಚಾರಕ್ಕೆ ತಮ್ಮನನ್ನೇ ಅಣ್ಣ ಕೊಲೆಗೈದಿರುವ ಘಟನೆ ಗದಗದಲ್ಲಿ ನಡೆದಿದೆ. ಹತ್ಯೆ ಬಳಿಕ ಕತೆ ಕಟ್ಟಿದ್ದ ಆರೋಪಿಯ ನಿಜ ಬಣ್ಣ ತನಿಖೆ ವೇಳೆ ಬಯಲಾಗಿದೆ.

ಪಾಳು ಮನೆಯಲ್ಲಿ ಅಪ್ರಾಪ್ತೆಯ ಭೀಕರ ಕೊಲೆ: ಭಾವಿ ಪತಿಯಿಂದಲೇ ನಡೀತು ಹತ್ಯೆ!; ಕಾರಣ ನಿಗೂಢ
ಯುವತಿ ಕೊಲೆ ನಡೆದಿರುವ ಸ್ಥಳ
Image Credit source: Tv9 Kannada

Updated on: Mar 17, 2026 | 2:30 PM

ಬೆಂಗಳೂರು/ ಗದಗ, ಮಾರ್ಚ್​ 17: ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತೆಯನ್ನೇ ವ್ಯಕ್ತಿಯೋರ್ವ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಡಿ.ಜೆ.ಹಳ್ಳಿ ಸಕ್ಕರೆ ಮಂಡಿಯ ಪಾಳುಮನೆಯಲ್ಲಿ ನಡೆದಿದೆ. ಯುವತಿ ಜೋಯಾಯಳ ಕತ್ತುಕೊಯ್ದು ಕೊಂದು ಶಬೀಲ್(20) ಪರಾರಿಯಾಗಿದ್ದು, ಬೆಳಗ್ಗೆ 6.30ರ ಸುಮಾರಿಗೆ ಘಟನೆ ನಡೆದಿದೆ. ಆರೋಪಿ ಶಬೀಲ್ ಕುಟುಂಬ ಸದಸ್ಯರಿಂದಲೇ ಪ್ರಕರಣ ಬೆಳಕಿಗೆ ಬಂದಿದ್ದು, ಡಿ.ಜೆ.ಹಳ್ಳಿ ಠಾಣೆ ಪೊಲೀಸರಿಂದ ಆರೋಪಿ ಶಬೀಲ್​ಗಾಗಿ ಶೋಧ ಮುಂದುವರಿದಿದೆ. ಬಾಲಕಿ ಹತ್ಯೆಯಾಗಿರುವ ಬಗ್ಗೆ ಬೆಳಗ್ಗೆ 11 ಗಂಟೆಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಅಮಟೆ, ಹತ್ಯೆಯಾದ ಸ್ಥಳದಲ್ಲಿ ಸೋಕೋ ಟೀಮ್ ಪರಿಶೀಲನೆ ನಡೆಸಿದೆ. ಕೊಲೆಮಾಡಿರುವುದು ಯಾರು ಎಂದು ಈಗಾಗಲೇ ಗೊತ್ತಾಗಿದ್ದು, ಆರೋಪಿ ಶಬೀಲ್ ಬಂಧಿಸಿದ ನಂತರ ಕೊಲೆಗೆ ಕಾರಣ ತಿಳಿಯಲಿದೆ. ಘಟನೆ ನಡೆದ ಸ್ಥಳ ಶಬೀಲ್ ಕುಟುಂಬಕ್ಕೆ ಸೇರಿದ್ದಾಗಿದ್ದು, ಈ ಮನೆಯಲ್ಲಿ ಯಾರೂ ವಾಸ ಇರಲಿಲ್ಲ. ಆಗಾಗ ಇಬ್ಬರು ಇಲ್ಲಿ ಬಂದು ಸೇರುತ್ತಿದ್ದರೂ ಎಂಬ ಮಾಹಿತಿಯಿರೋದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಕಾಮಕಾಂಡ; ಸಂತ್ರಸ್ತ ಮಹಿಳೆಯ ಅಪ್ರಾಪ್ತ ಮಗಳ ಮೇಲೂ ಕಣ್ಣು! ಆಡಿಯೋ ವೈರಲ್

ಮದುವೆ ವಿಚಾರಕ್ಕೆ ತಮ್ಮನನ್ನೇ ಕೊಲೆಗೈದ ಅಣ್ಣ

ಮೃತ ಫಕ್ಕೀರಪ್ಪ

ಯುವತಿ ಜೊತೆ ಮದುವೆ ವಿಚಾರಕ್ಕೆ ತಮ್ಮನನ್ನೇ ಅಣ್ಣ ಕೊಲೆಗೈದಿರುವ ಆಘಾತಕಾರಿ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ನಡೆದಿದೆ. ತಲೆಯ ಮೇಲೆ ಕಲ್ಲು ಎತ್ತಿಹಾಕಿ ಫಕ್ಕೀರಪ್ಪ(19) ಬರ್ಬರ ಹತ್ಯೆ ಮಾಡಲಾಗಿದ್ದು, ಆರೋಪಿ ಅಶೋಕ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಚಿಕ್ಕಮೊಲಂಗಿ ನಿವಾಸಿಗಳಾಗಿದ್ದ ಸಹೋದರರು ಕುರಿ ಮೇಯಿಸಲು ಹಿರೇಕೊಪ್ಪ ಗ್ರಾಮಕ್ಕೆ ಬಂದಿದ್ದರು. ತಮ್ಮನಿಗೆ ಫಿಕ್ಸ್ ಆಗಿದ್ದ ಹುಡುಗಿ ಜತೆ ತಾನು ಮದುವೆ ಆಗಬೇಕೆಂದು ಬಯಸಿದ್ದ ಅಶೋಕ್‌, ಕುರಿದೊಡ್ಡಿಯಲ್ಲಿ ಮಲಗಿದ್ದ ಸಹೋದರನನ್ನು ಕೊಲೆಗೈದ್ದಾನೆ. ಬಳಿಕ ಬೇರೆಯವರು ಹತ್ಯೆ ಮಾಡಿರೋದು ಎಂದು ಕತೆ ಕಟ್ಟಿದ್ದ ಆರೋಪಿಯ ನಿಜ ಬಣ್ಣ ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ. ಈ ಬಗ್ಗೆ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

9 ಮಂದಿ ಆರೋಪಿಗಳ ಬಂಧನ

ಹಫ್ತಾ ಕೊಡದಿದ್ದಕ್ಕೆ ಬೆಂಗಳೂರಿನ ಸಿದ್ದಯ್ಯ ರಸ್ತೆ ಸಮೀಪದ ಬಡಮಕಾನ್ ಬಳಿ ಪುಡಿರೌಡಿಗಳಿಂದ ಮೆಕ್ಯಾನಿಕ್ ಹತ್ಯೆ ಪ್ರಕರಣ ಸಂಬಂಧ 9 ಆರೋಪಿಗಳನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪರ್ವೇಜ್, ಅಫ್ರಿದಿ, ಸಮೀರ್, ಶಬ್ಬೀರ್, ಮುನ್ನಾವರ್, ಸಾದಿಕ್ ಸೇರಿದಂತೆ 9 ಆರೋಪಿಗಳನ್ನು ಅರೆಸ್ಟ್​​ ಮಾಡಲಾಗಿದೆ. ಎರಡು ದಿನಗಳ ಹಿಂದೆ ನಡೆದಿದ್ದ ರಶೀದ್​ ಕೊಲೆ ಪ್ರಕರಣ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ವರದಿ: ವಿಕಾಸ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:30 pm, Tue, 17 March 26

Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us