- TV9 Kannada Photo gallery Jogimatti Chitradurga Turns Into Ooty of Bayaluseeme Despite Drought; Tourists Flock to Misty Hill Station
ಬರದ ನಡುವೆಯೂ ಊಟಿಯ ಅನುಭವ ನೀಡುತ್ತಿದೆ ಚಿತ್ರದುರ್ಗದ ಜೋಗಿಮಟ್ಟಿ! ಪ್ರಕೃತಿ ಸೌಂದರ್ಯ ಸವಿಯಲು ಹರಿದು ಬರುತ್ತಿರುವ ಪ್ರವಾಸಿಗರು
ಚಿತ್ರದುರ್ಗ, ಜುಲೈ 20: ಒಂದು ಕಡೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ಎದುರಾಗಿದ್ದು, ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಜನ ಪರದಾಡುತ್ತಿದ್ದಾರೆ. ಆದರೆ ಇದೇ ಜಿಲ್ಲೆಯ ಜೋಗಿಮಟ್ಟಿ ವನ್ಯಧಾಮ ಮಾತ್ರ ಸಂಪೂರ್ಣ ಭಿನ್ನ ಚಿತ್ರಣವನ್ನು ಕಟ್ಟಿಕೊಟ್ಟಿದೆ. ಮಂಜಿನ ಹೊದಿಕೆ, ತಂಪಾದ ಗಾಳಿ ಮತ್ತು ಹಸಿರು ಪರಿಸರದಿಂದ ಜೋಗಿಮಟ್ಟಿ ಇದೀಗ ಬಯಲುಸೀಮೆಯ ‘ಊಟಿ’ಯಾಗಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
Updated on: Jul 20, 2026 | 9:53 AM

ಚಿತ್ರದುರ್ಗ ಜಿಲ್ಲೆಯಲ್ಲಿ ಬರಗಾಲ ತೀವ್ರವಾಗಿದ್ದರೂ, ಜೋಗಿಮಟ್ಟಿ ವನ್ಯಧಾಮದಲ್ಲಿ ಮಂಜು, ತಂಪಾದ ಗಾಳಿ ಮತ್ತು ಹಸಿರು ಪರಿಸರ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಬಯಲುಸೀಮೆಯ ‘ಊಟಿ’ ಎಂದೇ ಖ್ಯಾತಿ ಪಡೆದಿರುವ ಈ ತಾಣಕ್ಕೆ ನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದಾರೆ.

ಸಮುದ್ರಮಟ್ಟದಿಂದ ಸುಮಾರು 3,803 ಅಡಿ ಎತ್ತರದಲ್ಲಿರುವ ಜೋಗಿಮಟ್ಟಿ, ಏಷ್ಯಾದಲ್ಲೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಕುರುಚಲು ಅರಣ್ಯ, ಅಪರೂಪದ ಜೀವ ವೈವಿಧ್ಯ ಮತ್ತು ತಂಪಾದ ವಾತಾವರಣ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಜಿಲ್ಲೆಯಾದ್ಯಂತ ಮಳೆ ಕೊರತೆ ಕಾಡುತ್ತಿದ್ದರೂ, ಜೋಗಿಮಟ್ಟಿಯಲ್ಲಿ ಮಂಜು ಆವರಿಸಿದ ವಾತಾವರಣ ಪ್ರಕೃತಿ ಪ್ರಿಯರಿಗೆ ವಿಶೇಷ ಅನುಭವ ನೀಡುತ್ತಿದೆ.

ಸ್ಥಳೀಯರ ಪ್ರಕಾರ, ಜೋಗಿಮಟ್ಟಿಯ ಪ್ರಕೃತಿ ಸೌಂದರ್ಯವನ್ನು ಸವಿಯಲು ಪ್ರತಿದಿನ ಜಿಲ್ಲೆಯ ವಿವಿಧ ಭಾಗಗಳಷ್ಟೇ ಅಲ್ಲದೆ, ಹೊರ ಜಿಲ್ಲೆಗಳಿಂದಲೂ ಜನರು ಆಗಮಿಸುತ್ತಿದ್ದಾರೆ. ಪ್ರವಾಸಿಗರು ಸೆಲ್ಫಿ ಕ್ಲಿಕ್ಕಿಸಿಕೊಂಡು, ತಂಪಾದ ಗಾಳಿಯನ್ನು ಆಸ್ವಾದಿಸಿ ಪ್ರಕೃತಿಯ ಮಡಿಲಿನಲ್ಲಿ ಸಮಯ ಕಳೆಯುತ್ತಿದ್ದಾರೆ.

ಬಯಲುಸೀಮೆಯ ಇತರೆ ಭಾಗಗಳಲ್ಲಿ ಬೇಸಿಗೆಯ ವಾತಾವರಣ ಮುಂದುವರಿದಿದ್ದರೂ, ಜೋಗಿಮಟ್ಟಿಯಲ್ಲಿ ಮಾತ್ರ ಮಲೆನಾಡಿನ ಅನುಭವ ಸಿಗುತ್ತಿರುವುದು ವಿಶೇಷವಾಗಿದೆ. ನಗರ ಜೀವನದ ಒತ್ತಡದಿಂದ ಹೊರಬಂದು ಪ್ರಕೃತಿಯ ನಡುವೆ ಕೆಲ ಹೊತ್ತು ಕಳೆಯಲು ಬಯಸುವವರಿಗೆ ಇದು ಉತ್ತಮ ತಾಣವಾಗಿದೆ ಎಂದು ಪ್ರವಾಸಿಗರು ಅಭಿಪ್ರಾಯಪಟ್ಟಿದ್ದಾರೆ.

ಜೋಗಿಮಟ್ಟಿ ಎಲ್ಲಿದೆ?: ಚಿತ್ರದುರ್ಗ ನಗರದಿಂದ ಕೇವಲ 10 ರಿಂದ 12 ಕಿಲೋಮೀಟರ್ ದೂರದಲ್ಲಿರುವ ಜೋಗಿಮಟ್ಟಿ ವನ್ಯಧಾಮಕ್ಕೆ ಪ್ರತಿದಿನ ಸಾವಿರಾರು ಮಂದಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ವಾರಾಂತ್ಯದಲ್ಲಿ ವಾಹನ ದಟ್ಟಣೆಯೂ ಹೆಚ್ಚುತ್ತಿದೆ. ಬರಗಾಲದ ನಡುವೆಯೂ ತನ್ನ ವಿಶಿಷ್ಟ ಪ್ರಕೃತಿ ಸೌಂದರ್ಯದಿಂದ ಜೋಗಿಮಟ್ಟಿ ಇದೀಗ ಪ್ರವಾಸಿಗರ ನೆಚ್ಚಿನ ತಾಣವಾಗಿ ಹೊರಹೊಮ್ಮಿದೆ.



