ರೈಲ್ವೇ ಪ್ರಯಾಣಿಕರಿಗೆ ಶುಭಸುದ್ದಿ: ಬೆಂಗಳೂರು, ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಮುಹೂರ್ತ ಫಿಕ್ಸ್​

ಬೆಂಗಳೂರು-ಮುಂಬೈ ನಡುವಿನ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಆಗಸ್ಟ್ 1ರಿಂದ ಸಂಚಾರ ಆರಂಭಿಸಲಿದೆ. ಈ ರೈಲು ಪ್ರಯಾಣಿಕರಿಗೆ ಆಧುನಿಕ ಸೌಲಭ್ಯಗಳೊಂದಿಗೆ ಆರಾಮದಾಯಕ ರಾತ್ರಿ ಪ್ರಯಾಣ ಒದಗಿಸುತ್ತದೆ. ಸುಮಾರು 24 ಗಂಟೆಗಳಿಂದ 15 ಗಂಟೆಗೆ ಪ್ರಯಾಣದ ಸಮಯ ಇಳಿಕೆಯಾಗಲಿದ್ದು, ಇದು ಬೆಂಗಳೂರು ಹಾಗೂ ಮುಂಬೈ ನಡುವೆ ವೇಗದ ಮತ್ತು ಸುಗಮ ಸಂಪರ್ಕಕ್ಕೆ ಸಹಕಾರಿಯಾಗಲಿದೆ.

ರೈಲ್ವೇ ಪ್ರಯಾಣಿಕರಿಗೆ ಶುಭಸುದ್ದಿ: ಬೆಂಗಳೂರು, ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಮುಹೂರ್ತ ಫಿಕ್ಸ್​
ವಂದೇ ಭಾರತ್​​ ಸ್ಲೀಪರ್​​ ರೈಲು
Image Credit source: alamy.com

Updated on: Apr 27, 2026 | 1:57 PM

ಬೆಂಗಳೂರು, ಏಪ್ರಿಲ್​​ 27: ಭಾರಿ ನಿರೀಕ್ಷೆ ಹೊಂದಿದ್ದ ಮತ್ತು ಬಹು ಬೇಡಿಕೆಯ ಬೆಂಗಳೂರು–ಮುಂಬೈ ನಡುವಿನ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಆಗಸ್ಟ್ 1ರಿಂದ ಈ ರೈಲಿನ ಸಂಚಾರ ಆರಂಭವಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಈ ಯೋಜನೆಗೆ ಏಪ್ರಿಲ್ 16ರಂದು ಅನುಮೋದನೆ ದೊರಕಿತ್ತು. ಆ ಮೂಲಕ ಬೆಂಗಳೂರು-ಮುಂಬೈ ನಡುವಿನ ರೈಲು ಪ್ರಯಾಣ ಇನ್ನಷ್ಟು ಆರಾಮದಾಯಕವಾಗಲಿದೆ.

ಈ ಸ್ಲೀಪರ್ ರೈಲು ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ (CSMT)ವರೆಗೆ ಸಂಚರಿಸಲಿದ್ದು, ಸೊಲ್ಲಾಪುರ ಮತ್ತು ಕಲಬುರಗಿ ಮಾರ್ಗವಾಗಿ ತೆರಳಲಿದೆ. ಸಂಜೆ ವೇಳೆಗೆ ಹೊರಡುವ ರೈಲು ಮರುದಿನ ಬೆಳಗ್ಗೆ ಗಮ್ಯಸ್ಥಾನ ತಲುಪುವಂತೆ ವೇಳಾಪಟ್ಟಿ ಇರಲಿದೆ ಎಂದು ಮೂಲಗಳು ತಿಳಿಸಿವೆ. ಇದೇ ದೂರವನ್ನು ಕ್ರಮಿಸಲು ಉದ್ಯಾನ್ ಎಕ್ಸ್‌ಪ್ರೆಸ್ ಪ್ರಸ್ತುತ 24 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎನ್ನುವುದಿಲ್ಲಿ ಗಮನಾರ್ಹ.

ಇದನ್ನೂ ಓದಿ: ಬೆಂಗಳೂರು-ಪುಣೆಗೆ ಬರುತ್ತಿದೆ ‘ವಂದೇ ಭಾರತ್ ಸ್ಲೀಪರ್’; 18 ಗಂಟೆಯ ಪ್ರಯಾಣ ಇನ್ಮುಂದೆ ಕೇವಲ 13 ಗಂಟೆ!

ವಂದೇ ಭಾರತ್ ಸ್ಲೀಪರ್ ಸೇವೆಯಿಂದ ಪ್ರಯಾಣದ ಈ ಸಮಯ ಸುಮಾರು 15 ಗಂಟೆಗೆ ಇಳಿಕೆಯಾಗುವ ನಿರೀಕ್ಷೆಯಿದೆ. ಈ ರೈಲು 16 ಬೋಗಿಗಳನ್ನು ಹೊಂದಿದ್ದು, ದೀರ್ಘ ದೂರ ಪ್ರಯಾಣಕ್ಕೆಂದೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಗರಿಷ್ಠ 180 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ವಂದೇ ಭಾರತ್ ಸ್ಲೀಪರ್ ರೈಲಿಗಿದೆ. ಪ್ರಯಾಣಿಕರಿಗೆ ಮಲಗಲು ಉತ್ತಮ ವ್ಯವಸ್ಥೆ, ಸ್ವಚ್ಛ ಬೋಗಿಗಳು ಹಾಗೂ ಸುಧಾರಿತ ಸೌಲಭ್ಯಗಳು ಲಭ್ಯವಾಗಲಿವೆ. ಈ ರೈಲನ್ನು ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯ ತಂತ್ರಜ್ಞಾನ ಬಳಸಿ BEML ಸಂಸ್ಥೆ ಅಭಿವೃದ್ಧಿಪಡಿಸಿದೆ. ಕಿತ್ತಳೆ ಮತ್ತು ಬೂದು ಬಣ್ಣದ ವಿನ್ಯಾಸ ಹೊಂದಿರುವ ಈ ಸ್ಲೀಪರ್ ರೈಲು ರಾತ್ರಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದು ದೇಶದ ಎರಡನೇ ವಂದೇ ಭಾರತ್ ಸ್ಲೀಪರ್ ರೈಲು ಆಗಿದ್ದು, ಮೊದಲ ರೈಲು 2026ರ ಜನವರಿಯಲ್ಲಿ ಹೌರಾ (ಕೋಲ್ಕತ್ತಾ) ಮತ್ತು ಕಾಮಾಖ್ಯ ಮಾರ್ಗದಲ್ಲಿ ಆರಂಭಗೊಂಡಿತ್ತು ಎಂದು ಬೆಂಗಳೂರು ನೌ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:57 pm, Mon, 27 April 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us