ಬಿಬಿಎಂಪಿಯ ಮತ್ತೊಂದು ಕಳಪೆ ಕಾಮಗಾರಿ ಬಟಾಬಯಲು ಮಾಡಿದ ಮಳೆ: ಲೀ ಮೆರಿಡಿಯನ್ ಅಂಡರ್ ಪಾಸ್ ಬಂದ್

| Updated By: ರಮೇಶ್ ಬಿ. ಜವಳಗೇರಾ

Updated on: Oct 10, 2023 | 9:02 AM

ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸಂಜೆ ಶುರುವಾದ ಮಳೆ ಇಡೀ ರಾತ್ರಿ ಧಾರಾಕಾರವಾಗಿ ಸುರಿದಿದೆ. ಇದರಿಂದ ಜನ ತತ್ತರಿಸಿ ಹೋಗಿದ್ದು, ನಗರದ ಹಲವು ರಸ್ತೆಗಳು ಕೆರೆಯಂತಾಗಿದ್ವು. ನೀರು ತೆರವು ಮಾಡಲು ಹರಸಾಹಸಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲ ರಸ್ತೆಗಳನ್ನು ಬಂದ್ ಮಾಡಲಾಗಿದೆ.

ಬಿಬಿಎಂಪಿಯ ಮತ್ತೊಂದು ಕಳಪೆ ಕಾಮಗಾರಿ ಬಟಾಬಯಲು ಮಾಡಿದ ಮಳೆ: ಲೀ ಮೆರಿಡಿಯನ್ ಅಂಡರ್ ಪಾಸ್ ಬಂದ್
ಲೀ ಮೆರಿಡಿಯನ್ ಅಂಡರ್ ಪಾಸ್
Follow us on

ಬೆಂಗಳೂರು, (ಅಕ್ಟೋಬರ್ 10): ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಿನ್ನೆ (ಅಕ್ಟೋಬರ್ 09) ಸಂಜೆಯಿಂದ ರಾತ್ರಿ ಇಡೀ ಸುರಿದ ಭಾರೀ ಮಳೆಗೆ (Rain) ಸಿಲಿಕಾನ್ ಸಿಟಿಯ ರಸ್ತೆಗಳು ಜಲಾವೃತವಾಗಿವೆ. ಅದರಲ್ಲೂ ಬೆಂಗಳೂರಿನ ಕೆಲ ಅಂಡರ್ ಪಾಸ್ ರಸ್ತೆಗಳು ಕೆರೆಯಂತಾಗಿವೆ. ಅದರಲ್ಲೂ ಲೀ ಮೆರಿಡಿಯನ್ ಅಂಡರ್ ಪಾಸ್ ಜಲಾವೃತವಾಗಿದೆ, ಇದರಿಂದ ಬ್ಯಾರಿಕೇಡ್ ಹಾಕಿ ಅಂಡರ್ ಪಾಸ್ ರಸ್ತೆಯನ್ನು ಬಂದ್ ಮಾಡಲಾಗಿದೆ. ಇತ್ತೀಚಿಗಷ್ಟೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈ ಅಂಡರ್ ಪಾಸ್ ರೆಡಿ ಮಾಡಲಾಗಿತ್ತು. ಆದರೂ ಸಹ ನೀರು ತುಂಬಿಕೊಂಡಿದ್ದು, ಇದರೊಂದಿಗೆ ಒಂದೇ ಮಳೆಗೆ ಬಿಬಿಎಂಪಿ ಕಳಪೆ ಕಾಮಗಾರಿ ಬಟಾಬಯಲಾಗಿದೆ.

ಯಮಲೂರು To ಕರಿಯಮ್ಮನ ಅಗ್ರಹಾರ ರಸ್ತೆ ಬಂದ್

ನಿನ್ನೆ (ಸೋಮವಾರ) ರಾತ್ರಿ ಸುದ್ದಿ ಭಾರೀ ಮಳೆಯಿಂದಾಗಿ ಯಮಲೂರುನಿಂದ ಕರಿಯಮ್ಮನ ಅಗ್ರಹಾರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತವಾಗಿದೆ. ನೀರಿನಲ್ಲಿ ಕಾರು ಹಾಗೂ ಬೈಕ್​ಗಳು ಸಿಲುಕಿಕೊಂಡಿವೆ. ಇದರಿಂದ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ನೀರು ತುಂಬಿಕೊಂಡಿದ್ದರಿಂದ ಚಾಲಕರು, ಕಾರುಗಳನ್ನು ಸ್ಥಳದಲ್ಲೇ ಬಿಟ್ಟು ಮನೆ ಸೇರಿ ಪ್ರಾಣಪಾಯದಿಂದ ಪಾರಾಗಿದ್ದರು. ಹೀಗಾಗಿ ನಿನ್ನೆ ರಾತ್ರಿಯಿಂದ ಎರಡು ಕಾರು ನೀರಿನಲ್ಲೇ ಇವೆ. ಇದರಿಂದ ಸಾರ್ವಜನಿಕರು ರಸ್ತೆ ದಾಟಲು ಹರಸಾಹಸಪಡುತ್ತಿದ್ದಾರೆ.

ಇದನ್ನೂ ಓದಿ: Karnataka Breaking Kannada News Live: ಬೆಂಗಳೂರು ಮಳೆ, ಎಲೆಕ್ಟ್ರಾನಿಕ್ ಸಿಟಿಯಿಂದ ಚಂದಾಪುರದವರೆಗೆ ಟ್ರಾಫಿಕ್ ಜಾಮ್

ಕೆ.ಆರ್.ಸರ್ಕಲ್ ಅಂಡರ್ ಪಾಸ್​ನಲ್ಲಿ ನೀರು ನಿಂತು ದುರಂತವೊಂದು ಸಂಭವಿಸಿತ್ತು. ಅದೇ ಮಾದರಿಯಲ್ಲಿ ರಸ್ತೆಗೆ ರಾಜಕಾಲುವೆ ನೀರು ನುಗ್ಗಿದ್ದು 50 ಮೀಟರ್​ ಉದ್ದದ ರಸ್ತೆ ಜಲಾವೃತಗೊಂಡಿತ್ತು. ನಿಮಿಷ ನಿಮಿಷಕ್ಕೂ ನೀರಿನ ಮಟ್ಟ ಏರಿಕೆಯಾಗಿತ್ತು. 15ಕ್ಕೂ ಹೆಚ್ಚು ವಾಹನ, 50ಕ್ಕೂ ಹೆಚ್ಚು ಜನ ನೀರಿನಲ್ಲಿ ಸಿಲುಕಿಕೊಂಡಿದ್ದರು. ರಸ್ತೆಯಲ್ಲಿ ನೀರಿನ ಮಟ್ಟ ಏರಿಕೆಯಿಂದ ವಾಹನಗಳು ಹೊರಬರಲಾಗದೆ ಪರದಾಡುತ್ತಿದ್ದವು. ಕ್ಷಣ ಕ್ಷಣಕ್ಕೂ ಜನರಲ್ಲಿ ಆತಂಕ ಹೆಚ್ಚಾಗುತ್ತಿತ್ತು. 50ಕ್ಕೂ ಹೆಚ್ಚು ಜನ ಮಳೆ ನೀರಿನಲ್ಲಿ ಸಿಲುಕಿ ಕೆಲಹೊತ್ತು ನರಕ ಅನುಭವಿಸಿದರು. ಸದ್ಯ ರಾತ್ರಿ 11 ಗಂಟೆಗೆ ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಗರ್ಭಿಣಿ ಸೇರಿದಂತೆ 50ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದಾರೆ. ನೀರಲ್ಲಿ ಸಿಲುಕಿದ್ದವರನ್ನು ಟ್ರ್ಯಾಕ್ಟರ್ ಮೂಲಕ ಸ್ಥಳಾಂತರಿಸಿದ್ದಾರೆ.

    • ಯಮಲೂರಿನಿಂದ ಮತ್ತು ಸಕ್ರಾ ಆಸ್ಪತ್ರೆ ರಸ್ತೆ ಬದಲಿಗೆ ಬೇರೆ ಮಾರ್ಗ ಬಳಸುವಂತೆ ವಾಹನ ಸವಾರರಿಗೆ ಬೆಂಗಳೂರು ಸಂಚಾರಿ ಪೊಲೀಸರು ಟ್ವೀಟ್ ಮಾಡಿದ್ದಾರೆ.
    • ಇನ್ನು ಪಣತ್ತೂರು ರೈಲ್ವೆ ಕೆಳ ಸೇತುವೆ ಜಲಾವೃತಗೊಂಡಿದ್ದು, ನಿಧಾನ ಸಂಚಾರವಿದೆ. ಹೀಗಾಗಿ ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸಲು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಸೋಮವಾರ ಸಂಜೆಯಿಂದ ರಾತ್ರಿ ಇಡೀ ಸುರಿದ ಮಳೆಯಿಂದ ಬೆಂಗಳೂರಿನ ಹಲವೆಡೆ ರಸ್ಎಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಜಾಗೃತೆಯಿಂದ ಸಂಚರಿಸಬೇಕಿದೆ.