Bengaluru Rain: ಕಪ್ಪುಗಟ್ಟಿದ ಆಕಾಶ, ಗುಡುಗು, ಬಿರುಗಾಳಿ, ಆಲಿಕಲ್ಲು ಮಳೆ; ಬೆಂಗಳೂರಿನಲ್ಲಿ ವರುಣನ ಆರ್ಭಟ ಶುರು

Bangalore Rains: ಇಂದು ಮಧ್ಯಾಹ್ನ 2 ಗಂಟೆಯಿಂದಲೇ ಬೆಂಗಳೂರಿನಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆ ಶುರುವಾಗಿದೆ. ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ.

Bengaluru Rain: ಕಪ್ಪುಗಟ್ಟಿದ ಆಕಾಶ, ಗುಡುಗು, ಬಿರುಗಾಳಿ, ಆಲಿಕಲ್ಲು ಮಳೆ; ಬೆಂಗಳೂರಿನಲ್ಲಿ ವರುಣನ ಆರ್ಭಟ ಶುರು
ಬೆಂಗಳೂರು ಮಳೆ (ಫೋಟೋ- ಟ್ವಿಟ್ಟರ್)
Edited By:

Updated on: May 05, 2022 | 3:19 PM

Bangalore Rain: ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಸಂಜೆಯ ಬಳಿಕ ಮಳೆ ಸುರಿಯಲಾರಂಭಿಸಿದೆ. ಮೂರ್ನಾಲ್ಕು ದಿನಗಳಿಂದ ಸಂಜೆ ವೇಳೆ ಗುಡುಗು, ಮಿಂಚು ಸಹಿತ ಮಳೆಯಾಗುತ್ತಿದ್ದು, ಇಂದು ಮಧ್ಯಾಹ್ನದಿಂದ ವರುಣನ ಆರ್ಭಟ ಶುರುವಾಗಿದೆ. ಬೆಳಗಿನ ವೇಳೆ ಉರಿಬಿಸಿಲು ಜನರನ್ನು ಸುಸ್ತು ಹೊಡೆಸಿದರೆ ಸಂಜೆಯ ನಂತರ ಮಳೆಗಾಲದಲ್ಲಿ (Monsoon) ಸುರಿಯುವಂತೆ ಒಂದೇ ಸಮನೆ ಸುರಿಯುವ ಮಳೆರಾಯನ ಆರ್ಭಟಕ್ಕೆ ಜನರು ಕಂಗೆಟ್ಟಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಯಿಂದಲೇ ಬೆಂಗಳೂರಿನಲ್ಲಿ (Bengaluru Rains) ಗುಡುಗು, ಬಿರುಗಾಳಿ ಸಹಿತ ಮಳೆ ಶುರುವಾಗಿದೆ. ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ.

ಬೆಂಗಳೂರಿನ ಮಲ್ಲೇಶ್ವರಂ, ರಾಜಾಜಿನಗರ, ಶಿವಾಜಿನಗರ, ವಿಧಾನಸೌಧ, ಮೆಜೆಸ್ಟಿಕ್, ರೇಸ್​ಕೋರ್ಸ್ ರಸ್ತೆ, ಬಿಟಿಎಂ ಲೇಔಟ್, ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ, ವೈಟ್​ಫೀಲ್ಡ್​ ಮಹದೇವಪುರ, ದೊಮ್ಮಲೂರು, ಜಯನಗರ, ಜೆಪಿ ನಗರ, ಬಸವನಗುಡಿ ಸುತ್ತಮುತ್ತ ಕಳೆದ ಒಂದು ಗಂಟೆಯಿಂದ ಧಾರಾಕಾರ ಮಳೆಯಾಗುತ್ತಿದೆ.

ಇದನ್ನೂ ಓದಿ
Bengaluru Rain: ಬೆಂಗಳೂರು ಜನರೇ ಅಲರ್ಟ್! ಇಂದೂ ಸಹ ನಗರದಲ್ಲಿ ಮಳೆಯಾಗುವ ಸಾಧ್ಯತೆ
Karnataka Rain: ಕರ್ನಾಟಕದ ಬೆಂಗಳೂರು, ಕರಾವಳಿಯಲ್ಲಿ ಇಂದು ಗುಡುಗು ಸಹಿತ ಮಳೆ ಸಾಧ್ಯತೆ
Karnataka Rain: ಕರ್ನಾಟಕದಾದ್ಯಂತ ಇಂದು ಗುಡುಗು ಸಹಿತ ಮಳೆ ಸಾಧ್ಯತೆ; ಮೇ 5ರಿಂದ ಇನ್ನೂ ಹೆಚ್ಚಲಿದೆ ವರುಣನ ಅಬ್ಬರ

ಬೆಂಗಳೂರಿನಲ್ಲಿ ಇನ್ನೂ ಎರಡು ದಿನಗಳ ಕಾಲ ಗುಡುಗು, ಮಿಂಚು, ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ. ಬೆಳಿಗ್ಗೆ, ಮಧ್ಯಾಹ್ನ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಬಳಿಕ ವ್ಯಾಪಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಜ್ಞ ಸದಾನಂದ ಅಡಿಗ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಇನ್ನೆರಡು ದಿನ ಭಾರೀ ಮಳೆಯಾಗಲಿದ್ದು, ಮೇ 9ರವರೆಗೆ ತುಂತುರು ಮಳೆ ಮುಂದುವರೆಯಲಿದೆ.

ಬೆಂಗಳೂರು ಮಾತ್ರವಲ್ಲದೆ ಕರಾವಳಿ, ಮಲೆನಾಡಿನಲ್ಲಿ ಕೂಡ ಮಳೆ ಹೆಚ್ಚಾಗುವ ನಿರೀಕ್ಷೆಯಿದೆ. ಕರ್ನಾಟಕದ ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಮತ್ತು ಕರಾವಳಿ ಪ್ರದೇಶಗಳಲ್ಲಿ ಮತ್ತು ಉತ್ತರ ಒಳನಾಡಿನಲ್ಲಿ ಕೂಡ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಉತ್ತಮ ಮಳೆಯಾಗುತ್ತಿದೆ.

ಇಂದಿನಿಂದ ಕರ್ನಾಟಕದ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಮಳೆ ಹೆಚ್ಚಾಗಲಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಕೊಡಗು, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಮಳೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಳೆಯ ಕುರಿತು ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:17 pm, Thu, 5 May 22