ಸಾನಿ ಕೃಷ್ಣ ಬೈಕ್ ಟ್ಯಾಕ್ಸಿ ಅಪಘಾತ: ವೈದ್ಯಕೀಯ ವೆಚ್ಚ ಭರಿಸಲು ಮುಂದಾಯ್ತಾ ರ‍್ಯಾಪಿಡೋ! ಯುವತಿ ಹೇಳಿದ್ದೇನು?

ಬೆಂಗಳೂರಿನಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡಿದ್ದ ಇಂಟೀರಿಯರ್ ಡಿಸೈನರ್ ಸಾನಿ ಕೃಷ್ಣ ಅವರ ಹೋರಾಟಕ್ಕೆ ದೊಡ್ಡ ಜಯ ಸಿಕ್ಕಿದೆ. ನಿಯಮಿತ 1 ಲಕ್ಷ ರೂಪಾಯಿ ವಿಮಾ ಮಿತಿಯನ್ನು ಬದಿಗಿಟ್ಟು, ಯುವತಿಯ 20 ಲಕ್ಷಕ್ಕೂ ಅಧಿಕ ಮೊತ್ತದ ಸಂಪೂರ್ಣ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಭರಿಸಲು ರ‍್ಯಾಪಿಡೋ ಸಂಸ್ಥೆ ಒಪ್ಪಿಕೊಂಡಿದೆ. ಆದರೆ ಕಂಪನಿ ತಮ್ಮನ್ನು ಇನ್ನೂ ಸಂಪರ್ಕಿಸಿಲ್ಲ ಎಂದು ಯುವತಿ ಹೇಳಿದ್ದಾರೆ

ಸಾನಿ ಕೃಷ್ಣ ಬೈಕ್ ಟ್ಯಾಕ್ಸಿ ಅಪಘಾತ: ವೈದ್ಯಕೀಯ ವೆಚ್ಚ ಭರಿಸಲು ಮುಂದಾಯ್ತಾ ರ‍್ಯಾಪಿಡೋ! ಯುವತಿ ಹೇಳಿದ್ದೇನು?
ಸಾನಿ ಕೃಷ್ಣ ಬೈಕ್ ಟ್ಯಾಕ್ಸಿ ಅಪಘಾ

Updated on: Aug 14, 2026 | 2:11 PM

ಮುಖ್ಯಾಂಶಗಳು

  • ಅಪಘಾತಕ್ಕೀಡಾಗಿ ಹಾಸಿಗೆ ಹಿಡಿದಿದ್ದ ಯುವತಿಯ ಹೋರಾಟ
  • 1 ಲಕ್ಷದ ವಿಮಾ ಮಿತಿ ಬದಿಗಿಟ್ಟು ಪೂರ್ಣ ಹಣ ನೀಡಲು ಸಂಸ್ಥೆ ನಿರ್ಧಾರ.
  • ಆದರೆ ಕಂಪನಿ ತಮ್ಮನ್ನು ಇನ್ನೂ ಸಂಪರ್ಕಿಸಿಲ್ಲ ಎಂದ ಯುವತಿ.

ಬೆಂಗಳೂರು, ಆಗಸ್ಟ್ 14: ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಪ್ರಯಾಣದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಿಂದಾಗಿ ಕಳೆದ ಎರಡು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಬೆಂಗಳೂರಿನ 32 ವರ್ಷದ ಇಂಟೀರಿಯರ್ ಡಿಸೈನರ್ ಸಾನಿ ಕೃಷ್ಣ ಅವರ ಹೋರಾಟಕ್ಕೆ ಕೊನೆಗೂ ಭಾಗಶಃ ಯಶಸ್ಸು ಸಿಕ್ಕಿದೆ. ಖಾಸಗಿ ಸಾರಿಗೆ ಆಪ್ ರ‍್ಯಾಪಿಡೋ (Rapido), ಸಾನಿ ಅವರ ಸಂಪೂರ್ಣ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ತನ್ನ ವಿಮಾ ಪಾಲುದಾರರ ಮೂಲಕ ಪಾವತಿಸಲು ಒಪ್ಪಿಕೊಂಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾನಿ ಕೃಷ್ಣ,  ರ್‍ಯಾಪಿಡೋ ಸಂಸ್ಥೆಯಿಂದ ವೈದ್ಯಕೀಯ ಬಿಲ್ ಪಾವತಿಯ ಆಫರ್ ತಮಗೆ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಡೆದಿದ್ದೇನು?

ಜೂನ್ 17 ರಂದು ಸಾನಿ ಕೃಷ್ಣ ಅವರು ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಮೂಲಕ ಬೈರಸಂದ್ರದಿಂದ ಡೊಮ್ಲೂರ್‌ನಲ್ಲಿರುವ ತಮ್ಮ ಕಚೇರಿಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಈ ವೇಳೆ ಅವರ ಮೇಲೆ ಟ್ರ್ಯಾಕ್ಟರ್ ಹರಿದ ಪರಿಣಾಮ ಮುಖದ ಮೂಳೆಗಳು ಮುರಿದು, ಹಲ್ಲುಗಳು ಉದುರಿದ್ದವು ಮತ್ತು 7 ಪಕ್ಕೆಲುಬುಗಳಿಗೆ ತೀವ್ರ ಪೆಟ್ಟಾಗಿತ್ತು. ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ಹಲವು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದ ಸಾನಿ ಅವರ ಚಿಕಿತ್ಸಾ ವೆಚ್ಚ ಬರೋಬ್ಬರಿ 20 ಲಕ್ಷ ರೂಪಾಯಿ ದಾಟಿತ್ತು.

ಸಾಮಾನ್ಯವಾಗಿ ರ‍್ಯಾಪಿಡೋ ಕಂಪನಿಯ ಗ್ರಾಹಕರ ವಿಮಾ ಪಾಲಿಸಿಯ ಗರಿಷ್ಠ ಮಿತಿ ಕೇವಲ 1 ಲಕ್ಷ ರೂಪಾಯಿ ಆಗಿರುತ್ತದೆ. ಹೀಗಾಗಿ ಆರಂಭದಲ್ಲಿ ಕಂಪನಿಯು ಸಂಪೂರ್ಣ ವೆಚ್ಚ ಭರಿಸಲು ನಿರಾಕರಿಸಿತ್ತು. ಆದರೆ, ಆಗಸ್ಟ್ 6 ರಂದು ಸಾನಿ ಅವರ ಪರ ವಕೀಲರು ರ‍್ಯಾಪಿಡೋ ಸಂಸ್ಥೆಗೆ ಕಾನೂನು ನೋಟಿಸ್ ಕಳುಹಿಸಿ, ಬೇಷರತ್ ಕ್ಷಮೆಯಾಚನೆ ಹಾಗೂ ಸಂಪೂರ್ಣ ಪರಿಹಾರಕ್ಕೆ ಒತ್ತಾಯಿಸಿದ್ದರು.

ವೈದ್ಯಕೀಯ ವೆಚ್ಚ ಭರಿಸಲು ಒಪ್ಪಿದ ರ‍್ಯಾಪಿಡೋ

ಪ್ರಕರಣದ ತೀವ್ರತೆಯನ್ನು ಅರಿತ ರ‍್ಯಾಪಿಡೋ, ಇದೊಂದು ಅಸಾಮಾನ್ಯ ಮತ್ತು ಅತಿ ಕಠಿಣ ಪರಿಸ್ಥಿತಿಯಾದ್ದರಿಂದ ತನ್ನ ನಿಯಮಿತ ವಿಮಾ ಮಿತಿಯನ್ನು (ಕ್ಯಾಪ್) ಬದಿಗಿಟ್ಟು, ಅಗತ್ಯ ದಾಖಲೆಗಳ ಪರಿಶೀಲನೆಯ ನಂತರ ಸಾನಿ ಅವರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಭರಿಸುವುದಾಗಿ ತಿಳಿಸಿದೆ.

ಇದನ್ನೂ ಓದಿ ಇದು ನ್ಯಾಯನಾ? ನಮ್ಮ ಜೀವಕ್ಕೆ ಬೆಲೆ ಅನ್ನೋದೆ ಇಲ್ವಾ?: ರ್ಯಾಪಿಡೋ ಅಪಘಾತದಿಂದ ಆದ ನರಕಯಾತನೆ ಬಿಚ್ಚಿಟ್ಟ ಸಾನಿ ಕೃಷ್ಣ!

ಅಧಿಕೃತ ಮಾಹಿತಿ ಇಲ್ಲ ಎಂದ ಯುವತಿ

ಈ ನಿರ್ಧಾರದಿಂದ ಸಾನಿ ಕುಟುಂಬಕ್ಕೆ ದೊಡ್ಡ ಮಟ್ಟದ ಆರ್ಥಿಕ ನೆಮ್ಮದಿ ಸಿಕ್ಕಂತಾಗಿದೆ. ಆದಾಗ್ಯೂ, “ರ‍್ಯಾಪಿಡೋ ಸಂಸ್ಥೆಯು ಅಧಿಕೃತವಾಗಿ ಈ ನಿರ್ಧಾರವನ್ನು ನನಗೆ ಇನ್ನು ಲಿಖಿತ ರೂಪದಲ್ಲಿ ತಿಳಿಸಿಲ್ಲ ಹಾಗೂ ಅಪಘಾತದ ಜವಾಬ್ದಾರಿ ಹೊತ್ತು ಈವರೆಗೆ ಕ್ಷಮೆಯಾಚಿಸಿಲ್ಲ. ಅಲ್ಲಿಯವರೆಗೂ ನನ್ನ ಹೋರಾಟ ನಿಲ್ಲುವುದಿಲ್ಲ” ಎಂದು ಸಾನಿ ಕೃಷ್ಣ ಹೇಳಿದ್ದಾರೆ. ಸದ್ಯ ಬೈಕ್ ಚಾಲಕನ ಪರವಾನಗಿ ಮತ್ತು ಆತನ ನಡವಳಿಕೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ರ‍್ಯಾಪಿಡೋ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:11 am, Fri, 14 August 26

Loading...
Unable to load recommendations.
Follow Us