
ಬೆಂಗಳೂರು, ಮಾರ್ಚ್ 31: ಈ ಬಾರಿ ಬೇಸಿಗೆಯಲ್ಲಿನ (Summer) ಬಿರು ಬಿಸಿಲು ರಾಜಧಾನಿ ಬೆಂಗಳೂರು (Bengaluru) ಸೇರಿದ್ದಂತೆ ರಾಜ್ಯದ ಜನರನ್ನು ಹೈರಾಣಾಗಿಸಿದೆ. ಈ ನಡುವೆ ಕಳೆದ ಕೆಲ ದಿನಗಳಿಂದ ವಿವಿಧ ಆರೋಗ್ಯ ಸಮಸ್ಯೆಗಳು ಶುರುವಾಗಿದ್ದು, ಬೆಂಗಳೂರಿನ ಜನರಲ್ಲಿ ಆತಂಕ ಹುಟ್ಟಿಸಿವೆ. ಕಳೆದೊಂದು ತಿಂಗಳಿನಿಂದ ನಿರಂತರವಾಗಿ ಕರುಳು ಬೇನೆ (Gastrointestinal disorders) ಹಾಗೂ ಪುಡ್ ಪಾಯ್ಸನ್ ಪ್ರಕರಣ ಸಂಖ್ಯೆ ಏರಿಕೆಯಾಗುತ್ತಿವೆ.
ಕಳೆದ 10 ದಿನಗಳಲ್ಲಿ 5,500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಒಂದು ವಾರದಲ್ಲಿ 274 ಮೈಕೈ ನೋವು, ನೆಗಡಿ, ಜ್ವರಗಳಿಂದ ಕೂಡಿದ, ತೀವ್ರ ಸಾಂಕ್ರಾಮಿಕವಾದ ವೈರಸ್ ರೋಗಳು ಪತ್ತೆಯಾಗಿವೆ. ಹೀಗಾಗಿ, ಆರೋಗ್ಯ ಇಲಾಖೆ ಈ ಖಾಯಿಲೆಗಳ ಬಗ್ಗೆ ಹೈ ಅಲರ್ಟ್ ಆಗಿದ್ದು ಜ್ವರ, ಕರುಳು ಬೇನೆ, ಟೈಫಾಯಿಡ್, ವೈರಲ್ ಹೆಪಟೈಟಿಸ್ ನೋವಿನಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ ಅಂತ ಎಚ್ಚರಿಕೆ ನೀಡಿದೆ.
ಹವಾಮಾನ ಬದಲಾವಣೆ ಇತ್ತೀಚೆಗೆ ಸುರಿದ ಮಳೆ ಹಾಗೂ ಬಿಸಲಿನ ತಾಪಮಾನ ಏರಿಕೆಯಿಂದ ಕರಳು ಬೇನೆ ಗ್ಯಾಸ್ಟ್ರೋ ಎಂಟರೈಟಿಸ್ ಸೇರಿದಂತೆ ಕರುಳು ಸಂಬಂಧಿ ಖಾಯಿಲೆ ಹೆಚ್ಚಾಗಿ ಕಂಡು ಬರುತ್ತಿದೆ. ಹೀಗಾಗಿ, ವೈದ್ಯರು ಎಚ್ಚರಿಕೆ ಅತ್ಯಗತ್ಯ ಅಂತಿದ್ದು ಮಳೆ ನೀರು ನಿಂತು ಸಂಗ್ರಹವಾಗಿರುವ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆಗಳು ಹೆಚ್ಚಿದ್ದು, ಇವುಗಳಿಂದಲೂ ಸಾಂಕ್ರಾಮಿಕ ರೋಗ ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ರಾಜಧಾನಿಯ ಜನರು ಬೇಸಿಗೆ ಮುಗಿಯುವವರೆಗೂ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಆರೊಗ್ಯ ಇಲಾಖೆ ನಿರ್ದೇಶಕ ಅಹ್ಮದ್ ಅನ್ಸಾರ್ ಹೇಳಿದ್ದಾರೆ.
ಇದನ್ನೂ ಓದಿ: ಪ್ರೋಟೀನ್ ಹೆಚ್ಚಾದರೆ ಮೂತ್ರಪಿಂಡಕ್ಕೆ ಹಾನಿ, ಇದರ ಆರಂಭಿಕ ಲಕ್ಷಣಗಳು ಯಾವುವು?
ಆಗಾಗ್ಗೆ ಭೇದಿ, ವಾಕರಿಕೆ ಜೊತೆಗೆ ವಾಂತಿ, ಕಿಬ್ಬೊಟ್ಟೆಯ ಸೆಳೆತ, ಹೊಟ್ಟೆನೋವು, ಜ್ವರ ಮತ್ತಿತರೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಕಲುಷಿತ ನೀರು ಅಥವಾ ಆಹಾರ ಸೇವನೆಯ ಮೂಲಕ ಸೋಂಕಿಗೆ ಒಳಗಾದ ವ್ಯಕ್ತಿಗಳು ಅಥವಾ ಪ್ರಾಣಿಗಳೊಂದಿಗೆ ನೇರ ಸಂಪರ್ಕದಿಂದ ಇವು ಹರಡುತ್ತವೆ ಅಶುಚಿತ್ವ ಕೂಡಾ ರೋಗ ಹರಡಲು ಕಾರಣವಾಗಿದೆ.