ಬೆಂಗಳೂರು: ದೇಗುಲಕ್ಕೆ ನುಗ್ಗಿ ಚಪ್ಪಲಿ ಕಾಲಲ್ಲಿ ಮೂರ್ತಿಗೆ ಒದ್ದು ಯುವಕನ ಹುಚ್ಚಾಟ, ಕಟ್ಟಿಹಾಕಿ ಥಳಿಸಿದ ಸ್ಥಳೀಯರು

ಬಾಂಗ್ಲಾದೇಶ ಮೂಲದವನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಬೆಂಗಳೂರಿನ ದೇವರ ಬೀಸನಹಳ್ಳಿಯ ವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಪ್ಪಲಿ ಕಾಲಲ್ಲಿ ನುಗ್ಗಿ, ದೇವರ ವಿಗ್ರಹಕ್ಕೆ ಒದ್ದು ವಿಕೃತಿ ಮೆರೆದ ಘಟನೆ ನಡೆದಿದೆ. ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಬಗ್ಗೆ ಸ್ಥಳೀಯರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಬೆಂಗಳೂರು: ದೇಗುಲಕ್ಕೆ ನುಗ್ಗಿ ಚಪ್ಪಲಿ ಕಾಲಲ್ಲಿ ಮೂರ್ತಿಗೆ ಒದ್ದು ಯುವಕನ ಹುಚ್ಚಾಟ, ಕಟ್ಟಿಹಾಕಿ ಥಳಿಸಿದ ಸ್ಥಳೀಯರು
ಕಬೀರ್​ನನ್ನು ಕಟ್ಟಿಹಾಕಿ ಥಳಿಸಿ ಪೊಲಿಸರಿಗೊಪ್ಪಿಸಿದ ಸ್ಥಳೀಯರು
Updated By: Ganapathi Sharma

Updated on: Oct 29, 2025 | 7:26 AM

ಬೆಂಗಳೂರು, ಅಕ್ಟೋಬರ್ 29: ಯುವಕನೊಬ್ಬ ಚಪ್ಪಲಿ ಕಾಲಿನಲ್ಲಿ ದೇವಸ್ಥಾನದ ಒಳಗೆ ನುಗ್ಗಿ ದೇವರ ವಿಗ್ರಹಕ್ಕೆ ಒದ್ದು, ಎಳೆದಾಡಿ ವಿಕೃತಿ ಮೆರೆದ ಘಟನೆ ಬೆಂಗಳೂರಿನ (Bengaluru) ದೇವರ ಬೀಸನಹಳ್ಳಿಯ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ (ಅಕ್ಟೋಬರ್ 28) ನಡೆದಿದೆ. ದೇವರ ಬೀಸನಹಳ್ಳಿಯಲ್ಲಿಯೇ ಚಪ್ಪಲಿ ಹೊಲಿಯುವ ಅಂಗಡಿ ಇಟ್ಟುಕೊಂಡಿದ್ದ ವಿಶೇಷ ಚೇತನ ಕಬೀರ್ ಎಂಬಾತ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ಆತನನ್ನು ಸ್ಥಳೀಯರು ಹಿಡಿದು ಕಟ್ಟಿಹಾಕಿ ಥಳಿಸಿದ್ದಾರೆ. ಸ್ಥಳೀಯರು ವಿಚಾರಣೆ ನಡೆಸಿದಾಗ ಆತ, ಬಾಂಗ್ಲಾದೇಶದಿಂದ ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬೆಳಗ್ಗೆ 8.30 ಸುಮಾರಿಗೆ ಇಸ್ಲಾಂ ಧರ್ಮದ ಪರ ಘೋಷಣೆ ಕೂಗುತ್ತಾ ಬಂದಿದ್ದ ಆರೋಪಿ, ದೇಗುಲದ ಬಳಿ ಇದ್ದ ಮೆಡಿಕಲ್ ಅಂಗಡಿ ಮುಂದೆ ಹಾಕಿದ್ದ ಗಣಪತಿ ದೇವರ ಫೋಟೊಗೆ ಸ್ಟಿಕ್​ನಿಂದ ಹೊಡೆದಿದ್ದ. ಅದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು ಅಲ್ಲಿಂದ ಸೀದಾ ಹತ್ತಿರದಲ್ಲೇ ಇದ್ದ ದೇವಸ್ಥಾನದತ್ತ ಓಡಿದ್ದ. ದೇವಸ್ಥಾನ ಬಳಿ ಕೂಗಾಡಿ ಕಲ್ಲಿನಿಂದ ಗರಡುಗಂಬಕ್ಕೆ ಹೊಡೆದಿದ್ದ. ಕೈನಲ್ಲಿ ಆಯಿಲ್ ಮಾದರಿ ವಸ್ತುವನ್ನು ಹಿಡಿದು ಬಂದಿದ್ದ. ಬಳಿಕ ಚಪ್ಪಲಿ ಕಾಲಲ್ಲಿ ಗರ್ಭಗುಡಿಗೆ ನುಗ್ಗಿದ್ದಾನೆ. ದೇವರ ಮೂರ್ತಿ ಎಳೆದಾಡಿ ಚಪ್ಪಲಿ ಕಾಲಲ್ಲಿ ಒದ್ದಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ವಿಡಿಯೋ ಇಲ್ಲಿ ನೋಡಿ

ಕಬೀರ್​​ನ ವಿಕೃತಿಯನ್ನು ಕಂಡು ದೇವಸ್ಥಾನ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಜಮಾಯಿಸಿದ ಸ್ಥಳೀಯರು ಆತನನ್ನು ಎಳೆದು ತಂದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು ಕೊಪ್ಪದಲ್ಲಿ ಹೇಯ ಕೃತ್ಯ: ಸರ್ಕಾರಿ ಶಾಲೆ ಅತಿಥಿ ಶಿಕ್ಷಕಿಯ ವಿವಸ್ತ್ರಗೊಳಿಸಿ ಮರಕ್ಕೆ ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ

ಸದ್ಯ ಆರೋಪಿಯನ್ನು ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಮಾರತ್ತಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಬಳಿ ಇದ್ದ ಆಯಿಲ್ ಬಾಟಲಿ, ಚಪ್ಪಲಿ, ಕಲ್ಲು ವಶಕ್ಕೆ ಪಡೆಯಲಾಗಿದೆ. ಆತ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ