BTP AsTraM App: ಬೆಂಗಳೂರು ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಅಸ್ತ್ರಂ ಆ್ಯಪ್ ಬಿಡುಗಡೆ, ಇಲ್ಲಿದೆ ವಿವರ
ಬೆಂಗಳೂರಿನಲ್ಲಿನ ಸಂಚಾರ ದಟ್ಟಣೆಯಿಂದ ಜನರು ರೋಸಿ ಹೋಗಿದ್ದಾರೆ. ಇದಕ್ಕೆ, ಮುಕ್ತಿ ನೀಡಲು ಬೆಂಗಳೂರು ಸಂಚಾರಿ ಪೊಲೀಸರು ಅಸ್ತ್ರಂ ಆ್ಯಪ್ ಅನ್ನು ಪರಿಚಯಿಸಿದ್ದಾರೆ. ಈ ಆ್ಯಪ್ನ ಪ್ರಯೋಜನಗಳೇನು? ಸಂಚಾರ ದಟ್ಟಣೆ ಸಮಯದಲ್ಲಿ ಹೇಗೆಲ್ಲ ಸಹಕಾರಿಯಾಗುತ್ತದೆ? ಎಂಬುವುದರ ಬಗ್ಗೆ ಮಾಹಿತಿ ಈ ಆ್ಯಪ್ನಲ್ಲಿದೆ. ಆ್ಯಪ್ನಲ್ಲಿನ SOS ವೈಶಿಷ್ಟ್ಯತೆಯು ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡುತ್ತದೆ.

ಬೆಂಗಳೂರು, ಜನವರಿ 31: ಬೆಂಗಳೂರು ನಗರದಲ್ಲಿ ಸುರಕ್ಷಿತ ಪ್ರಯಾಣಕ್ಕಾಗಿ, ನೈಜ ಸಮಯದ ಸಂಚಾರ ದಟ್ಟಣೆಯ ಮಾಹಿತಿ, ಅಪಘಾತಗಳ ವರದಿ, ನಿಯಮ ಉಲ್ಲಂಘನೆಗಳ ಬಗ್ಗೆ ಮಾಹಿತಿ ನೀಡಲು ಮತ್ತು ಆನ್ಲೈನ್ ಮೂಲಕ ದಂಡ ಪಾವತಿಸಲು ಬೆಂಗಳೂರು ನಗರ ಸಂಚಾರಿ ಪೊಲೀಸರು (Bengaluru Traffic Police) ಅಸ್ತ್ರಂ (ASTram) ಆ್ಯಪ್ ಅನ್ನು ಪರಿಚಯಿಸಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ (G Parmeshwar) ಗುರುವಾರ ಆಕ್ಷನ್ಅಬಲ್ ಇಂಟೆಲಿಜೆನ್ಸ್ಫಾರ್ ಸಸ್ಟೈನಬಲ್ ಟ್ರಾಫಿಕ್ ಮ್ಯಾನೇಜ್ಮೆಂಟ್ (Actionable Intelligence for Sustainable Traffic Management) ಎಂಬ ಮೊಬೈಲ್ ಅಪ್ಲಿಕೇಷನ್ ಲೋಕಾರ್ಪಣೆಗೊಳಿಸಿದರು.
ಅಸ್ತ್ರಂ ಆ್ಯಪ್ ಉಪಯೋಗ
ಅಸ್ತ್ರಂ ಆ್ಯಪ್ ಮೂಲಕ ವಾಹನ ಸವಾರರು ತಾವು ತೆರಳುವ ರಸ್ತೆಯಲ್ಲಿನ ಸಂಚಾರ ದಟ್ಟಣೆಯನ್ನು ಮೊದಲೇ ತಿಳಿಯಬಹುದು. ಬದಲಿ ಮಾರ್ಗದಲ್ಲಿ ಸಂಚರಿಸಲು ಆ್ಯಪ್ ಸಹಾಯ ಮಾಡುತ್ತದೆ. ಸಂಚಾರ ದಟ್ಟಣೆ ಮಾಹಿತಿ ಮಾತ್ರವಲ್ಲದೇ, ನೀವು ಒಂದು ಭಾರಿ ಓಡಾಡಿದ ರಸ್ತೆಯ ಅಪ್ಡೇಟ್ ಸಹ ನೀಡುತ್ತದೆ. ರಸ್ತೆ ಅಪಘಾತಗಳನ್ನು ವರದಿ ಮಾಡಬಹುದು. ಸಂಚಾರ ನಿಯಮ ಉಲ್ಲಂಘನೆ, ದಂಡ ಮಾಹಿತಿ, ಸಂಆಚರ ಸಲಹೆಗಳನ್ನು ಕೂಡ ಆ್ಯಪ್ ಮೂಲಕ ಕೂತಲ್ಲೇ ತಿಳಿದುಕೊಳ್ಳಬಹುದಾಗಿದೆ.
ಇನ್ನು, ಆ್ಯಪ್ನಲ್ಲಿನ SOS ನಿಮಗೆ ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡುವ ವೈಶಿಷ್ಟ್ಯತೆಯನ್ನು ಹೊಂದಿದೆ. ಒಂದು ರಸ್ತೆಯಲ್ಲಿನ ದಿನವಿಡೀಯ ಸಂಚಾರ ದಟ್ಟಣೆ ಪ್ರಮಾಣ ತಿಳಿಸುತ್ತದೆ. ಅಲ್ಲದೇ, ವಾಹನ ಸವಾರರು ಇರುವ 5 ಕಿಮೀ ವ್ಯಾಪ್ತಿಯಲ್ಲಿನ ರಸ್ತೆಗಳ ರಿಯಲ್ ಟೈಮ್ ಮಾಹಿತಿ, ಬದಲಾವಣೆಯ ವಿವರ ಒದಗಿಸುತ್ತದೆ. ಗೃಹ ಸಚಿವರೊಂದಿಗೆ ಸಭೆ
“ನಗರ ಚಲನಶೀಲತೆ ಸವಾಲುಗಳು ಮತ್ತು ಪೊಲೀಸರ ಪಾತ್ರ” ಎಂಬ ವಿಷಯದ ಕುರಿತು ಗೃಹ ಸಚಿವ ಜಿ ಪರಮೇಶ್ವರ್ ಅವರೊಂದಿಗೆ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮದ ಸಂಪಾದಕರು ಮತ್ತು ಹಿರಿಯ ವರದಿಗಾರರು ಸಂವಾದ ನಡೆಸಿದರು. ಇದೇ ವೇಳೆ, ಮಾಧ್ಯಮ ಪ್ರತಿನಿಧಿಗಳು ಸಂಚಾರ ನಿರ್ವಹಣಾ ಸುಧಾರಣೆ, ರಸ್ತೆ ಸುರಕ್ಷತೆ ಹೆಚ್ಚಿಸುವ ಉದ್ದೇಶಗಳ ಬಗ್ಗೆ ಹಾಗೂ ಭವಿಷ್ಯದ ಯೋಜನೆಗಳ ಕುರಿತು ಕೆಲವು ಸಲಹೆ ನೀಡಿದರು. ಬೆಂಗಳೂರು ನಗರ ಸಂಚಾರ ಪರಿಸ್ಥಿಯ ಕುರಿತು ಮುಕ್ತ ಸಂವಾದ ನಡೆಸಲು ಮತ್ತು ಪರಸ್ಪರ ಅರ್ಥಪೂರ್ಣ ಸಮನ್ವಯ ಸಾಧಿಸಲು ಬೆಂಗಳೂರು ನಗರ ಸಂಚಾರಿ ಪೊಲೀಸ್ ವೇದಿಕೆ ಕಲ್ಪಿಸಿತ್ತು.
ಇದನ್ನೂ ಓದಿ: ಖಾಸಗಿ ಸೈಬರ್ಗಳಲ್ಲೂ ಇ-ಖಾತಾ ಹಂಚಿಕೆಗೆ ಬಿಬಿಎಂಪಿ ಪ್ಲಾನ್
ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಸಂಚಾರ ಸುಧಾರಣೆ ಮತ್ತು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಅಳವಡಿಸಿರುವ ಅತ್ಯಾಧುನಿಕ ತಂತ್ರಜ್ಞಾನಗಳು, ವಿವಿಧ ಕ್ರಮಗಳು ಹಾಗೂ ತಂತ್ರಗಳ ಪ್ರದರ್ಶನವೂ ನಡೆಯಿತು. ಮಾಧ್ಯಮ ಪ್ರತಿನಿಧಿಗಳನ್ನು “ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್” ವೀಕ್ಷಿಸಿದರು. ಇಲ್ಲಿ ಸಂಚಾರ ನಿಯಂತ್ರಣ ಮತ್ತು ಕಾರ್ಯರೂಪಕ್ಕೆ ತರಲು ಅತ್ಯಾಧುನಿಕ ಸೌಲಭ್ಯವನ್ನು ಅಳವಡಿಸಿಕೊಂಡಿರುವ ಬಗ್ಗೆ ತಿಳಿದುಕೊಂಡರು.
ಟ್ವಿಟರ್ ಪೋಸ್ಟ್
ಬೆಂಗಳೂರಿನಲ್ಲಿ ಸುರಕ್ಷಿತ ಪ್ರಯಾಣಕ್ಕಾಗಿ #ASTram ಆ್ಯಪ್ ಅನ್ನು ಪರಿಚಯಿಸುತ್ತಿದ್ದೇವೆ! ನೈಜ-ಸಮಯದ ಮಾಹಿತಿ, ಅಪಘಾತಗಳ ವರದಿ, ನಿಯಮ ಉಲ್ಲಂಘನೆಗಳ ಬಗ್ಗೆ ಮಾಹಿತಿ ನೀಡಿ, ಮತ್ತು ಆನ್ಲೈನ್ನಲ್ಲಿ ದಂಡ ಪಾವತಿಸಿ. ಸುರಕ್ಷಿತ ನಗರವನ್ನು ನಿರ್ಮಿಸೋಣ! ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.#WeServeWeProtect pic.twitter.com/8msWL0dTgU
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) January 30, 2025
ನಗರದ 6000 ಸಂಚಾರ ಪೊಲೀಸರ ಪರಿಶ್ರಮ ಅಮೂಲ್ಯವಾಗಿದ್ದು, ಬೆಂಗಳೂರು ಟ್ರಾಫಿಕ್ ನಿರ್ವಹಣೆ ಉತ್ತಮವಾಗಿದೆ. ಟ್ರಾಫಿಕ್ ನಿರ್ವಹಣೆಗೆ ಜನರ ಸಹಕಾರ ಅತ್ಯಗತ್ಯವಾಗಿದ್ದು ಚಾಚೂ ತಪ್ಪದೇ ಸಂಚಾರ ನಿಯಮ ಪಾಲಿಸಬೇಕಿದೆ. ಆಗಲೇ ಸಂಚಾರ ದಟ್ಟಣೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಮುಕ್ತಿ ದೊರೆಯುತ್ತದೆ ಎಂದು ಜಿ ಪರಮೇಶ್ವರ್ ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:31 am, Fri, 31 January 25