
ಬೆಂಗಳೂರು, ಮೇ 14: ಬೆಂಗಳೂರಿನಲ್ಲಿ (Bengaluru) ಪ್ರಯಾಣಿಕರ ಸುಲಿಗೆಗೆ ಇಳಿಯುವ ಮತ್ತು ಕರೆದ ಕಡೆ ಬರಲು ನಿರಾಕರಿಸುವ ಆಟೋ ಚಾಲಕರಿಗೆ ಬೆಂಗಳೂರು ಸಂಚಾರಿ ಪೊಲೀಸರು ಭರ್ಜರಿ ಬಿಸಿ ಮುಟ್ಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುವ ಮತ್ತು ಸಂಜೆ ಆಗುತ್ತಿದ್ದಂತೆ ಮೀಟರ್ ದರಕ್ಕಿಂತ ಒಂದೂವರೆ ಪಟ್ಟು (One and Half) ಹಣ ಕೇಳುವ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ. ಮೂರು ತಿಂಗಳ ಅವಧಿಯಲ್ಲೇ 2,988 ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರದ ಅನೇಕ ಭಾಗಗಳಲ್ಲಿ ಆಟೋ ಚಾಲಕರು ಪ್ರಯಾಣಿಕರು ಕರೆದ ಕಡೆ ಬರುವುದಿಲ್ಲ ಹಾಗೂ ಒಂದು ವೇಳೆ ಬಂದರೂ ದುಪ್ಪಟ್ಟು ಹಣ ಕೇಳುತ್ತಾರೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿದ್ದವು. ಈ ಬಗ್ಗೆ ಸಾರ್ವಜನಿಕರು ಸಾರಿಗೆ ಇಲಾಖೆ ಮತ್ತು ಸಂಚಾರಿ ಪೊಲೀಸರಿಗೆ ನೀಡಿದ ದೂರಿನ ಆಧಾರದ ಮೇಲೆ ಕಳೆದ ಮೂರು ತಿಂಗಳಿನಿಂದ ನಿರಂತರ ಕಾರ್ಯಾಚರಣೆ ನಡೆಸಲಾಗಿದೆ. ವಿಶೇಷವಾಗಿ ಭಾಷೆ ತಿಳಿಯದ ಹೊರರಾಜ್ಯದ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಹಣ ವಸೂಲಿ ಮಾಡುವ ಚಾಲಕರ ವಿರುದ್ಧ ಪೊಲೀಸರು ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ.
ನಿಯಮದ ಪ್ರಕಾರ ರಾತ್ರಿ 10 ಗಂಟೆಯ ನಂತರವಷ್ಟೇ ಒಂದೂವರೆ ಪಟ್ಟು ದರ ತೆಗೆದುಕೊಳ್ಳಲು ಅವಕಾಶವಿದೆ. ಆದರೆ, ಅನೇಕ ಚಾಲಕರು ರಾತ್ರಿ 8 ಗಂಟೆಯಿಂದಲೇ ಈ ದರ ವಸೂಲಿ ಮಾಡುತ್ತಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿದ ಪ್ರಯಾಣಿಕ ರಾಮು, ಚಾಲಕರ ಈ ವರ್ತನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ, ಪ್ರಾಮಾಣಿಕವಾಗಿ ಕೆಲಸ ಮಾಡುವ ಆಟೋ ಚಾಲಕ ಸತೀಶ್ ಅವರು, ‘ಪ್ರಯಾಣಿಕರೇ ನಮ್ಮ ದೇವರು, ನಾವು ದುಪ್ಪಟ್ಟು ಹಣ ಕೇಳಬಾರದು’ ಎಂದು ಸಹೋದ್ಯೋಗಿಗಳಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಜಾರಿಯಾಗದ ಆಟೋ ಮೀಟರ್ ಹೊಸ ದರ: ದುಪ್ಪಟ್ಟು ವಸೂಲಿ, ಪ್ರಯಾಣಿಕರು ಆಕ್ರೋಶ
ಕೆಲವೇ ಕೆಲವು ಚಾಲಕರ ಇಂತಹ ದುರ್ವರ್ತನೆಯಿಂದ ಇಡೀ ಆಟೋ ಚಾಲಕರ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ಸದ್ಯ ಪೊಲೀಸರು ಅಲರ್ಟ್ ಆಗಿದ್ದು, ಸಾರ್ವಜನಿಕರು ದೂರು ನೀಡಿದ ಕೂಡಲೇ ಸ್ಪಂದಿಸಿ ಕ್ರಮ ಕೈಗೊಳ್ಳುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ