Bengaluru Water Crisis: ನೀರಿನ ಬಿಕ್ಕಟ್ಟು ಎದುರಿಸಲು ಹೇಗಿದೆ ಬೆಂಗಳೂರಿನ ಐಟಿ ಕಂಪನಿಗಳ ಸಿದ್ಧತೆ

|

Updated on: Mar 09, 2024 | 10:06 AM

ಮುಂಬರುವ ದಿನಗಳಲ್ಲಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು ಐಟಿ ಹಬ್ ವೈಟ್ ಫೀಲ್ಡ್ ನಲ್ಲಿ ಐಟಿ ಕಂಪನಿಗಳು ಈಗಲೇ ಮುನ್ನೆಚ್ಚರಿಕೆ ವಹಿಸಲು ಮುಂದಾಗಿವೆ. ಅನಿವಾರ್ಯವಲ್ಲದ ಚಟುವಟಿಕೆಗಳು, ಕಾಮಗಾರಿಗಳನ್ನು ಸದ್ಯದ ಮಟ್ಟಿಗೆ ಮುಂದೂಡಲು ತೀರ್ಮಾನಿಸಿವೆ. ಒಟ್ಟಾರೆಯಾಗಿ ನೀರಿನ ಸಮಸ್ಯೆ ಎದುರಿಸಲು ಐಟಿ ಕಂಪನಿಗಳ ಸಿದ್ಧತೆ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Bengaluru Water Crisis: ನೀರಿನ ಬಿಕ್ಕಟ್ಟು ಎದುರಿಸಲು ಹೇಗಿದೆ ಬೆಂಗಳೂರಿನ ಐಟಿ ಕಂಪನಿಗಳ ಸಿದ್ಧತೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಮಾರ್ಚ್ 9: ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು (Bengaluru Water Crisis) ತೀವ್ರಗೊಂಡಿದೆ. ಇನ್ನೇನು ಬೇಸಗೆ ಆರಂಭವಾಗುತ್ತಿದ್ದಂತೆಯೇ ಈ ವರ್ಷ ಕುಡಿಯುವ ನೀರಿಗೂ ಹಲವೆಡೆ ಸಮಸ್ಯೆ ಎದುರಾಗಿದೆ. ಈ ಮಧ್ಯೆ, ಅನೇಕ ಐಟಿ ಕಂಪನಿಗಳನ್ನು ಹೊಂದಿರುವ ವೈಟ್​ಫೀಲ್ಡ್ (Whitefield) ಪ್ರದೇಶದಲ್ಲಿ ಕೂಡ ನೀರಿನ ಅಭಾವದ ಸುಳಿಯು ದೊರೆತಿದೆ. ನೀರಿನ ಬಿಕ್ಕಟ್ಟು ಎದುರಿಸಲು ಮಾಡಿಕೊಂಡಿರುವ ಸಿದ್ಧತೆ ಬಗ್ಗೆ, ಬಹುತೇಕ ಐಟಿ ಸಂಸ್ಥೆಗಳನ್ನೇ ಒಳಗೊಂಡಿರುವ ವೈಟ್‌ಫೀಲ್ಡ್ ಏರಿಯಾ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಸೋಸಿಯೇಷನ್ ​​(WACIA) ಮಾಹಿತಿ ನೀಡಿದೆ. ಪೇಂಟಿಂಗ್ ಮತ್ತು ನಿರ್ಮಾಣ ಚಟುವಟಿಕೆಯಂಥಹ ತಕ್ಷಣಕ್ಕೆ ಅನಿವಾರ್ಯವಲ್ಲದ ಚಟುವಟಿಕೆಗಳನ್ನು ಮುಂದೂಡಿಕೆ ಮಾಡಲಾಗುತ್ತಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ರಾಜೇಶ್ ಮಲ್ಯ ಕೆ ತಿಳಿಸಿದ್ದಾರೆ.

ಸುಮಾರು 5,000 ಉದ್ಯೋಗಿಗಳನ್ನು ಹೊಂದಿರುವ ಟೆಕ್ ಹಬ್‌ಗೆ ದಿನಕ್ಕೆ ಸುಮಾರು 1 ಲಕ್ಷ ಲೀಟರ್ ನೀರು ಬೇಕಾಗುತ್ತದೆ. ಇದು 10-12 ಟ್ಯಾಂಕರ್ ಲೋಡ್‌ಗಳಿಗೆ ಸಮನಾಗಿರುತ್ತದೆ ಎಂದು ಮಲ್ಯ ನೀರಿನ ಅಗತ್ಯದ ಬಗ್ಗೆ ಮಾಹಿತಿ ನೀಡಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ನೀರಿನ ಬಿಕ್ಕಟ್ಟು ಎದುರಿಸಲು ಸನ್ನದ್ಧವಾಗಿರಬೇಕಾದ, ಕೈಗಾರಿಕೆಗಳು ಅದಕ್ಕೆ ಹೊಂದಿಕೊಳ್ಳಬೇಕಾದ ಮತ್ತು ಸಮಸ್ಯೆ ಪರಿಹರಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.

ತಕ್ಷಣಕ್ಕೆ ಕಾರ್ಯನಿರ್ವಹಣೆ ಸ್ಥಗಿತ ಇಲ್ಲ

ಐಟಿ ಕಂಪನಿಗಳು ಉತ್ಪಾದನೆ ಚಟುಚಟಿಕೆಯನ್ನು ತಕ್ಷಣಕ್ಕೆ ಕಡಿತಗೊಳಿಸದಿದ್ದರೂ, ಇತರ ಕೈಗಾರಿಕೆಗಳೂ ಹೆಣಗಾಡುವಂತಾಗಿದೆ ಎಂದು ಮಲ್ಯ ಹೇಳಿದ್ದಾರೆ. ವಾಹನ ವಲಯಕ್ಕೆ ಸರಬರಾಜು ಮಾಡುವ ಮೂಲ ಉಪಕರಣ ತಯಾರಕರು ಕೂಡ ಸಮಸ್ಯೆ ಎದರಿಸುತ್ತಿದ್ದಾರೆ.

ಬೆಂಗಳೂರಿನ ಸದ್ಯದ ನೀರಿನ ಬಿಕ್ಕಟ್ಟು ಕೈಗಾರಿಕೆಗಳಿಗೆ, ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಸ್‌ಎಂಇ) ಆತಂಕ ಉಂಟುಮಾಡುತ್ತಿದೆ. ಇಂಜಿನಿಯರಿಂಗ್, ಪ್ಯಾಕೇಜಿಂಗ್ ಮತ್ತು ಫಾರ್ಮಾಸ್ಯುಟಿಕಲ್ಸ್‌ನಂತಹ ವಲಯಗಳು ಅಸಮರ್ಪಕ ನೀರಿನ ಪೂರೈಕೆ ಸಮಸ್ಯೆ ಎದುರಿಸಲು ತಯಾರಿ ನಡೆಸುತ್ತಿವೆ. ಮಾರ್ಚ್‌ನಲ್ಲಿ ಹಣಕಾಸು ವರ್ಷಾಂತ್ಯವಾದ ಕಾರಣ ಇತರ ಘಟಕಗಳಿಂದ ಆರ್ಡರ್‌ಗಳ ಒತ್ತಡ ಹೆಚ್ಚಿರುತ್ತದೆ ಎಂದು ಪ್ಯಾಕೇಜಿಂಗ್ ವಲಯದ ಕೈಗಾರಿಕೋದ್ಯಮಿಯೊಬ್ಬರು ತಿಳಿಸಿದ್ದಾರೆ. ಇಂಥ ಸಂದರ್ಭದಲ್ಲಿ ನೀರಿನ ಕೊರತೆಯು ಉತ್ಪಾದನೆಯಲ್ಲಿ ರಾಜಿ ಮಾಡಿಕೊಳ್ಳುವ ಅನಿವಾರ್ಯತೆ ಸೃಷ್ಟಿಸುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ನೀರಿನ ಬರ ಎಷ್ಟಿದೆ ಅಂದ್ರೆ ಜನ ಶೌಚ ಮಾಡಲು ಮಾಲ್‌ಗೆ ಹೋಗ್ತಿದ್ದಾರೆ

ಈ ಮಧ್ಯೆ, ಕಾಂಗ್ರೆಸ್ ಸರ್ಕಾರವು ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಕೂಡಲೇ ಪರಿಹರಿಸದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಅಧ್ಯಕ್ಷರ ಜತೆ ಚರ್ಚೆ ನಡೆಸಿದ ಸೂರ್ಯ, ಒಂದು ವಾರದೊಳಗೆ ನೀರಿನ ಸಮಸ್ಯೆ ಬಗೆಹರಿಸುವಂತೆ ಗಡುವು ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:05 am, Sat, 9 March 24