ಬೆಂಗಳೂರು ಟ್ರಾಫಿಕ್ ಕಡಿಮೆ ಮಾಡಲು ಸಿದ್ಧವಾಗಲಿವೆ 17 ಸಿಗ್ನಲ್ ಮುಕ್ತ ಕಾರಿಡಾರ್‌ಗಳು

ಬೆಂಗಳೂರು ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಏನೇನು ಕಸರತ್ತುಗಳನ್ನು ಮಾಡಿದರೂ ಸಾಕಾಗುತ್ತಿಲ್ಲ. ಸುರಂಗ ಮಾರ್ಗ ಯೋಜನೆ, ಡಬಲ್ ಡೆಕ್ಕರ್ ಫ್ಲೈಓವರ್ ಹೀಗೆ ಅನೇಕ ಯೋಜನೆಗಳು ಸರ್ಕಾರದ ಮುಂದಿವೆ. ಇದೀಗ ನಗರದಲ್ಲಿ 17 ಸಿಗ್ನಲ್ ಮುಕ್ತ ಕಾರಿಡಾರ್​​ಗಳನ್ನು ನಿರ್ಮಿಸುವ ಪ್ರಸ್ತಾವ ಸರ್ಕಾರದ ಮುಂದಿದೆ. ಪ್ರಸ್ತಾವನೆಯ ವಿವರ ಇಲ್ಲಿದೆ.

ಬೆಂಗಳೂರು ಟ್ರಾಫಿಕ್ ಕಡಿಮೆ ಮಾಡಲು ಸಿದ್ಧವಾಗಲಿವೆ 17 ಸಿಗ್ನಲ್ ಮುಕ್ತ ಕಾರಿಡಾರ್‌ಗಳು
ಸಾಂದರ್ಭಿಕ ಚಿತ್ರ

Updated on: Jul 30, 2024 | 8:06 AM

ಬೆಂಗಳೂರು, ಜುಲೈ 30: ಬೆಂಗಳೂರು ಟ್ರಾಫಿಕ್ ಜಾಮ್​ಗೆ ಮುಕ್ತಿ ಹಾಡಲು ಕರ್ನಾಟಕ ಸರ್ಕಾರ ಮತ್ತೊಂದು ಯೋಜನೆ ರೂಪಿಸಲು ಮುಂದಾಗಿದೆ. ಬೆಂಗಳೂರಿನ 17 ಸ್ಥಳಗಳಲ್ಲಿ 100 ಕಿಲೋಮೀಟರ್ ಸಿಗ್ನಲ್ ಮುಕ್ತ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಪ್ರಕಟಿಸಿದೆ. ರಾಜ್ಯ ಸರ್ಕಾರ ಈ ಮಹತ್ವಾಕಾಂಕ್ಷೆಯ ಯೋಜನೆಗೆ 12,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಯೋಜನೆಯ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇತ್ತೀಚೆಗೆ ವಿವರ ನೀಡಿದ್ದಾರೆ.

ನಗರದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಕುರಿತು ಎಲ್ಲಾ ರಾಜಕೀಯ ಪಕ್ಷಗಳ ಶಾಸಕರೊಂದಿಗೆ ಚರ್ಚಿಸಲಾಗಿದೆ. ಸಿಗ್ನಲ್ ಮುಕ್ತ ಕಾರಿಡಾರ್‌ಗಳಿಗಾಗಿ ರಾಜ್ಯ ಸರ್ಕಾರವು ಸುಮಾರು 17 ಸ್ಥಳಗಳನ್ನು ಗುರುತಿಸಿದೆ. ಸಿಗ್ನಲ್ ಮುಕ್ತ ಕಾರಿಡಾರ್‌ಗಳನ್ನು ರಾಜಾಜಿನಗರ-ಕೆಆರ್ ಸರ್ಕಲ್ ಸಿಗ್ನಲ್ ಮುಕ್ತ ಕಾರಿಡಾರ್ ಮಾದರಿಯಲ್ಲಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಸಂಚಾರ ಸ್ಥಿತಿಗತಿಯ ವಿಶ್ಲೇಷಣೆ ಮತ್ತು ಮುಂದಿನ ಕೆಲವು ವರ್ಷಗಳ ಯೋಜಿತ ಬೆಳವಣಿಗೆಯ ಮಾದರಿಗಳನ್ನು ಆಧರಿಸಿ ಸ್ಥಳಗಳನ್ನು ಆಯ್ಕೆ ಮಾಡಿದೆ.

ಎಲ್ಲೆಲ್ಲ ಸಿಗ್ನಲ್ ಮುಕ್ತ ಕಾರಿಡಾರ್‌?

ಬೆಂಗಳೂರಿನ ಪ್ರಮುಖ ಸಿಗ್ನಲ್-ಮುಕ್ತ ಕಾರಿಡಾರ್‌ಗಳಿಗೆ ಕೆಆರ್ ಪುರಂನಿಂದ ಯಶವಂತಪುರ-ಗೊರಗುಂಟೆಪಾಳ್ಯವರೆಗಿನ 23 ಕಿಲೋಮೀಟರ್ ಮಾರ್ಗ, ಆನೆಪಾಳ್ಯದಿಂದ ಸಿಲ್ಕ್ ಬೋರ್ಡ್‌ವರೆಗಿನ 5.5 ಕಿಲೋಮೀಟರ್ ಮಾರ್ಗ, ಹೊಸೂರು ರಸ್ತೆ ಕಾರಿಡಾರ್ ಮತ್ತು 10 ಕಿಲೋಮೀಟರ್ ಮರಾಪುರದಿಂದ ಕನಕಾನಹಳ್ಳಿ, ರಸ್ತೆ-ತಲಘಟ್ಟಪುರ ನೈಸ್ ರಸ್ತೆ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಹೆಚ್ಚುವರಿಯಾಗಿ, ಮಿನರ್ವದಿಂದ ಕಬ್ಬನ್ ಪಾರ್ಕ್‌ವರೆಗೆ 2.7-ಕಿಲೋಮೀಟರ್ ಎಲಿವೇಟೆಡ್ ರಸ್ತೆಯನ್ನು ಪ್ರಸ್ತಾಪಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ನೈಸ್ ರಸ್ತೆ ಬಳಿ ಅತಿ ಎತ್ತರದ ಸ್ಕೈಡೆಕ್; ಇಲ್ಲಿದೆ ಮಾಹಿತಿ

ಯಾವಾಗ ಸಿದ್ಧವಾಗಲಿವೆ ಸಿಗ್ನಲ್ ಮುಕ್ತ ಕಾರಿಡಾರ್‌ಗಳು?

ಸದ್ಯ ರಾಜ್ಯ ಸಚಿವ ಸಂಪುಟದಲ್ಲಿ ಯೋಜನೆ ಪ್ರಸ್ತಾಪವಾಗಿದೆಯಷ್ಟೆ. ಹೀಗಾಗಿ ಯೋಜನೆಯ ಗಡುವು ಇನ್ನೂ ನಿಗದಿಯಾಗಿಲ್ಲ. ಯೋಜನೆ ಪೂರ್ಣಗೊಳಿಸಲು ಸಂಬಂಧಿಸಿದ ವಿವರಗಳನ್ನು ಬಿಬಿಎಂಪಿ ಶೀಘ್ರದಲ್ಲೇ ಸಲ್ಲಿಸಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us