ಸ್ನೇಹಮಯಿ ಕೃಷ್ಣ ವಿರುದ್ಧ ಬೆಂಗಳೂರಿನ ಸ್ಮಶಾನದಲ್ಲಿ ವಾಮಾಚಾರ: ಪೊಲೀಸ್
ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಮತ್ತು ಗೋವಿಂದರಾಜು ಮೇಲೆ ವಾಮಾಚಾರ ಮಾಡಿಸಿದ ಆರೋಪದ ಮೇಲೆ ಬೆಂಗಳೂರಿನಲ್ಲಿ ಇಬ್ಬರನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಶೋಕ್ ನಗರದ ಸ್ಮಶಾನದಲ್ಲಿ ಕುರಿಗಳನ್ನು ಬಲಿ ನೀಡಿ, ರಕ್ತವನ್ನು ಸ್ನೇಹಮಯಿ ಮತ್ತು ಗೋವಿಂದರಾಜು ಅವರ ಫೋಟೋಗಳಿಗೆ ಅರ್ಪಿಸಲಾಗಿದೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಮಂಗಳೂರು, ಫೆಬ್ರವರಿ 22: ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ (Snehamayi Krishna) ಮತ್ತು ಗೋವಿಂದರಾಜು ಸೇರಿ ಹಲವರ ಮೇಲೆ ವಾಮಾಚಾರ (Black Magic) ಮಾಡಿಸಿದ್ದಾರೆ ಎಂಬ ಆರೋಪದ ಮೇಲೆ ಮಂಗಳೂರು ಪೊಲೀಸರು ಬೆಂಗಳೂರಿನಲ್ಲಿ ಇಬ್ಬರು ಆರೋಪಿಗಳು ವಶಕ್ಕೆ ಪಡೆದಿದ್ದಾರೆ. ಸ್ನೇಹಮಯಿ ಕೃಷ್ಣ ಮೇಲೆ ಬೆಂಗಳೂರಿನ ಅಶೋಕ್ ನಗರದ ಸ್ಮಶಾನದಲ್ಲಿ ಕಾಳಿಕಾಂಬ ಗುಡಿಯ ಅರ್ಚಕರಿಗೆ ವಿಚಾರ ತಿಳಿಸದೆ ಈ ಇಬ್ಬರು ಆರೋಪಿಗಳು ಕುರಿಗಳನ್ನು ಬಲಿ ನೀಡಿ, ವಾಮಾಚಾರ ಮಾಡಿದ್ದಾರೆ ಎಂದು ಪೊಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದಾರೆ.
ಸ್ನೇಹಮಯಿ ಕೃಷ್ಣ, ಗಂಗರಾಜು, ಪ್ರಸಾದ್ ಅತ್ತಾವರ, ಶ್ರೀನಿಧಿ ಮತ್ತು ಸುಮಾ ಆಚಾರ್ಯ ಹೆಸರಿನ ಚೀಟಿ ಕಾಳಿಕಾಂಬ ದೇವಿ ಕೊರಳಿಗೆ ಹಾಕಲಾಗಿತ್ತು. ಬಲಿ ನೀಡಿದ್ದ ಕುರಿಗಳ ರಕ್ತವನ್ನ ಸ್ನೇಹಮಯಿ, ಗಂಗರಾಜು ಫೋಟೋಗೆ ಅರ್ಪಣೆ ಮಾಡಲಾಗಿತ್ತು. ವಾಮಾಚಾರದ ದೃಶ್ಯ ಶ್ರೀರಾಮ ಸೇನೆ ಮುಖಂಡ ಪ್ರಸಾದ್ ಅತ್ತಾವರ್ ಮೊಬೈಲ್ನಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಸಾದ್ ಅತ್ತಾವರ್ನನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ
ಮಸಾಜ್ ಪರ್ಲಾರ್ ಗಲಾಟೆಯಲ್ಲಿ ಬಂಧನವಾಗಿರುವ ಶ್ರೀರಾಮ ಸೇನೆ ಮುಖಂಡ ಪ್ರಸಾದ್ ಅತ್ತಾವರ ಮೊಬೈಲ್ ಪರಿಶೀಲಿಸಿದಾಗ ಸ್ಫೋಟಕ ಅಂಶ ಪೊಲೀಸರಿಗೆ ಶಕ್ತಿ ದೇವತೆಯ ಮುಂದೆ ಪ್ರಾಣಿ ಬಲಿ ಕೊಟ್ಟು ಅದರ ರಕ್ತವನ್ನು ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಮತ್ತು ಆರ್ಟಿಐ ಕಾರ್ಯಕರ್ತ ಗಂಗರಾಜು ಫೋಟೋಗೆ ಹಚ್ಚಿರುವ ವಿಡಿಯೋ ಪೊಲೀಸರಿಗೆ ಲಭ್ಯವಾಗಿತ್ತು. ಸರಣಿ ಪ್ರಾಣಿ ಬಲಿ ಮಾಡಿರುವ ವಿಡಿಯೋಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆ ಪೊಲೀಸರಿಗೆ ಆರೋಪಿಗಳು ವಾಮಾಚಾರ ಮಾಡಿಸಿರುವುದು ಬೆಂಗಳೂರಿನ ಅಶೋಕ್ ನಗರದ ಸ್ಮಶಾನದಲ್ಲಿ ಕಾಳಿಕಾಂಬ ಗುಡಿಯಲ್ಲಿ ಎಂದು ತಿಳಿದುಬಂದಿದೆ.
ಮಸಾಜ್ ಪಾರ್ಲರ್ನಲ್ಲಿ ಗಲಾಟೆಗೆ ಕಾರಣವೇನು?
ರಾಮ ಸೇನಾ ಕಾರ್ಯಕರ್ತರು ಜನವರಿ 30 ರಂದು ಮಂಗಳೂರಿನ ಬಿಜೈ ಬಳಿಯ ಕಲರ್ಸ್ ಯುನಿಸೆಕ್ಸ್ ಸೆಲೂನ್ ಮೇಲೆ ಏಕಾಏಕಿ ದಾಳಿ ಮಾಡಿದ್ದರು. ಪಾರ್ಲರ್ನಲ್ಲಿ ಅನೈತಿಕ ಚಟುವಟಿಕೆಯ ಆರೋಪಿಸಿ ದಾಳಿ ಮಾಡಿದ್ದರು. ಪಾರ್ಲರ್ನ ಪೀಠೋಪಕರಣ, ಕನ್ನಡಿ ಸಹಿತ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಪುಡಿ ಗೈದು ದಾಂಧಲೆ ಎಸಗಿದ್ದರು.
ಇದನ್ನೂ ಓದಿ: ಸ್ನೇಹಮಯಿ ಕೃಷ್ಣ ಫೋಟೋಗೆ ರಕ್ತಾಭಿಷೇಕ: ಬಲಿ ಚೀಟಿಯಲ್ಲಿ ಮಹಿಳಾ PSI ಹೆಸರು ಪತ್ತೆ
ಈ ವೇಳೆ ಯಾವುದೇ ಗ್ರಾಹಕರು ಇಲ್ಲವಾಗಿದ್ದು, ಸೆಲೂನ್ನಲ್ಲಿದ್ದ ಮಹಿಳಾ ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ದಾಳಿಯ ವಿಡಿಯೋಗಳು ಲಭ್ಯವಾಗಿದ್ದು, 9 ರಿಂದ 10 ಕಾರ್ಯಕರ್ತರು ದಾಳಿ ನಡೆಸಿರುವುದು ವಿಡಿಯೋದಲ್ಲಿ ದಾಖಲಾಗಿತ್ತು. ಘಟನೆ ಬೆನ್ನಲ್ಲೇ ಮಾಲೀಕರು ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಘಟನಾ ಸ್ಥಳಕ್ಕೆ ಡಿಸಿಪಿ ಸಿದ್ದಾರ್ಥ್ ಗೋಯಲ್ ಆಗಮಿಸಿ ಮಾಹಿತಿ ಪಡೆದಿದ್ದು, ಮಹಿಳಾ ಸಿಬ್ಬಂದಿ ಹೇಳಿಕೆ ದಾಖಲಿಸಿಕೊಂಡಿದ್ದರು. ಈ ಘಟನೆ ಸಂಬಂಧ ದಕ್ಷಿಣ ಕನ್ನಡ ಪೊಲೀಸರು ಶ್ರೀರಾಮ ಸೇನೆ ಮುಖಂಡ ಪ್ರಸಾದ್ ಅತ್ತಾವರ ಅವರನ್ನು ಬಂಧಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:24 am, Sat, 22 February 25