ಬೆಂಗಳೂರಿಗೆ ಶಾಲೆಗಳಿಗೆ ಬಾಂಬ್ ಬೆದರಿಕೆ: ಹೈ ಲೆವೆಲ್ ಟೆರರಿಸ್ಟ್​ಗಳ ಕೈವಾಡ ಎಂದ ಆರ್​.ಅಶೋಕ್

ಬೆಂಗಳೂರು ದಕ್ಷಿಣ ವಲಯದ 32 ಶಾಲೆಗಳಿಗೆ, ಉತ್ತರ ವಲಯ ವ್ಯಾಪ್ತಿಯಲ್ಲಿ 7 ಶಾಲೆಗಳಿಗೆ, ಆನೇಕಲ್​​ ತಾಲೂಕಿನಲ್ಲಿ 5 ಶಾಲೆಗಳಿಗೆ ಬಾಂಬೆ ಬೆದರಿಕೆ ಸಂದೇಶ ರವಾನೆ ಮಾಡಲಾಗಿದೆ. ಇದರ ಹಿಂದೆ ಹೈಲೆವೆಲ್ ಉಗ್ರರ ಕೈವಾಡ ಇದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಇನ್ನುಳಿದಂತೆ ಯಾರು ಏನಂದ್ರು? ಇಲ್ಲಿದೆ ನೋಡಿ.

ಬೆಂಗಳೂರಿಗೆ ಶಾಲೆಗಳಿಗೆ ಬಾಂಬ್ ಬೆದರಿಕೆ: ಹೈ ಲೆವೆಲ್ ಟೆರರಿಸ್ಟ್​ಗಳ ಕೈವಾಡ ಎಂದ ಆರ್​.ಅಶೋಕ್
ಬೆಂಗಳೂರಿಗೆ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದರ ಹಿಂದೆ ಹೈ ಲೆವೆಲ್ ಟೆರರಿಸ್ಟ್​ಗಳ ಕೈವಾಡ ಇದೆ ಎಂದ ಆರ್​.ಅಶೋಕ
Edited By: Rakesh Nayak Manchi

Updated on: Dec 01, 2023 | 1:18 PM

ಬೆಂಗಳೂರು, ಡಿ.1: ನಗರದ ಶಾಲೆಗಳಿಗೆ ಬಾಂಬ್ ಬೆದರಿಕೆ (Bomb threat to Schools) ಹಾಕಿರುವುದರ ಹಿಂದೆ ಹೈಲೆವೆಲ್ ಉಗ್ರರ ಕೈವಾಡ ಇದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಹೇಳಿದ್ದಾರೆ. ಬೆಂಗಳೂರಿನಲ್ಲಿ 40ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ ವಿಚಾರವಾಗಿ ಬಸವೇಶ್ವರನಗರದಲ್ಲಿರುವ ನ್ಯಾಫಲ್ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದ ನಂತರ ಅವರು ಮಾತನಾಡಿದರು.

ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ​ ಜತೆ ಮಾತನಾಡಿದ್ದೇನೆ. ಅಲ್ಲಾಗೆ ಮೋಸ ಮಾಡುತ್ತಿದ್ದಾರೆಂದು ಇ-ಮೇಲ್ ಪತ್ರದಲ್ಲಿ​ ಉಲ್ಲೇಖವಾಗಿದೆ. ದೇಶದಲ್ಲಿ ಅಲ್ಲಾಗೆ ಮೋಸ ಮಾಡಲಾಗುತ್ತಿದೆ ಎಂದು ಉಲ್ಲೇಖಿಸಿದ್ದಾರೆ. ಧರ್ಮಾಧರಿತವಾಗಿ ಬಾಂಬ್ ಬೆದರಿಕೆ ಹಾಕಿದ್ದಾರೆ. ಬಾಂಬ್ ಬೆದರಿಕೆ ಹಿಂದೆ ದೊಡ್ಡ ಜಾಲ ಇರುವ ಬಗ್ಗೆ ಗೊತ್ತಾಗುತ್ತಿದೆ. ಉಗ್ರವಾದ ಅರ್ಥದಲ್ಲಿ ಇ-ಮೇಲ್ ಬಾಂಬ್ ಬೆದರಿಕೆ ಹಾಕಿದ್ದಾರೆ ಎಂದರು.

ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಇಲ್ಲಿ ಬಾಂಬ್ ಸ್ಕ್ವಾಡ್, ಡಾಗ್ ಸ್ಕ್ವಾಡ್ ಬಂದಿದೆ. ಇಲ್ಲಿವರೆಗೇ ಏನೂ ಸಿಕ್ಕಿಲ್ಲ. ಸದ್ಯ 15 ಶಾಲೆಗಳಿಗೆ ಮೇಲ್ ಬಂದಿದೆ. ಜನರಲ್ಲಿ ಆತಂಕ ಶುರುವಾಗಿದೆ. ಹೀಗಾಗಿ ನಾನು ಕೂಡ ಭೇಟಿ ಮಾಡಿದ್ದೇನೆ ಎಂದರು.

ಇದನ್ನೂ ಓದಿ: ಎಲ್ಲರೂ ಇಸ್ಲಾಂಗೆ ಮತಾಂತರವಾಗಿ, ಇಲ್ಲ ಎಲ್ಲರೂ ಸಾಯಲು ಸಿದ್ಧರಾಗಿ: ಇದು ಶಾಲೆಗಳಿಗೆ ಬಂದ ಬಾಂಬ್ ಬೆದರಿಕೆ

ಬಾಂಬ್ ಬೆದರಿಕೆ ಸಂದೇಶಗಳಿಗೆ ಕಾಂಗ್ರೆಸ್​​ ತುಷ್ಟೀಕರಣದ ನಡೆಯೇ ಕಾರಣ ಎಂದು ಧಾರವಾಡದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಕಟ್ಟರ್​​​​ ಇಸ್ಲಾಮಿಕ್ ಸಂಘಟನೆಯಿಂದ ಇ-ಮೇಲ್ ಬಂದಿದೆ. ಬಹು ದೇವೋಪಾಸಕರಿಗೆ ಮತಾಂತರ ಆಗಿ. ಇಲ್ಲವೇ ಸಾಯಲು ಸಿದ್ಧವಾಗಿ ಅಂತಾ ಬೆದರಿಕೆ ಹಾಕಿದ್ದಾರೆ ಎಂದರು.

ಮೂರ್ತಿ ಉಪಾಸಕರನ್ನು ಕೊಲ್ಲಬೇಕು ಅಂತಾ ಕುರಾನ್​ನ ಇದೆ. ಇದಕ್ಕೆ ಪುಷ್ಠಿಯಾಗಿ ಈ ಇಮೇಲ್ ಬಂದಿದೆ. ಇಡೀ ದೇಶ ಇಸ್ಲಾಂ ಮಾಡುತ್ತೇವೆ ಎಂದಿದ್ದಾರೆ. ಇದು ದೊಡ್ಡ ಆತಂಕದ ಸಂಗತಿ. ಇದಕ್ಕೆ ಕಾಂಗ್ರೆಸ್ ಕಾರಣ, ಇದು ಕಾಂಗ್ರೆಸ್ ತುಷ್ಟೀಕರಣದ ಪರಿಣಾಮ ಎಂದರು.

ಕಾಂಗ್ರೆಸ್​ನ ತುಷ್ಟೀಕರಣದಿಂದ ಮುಸ್ಲಿಮರು ನಮ್ಮದೇ ರಾಜ್ಯ ಎಂಬ ಭ್ರಮೆಯಲ್ಲಿದ್ದಾರೆ. ಕಾಂಗ್ರೆಸ್ ಸರ್ಕಾರ ಈ ವಿಷಯ ಗಂಭೀರವಾಗಿ ತೆಗೆದುಕೊಳ್ಳಬೇಕು. ಅಧಿಕಾರ, ದುಡ್ಡು, ಕುರ್ಚಿಯಷ್ಟೇ ಅಲ್ಲ. ಏಳು ಕೋಟಿ ಕನ್ನಡಿಗರ ಸುರಕ್ಷತೆ ದೃಷ್ಟಿಯಿಂದ ವಿಚಾರ ಮಾಡಬೇಕು. ಇವರ ಚಟುವಟಿಕೆ ಮುಂದೆ ದೊಡ್ಡ ಪ್ರಮಾಣದಲ್ಲಿ ಆಗಬಹುದು. ಹೀಗಾಗಿ ಸರ್ಕಾರ ಇಂಥವರನ್ನು ಹದ್ದುಬಸ್ತಿನಲ್ಲಿಡಬೇಕು ಎಂದರು.

ನಿರ್ದಾಕ್ಷಿಣ್ಯ ಕ್ರಮಕ್ಕೆ ಸಭಾಪತಿ ಒತ್ತಾಯ

ಟಿವಿ9 ಜೊತೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ತಕ್ಷಣ ಮುಖ್ಯಮಂತ್ರಿಗಳು ಬೆದರಿಕೆ ವಿಚಾರವಾಗಿ ಗಮನ ಹರಿಸಬೇಕು. ಇದರ ಹಿಂದೆ ಯಾರೇ ಇದ್ದರೂ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ಇಂತಹ ವಿಚಾರಗಳನ್ನು ಹಿಂದೆ ಪಾಕ್​ ಸೇರಿ ಬೇರೆ ಕಡೆ ಕೇಳುತ್ತಿದ್ದೆವು. ಈಗ ನಮ್ಮಲ್ಲೂ ಇಂತಹ ಬೆದರಿಕೆ ವಿಚಾರಗಳು ಬರುತ್ತಿವೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕು ಎಂದರು.

ಶಿವಮೊಗ್ಗದಲ್ಲಿ ಮಾತನಾಡಿದ ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ, ಅದು ಸುಳ್ಳಾಗಲಿ ಅಂತಾ ಭಗವಂತನಲ್ಲಿ ಪ್ರಾರ್ಥನೆ ‌ಮಾಡುತ್ತೇನೆ. ಅದು ಏನಾದರೂ ನಿಜವೇ ಆಗಿದ್ದರೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಸರ್ಕಾರ ಕೇವಲ ಗ್ಯಾರಂಟಿ ಯೋಜನೆಯ ಚಿಂತನೆಯಲ್ಲಿ ಇದೆ. ರಾಜ್ಯ ಸರ್ಕಾರಕ್ಕೆ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Kiran Surya

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Follow Us