ಬೆಂಗಳೂರಿನ ಪ್ರಮುಖ ಎರಡು ಕೆರೆಗಳ ಪುನರುಜ್ಜೀವನ ಕಾಮಗಾರಿಯಲ್ಲಿ ವಿಳಂಬ; ಬತ್ತಿದ ಬೋರ್​ವೆಲ್​ಗಳು

| Updated By: Rakesh Nayak Manchi

Updated on: Mar 08, 2024 | 7:45 AM

ಬೆಂಗಳೂರಿನ ಎರಡು ಪ್ರಮುಖ ಕೆರೆಗಳ ಪುನರುಜ್ಜೀವನದ ವಿಳಂಬದಿಂದಾಗಿ ಬೆಳ್ಳಂದೂರು ಮತ್ತು ವರ್ತೂರು ಮತ್ತು ಸುತ್ತಮುತ್ತಲಿನ ಬೋರ್‌ವೆಲ್‌ಗಳು ಒಣಗಲು ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ನಾಲ್ಕು ವರ್ಷಗಳ ಹಿಂದೆ ಕೆರೆ ಪುನರುಜ್ಜೀವನ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದವರೆಗೆ ಪೂರ್ಣಗೊಂಡಿಲ್ಲ. ಕೆಲಸ ಕಾರ್ಯ ಆರಂಭಿಸಿದ ನಂತರ ಕೆರೆಗೆ ನೀರು ಹರಿಯುವುದು ಸ್ಥಗಿತಗೊಂಡಿದೆ.

ಬೆಂಗಳೂರಿನ ಪ್ರಮುಖ ಎರಡು ಕೆರೆಗಳ ಪುನರುಜ್ಜೀವನ ಕಾಮಗಾರಿಯಲ್ಲಿ ವಿಳಂಬ; ಬತ್ತಿದ ಬೋರ್​ವೆಲ್​ಗಳು
ಬೆಂಗಳೂರಿನ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಪುನರುಜ್ಜೀವನ ವಿಳಂಬ; ಬತ್ತಿದ ಬೋರ್​ವೆಲ್​ಗಳು
Follow us on

ಬೆಂಗಳೂರು, ಮಾ.8: ನಗರದ (Bengaluru) ಎರಡು ಪ್ರಮುಖ ಕೆರೆಗಳ ಪುನರುಜ್ಜೀವನದ ವಿಳಂಬದಿಂದಾಗಿ ಬೆಳ್ಳಂದೂರು (Bellandur) ಮತ್ತು ವರ್ತೂರು (Varthur) ಮತ್ತು ಸುತ್ತಮುತ್ತಲಿನ ಬೋರ್‌ವೆಲ್‌ಗಳು ಒಣಗಲು ಕಾರಣವಾಗಿರಬಹುದು ಎಂದು ತಜ್ಞರು ಮತ್ತು ನಿವಾಸಿಗಳು ಹೇಳಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ನಾಲ್ಕು ವರ್ಷಗಳ ಹಿಂದೆ ಒಟ್ಟು 1,200 ಎಕರೆ ಪ್ರದೇಶದಲ್ಲಿ ಹರಡಿರುವ ಕೆರೆಗಳ ಪುನರುಜ್ಜೀವನ ಕಾರ್ಯವನ್ನು ಕೈಗೆತ್ತಿಕೊಂಡ ನಂತರ ಈ ಕೆರೆಗಳಿಗೆ ಸಂಸ್ಕರಿಸಿದ ಒಳಚರಂಡಿ ಮತ್ತು ಮಳೆನೀರು ಸೇರುವುದು ಸ್ಥಗಿತಗೊಂಡಿದೆ.

ಕೆರೆಗಳ ಪುನರುಜ್ಜೀವನದ ಭಾಗವಾಗಿ, ಬಿಡಿಎ ಕೆರೆಗಳ ಹೂಳು ತೆಗೆಯಲು ನೀರಿನ ಒಳಹರಿವನ್ನು ಬೇರೆಡೆಗೆ ತಿರುಗಿಸಿದೆ. ಆದರೆ ಅಪೂರ್ಣ ಕಾಮಗಾರಿಯು ಅಂತರ್ಜಲಮಟ್ಟದ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಕೆರೆಗಳು ನೀರಿನಿಂದ ತುಂಬಿದಾಗ, ಸುತ್ತಮುತ್ತಲಿನ ಅನೇಕ ನಿವಾಸಿಗಳು ತಮ್ಮ ಬೋರ್‌ವೆಲ್‌ಗಳು ಬತ್ತಿದಾಗಲೂ ಕನಿಷ್ಠ ಖಾಸಗಿ ಟ್ಯಾಂಕರ್‌ಗಳನ್ನು ಅವಲಂಬಿಸುತ್ತಿದ್ದರು.

ಬೆಂಗಳೂರಿನ ಅಂತರ್ಜಲ ಬಿಕ್ಕಟ್ಟಿನ ಪ್ರಮುಖ ಭಾಗವೆಂದರೆ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಹೂಳು ತೆಗೆಯಲು ಬರಿದಾಗುತ್ತಿದೆ ಎಂದು ಜಲ ಸಂರಕ್ಷಣಾ ತಜ್ಞ ವಿಶ್ವನಾಥ್ ಶ್ರೀಕಂಠಯ್ಯ ಹೇಳಿದ್ದಾಗಿ ಸುದ್ದಿ ಸಂಸ್ಥೆ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. 330 ಹೆಕ್ಟೇರ್‌ನಲ್ಲಿ ಹರಡಿರುವ ಬೆಳ್ಳಂದೂರು ಕೆರೆಯು ದಿನಕ್ಕೆ 66 ಮಿಲಿಯನ್ ಲೀಟರ್ ನೀರು ಸಂಗ್ರಹಿಸಬಹುದು. ಅದು 5,500 ಟ್ಯಾಂಕರ್‌ಗಳಿಗೆ (12,000 ಲೀಟರ್) ಸಮನಾಗಿದೆ. ವರ್ತೂರು ದಿನಕ್ಕೆ 36 ಮಿಲಿಯನ್ ಲೀಟರ್ ನೀರು ಸಂಗ್ರಹ ಮಾಡಬಹುದು. ದಿನಕ್ಕೆ ಒಟ್ಟು 102 ಮಿಲಿಯನ್ ಲೀಟರ್ ನೀರು ತಪ್ಪಿದ ಪರಿಣಾಮ ಅಂತರ್ಜಲ ಕುಸಿತಕ್ಕೆ ಕಾರಣವಾಗಿದೆ. ತುರ್ತು ಕ್ರಮವಾಗಿ ಬಿಡಿಎ ಈ ಕೆರೆಗಳಿಗೆ ತೃತೀಯ ಹಂತದ ತ್ಯಾಜ್ಯ ನೀರನ್ನು ತುಂಬಿಸಬೇಕು ಎಂದು ಹೇಳಿದ್ದಾಗಿ ವರದಿ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರು ನೀರಿನ ಬಿಕ್ಕಟ್ಟು ಬಗೆಹರಿಸಲು ಸರ್ಕಾರ ಕೈಗೊಂಡ ಕ್ರಮಗಳೇನು? ಇಲ್ಲಿದೆ ವಿವರ

ಇಬ್ಲೂರು ಕೆರೆಯ ಸಮೀಪ ವಾಸಿಸುವ ನಿವಾಸಿಗಳ ಬೋರ್‌ವೆಲ್‌ಗಳಲ್ಲಿ ನೀರು ಬರುತ್ತಿದೆ. ಆದರೆ ಬೆಳ್ಳಂದೂರು ಕೆರೆಯ ಬಳಿ ಇರುವ ಬೋರ್‌ವೆಲ್‌ಗಳು ಬತ್ತಿ ಹೋಗಿವೆ ಎಂದು ಗ್ರೀನ್ ಗ್ಲೆನ್ ಲೇಔಟ್ ನಿವಾಸಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮರೇಶ್ ಹೇಳಿದ್ದಾರೆ. ಇಬ್ಲೂರು ಕೆರೆಗೆ ಕಾಯಕಲ್ಪ ನೀಡಿದ ನಂತರ ಜಲಸಂಗ್ರಹಗಾರಕ್ಕೆ ನೀರು ತುಂಬಿದೆ. ಆದರೆ ಬೆಳ್ಳಂದೂರು ಕೆರೆ ಕಾಮಗಾರಿ ಹಲವು ವರ್ಷಗಳಿಂದ ನಡೆಯುತ್ತಿದೆ ಎಂದರು.

ಕೆರೆಗಳ ಪುನರುಜ್ಜೀವನಕ್ಕೆ ಬೇಕು ಒಂದು ವರ್ಷ

ನೀರಿನ ಸಮಸ್ಯೆ ತೀವ್ರವಾಗಿದ್ದರೂ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಲು ಬಿಡಿಎ ಮುಂದಾಗುತ್ತಿಲ್ಲ. ಸಂಪೂರ್ಣವಾಗಿ ಬೆಳ್ಳಂದೂರು ಕೆರೆ ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಬೇಕು. ಅಲ್ಲಿಯವರೆಗೂ ಕೆರೆಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಪುನರುಜ್ಜೀವನ ಯೋಜನೆಯ ಉಸ್ತುವಾರಿ ಎಂಜಿನಿಯರ್ ಹೇಳಿದ್ದಾರೆ. ವರ್ತೂರು ಕೆರೆಯು ಪೂರ್ಣಗೊಳ್ಳುವ ಹಂತದಲ್ಲಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ನೀರು ಹರಿಸುವ ಭರವಸೆ ಇದೆ ಎಂದರು.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸಮಿತಿಯ ಪರಿಕಲ್ಪನೆಯ ಯೋಜನೆಯನ್ನು ಬಿಡಿಎ ನಾಶಪಡಿಸಿದೆ ಎಂದು ಮಾಜಿ ಶಾಸಕ ಅರವಿಂದ ಲಿಂಬಾವಳಿ ಆರೋಪಿಸಿದರು. ಈ ಕೆರೆಗಳು ತುಂಬಿದ್ದರೆ ಬೋರ್‌ವೆಲ್‌ಗಳು ಈ ಮಟ್ಟಿಗೆ ಬತ್ತಿ ಹೋಗುತ್ತಿರಲಿಲ್ಲ. ನಗರ ವ್ಯಾಪ್ತಿಗೆ ಸೇರ್ಪಡೆಯಾದ 110 ಗ್ರಾಮಗಳ ಪೈಕಿ 31 ನನ್ನ ಕ್ಷೇತ್ರದಲ್ಲಿ ಬರುತ್ತಿದ್ದು, ಅವೆಲ್ಲವೂ ತೀವ್ರ ನೀರಿನ ಕೊರತೆ ಎದುರಿಸುತ್ತಿವೆ ಎಂದರು.

ಅವೈಜ್ಞಾನಿಕವಾಗಿ ಕೆರೆಗೆ ಕಾಯಕಲ್ಪ ಮಾಡಿರುವುದು ನೀರಿನ ಸಮಸ್ಯೆಗೆ ಕಾರಣ ಎಂದು ಜ್ಞಾನ ಭಾರತಿ ವಾರ್ಡ್‌ನ ನಿವಾಸಿ ಶೋಭಾ ಭಟ್ ಆರೋಪಿಸಿದರು. ಆರ್‌ಆರ್‌ನಗರ ಕ್ಷೇತ್ರದ ಜಲಮೂಲಗಳ ಸೌಂದರ್ಯೀಕರಣಕ್ಕೆ ಬಿಬಿಎಂಪಿ ಒತ್ತು ನೀಡಿದೆ. ಈ ಕೆರೆಗಳ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಾದಂತೆ ನಮ್ಮ ಪ್ರದೇಶದಲ್ಲಿನ ಅನೇಕ ಬೋರ್‌ವೆಲ್‌ಗಳು ಬತ್ತಿ ಹೋಗಿವೆ ಎಂದು ಅವರು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:44 am, Fri, 8 March 24