33 ವರ್ಷದ ಸಂಪಾದನೆ ಹೋಯ್ತು: 18 ಕೋಟಿ ರೂ. ಮೌಲ್ಯದ ಚಿನ್ನ ಕಳೆದುಕೊಂಡ ಬೆಂಗಳೂರಿನ ಬಿಲ್ಡರ್​​ನ ಕಣ್ಣೀರಿನ ಕಥೆ

ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಉದ್ಯಮಿಯೊಬ್ಬರ ಮನೆಯಲ್ಲಿ ನಡೆದಿದ್ದ 18 ಕೋಟಿ ರೂ. ಮೌಲ್ಯದ ಚಿನ್ನಾಭರಣ ದರೋಡೆ ಪ್ರಕರಣ ಭಾರಿ ಸಂಚಲನ ಮೂಡಿಸಿದೆ. ಮನೆಕೆಲಸದ ಹೆಸರಿನಲ್ಲಿ ವಿಶ್ವಾಸ ಗಳಿಸಿ ನೇಪಾಳಿ ದಂಪತಿ ದರೋಡೆ ಮಾಡಿದೆ ಎಂಬುದು ತನಿಖೆಯಲ್ಲಿ ದೃಢಪಟ್ಟಿದ್ದು, ಖರ್ನಾಕ್ ದಂಪತಿಯನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ. ಇನ್ನೊಂದೆಡೆ 18 ಕೋಟಿ ರೂ. ಮೌಲ್ಯದ ಚಿನ್ನ ಕಳೆದುಕೊಂಡ ಉದ್ಯಮಿ ಶಿವಕುಮಾರ್ ಕಣ್ಣೀರಿಟ್ಟಿದ್ದಾರೆ.

33 ವರ್ಷದ ಸಂಪಾದನೆ ಹೋಯ್ತು: 18 ಕೋಟಿ ರೂ. ಮೌಲ್ಯದ ಚಿನ್ನ ಕಳೆದುಕೊಂಡ ಬೆಂಗಳೂರಿನ ಬಿಲ್ಡರ್​​ನ ಕಣ್ಣೀರಿನ ಕಥೆ
ಚಿನ್ನ ಕಳೆದುಕೊಂಡ ಉದ್ಯಮಿ ಶಿವಕುಮಾರ್

Updated on: Feb 02, 2026 | 4:26 PM

ಬೆಂಗಳೂರು, (ಫೆಬ್ರವರಿ 02): ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಯಲ್ಲಿ ಉದ್ಯಮಿ ಶಿವಕುಮಾರ್ ಎನ್ನುವ ಮನೆಯಲ್ಲಿ ಬರೋಬ್ಬರಿ 18 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರವಣ ಕಳ್ಳತನವಾಗಿದ್ದು, ಮನೆಗೆಲಸ ಮಾಡುತ್ತಿದ್ದ ನೇಪಾಳಿ ದಂಪತಿಯೇ ದೋಚಿಕೊಂಡು ಹೋಗಿದೆ ಎಂದು ಪೊಲೀಸರ ತನಿಖೆಯನ್ನು ತಿಳಿದುಬಂದಿದ್ದು, ಈ ಸಂಬಂಧ ಪೊಲೀಸರು, ನೇಪಾಳಿ ದಂಪತಿ ಬಂಧನಕ್ಕೆ ಬಲೆ ಬೀಸಿದೆ. ಇನ್ನು ತಮ್ಮ 33 ವರ್ಷದ ಸಂಪಾದನೆಯನ್ನು ದೋಚಿದ್ದಾರೆ ಎಂದು ಉದ್ಯಮಿ ಕಣ್ಣೀರಿಟ್ಟಿದ್ದಾರೆ. ಕಳವಾದ ಚಿನ್ನ ನಾನು ಹೇಗಾದರೂ ಮತ್ತೆ ಸಂಪಾದನೆ ಮಾಡುತ್ತೇನೆ. ಆದ್ರೆ, ನನ್ನ ತಾಯಿ‌ಯ ಕಿವಿಯೋಲೆ ಮತ್ತು ಸರ ಕಳವಾಗಿದ್ದಕ್ಕೆ ದುಃಖವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಕಳವಾದ ಚಿನ್ನ ನೆನೆದು ಬಿಲ್ಡರ್ ಕಣ್ಣೀರು

33 ವರ್ಷದ ನನ್ನ ಸಂಪಾದನೆಯನ್ನ ಕಳ್ಳತನ ಮಾಡಿದ್ದಾರೆ. 1988 ಸೆಪ್ಟೆಂಬರ್ 12 ರಂದು ನನ್ನ ಜೀವನದಲ್ಲಿ ದೊಡ್ಡ ದುರಂತವಾಗಿತ್ತು. ಹೆಮ್ಮಲೂರು ಬಳಿ ನಾವು ವಾಸವಿದ್ದ ಮನೆ ಮಳೆಯಿಂದ ಕುಸಿತವಾಗಿತ್ತು. ಮನೆ ಕುಸಿದಾದ ನನ್ನ ಕುಟುಂಬದ ಐದು ಜನ ಸಾವನ್ನಪ್ಪಿದ್ರು. ಮನೆಯಿಲ್ಲದೆ ಕೋಳಿ ಫಾರ್ಮ್ ನಲ್ಲಿ ಮಲಗಿಕೊಂಡಿದ್ವಿ. 1989 ಮೇ 31ಕ್ಕೆ ಮಾಲಿನ ಅವ್ರನ್ನ ನಾನು ಮದುವೆ ಆದೆ. ಆಗ ನನ್ನ ಬಳಿ ಊಟಕ್ಕೂ ದುಡ್ಡಿಲ್ಲದ ಪರಿಸ್ಥಿತಿ ಇತ್ತು. ಆದರೂ ಮಾಲಿನಿ ಅವರ ತಂದೆ ನನಗೆ ಮಗಳನ್ನ ಮದುವೆ ಮಾಡಿ ಕೊಟ್ರು. ಮದುವೆಯಾದ ಮರುದಿನವೇ ಸಾಲಕೊಟ್ಟವರು ಮನೆ ಬಳಿಗೆ ಬಂದಿದ್ರು. ಆಗ ನನ್ನ ಪತ್ನಿ ಬಳಿಯಿದ್ದ ಚಿನ್ನ ಅಡವಿಟ್ಟು ಸಾಲ ತೀರಿಸಿದ್ದೆ.ಆಗ ನನ್ನ ತಾಯಿ 15 ದಿನವಾದ್ರೂ ನಾವು ಸ್ವಂತ ಮನೆಯಲ್ಲಿ ಇರ್ಬೆಕು ಮಗ ಅಂದಿದ್ರು. ನಂತರ ನಾನು ಬಡವರಿಗೆ ಕಂತಿನ ರೂಪದಲ್ಲಿ ಮನೆ ಜಾಗ ನೀಡುವ‌ ಕೆಲಸ ಮಾಡಿದ್ದೆ‌. ಈಗ ಸಾವಿರಾರು ಜನ ಬಡವರು ಸ್ವಂತ ಮನೆಯಲ್ಲಿ ಜೀವನ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ 18 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ನೇಪಾಳಿ ದಂಪತಿಗೆ ಬಲೆ ಬೀಸಿದ ಪೊಲೀಸರು!

ಕಳವಾದ ಚಿನ್ನ ನಾನು ಹೇಗಾದ್ರೂ ಮತ್ತೆ ಸಂಪಾದನೆ ಮಾಡುತ್ತೇನೆ. ಆದ್ರೆ ನನ್ನ ತಾಯಿ‌ಯ ಕಿವಿಯೋಲೆ ಮತ್ತು ಸರ ಕಳವಾಗಿದ್ದಕ್ಕೆ ದುಃಖವಾಗಿದೆ.ನನ್ನ ಮಕ್ಕಳ ಮತ್ತು ಪತ್ನಿಯ ಎಲ್ಲಾ ಚಿನ್ನವನ್ನ ಕಳ್ಳತನ ಮಾಡಿದ್ದಾರೆ. ನಮ್ಮ ಮನೆಯಲ್ಲಿ ಹಿಂದೆ ನೇಪಾಳಿ ಕುಟುಂಬ ಕೆಲಸ ಮಾಡುತ್ತಿತ್ತು. ಹೊಸ ಮನೆ ಗೃಹ ಪ್ರವೇಶ ವೇಳೆ ಎಲ್ಲವನ್ನ ಅವರು ಗಮನಿಸಿದ್ದಾರೆ. ಮನೆಯ ಲಾಕರ್ ಮತ್ತು ಬಳಿಯಿರುವ ಚಿನ್ನದ ಬಗ್ಗೆ ನೋಡಿಕೊಂಡಿದ್ದರು. ನಂತರ ನಾವು ಕೆಲಸ ಬಿಡುತ್ತೇವೆ ಎಂದು ನನ್ನ ಬಳಿ ಹೇಳಿದ್ದರು.ಆಗ ಬೇರೆ ಯಾರನ್ನಾದ್ರೂ ಸೇರಿಸಿ ಹೋಗು ಅಂತ ಹೇಳಿದ್ದೆ. ಆಗ ದಿನೇಶ್ ಮತ್ತು ಕಮಲಾಳನ್ನ ಕರೆತಂದು ಬಿಟ್ಟಿದ್ದ. ಇವರೆಲ್ಲ ಮೊದಲೇ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ನನಗೆ ಗೊತ್ತಾಗಲಿಲ್ಲ ಎಂದು ಘಟನೆ ನೆನೆದು ಬೇಸರ ಹೊರಹಾಕಿದ್ದಾರೆ.

ದಂಪತಿ ದರೋಡೆ ಪ್ಲ್ಯಾನ್ ಬಿಚ್ಚಿಟ್ಟ ಉದ್ಯಮಿ

ನಾನು ದಿನೇಶ್ ಹಾಗು ಕಮಲಾಳ ಆಧಾರ್ ಕಾರ್ಡ್ ಕೊಡಲು ಹೇಳಿದ್ದೆ‌.ಹಳೆ ಮಾಲೀಕರಿಗೆ ನಾವು ಹಣ ಕೊಡಬೇಕಿರುವುದರಿಂದ ಅವರ ಬಳಿ ಇದೆ. ಒಂದು ತಿಂಗಳು ಬಿಟ್ಟು ಕೊಡುತ್ತೇವೆ ಎಂದು ಹೇಳಿದ್ದರು. 20 ದಿನ ನಮ್ಮ ಮನೆಯಲ್ಲಿ ಹೇಳಿದ ಕೆಲಸ ಮಾಡಿಕೊಂಡಿದ್ದರು. ನಾನು ಸ್ನೇಹಿತರ ಜೊತೆ ಫಾರಿನ್ ಟ್ರಿಪ್ ಹೋದಾಗ ಇವರು ಪ್ಲಾನ್ ಮಾಡಿದ್ದರು. ಬೇರೆಡೆಯಿಂದ ನಾಲ್ಕು ಜನರನ್ನ ಮನೆಗೆ ಕರೆಸಿಕೊಂಡು ನಮ್ಮ ಮನೆಕೆಲಸದವಳನ್ನು ಕಮಲಾ ಬೇಕಂತಲೆ ಅಂಗಡಿಗೆ ಕರೆದೊಯ್ದಿದ್ಲು. ಆಗ 35 ನಿಮಿಷದಲ್ಲಿ ಲಾಕ್ ಒಡೆದು ಚಿನ್ನ ಕಳ್ಳತನ ಮಾಡಿದ್ದಾರೆ. ಮನೆಕೆಲಸದವಳನ್ನು ಅಂಗಡಿಯಲ್ಲೇ ಬಿಟ್ಟು ಕಮಲಾ ಹೋಗಿದ್ದಳು. ಬಿಲ್ ಕೊಡಲು ಹಣವಿಲ್ಲದೆ ಆಕೆ ಅಲ್ಲಿಂದ ನಡೆದು ಮನೆಗೆ ಬಂದಾಗ ಕಳ್ಳತನ ಗೊತ್ತಾಗಿತ್ತು. ನಂತರ ನನಗೆ ಕರೆ ಮಾಡಿ ಕಳ್ಳತನ ಆಗಿರೊ ಬಗ್ಗೆ ಹೇಳಿದ್ದಳು ಎಂದು ಘಟನೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಕಳವಾದ ಎಲ್ಲಾ ಚಿನ್ನಕ್ಕೂ ಬಿಲ್ ಇದೆ

Builder Shivakumar on Gold Robbery: 33 ವರ್ಷದ ನನ್ನ ಸಂಪಾದನೆ ದರೋಡೆ ಆಗಿದೆ ಎಂದು ಶಿವಕುಮಾರ್ ಬೇಸರ| #TV9D
ಕಳ್ಳತನ ಸುದ್ದಿ ತಿಳಿಯುತ್ತಿದ್ದಂತೆಯೇ ತಕ್ಷಣ ನಾನು ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ರಿಗೆ ಕರೆ ಮಾಡಿ ತಿಳಿಸಿದ್ದೆ. ಅವರು ಕೂಡಲೇ ವೈಟ್ ಫಿಲ್ಡ್ ಡಿಸಿಪಿ ಎಸಿಪಿಯವರಿಗೆ ತಿಳಿಸಿದ್ದರು. ಪೊಲೀಸರು ಮೂರು ಗಂಟೆಗೆ ಮನೆ ಬಳಿ ಬಂದು ತನಿಖೆ ನಡೆಸಿದ್ದರು. ನನಗೆ ಪೊಲೀಸರ ಮೇಲೆ ಸಂಪೂರ್ಣ ನಂಬಿಕೆ ಇದೆ. ಆದಷ್ಟು ಬೇಗ ಕಳ್ಳರನ್ನ ಪತ್ತೆ ಮಾಡುತ್ತಾರೆ. ಕಳವಾದ ಎಲ್ಲಾ ಚಿನ್ನಕ್ಕೂ ನಮ್ಮ ಬಳಿ ಬಿಲ್ ಇದೆ. ಒಂದಷ್ಟು ಅಮ್ಮನ ಕಾಲದ ಚಿನ್ನಾಭರಣ ಇದೆ‌. ಹಾಗೇ ಎಲ್ಲದಕ್ಕೂ ನಾನು ಟ್ಯಾಕ್ಸ್ ಕಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us