
ಬೆಂಗಳೂರು (ಜೂನ್.16): ರಾಜ್ಯರಾಜಧಾನಿ ಬೆಂಗಳೂರಿನಲ್ಲಿ (Bengaluru) ಜೂನ್ 19 ಹಾಗೂ ಜೂನ್ 20 ರ ಬೆಳಗ್ಗೆ 6ಗಂಟೆವರೆಗೆ ನಗರದ ಬಹುತೇಕ ಭಾಗಗಳಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ (Cauvery Water Supply) ವ್ಯತ್ಯಯ ಉಂಟಾಗಲಿದೆ. ಕಾವೇರಿ 5ನೇ ಹಂತದ ಕಾಮಗಾರಿ ಹಾಗೂ ವಿದ್ಯುತ್ ನಿರ್ವಹಣೆ ಕಾರಣದಿಂದಾಗಿ ಕಾವೇರಿ ನೀರು ಸರಬರಾಜು ಸ್ಥಗಿತ ಅನಿವಾರ್ಯವಾಗಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ( BWSSB) ತಿಳಿಸಿದ್ದು, ಮುಂಜಾಗ್ರತೆಯಾಗಿ ಕಾವೇರಿ ನೀರು ಸಂಗ್ರಹಿಸಿಕೊಳ್ಳುವಂತೆ ನಾಗರಿಕರಿಗೆ BWSSB ಮನವಿ ಮಾಡಿದೆ.
ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುವ ಸಲುವಾಗಿ ಜೂನ್ 19 ರ ಬೆಳಗ್ಗೆ 6 ರಿಂದ ಹಾಗೂ ಜೂ.20ರ ಬೆಳಗ್ಗೆ 6 ಗಂಟೆ ವರೆಗೆ ಕಾವೇರಿ ನೀರು ಸರಬರಾಜು ಯೋಜನೆಯ ಹಂತ-1 ರಿಂದ ಹಂತ- 5ರ ವರೆಗಿನ ಎಲ್ಲಾ ಜಲರೇಚಕ ಯಂತ್ರಾಗಾರಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದ ಬಿಬಿಎಂಪಿ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ. ಹೀಗಾಗಿ ಬೆಂಗಳೂರಿನ ನಾಗರೀಕರಿಗೆ, ವಾಣಿಜ್ಯ ಹಾಗೂ ಕೈಗಾರಿಕಾ ಪ್ರದೇಶಗಳಿಗೆ ಮುಂಜಾಗ್ರತೆಯಾಗಿ ಅಗತ್ಯವಿರುವ ನೀರನ್ನು ಸಂಗ್ರಹಣೆ ಮಾಡಿಕೊಳ್ಳುವಂತೆ ಜಲಮಂಡಳಿ ಸೂಚನೆ ನೀಡಿದೆ.
ಬೆಂಗಳೂರು ನಗರ ಹಾಗೂ ಉಪನಗರ ವ್ಯಾಪ್ತಿಯ ಪ್ರದೇಶಗಳಿಗೆ ಮುಂದಿನ ದಶಕಗಳ ನೀರಿನ ಅಗತ್ಯವನ್ನು ಪೂರೈಸುವ ನಿಟ್ಟಿನಲ್ಲಿ ಟಿ.ಕೆ. ಹಳ್ಳಿಯಲ್ಲಿ ನಡೆಯುತ್ತಿರುವ ಕಾವೇರಿ 5ನೇ ಹಂತದ ಕಾಮಗಾರಿ ಪ್ರಮುಖವಾಗಿದೆ. ಈ ಹಂತದಡಿಯಲ್ಲಿ ಹೊಸ 3000 ಮಿ.ಮೀ. ವ್ಯಾಸದ ಕೊಳವೆ ಮಾರ್ಗವನ್ನು ಜೋಡಿಸಲು ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (KPTCL) ಸೂಚಿಸಿರುವ ವಿದ್ಯುತ್ ಸ್ಥಾವರಗಳ ವಾರ್ಷಿಕ ನಿರ್ವಹಣೆ ಮತ್ತು ತುರ್ತು ತಾಂತ್ರಿಕ ತಪಾಸಣೆಯನ್ನು ಸಹ ಕೈಗೊಳ್ಳಲಾಗುತ್ತಿದೆ.
ಈ ನಿರ್ವಹಣಾ ಕಾರ್ಯದ ವೇಳೆ, ಹಂತ-1ರಿಂದ ಹಂತ-5ರ ತನಕ ಇರುವ ಎಲ್ಲಾ ಜಲರೇಚಕ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗುವುದು. ಇದರಿಂದಾಗಿ ಕಾವೇರಿ ನೀರಿನ ಸರಬರಾಜು ಸಂಪೂರ್ಣವಾಗಿ ನಿರ್ಬಂಧಿತವಾಗಲಿದೆ. ನೀರಿನ ವ್ಯತ್ಯಯವನ್ನು ಮನನದಲ್ಲಿಟ್ಟುಕೊಂಡು ನಗರದ ನಾಗರಿಕರು, ವಾಣಿಜ್ಯ ಸಂಸ್ಥೆಗಳು ಹಾಗೂ ಕೈಗಾರಿಕೆಗಳು ಮುಂಜಾಗ್ರತಾ ಕ್ರಮವಾಗಿ ಅಗತ್ಯವಿರುವ ನೀರನ್ನು ಪೂರ್ವದಲ್ಲಿ ಸಂಗ್ರಹಿಸಿಕೊಳ್ಳುವಂತೆ ಬೃಹತ್ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮನವಿ ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:30 pm, Mon, 16 June 25