ಈಶ್ವರಪ್ಪ ಸುಳ್ಳಿನ ಫ್ಯಾಕ್ಟರಿ ಇದ್ದಂತೆ, ಅವರನ್ನ ಬಂಧಿಸಬೇಕು; ಕೆ.ಎಸ್.ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಆಕ್ರೋಶ

ನಾವು ಕೇವಲ ಈಶ್ವರಪ್ಪ ವಿರುದ್ಧ ಹೋರಾಟ ಮಾಡುತ್ತಿಲ್ಲ. ಭ್ರಷ್ಟ ಸರ್ಕಾರ, ಕಮಿಷನ್ ದಂಧೆ ವಿರುದ್ಧ ಹೋರಾಡ್ತಿದ್ದೇವೆ. ಸಚಿವ ಈಶ್ವರಪ್ಪಗೆ ಸಿಎಂ ಬೊಮ್ಮಾಯಿ ಸಪೋರ್ಟ್ ಇದೆ. ಇದು ದೊಡ್ಡ ತಪ್ಪು, ಸಂತೋಷ್ ಆತ್ಮಹತ್ಯೆ ಪ್ರಕರಣದ ನ್ಯಾಯಯುತ ತನಿಖೆಯಾಗಬೇಕು. -

ಈಶ್ವರಪ್ಪ ಸುಳ್ಳಿನ ಫ್ಯಾಕ್ಟರಿ ಇದ್ದಂತೆ, ಅವರನ್ನ ಬಂಧಿಸಬೇಕು; ಕೆ.ಎಸ್.ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಆಕ್ರೋಶ
ಡಿಕೆ ಶಿವಕುಮಾರ, ಕೆಪಿಸಿಸಿ ಅಧ್ಯಕ್ಷ
Edited By: ಆಯೇಷಾ ಬಾನು

Updated on: Apr 15, 2022 | 11:43 AM

ಬೆಂಗಳೂರು: ಗುತ್ತಿಗೆದಾರ ಸಂತೋಷ್‌ ಪಾಟೀಲ್‌(Santosh Patil) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಸದ್ಯ ಕಾಂಗ್ರೆಸ್ ನಾಯಕರು ಕೆ.ಎಸ್.ಈಶ್ವರಪ್ಪರನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಈಶ್ವರಪ್ಪ ಸುಳ್ಳಿನ ಫ್ಯಾಕ್ಟರಿ ಇದ್ದಂತೆ, ಅವರನ್ನ ಬಂಧಿಸಬೇಕು ಎಂದು ಟಿವಿ9ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಹೇಳಿಕೆ ನೀಡಿದ್ದಾರೆ.

ನಾವು ಕೇವಲ ಈಶ್ವರಪ್ಪ ವಿರುದ್ಧ ಹೋರಾಟ ಮಾಡುತ್ತಿಲ್ಲ. ಭ್ರಷ್ಟ ಸರ್ಕಾರ, ಕಮಿಷನ್ ದಂಧೆ ವಿರುದ್ಧ ಹೋರಾಡ್ತಿದ್ದೇವೆ. ಸಚಿವ ಈಶ್ವರಪ್ಪಗೆ ಸಿಎಂ ಬೊಮ್ಮಾಯಿ ಸಪೋರ್ಟ್ ಇದೆ. ಇದು ದೊಡ್ಡ ತಪ್ಪು, ಸಂತೋಷ್ ಆತ್ಮಹತ್ಯೆ ಪ್ರಕರಣದ ನ್ಯಾಯಯುತ ತನಿಖೆಯಾಗಬೇಕು. ನಾವು ರಾಜ್ಯದ ಎಲ್ಲಾ ಕಡೆಯೂ ಪ್ರತಿಭಟನೆ ಮಾಡುತ್ತೇವೆ ಎಂದು ಟಿವಿ9ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸಿಎಂ ಬೊಮ್ಮಾಯಿಗೆ ಧೈರ್ಯ ಇದ್ದರೆ ಚುನಾವಣೆಗೆ ಹೋಗಲಿ. ಈಗ ಚುನಾವಣೆ ಮಾಡಲಿ, ಅದು ಯಾವುದೋ ಮಾಂಸ, ಗುಡ್ಡೆ ಮಾಂಸ, ಜಟ್ಕಾ ಕಟ್ ಅಂತ ಹೋಗ್ತಾರಾ ಇವರು. ಈಶ್ವರಪ್ಪ ತಪ್ಪು ಮಾಡಿಲ್ಲ ಎಂದಿದ್ದಾರೆ ಸಿಎಂ ಬೊಮ್ಮಾಯಿ. ಇನ್ನು ಯಾವ ಪೊಲೀಸ್ ಅಧಿಕಾರಿ ತನಿಖೆ ನಡೆಸುತ್ತಾರೆ? ಸಂತೋಷ್ ಪಾಟೀಲ್ ಸಹೋದರ ಕೇಳಿದ ಕೆಲಸ ಆಗಬೇಕು. ರಾಜೀನಾಮೆ ಅದೆಲ್ಲ ಗೊತ್ತಿಲ್ಲ, ಈಶ್ವರಪ್ಪ ಬಂಧನವಾಗಬೇಕು. ಸಂತೋಷ್ ಪಾಟೀಲ್ ಪತ್ನಿಗೆ ಕೆಲಸ ಕೊಡಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಡೆಯಲಿದೆ.

ರಮೇಶ್ ಜಾರಕಿಹೊಳಿ ಬಗ್ಗೆ ಮಾತಾಡಿ ಹೊಲಸು ಮಾಡಿಕೊಳ್ಳಲ್ಲ. ನಾನು ರಮೇಶ್ ಬಗ್ಗೆ ಮಾತನಾಡಲ್ಲ ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ. ಕೆಂಪಣ್ಣ ಯಾರು ಅಂತ ನನಗೆ ಗೊತ್ತಿಲ್ಲ. ಈ ಸಿಸ್ಟಮ್ ಕ್ಲೀನ್ ಮಾಡೋಕೆ ಹೋರಾಟ ಮಾಡ್ತಿದ್ದಾರೆ. ಕಮಿಷನ್ ದಂಧೆ 40 ಅಲ್ಲ 50 ಪರ್ಸೆಂಟೇಜ್ ಎಂದಿದ್ದಾರೆ. ಬಿಬಿಎಂಪಿ ಕಸ ತೆಗೆಯುವ ಗುತ್ತಿಗೆದಾರರೊಬ್ಬರು ಹೇಳಿದ್ದಾರೆ. ವಿಧಾನಸೌಧದ ಗೋಡೆಗೆ ಹೊಡೆದರೆ ಕಾಸು ಕಾಸು ಅನ್ನುತ್ತೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಕಾಸು ಕಾಸು ಅನ್ನುತ್ತೆ. ಎಲ್ಲಾ ಪಂಚಾಯಿತಿ ಕಚೇರಿಗಳಲ್ಲೂ ಲಂಚ ಲಂಚ ಎಂದರು.

ಈಶ್ವರಪ್ಪ ಬರೀ ರಾಜೀನಾಮೆ ಅಷ್ಟೇ ಅಲ್ಲ ಬಂಧಿಸಬೇಕು
ಭ್ರಷ್ಟಾಚಾರ ಪ್ರಪಂಚ ಹುಟ್ಟಿದಾಗಿನಿಂದಲೂ ಇದೆ. ನಮ್ಮ ಆಡಳಿತಾವಧಿಯಲ್ಲೂ ಭ್ರಷ್ಟಾಚಾರ ಇತ್ತು. ಬಿಜೆಪಿಯವರು ದಪ್ಪಚರ್ಮದವರು, ಇವರಂತಾ ಭ್ರಷ್ಟರಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆಕ್ರೋಶ ಹೊರ ಹಾಕಿದ್ದಾರೆ. ಈಶ್ವರಪ್ಪ ಬರೀ ರಾಜೀನಾಮೆ ಅಷ್ಟೇ ಅಲ್ಲ ಬಂಧಿಸಬೇಕು. ಸಿಎಂ, ಗೃಹ ಸಚಿವರು ಉಳಿಸುವ ಪ್ರಯತ್ನ ಮಾಡ್ತಿದ್ದಾರೆ. ಇದರ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ. ಈ ಭ್ರಷ್ಟ ಸರ್ಕಾರದಿಂದ ಜನರಿಗೆ ನೆಮ್ಮದಿ ಸಿಗುತ್ತಿಲ್ಲ. ಇವರು ದೊಡ್ಡಮಟ್ಟದಲ್ಲಿ ಲಜ್ಜೆಬಿಟ್ಟು ಭ್ರಷ್ಟಾಚಾರ ಮಾಡ್ತಿದ್ದಾರೆ. ರಮೇಶ್ ಪರೋಕ್ಷವಾಗಿ ಡಿಕೆಶಿ ಬಗ್ಗೆ ಮಾತನಾಡಿರಬಹುದು. ಏನು ಬಿಡುಗಡೆ ಮಾಡ್ತಾರೋ ಮಾಡಲಿ ಸತ್ಯ ಗೊತ್ತಾಗಲಿದೆ ಎಂದಿದ್ದಾರೆ.

‘ಸಂತೋಷ್ ಸಾವಿಗೆ ಜಾರಕಿಹೊಳಿ ಕಾರಣವಾಗಿರಬಹುದು’
ಇನ್ನೊಂದೆಡೆ ‘ಸಂತೋಷ್ ಸಾವಿಗೆ ಜಾರಕಿಹೊಳಿ ಕಾರಣವಾಗಿರಬಹುದು’ ಇಂತಹದೊಂದು ಸಂಶಯ ನನಗೆ ಬರುತ್ತಿದೆ ಎಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಈಶ್ವರಪ್ಪಗೆ ನೈತಿಕತೆ ಇದ್ದರೆ ಮೊನ್ನೆ ರಾಜೀನಾಮೆ ನೀಡ್ಬೇಕಿತ್ತು. ರಾಜೀನಾಮೆ ನೀಡುವುದಕ್ಕೆ ಎರಡು ದಿನ ಸಮಯ ಬೇಕಿತ್ತಾ? ಎಂದಿದ್ದಾರೆ. ಇನ್ನು ಸಂತೋಷ್ ಆತ್ಮಹತ್ಯೆ ಹಿಂದೆ ಮಹಾನಾಯಕರಿದ್ದಾರೆಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಆ ಮಹಾನಾಯಕ ಯಾರೆಂದು ರಮೇಶ್ ಇಂದೇ ಹೇಳಲಿ. ಸೋಮವಾರದವರೆಗೆ ಏಕೆ ಕಾಯಬೇಕು, ಇಂದೇ ಹೇಳಲಿ ಎಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ ಹೊರ ಹಾಕಿದ್ದಾರೆ.

ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಏಕೆ ಪ್ರಕರಣ ದಾಖಲಿಸಿಲ್ಲ
ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕೇವಲ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ FIR ದಾಖಲಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಏಕೆ ಪ್ರಕರಣ ದಾಖಲಿಸಿಲ್ಲ. ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಒತ್ತಾಯಿಸಿದ್ದಾರೆ. ವರ್ಕ್ ಆರ್ಡರ್ ಆಗಿಲ್ಲವೆಂದು ಈಶ್ವರಪ್ಪ ಹೇಳುತ್ತಿದ್ದಾರೆ. ಹಾಗಿದ್ದರೆ ಇವರೇಕೆ 40 ಪರ್ಸೆಂಟ್ ಕಮಿಷನ್ ಕೇಳಿದ್ದಾರೆ ಎಂದು ಸಚಿವ K.S.ಈಶ್ವರಪ್ಪಗೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಪ್ರಶ್ನೆ ಮಾಡಿದ್ದಾರೆ. ಜತೆಗೆ ರಾಜ್ಯದಲ್ಲಿರುವುದು 40 ಪರ್ಸೆಂಟ್ ಸರ್ಕಾರವೆಂದು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಬೆಸ್ಕಾಂನಿಂದ ಗುಡ್ ನ್ಯೂಸ್: ಬೆಂಗಳೂರಿನಲ್ಲಿ ಕಡಿಮೆಯಾಗಲಿದೆ ಪವರ್ ಕಟ್

Web contact

TV9 Kannada

Read More
Follow Us