AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಶ್ವರಪ್ಪ ತಮ್ಮನ್ನು ತಾವು ಪ್ರಾಣಿ ಎಂದುಕೊಂಡಿದ್ದಾರೆ, ಅಂಥವರ ಬಗ್ಗೆ ನಾವು ಮಾತನಾಡಲ್ಲ: ಯುಟಿ ಖಾದರ್

ಸಚಿವ ಕೆ.ಎಸ್.ಈಶ್ವರಪ್ಪ ಅವರು ತಮ್ಮನ್ನು ತಾವು ಜಂಗಲ್ ರಾಜಾ ಎಂದು ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಯು.ಟಿ.ಖಾದರ್ ಹೇಳಿದರು.

ಈಶ್ವರಪ್ಪ ತಮ್ಮನ್ನು ತಾವು ಪ್ರಾಣಿ ಎಂದುಕೊಂಡಿದ್ದಾರೆ, ಅಂಥವರ ಬಗ್ಗೆ ನಾವು ಮಾತನಾಡಲ್ಲ: ಯುಟಿ ಖಾದರ್
ಶಾಸಕ ಯು.ಟಿ ಖಾದರ್ (ಸಂಗ್ರಹ ಚಿತ್ರ)
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Feb 22, 2022 | 7:11 PM

Share

ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪ ಅವರು ತಮ್ಮನ್ನು ತಾವು ಸಿಂಹ ಎಂದು ಕರೆದುಕೊಂಡಿದ್ದಾರೆ. ನಾವು ಮನುಷ್ಯರು, ಅಂಥ ಪ್ರಾಣಿಗಳ ಬಳಿಗೆ ಹೋಗುವುದಿಲ್ಲ. ಅವರು ಜಂಗಲ್ ರಾಜಾ ಎಂದು ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಯು.ಟಿ.ಖಾದರ್ (UT Khader) ಹೇಳಿದರು. ರಾಜಭವನದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಉಡುಪಿಯಲ್ಲಿ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಹಿಜಾಬ್ ವಿಚಾರವಾಗಿ ಕೋರ್ಟ್‌ಗೆ ಹೋಗಿದ್ದ ವಿದ್ಯಾರ್ಥಿನಿಯ ಸಹೋದರನ ಮೇಲೆ ಹಲ್ಲೆ ಮಾಡಿದ್ದಾರೆ. ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು. ಹಿಜಾಬ್ ವಿಚಾರವಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿನಿಯರ ಮೇಲೆಯೂ ಲಾಠಿಪ್ರಯೋಗ ನಡೆದಿದೆ. ನಿನ್ನೆ ಶಿವಮೊಗ್ಗದಲ್ಲಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಯಿದ್ದರೂ ಸಚಿವರ ನೇತೃತ್ವದಲ್ಲಿ ಮೆರವಣಿಗೆ ನಡೆಸಿ, ಕಲ್ಲುತೂರಾಟ ನಡೆದಿದೆ. ಬೆಂಕಿ ಹಚ್ಚಿ ದಾಂದಲೆ ಮಾಡಿದ್ದಾರೆ ಎಂದು ಹೇಳಿದರು.

ಇಂತಹ ಸಂದರ್ಭದಲ್ಲಿ ಯಾರ ಮೇಲೆಯೂ ಲಾಠಿ ಪ್ರಯೋಗ ನಡೆದಿಲ್ಲ. ಪೊಲೀಸರ ಲಾಠಿಗಳು ಎಲ್ಲಿ ಹೋಗಿದ್ದವು? ವಿದ್ಯಾರ್ಥಿನಿಯರ ಮೇಲೆಯೂ ಪೊಲೀಸರು ಲಾಠಿ ಬೀಸುತ್ತಾರೆ. ನಿನ್ನೆ ಸಚಿವರ ಸಮ್ಮುಖದಲ್ಲೇ ದಾಂದಲೆ ನಡೆದರೂ ಕ್ರಮವಿಲ್ಲ. ಪೊಲೀಸರು ರಾಜಕಾರಣಿಗಳ ಆಣತಿಯಂತೆ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ರಾಜಕಾರಣಿಗಳ ಒತ್ತಡಕ್ಕೆ ಮಣಿಯಬಾರದು. ಸಂವಿಧಾನಬದ್ಧವಾಗಿ ಕರ್ತವ್ಯ ನಿರ್ವಹಿಸಬೇಕು. ಅಧಿಕಾರ ಯಾರಿಗೂ ಶಾಶ್ವತವಾಗಿ ಇರುವುದಿಲ್ಲ ಎನ್ನುವುದನ್ನು ಅರಿತುಕೊಂಡು ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.

ಈಶ್ವರಪ್ಪ ನೀಡಿದ್ದು ಉದ್ದೇಶಪೂರ್ವಕ ಹೇಳಿಕೆ: ಸಿದ್ದರಾಮಯ್ಯ

ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವಂಥ ಹೇಳಿಕೆ ನೀಡಿರುವ ಈಶ್ವರಪ್ಪ (Eshwarappa) ಅವರ ವಜಾಕ್ಕೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಹಿರಿಯ ಕಾಂಗ್ರೆಸ್ ನಾಯಕರಾದ ರಾಮಲಿಂಗಾರೆಡ್ಡಿ, ಆರ್.ವಿ.ದೇಶಪಾಂಡೆ, ಬಿ.ಕೆ.ಹರಿಪ್ರಸಾದ್, ಎಚ್.ಕೆ.ಪಾಟೀಲ್ ಸೇರಿದಂತೆ ಹಲವು ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ನಿಯೋಗದಲ್ಲಿ ಇದ್ದರು. ಮನವಿ ಸಲ್ಲಿಕೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaih), ‘ಇದು ಈಶ್ವರಪ್ಪ ಅಪ್ಪಿತಪ್ಪಿ ಅಚಾನಕ್ ಆಗಿ ಕೊಟ್ಟಿರುವ ಹೇಳಿಕೆ ಅಲ್ಲ. ಅವರು ಉದ್ದೇಶಪೂರ್ವಕವಾಗಿ ನೀಡಿರುವ ಹೇಳಿಕೆ. ಕೆಂಪುಕೋಟೆ ಮೇಲೆ ಇಂದಲ್ಲ ನಾಳೆ ಕೇಸರಿಧ್ವಜವನ್ನು ಹಾರಿಸಿಯೇ ಹಾರಿಸುತ್ತೇವೆ. ರಾಷ್ಟ್ರಧ್ವಜನಕ್ಕೆ ಅವಮಾನ ಮಾಡುವುದು ಅಕ್ಷಮ್ಯ ಅಪರಾಧ. ಸಂವಿಧಾನದ ಪ್ರಕಾರ ಇದು ದೇಶದ್ರೋಶ ಎನಿಸಿಕೊಳ್ಳುತ್ತದೆ. ಆರ್ಟಿಕಲ್ 55 (1) ಈ ವಿಚಾರವನ್ನು ಬಹಳ ಸ್ಪಷ್ಟವಾಗಿ ವಿವರಿಸುತ್ತದೆ. ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ಸಂವಿಧಾನವನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಇಲ್ಲವಾದರೆ ಅದು ಅಪರಾಧವಾಗುತ್ತದೆ’ ಎಂದು ಹೇಳಿದರು.

ರಾಷ್ಟ್ರಧ್ವಜವು ನಮ್ಮ ದೇಶದ ಸ್ವಾತಂತ್ರ್ಯದ ಸಂಕೇತವಾಗಿದೆ. ಇಂಥ ಸಂಕೇತಕ್ಕೆ ಈಶ್ವರಪ್ಪ ಅವಮಾನ ಮಾಡಿದ್ದಾರೆ. ಹೀಗಾಗಿ ಸದನದಲ್ಲಿ ಚರ್ಚೆಗೆ ನಾವು ಮನವಿ ಮಾಡಿದ್ದೆವು. ಈಶ್ವರಪ್ಪ ಅವರನ್ನು ಶೀಘ್ರ ಸಂಪುಟದಿಂದ ಕೈಬಿಡಬೇಕು ಎಂದು ಕೇಳಿದ್ದೆವು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕುವಂತೆ ಒತ್ತಾಯಿಸಿದ್ದೆವು. ಆದರೆ ಇದ್ಯಾವುದನ್ನೂ ಸಿಎಂ ಬೊಮ್ಮಾಯಿ ಮಾಡಲಿಲ್ಲ. ಬದಲಾಗಿ ಈಶ್ವರಪ್ಪ ಅವರನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡಿದರು. ಇದು ದೇಶದ್ರೋಹ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಸದನದಲ್ಲಿ ನಮಗೆ ಚರ್ಚೆ ಮಾಡುವುದಕ್ಕೆ ಅವಕಾಶ ನೀಡಲಿಲ್ಲ. ನಾವು 5 ದಿನ ಪ್ರತಿಭಟನೆ ಮಾಡಿದರೂ ಈಶ್ವರಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ ರಾಜ್ಯಪಾಲರಿಗೆ ನಾವು ಮನವಿಯನ್ನು ಸಲ್ಲಿಸಿದ್ದೇವೆ ಎಂದರು.

ಇದನ್ನೂ ಓದಿ: ಸಾವರ್ಕರ್ ಬದುಕಿದ್ದರೆ ನನ್ನಂತೆ ಅವರೂ ಪ್ರತಿಪಾದಿಸುತ್ತಿದ್ದರು; ಟಿಪ್ಪು ಎಕ್ಸ್​ಪ್ರೆಸ್ ರೈಲು ಹೆಸರಿನ ಬಗ್ಗೆ ಯುಟಿ ಖಾದರ್ ಹೇಳಿಕೆ

ಇದನ್ನೂ ಓದಿ: ಬಿಜೆಪಿ ಸದಸ್ಯರಿಂದ ಜೀವ ಬೆದರಿಕೆ: ವಿಧಾನ ಪರಿಷತ್ ಸಭಾಪತಿಗೆ ಬಿಕೆ ಹರಿಪ್ರಸಾದ್ ಪತ್ರ