AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾದಯಾತ್ರೆ ಮಾಡಿದ್ದಕ್ಕೆ ಕಾಂಗ್ರೆಸ್ ನಾಯಕರ ಮೇಲೆ ಕೇಸ್, ಕೊರೊನಾ ನಿಯಮ ಉಲ್ಲಂಘಿಸಿದ ಬಿಜೆಪಿ ಮುಖಂಡರಿಗೆ ಮಾಫಿ: ಸಿಎಸ್​ಗೆ ಕಾಂಗ್ರೆಸ್ ದೂರು

Congress Complaints: ಮುಖ್ಯ ಕಾರ್ಯದರ್ಶಿಗೆ ಕಾಂಗ್ರೆಸ್ ನಾಯಕರು ಒಟ್ಟು 23 ಪುಟಗಳ ದೂರು ಸಲ್ಲಿಸಿದರು. ಬಿಜೆಪಿ ನಾಯಕರ ವಿರುದ್ಧ 9 ಪ್ರಕರಣಗಳ ಬಗ್ಗೆ ಕಾಂಗ್ರೆಸ್ ನಿಯೋಗ ದೂರು ಸಲ್ಲಿಸಿತು

ಪಾದಯಾತ್ರೆ ಮಾಡಿದ್ದಕ್ಕೆ ಕಾಂಗ್ರೆಸ್ ನಾಯಕರ ಮೇಲೆ ಕೇಸ್, ಕೊರೊನಾ ನಿಯಮ ಉಲ್ಲಂಘಿಸಿದ ಬಿಜೆಪಿ ಮುಖಂಡರಿಗೆ ಮಾಫಿ: ಸಿಎಸ್​ಗೆ ಕಾಂಗ್ರೆಸ್ ದೂರು
ಕಾಂಗ್ರೆಸ್ ನಾಯಕ ಬಿ.ಎಲ್.ಶಂಕರ್ ಮತ್ತು ಮುಖ್ಯ ಕಾರ್ಯದರ್ಶಿ ರವಿಕುಮಾರ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 18, 2022 | 6:11 PM

ಬೆಂಗಳೂರು: ಮೇಕೆದಾಟು ಪಾದಯಾತ್ರೆಗೆ ಆಗ್ರಹಿಸಿ ಪಾದಯಾತ್ರೆ (Mekedatu Padayatre) ನಡೆಸಿದ ಕಾಂಗ್ರೆಸ್ ನಾಯಕರ (Congress Leaders) ವಿರುದ್ಧ ಪ್ರಕರಣ ದಾಖಲಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ, ಕೊರೊನಾ ನಿಯಮ (Corona Guidelines) ಉಲ್ಲಂಘಿಸಿದ ಬಿಜೆಪಿ ನಾಯಕರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರಿಗೆ ಕಾಂಗ್ರೆಸ್ ನಿಯೋಗ ಮಂಗಳವಾರ (ಜ.18) ಮನವಿ ಸಲ್ಲಿಸಿತು. ಬಿಜೆಪಿ ನಾಯಕರು ಸಾಕಷ್ಟು ಬಾರಿ ಕೊವಿಡ್ ನಿಯಮ ಉಲ್ಲಂಘಿಸಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್ ನಾಯಕರು ಮುಖ್ಯಕಾರ್ಯದರ್ಶಿಯನ್ನು ಒತ್ತಾಯಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ನಾಯಕರಾದ ಬಿ.ಎಲ್.ಶಂಕರ್ ಮತ್ತು ಉಗ್ರಪ್ಪ ವಿಧಾನಸೌಧದಲ್ಲಿ ಮುಖ್ಯ ಕಾರ್ಯದರ್ಶಿಯನ್ನು ಭೇಟಿಯಾದರು.

ಮುಖ್ಯ ಕಾರ್ಯದರ್ಶಿಗೆ ಕಾಂಗ್ರೆಸ್ ನಾಯಕರು ಒಟ್ಟು 23 ಪುಟಗಳ ದೂರು ಸಲ್ಲಿಸಿದರು. ಬಿಜೆಪಿ ನಾಯಕರ ವಿರುದ್ಧ 9 ಪ್ರಕರಣಗಳ ಬಗ್ಗೆ ಕಾಂಗ್ರೆಸ್ ನಿಯೋಗ ದೂರು ಸಲ್ಲಿಸಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್​ ಶೆಟ್ಟರ್​​, ಸಚಿವರಾದ ಎಸ್.ಅಂಗಾರ, ಬಿ.ಶ್ರೀರಾಮುಲು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮುಖಂಡ ಎನ್‌.ಆರ್.ರಮೇಶ್ ಸೇರಿದಂತೆ ಹಲವು ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ನಾಯಕರು ದೂರು ಸಲ್ಲಿಸಿದರು.

ಪಾದಯಾತ್ರೆ ಮಾಡಿದ್ದಕ್ಕೆ ನಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಾವು ಮಾಡಿದ್ದು ಪ್ರತಿಭಟನೆ, ಬಿಜೆಪಿ ಮಾಡಿದ್ದು ಸಂಭ್ರಮಾಚರಣೆ. ಕಾನೂನಿನ ದೃಷ್ಟಿಯಲ್ಲಿ ಮುಖ್ಯಮಂತ್ರಿ ಮತ್ತು ಸಚಿವರೇ ಬೇರೆ, ನಾವೇ ಬೇರೆ ಎನ್ನುವುದಾದರೆ ಅದನ್ನು ಸರ್ಕಾರ ಸ್ಪಷ್ಟಪಡಿಸಲಿ ಎಂದು ಕಾಂಗ್ರೆಸ್ ನಾಯಕ ಬಿ.ಎಲ್.ಶಂಕರ್​ ಆಗ್ರಹಿಸಿದರು.

ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಟಿಬಿ ಜಯಚಂದ್ರ ಹಾಗೂ ಕೆಲ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢ

ಮೇಕೆದಾಟು ಪಾದಯಾತ್ರೆಗೆ ಹೋಗಿದ್ದವರಲ್ಲಿ ಮಾಜಿ ಸಚಿವ ಟಿ.ಬಿ ಜಯಚಂದ್ರಗೆ ಕೊರೊನಾ ಪಾಸಿಟಿವ್ ಖಚಿತವಾಗಿದೆ. ಜಯಚಂದ್ರ, ಸದ್ಯ ಬೆಂಗಳೂರಿನ ಮನೆಯಲ್ಲಿ ಹೋಮ್ ಕ್ವಾರಂಟೈನ್ ಆಗಿದ್ದಾರೆ. ಮೇಕೆದಾಟು ಪಾದಯಾತ್ರೆ ಬಂದೋಬಸ್ತ್​ಗೆ ಹೋದ ಪೊಲೀಸರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಕೋಲಾರ ಜಿಲ್ಲೆಯ 32 ಜನ ಪೊಲೀಸರಿಗೆ ಕೊರೊನಾ ಪಾಸಿಟಿವ್ ಆಗಿದೆ. ಕೆಜಿಎಫ್ ಜಿಲ್ಲೆಯಿಂದ ತೆರಳಿದ್ದ 111 ಜನ ಪೊಲೀಸರ ಪೈಕಿ 25 ಜನ ಸಿಬ್ಬಂದಿಗೆ ಕೊವಿಡ್19 ದೃಢವಾಗಿದೆ. ಇದರಿಂದ ಪೊಲೀಸರ ಕುಟುಂಬಸ್ಥರಿಗೆ ಆತಂಕ ಹೆಚ್ಚಾಗಿದೆ. ಮೊದಲ ಹಂತದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಿ, ನಂತರ ಪೊಲೀಸ್ ಕುಟುಂಬಸ್ಥರಿಗೆ ಕೊರೊನಾ ಟೆಸ್ಟ್ ಮಾಡಲು ಸೂಚನೆ ಕೊಡಲಾಗಿದೆ. ಕೋಲಾರ ಡಿಹೆಚ್ಓ ಡಾ. ಜಗದೀಶ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ವಿದೇಶದಿಂದ ಬೆಂಗಳೂರಿಗೆ ಬಂದಿದ್ದ 15 ಜನರಿಗೆ ಕೊರೊನಾ ಕಂಡುಬಂದಿದೆ. ಶನಿವಾರ ಬೆಳಗ್ಗೆ ಕೆಐಎಬಿಗೆ ಆಗಮಿಸಿದ್ದ 15 ಜನರಿಗೆ ಕೊರೊನಾ ದೃಢಪಟ್ಟಿದ್ದು ನಿಗದಿತ ಕೋವಿಡ್ ಸೆಂಟರ್​ಗಳಲ್ಲಿ‌ ಐಸೊಲೇಷನ್ ಮಾಡಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ 10 ಪೊಲೀಸರಿಗೆ ಕೊರೊನಾ ಸೋಂಕು ದೃಢವಾಗಿದೆ. ಕೂಡ್ಲಿಗಿ, ಹೂವಿನಹಡಗಲಿ, ಹರಪನಹಳ್ಳಿ, ಹಂಪಿ ಪೊಲೀಸ್ ಠಾಣೆಯ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಈ ಬಗ್ಗೆ ವಿಜಯನಗರ ಎಸ್‌ಪಿ ಡಾ.ಕೆ. ಅರುಣ್ ಮಾಹಿತಿ ನೀಡಿದ್ದಾರೆ.

ಪಾದಯಾತ್ರೆಗೆ ನಿಯೋಜನೆಯಾಗಿದ್ದ 10 ಪೊಲೀಸರಿಗೆ ಕೊರೊನಾ ದೃಢವಾಗಿದೆ. ಕಾಂಗ್ರೆಸ್​ ಪಾದಯಾತ್ರೆ ಭದ್ರತೆಗೆ ನಿಯೋಜನೆಯಾಗಿದ್ದ ರಾಮನಗರ ಜಿಲ್ಲೆಯ 10 ಪೊಲೀಸರಿಗೆ ಕೊರೊನಾ ಪಾಸಿಟಿವ್​ ದೃಢವಾಗಿದೆ. ಇನ್ನೂ ಕೆಲವರ ಕೊವಿಡ್​ ಟೆಸ್ಟ್​ ರಿಪೋರ್ಟ್​ ನಾಳೆ ಬರಲಿದೆ ಎಂದು ಟಿವಿ9ಗೆ ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್​ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ 15-18ವರ್ಷದವರಿಗೆ ಕೊರೊನಾ ಲಸಿಕೆ ಮೊದಲ ಡೋಸ್​ ನೀಡಿಕೆ ಶೇ.100 ಪೂರ್ಣ ಇದನ್ನೂ ಓದಿ: ಆಂಧ್ರಪ್ರದೇಶ ವಿರೋಧ ಪಕ್ಷದ ನಾಯಕ, ಟಿಡಿಪಿ ಮುಖ್ಯಸ್ಥ ಎನ್​.ಚಂದ್ರಬಾಬು ನಾಯ್ಡುರಿಗೆ ಕೊರೊನಾ ಸೋಂಕು