AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಟ್​ಕಾಯಿನ್​ ಪ್ರಕರಣ ಮುಖ್ಯವಲ್ಲ ಎಂದ ಸಿಎಂ ಬೊಮ್ಮಾಯಿ ಪ್ರಧಾನಿ ಮೋದಿ ಬಳಿ ಚರ್ಚಿಸಿದ್ದು ಏಕೆ?- ಪ್ರಿಯಾಂಕ್ ಖರ್ಗೆ

Priyank Kharge: ನನ್ನ ಪುತ್ರನಿಗೆ ಮಾದಕ ವಸ್ತು ಕೊಡುತ್ತಿದ್ದಾರೆಂದು ಆರೋಪ ಇದೆ. ಆ್ಯಪ್ರೋಜೋಲಾಮ್ ಡ್ರಗ್ಸ್ ಕೊಡುತ್ತಿರುವುದಾಗಿ ಮ್ಯಾಜಿಸ್ಟ್ರೇಟ್‌ಗೆ ಶ್ರೀಕಿ ತಂದೆಯೇ ಅರ್ಜಿ ಬರೆದಿದ್ದಾರೆ ಎಂಬ ಬಗ್ಗೆ ಶಾಸಕ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.

ಬಿಟ್​ಕಾಯಿನ್​ ಪ್ರಕರಣ ಮುಖ್ಯವಲ್ಲ ಎಂದ ಸಿಎಂ ಬೊಮ್ಮಾಯಿ ಪ್ರಧಾನಿ ಮೋದಿ ಬಳಿ ಚರ್ಚಿಸಿದ್ದು ಏಕೆ?- ಪ್ರಿಯಾಂಕ್ ಖರ್ಗೆ
ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ
TV9 Web
| Edited By: |

Updated on:Nov 12, 2021 | 3:49 PM

Share

ಬೆಂಗಳೂರು: ಬಿಟ್​ಕಾಯಿನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತು ಸೆಟ್ಲ್‌ಮೆಂಟ್ ತರ ಇದೆ. ಪ್ರಕರಣದಲ್ಲಿ ನಾವೂ ಇದೀವಿ, ನೀವೂ ಇದೀರಿ. ಎಲ್ಲರೂ ಸೆಟ್ಲ್‌ಮೆಂಟ್ ಮಾಡಿಕೊಳ್ಳೋಣ ಬನ್ನಿ ಅನ್ನುವಂತಿದೆ. ಈ ಪ್ರಕರಣ ಅಷ್ಟು ಮುಖ್ಯವಲ್ಲ ಎಂದು ಸಿಎಂ ಹೇಳುತ್ತಾರೆ. ಹಾಗಾದ್ರೆ ಪ್ರಧಾನಿ ಮೋದಿ ಬಳಿ ಹೋಗಿ ಏಕೆ ಚರ್ಚಿಸಿದ್ರು ಎಂದು ಸಿಎಂ ಬೊಮ್ಮಾಯಿಗೆ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ. ನನ್ನ ಮಾತಿಗೆ ಬಿಜೆಪಿಯವರು ವೈಯಕ್ತಿಕವಾಗಿ ಟೀಕಿಸಿದ್ರು. ಅಪಹಾಸ್ಯ ಮಾಡಿ ಟೀಕೆ ಮಾಡಿದರು. ನಾನು ಬಿಟ್ ಕಾಯಿನ್ ಪ್ರಕರಣದಲ್ಲಿ ತನಿಖೆಯಾಗಬೇಕು ಎಂದಿದ್ದೆ. ನಿಷ್ಪಕ್ಷಪಾತ, ಪಾರದರ್ಶಕವಾಗಿ ತನಿಖೆ ಮಾಡಲು ಹೇಳಿದ್ದೆ. ತನಿಖೆ ಆದ್ರೆ ರಾಜ್ಯ ಬಿಜೆಪಿಯಲ್ಲಿ 3ನೇ ಸಿಎಂ ಆಗ್ತಾರೆ ಎಂದಿದ್ದ ಶಾಸಕ ಪ್ರಿಯಾಂಕ್ ಖರ್ಗೆ ಬೆಂಗಳೂರಿನಲ್ಲಿ ಇಂದು (ನವೆಂಬರ್ 12) ಸುದ್ದಿಗೋಷ್ಠಿ ನಡೆಸಿದ್ದಾರೆ.

ಬಿಟ್ ಕಾಯಿನ್ ಪ್ರಕರಣ ದೊಡ್ಡ ಹಗರಣವಾಗಿದೆ. 2020ರ ನವೆಂಬರ್ 14 ರಂದು ಶ್ರೀಕಿ ಸರಂಡರ್ ಆಗ್ತಾರೆ. ಹೋಟೆಲ್ ಮೌರ್ಯದಲ್ಲಿ ಸಿಸಿಬಿಯವರಿಗೆ ಸರಂಡರ್ ಆಗ್ತಾರೆ. 3 ದಿನ ಪ್ರಕರಣ ಸಂಬಂಧ ಯಾವುದೇ ರಿಪೋರ್ಟ್ ಆಗಲ್ಲ. 2020ರ ನವೆಂಬರ್ 17 ರಂದು ಪ್ರಕರಣ ದಾಖಲಾಗುತ್ತದೆ. ಕ್ರೈಂ ನಂಬರ್ 91/2020ರ ಅಡಿ ಪ್ರಕರಣ ದಾಖಲಾಗುತ್ತದೆ. ಬಳಿಕ 14 ದಿನ ಪೊಲೀಸ್ ಕಸ್ಟಡಿಗೆ ಪಡೆಯುತ್ತಾರೆ.

ಬಳಿಕ ಕ್ರೈಂ ಸಂ. 153/2020ರ ಅಡಿ ಮತ್ತೊಮ್ಮೆ ಪ್ರಕರಣ ದಾಖಲಾಗುತ್ತದೆ. ಹೈಡ್ರೋ ಗಾಂಜಾ ತರಿಸುತ್ತಿದ್ದ ಆರೋಪದಲ್ಲಿ ಪ್ರಕರಣ ದಾಖಲು ಮಾಡಲಾಗುತ್ತದೆ. ಕ್ರೈಂ ಸಂ. 287/2020ರ ಅಡಿ ಮತ್ತೊಂದು ಪ್ರಕರಣ, 2020ರ ನವೆಂಬರ್ 19 ರಂದು ಪ್ರಕರಣ ದಾಖಲಾಗುತ್ತೆ. ಕ್ರೈ ಸಂ. 45/2020ರಡಿ ಮತ್ತೊಂದು ಪ್ರಕರಣದಲ್ಲಿ ಮತ್ತೊಮ್ಮೆ ಪೊಲೀಸ್ ಕಸ್ಟಡಿಗೆ ಪಡೆಯಲಾಗುತ್ತದೆ. ಇಲ್ಲಿ ಬಿಟ್ ಕಾಯಿನ್ ವಿಚಾರ ಪ್ರಸ್ತಾಪವಾಗುತ್ತದೆ. ಈಗ ಬಿಟ್ ಕಾಯಿನ್ ಪ್ರಕರಣದ ಸತ್ಯ ಮುಚ್ಚಿಹಾಕಲು ಯತ್ನ ನಡೆಸಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ.

2021 ಜನವರಿ 8 ರಂದು ಪಂಚನಾಮೆ ಹೊರಗೆ ಬರುತ್ತದೆ. ಕ್ರೈಂ ನಂಬರ್ 45/2020 ಪ್ರಕರಣ ಸಂಬಂಧ ಪಂಚನಾಮೆ ಮಾಡಲಾಗುತ್ತದೆ. ಕ್ರಿಪ್ಟೋ ಕರೆನ್ಸಿ ರಿಕವರಿ ಬಗ್ಗೆ ಪಂಚನಾಮೆಯಲ್ಲಿ ಉಲ್ಲೇಖವಿದೆ. ಪಂಚನಾಮೆಗಾಗಿ ಲೈನ್‌ಮ್ಯಾನ್, ಪವರ್ ಮ್ಯಾನ್ ಕರೆಸುತ್ತಾರೆ. ಸಾಕ್ಷಿಧಾರರಾಗಿ ಲೈನ್‌ಮ್ಯಾನ್, ಪವರ್ ಮ್ಯಾನ್ ಕರೆಸುತ್ತಾರೆ. 31 ಬಿಟ್ ಕಾಯಿನ್ ಸಿಕ್ಕಾಗ ರಿಕವರಿ ಪ್ರಕ್ರಿಯೆಗೆ ಕರೆಸುತ್ತಾರೆ. ನಮಗೇ ಕ್ರಿಪ್ಟೋ ಕರೆನ್ಸಿ, ಬಿಟ್ ಕಾಯಿನ್ ಬಗ್ಗೆ ಗೊತ್ತಿಲ್ಲ. ಅಂತಹದರಲ್ಲಿ ಲೈನ್‌ಮ್ಯಾನ್, ಪವರ್ ಮ್ಯಾನ್‌ಗೆ ಏನು ಗೊತ್ತಿರುತ್ತೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.

ಜಾಗತಿಕ ಹ್ಯಾಕರ್‌ ಶ್ರೀಕಿಗೆ ಪೊಲೀಸರು ಡ್ರಗ್ಸ್‌ ಕೊಟ್ರಾ? ತಂದೆ ಗೋಪಾಲ್​ ಆರೋಪವೇನು? ನನ್ನ ಪುತ್ರನಿಗೆ ಮಾದಕ ವಸ್ತು ಕೊಡುತ್ತಿದ್ದಾರೆಂದು ಆರೋಪ ಇದೆ. ತನಿಖಾಧಿಕಾರಿಗಳ ವಿರುದ್ಧ ಗೋಪಾಲ ರಮೇಶ್‌ರಿಂದ ಅರ್ಜಿ ಸಲ್ಲಿಸಲಾಗಿದೆ. ಆ್ಯಪ್ರೋಜೋಲಾಮ್ ಡ್ರಗ್ಸ್ ಕೊಡುತ್ತಿರುವುದಾಗಿ ಮ್ಯಾಜಿಸ್ಟ್ರೇಟ್‌ಗೆ ಶ್ರೀಕಿ ತಂದೆಯೇ ಅರ್ಜಿ ಬರೆದಿದ್ದಾರೆ. ಹೀಗಾಗಿ ರಕ್ತ, ಮೂತ್ರ ಮಾದರಿ ಪಡೆಯಲು ಹೇಳುತ್ತಾರೆ. ಮ್ಯಾಜಿಸ್ಟ್ರೇಟ್ ಮಾದರಿ ಸಂಗ್ರಹಿಸುವಂತೆ ಹೇಳುತ್ತಾರೆ ಎಂಬ ಬಗ್ಗೆ ಶಾಸಕ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.

2021ರ ಜನವರಿ 12ರಂದು ಪೊಲೀಸರಿಂದ ಶ್ರೀಕೃಷ್ಣ ಬಂಧನ, ಬಿಟ್ ಕಾಯಿನ್ ಜಪ್ತಿ ಬಗ್ಗೆ ಮಾಹಿತಿ ನೀಡಲಾಗಿತ್ತು. 31 ಬಿಟ್ ಕಾಯಿನ್ ಜಪ್ತಿ ಮಾಡಿದ್ದಾಗಿ ಮಾಹಿತಿ ನೀಡಿದ್ದರು. ರಾಬಿನ್ ಖಂಡೇವಾಲಾರಿಂದ 0.8 ಬಿಟ್ ಕಾಯಿನ್ ಜಪ್ತಿ ಮಾಡಲಾಗಿತ್ತು. ಈ ವೇಳೆ ಕಮರ್ಷಿಯ್ ಟ್ಯಾಕ್ಸ್ ಅಧಿಕಾರಿ ಕರೆಯುತ್ತಾರೆ. 31 ಬಿಟ್ ಕಾಯಿನ್ ಪಂಚನಾಮೆಗೆ ಪವರ್ ಮ್ಯಾನ್, ಲೈನ್ ಮ್ಯಾನ್ ಕರೆಸುತ್ತಾರೆ. ಅದು ಏಕೆಂದು ಗೊತ್ತಿಲ್ಲ ಎಂದು ಪ್ರಿಯಾಂಕ್ ಹೇಳಿದ್ದಾರೆ.

ಜಪ್ತಿಯಾದ ಬಿಟ್ ಕಾಯಿನ್ ರಕ್ಷಿಸಲು ಪೊಲೀಸ್ ವಾಲೆಟ್ ಮಾಡಿದ್ದಾರೆ. 45/2020 ಪ್ರಕರಣದಲ್ಲಿ ಬಿಟ್ ಕಾಯಿನ್ ರಕ್ಷಿಸಲು ಸೈಬರ್ ತಜ್ಞರನ್ನು ಕರೆಸುತ್ತಾರೆ. ಬಿಟ್ ಕಾಯಿನ್ ಪೊಲೀಸ್ ವಾಲೆಟ್‌ಗೆ ವರ್ಗಾಯಿಸಬೇಕು. ಹೀಗಾಗಿ ಸೈಬರ್ ತಜ್ಞರನ್ನು ಕರೆಸುತ್ತಾರೆ. ವಾಲೆಟ್‌ಗೆ ಶಿಫ್ಟ್ ಮಾಡುವಾಗ 186 ಬಿಟ್ ಕಾಯಿನ್ ಪತ್ತೆ ಆಗಿತ್ತು. ಶೀಲ್ಡ್ ಕವರ್ ಒಡೆದು ವಾಲೆಟ್‌ಗೆ ಶಿಫ್ಟ್ ವೇಳೆ ಪತ್ತೆ ಆಗಿತ್ತು. ವಾಲೆಟ್‌ಗೆ ವರ್ಗಾವಣೆ ಮಾಡಿರುವುದೆಲ್ಲಾ ವ್ಯರ್ಥ ಆಗಿದೆ. ವರ್ಗಾವಣೆ ವೇಳೆ ಯಾವುದೇ ಐಡಿ ಕ್ರಿಯೇಟ್ ಆಗಿರಲ್ಲ. ವರ್ಗಾವಣೆ ನಡೆಯುತ್ತಿಲ್ಲವೆಂದು ತಜ್ಞರಿಗೇ ಗೊತ್ತಿರುವುದಿಲ್ಲ. ಪಂಚನಾಮೆ ವೇಳೆ ಎಲ್ಲವೂ ನಮಗೆ ಕಾಣಿಸುತ್ತಿತ್ತು. ಅದನ್ನು ವಾಲೆಟ್‌ಗೆ ಕಳಿಸುವ ವೇಳೆ ಕಾಣುತ್ತಿಲ್ಲವೆಂದಿದ್ದಾರೆ. ವರ್ಗಾವಣೆ ಐಡಿಯೇ ಕಾಣ್ತಿಲ್ಲವೆಂದು ಅವರು ಹೇಳುತ್ತಾರೆ. ಉನೊ, ತಜ್ಞರು ಈ ಮಾತು ಹೇಳಿದ್ದಾರೆ. ಉನೊ ಕಂಪನಿಯಿಂದಲೇ ಪೊಲೀಸ್ ವಾಲೆಟ್ ಮಾಡಿಸಿದ್ದರು ಎಂದು ಖರ್ಗೆ ಮಾಹಿತಿ ನೀಡಿದ್ದಾರೆ.

ಸರ್ಕಾರದ ಮುಖ್ಯಸ್ಥರು ಯಾರು? ಈ ಹಿಂದೆ ಗೃಹ ಇಲಾಖೆ ಮುಖ್ಯಸ್ಥರು ಯಾರು? ಪ್ರಿಯಾಂಕ್ ಪ್ರಶ್ನೆ ಸರ್ಕಾರ ನಮ್ಮನ್ನು ಬ್ಲ್ಯಾಕ್​ಮೇಲ್ ಮಾಡುವುದು ಬೇಡ. ನಮ್ಮವರು ಯಾರಾದರೂ ಭಾಗಿಯಾಗಿದ್ದರೆ ಒದ್ದು ಒಳಹಾಕಿ. ಬಿಟ್ ಕಾಯಿನ್ ಪ್ರಕರಣ ಡೈವರ್ಟ್ ಮಾಡಲು ಕಾಂಗ್ರೆಸ್​ ನಾಯಕರು ಇದ್ದಾರೆಂದು ಆರೋಪ ಮಾಡ್ತಿದ್ದಾರೆ. ಏನೇನೋ ಹೇಳಿ ಜನರನ್ನು ಕನ್ಫ್ಯೂಸ್ ಮಾಡುವುದು ಬೇಡ. ಪ್ರಕರಣದಲ್ಲಿ ಯಾರೇ ಇದ್ದರೂ ಮುಲಾಜಿಲ್ಲದೆ ಬಂಧಿಸಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹ ವ್ಯಕ್ತಪಡಿಸಿದ್ದಾರೆ.

ನಿನ್ನೆ ತಾನೆ ದಾಖಲೆಗಳನ್ನ ಕೂಲಂಕುಷವಾಗಿ ನೋಡಿದ್ದೇನೆ. ಸಂಪೂರ್ಣ ಮಾಹಿತಿ ಕಲೆ ಹಾಕುತ್ತೇವೆ. ಅಗತ್ಯ ಬಿದ್ರೆ ನಾವು ಪಿಐಎಲ್ ಹಾಕ್ತಿವಿ. ತಾತ್ವಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗ್ತಿದ್ವಿ. ಇದರಲ್ಲಿ ಸಿಎಂ ಪಾತ್ರ ಏನು ಎಂಬ ಪ್ರಶ್ನೆಗೆ ಖರ್ಗೆ ಉತ್ತರ ಕೊಟ್ಟಿದ್ದಾರೆ. ಸರ್ಕಾರದ ಮುಖ್ಯಸ್ಥರು ಯಾರು? ಈ ಹಿಂದೆ ಗೃಹ ಇಲಾಖೆ ಮುಖ್ಯಸ್ಥರು ಯಾರು? ಸೂಕ್ಷ್ಮವಾಗಿ ನಾನು ಹೇಳ್ತಾ ಇದಿನಿ ಎಂದು ತಿಳಿಸಿದ್ದಾರೆ.

ಹಾಗಾದರೆ ಇವರು ತನಿಖೆ ಮಾಡ್ತಿದ್ದಾರಾ? ರಕ್ಷಿಸುತ್ತಿದ್ದಾರಾ? ನಾನು ಯಾವುದೇ ಸ್ವಂತ ಆರೋಪ ಮಾಡಿಲ್ಲ. ಸರ್ಕಾರಿ ದಾಖಲೆಗಳ ಪ್ರಕಾರ ಹಲವು ಪ್ರಶ್ನೆಗಳನ್ನು ಕೇಳಿದ್ದೇನೆ. ಪೊಲೀಸರ ವಶದಲ್ಲಿದ್ದ ಆರೋಪಿ ಡ್ರಗ್ಸ್ ತೆಗೆದುಕೊಂಡಿದ್ದೇಗೆ? ಶ್ರೀಕೃಷ್ಣ ಅಲಿಯಾಸ್​ ಶ್ರೀಕಿಗೆ ಡ್ರಗ್ಸ್ ಪೂರೈಸಿದ್ದು ಯಾರು? ಬಿಟ್ ಕಾಯಿನ್​ ದಂಧೆ ಬಗ್ಗೆ ತನಿಖೆಯಲ್ಲಿ ನಿರ್ಲಕ್ಷ್ಯವೇಕೆ? ಪಂಚನಾಮೆ ವಿಚಾರದಲ್ಲಿ ಲೈನ್​ಮ್ಯಾನ್​ಗಳನ್ನು ಕರೆಸಿದ್ದೇಕೆ? ಲೈನ್​ಮ್ಯಾನ್​ ಮುಂದೆ ಪಾಸ್​ವರ್ಡ್​ ಚೇಂಜ್​ ಬಗ್ಗೆ ಆರೋಪಿ ಶ್ರೀಕೃಷ್ಣ ಅಲಿಯಾಸ್​ ಶ್ರೀಕಿ ಹೇಳಿಕೆ ನೀಡಿರುತ್ತಾನೆ. ನನ್ನ ಬಳಿಯಿರುವ ಬಿಟ್​ ಕಾಯಿನ್ ಕೊಡುವುದಾಗಿ ಹೇಳ್ತಾನೆ. ಯಾರಿಗೂ ಕೊಡಬೇಡ ನೀನೇ ಸೇಫ್​ ಆಗಿ ಇಟ್ಟಿರು ಅಂತಾರೆ. ಬಿಟ್ ಕಾಯಿನ್​ ಹಸ್ತಾಂತರಿಸಿದರೆ ಬೇಲ್​ ಸಿಗಲ್ಲ ಅಂತಾರೆ. ಕೇಸ್ ಸ್ಟ್ರಾಂಗ್​ ಆದರೆ ನಿನಗೆ ಬೇಲ್​ ಸಿಗುವುದಿಲ್ಲ ಅಂತಾರೆ. ಶ್ರೀಕೃಷ್ಣ ಅಲಿಯಾಸ್​ ಶ್ರೀಕಿಗೆ ವಕೀಲರು ಸಲಹೆ ನೀಡುತ್ತಾರೆ. ಹಾಗಾದರೆ ಇವರು ತನಿಖೆ ಮಾಡ್ತಿದ್ದಾರಾ? ರಕ್ಷಿಸುತ್ತಿದ್ದಾರಾ? ಬಿಟ್​ ಕಾಯಿನ್ ಕೇಸ್​ನಲ್ಲಿ ಆರೋಪಿ ಶ್ರೀಕಿ ರಕ್ಷಿಸುತ್ತಿದ್ದಾರೆ. ರಾಜ್ಯ ಸರ್ಕಾರ ಉದ್ದೇಶ ಜನರಿಗೆ ಮಾಹಿತಿ ನೀಡುವುದಲ್ಲ. ಬದಲಿಗೆ ಬಿಟ್​ ಕಾಯಿನ್ ದಂಧೆ ಕೇಸ್​ ಮುಚ್ಚಿಹಾಕುವುದು ಎಂದು ಕೆಪಿಸಿಸಿ ಕಚೇರಿಯಲ್ಲಿ ಶಾಸಕ ಪ್ರಿಯಾಂಕ್​ ಖರ್ಗೆ ಆರೋಪಿಸಿದ್ದಾರೆ.

ಡಿಜಿಟಲ್​ ಇಂಡಿಯಾ ಅಂದರೆ ಹ್ಯಾಕ್ ಮಾಡುವುದಲ್ಲ ಪ್ರಕರಣದ ತನಿಖೆ ನಡೆಸುತ್ತಿರುವುದು ಸತ್ಯ ಹೊರತರಲಲ್ಲ. ಸತ್ಯಾಂಶ ಮುಚ್ಚಿಹಾಕಲು ರಾಜ್ಯ ಸರ್ಕಾರ ತನಿಖೆ ನಡೆಸುತ್ತಿದೆ. ಪ್ರಕರಣದ ತನಿಖೆ ವಿಳಂಬ ಮಾಡುತ್ತಿರುವುದು ಏಕೆ? ರಾಜ್ಯ ಸರ್ಕಾರದ ತನಿಖೆಯಲ್ಲಿ ಪಾರದರ್ಶಕತೆಯಿಲ್ಲ. ಬಿಟ್ ಕಾಯಿನ್ ದಂಧೆಯಲ್ಲಿ ಎಲ್ಲರೂ ಭಾಗಿಯಾಗಿದ್ದಾರೆ. ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಸುಪ್ರೀಂಕೋರ್ಟ್​ ಮೇಲುಸ್ತುವಾರಿಯಲ್ಲಿ ತನಿಖೆಯಾಗಬೇಕು. ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಡಿಜಿಟಲ್​ ಇಂಡಿಯಾ ಅಂದರೆ ಹ್ಯಾಕ್ ಮಾಡುವುದಲ್ಲ. ಪ್ರಧಾನಿ ಮೋದಿ ಕನಸಿನ ಡಿಜಿಟಲ್ ಇಂಡಿಯಾ ಇದಲ್ಲ. ಬಿಟ್ ಕಾಯಿನ್​ ಹ್ಯಾಕ್ ಮಾಡಿದ್ದು ದೇಶದಲ್ಲೇ ಮೊದಲು. ರಾಜ್ಯದಲ್ಲಿ 3ನೇ ಸಿಎಂ ಬರುವುದು ಹೈಕಮಾಂಡ್​ಗೆ ಬಿಟ್ಟದ್ದು. ಸಿಎಂ ಹುದ್ದೆಯಿಂದ ಕೆಳಗಿಳಿಸುವುದು ಹೈಕಮಾಂಡ್​ಗೆ ಬಿಟ್ಟದ್ದು. ಹಾಗಾಗಿ ಸಿಎಂ ಬೊಮ್ಮಾಯಿ ಅವರಿಗೆ ನಾನು ಎಚ್ಚರಿಸುತ್ತಿದ್ದೇನೆ. ಬಿಟ್ ಕಾಯಿನ್​ ವಿಚಾರದ ಬಗ್ಗೆ ಜನರಿಗೆ ಸ್ಪಷ್ಟ ಮಾಹಿತಿ ನೀಡಿ ಎಂದು ಖರ್ಗೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ವಸೂಲಿ ಕಿಂಗ್, ಬಿಟ್ ಕಾಯಿನ್ ದಂಧೆ ಕುರಿತು ದಾಖಲೆಯಿದ್ದರೆ ಬಹಿರಂಗಪಡಿಸಲಿ; ಸಚಿವ ಈಶ್ವರಪ್ಪ ಸವಾಲ್

ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ: ಇಡಿಗೆ ಕರ್ನಾಟಕ ಸರ್ಕಾರ ಬರೆದಿದ್ದ ಪತ್ರ ಬಹಿರಂಗ

Published On - 2:39 pm, Fri, 12 November 21

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!