AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ಅರಮನೆ ಬಳಿ ಸ್ಫೋಟ ಬೆನ್ನಲ್ಲೇ ಹೀಲಿಯಂ ಬಲೂನ್ ಮಾರಾಟ ನಿಷೇಧ

ವಿಶ್ವವಿಖ್ಯಾತ ಮೈಸೂರು ಅರಮನೆ ಬಳಿ ಸಂಭವಿಸಿದ್ದ ಸ್ಫೋಟ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈ ಸಂಬಂಧ ತನಿಖೆ ನಡೆಸಿದಾಗ ಹೀಲಿಯಂ ಸಿಲಿಂಡರ್ ಸ್ಫೋಟಗೊಂಡಿರುವುದು ಬೆಳಕಿಗೆ ಬಂದಿದ್ದು, ಘಟನೆಯಲ್ಲಿ ಮೂವರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಇದೀಗ ಮೈಸೂರು ಪೊಲೀಸರು ಎಚ್ಚೆತ್ತುಕೊಂಡಿದ್ದು, ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ.

ಮೈಸೂರು ಅರಮನೆ ಬಳಿ ಸ್ಫೋಟ ಬೆನ್ನಲ್ಲೇ ಹೀಲಿಯಂ ಬಲೂನ್ ಮಾರಾಟ ನಿಷೇಧ
Helium Balloons
ರಾಮ್​, ಮೈಸೂರು
| Edited By: |

Updated on:Feb 22, 2026 | 4:20 PM

Share

ಮೈಸೂರು, (ಫೆಬ್ರವರಿ 22): ಸಾರ್ವಜನಿಕರ ಜೀವ–ಆಸ್ತಿಗೆ ಅಪಾಯ ಉಂಟುಮಾಡುವ ಸಾಧ್ಯತೆಗಳನ್ನೆಲ್ಲಾ ಗಂಭೀರವಾಗಿ ಪರಿಗಣಿಸಿ, ಮೈಸೂರು (Mysuru) ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಹೀಲಿಯಂ ಅನಿಲ ಬಳಸಿ ಬಲೂನ್ (helium balloons) ತುಂಬುವುದು, ಮಾರಾಟ ಮಾಡುವುದು, ಸಂಗ್ರಹ–ಸಾಗಣೆ ನಡೆಸುವುದನ್ನು ಮುಂದಿನ ಆದೇಶದವರೆಗೆ ಸಂಪೂರ್ಣ ನಿಷೇಧಿಸಲಾಗಿದೆ. ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರು BNSS-2023 ಸೆಕ್ಷನ್ 152 ಅಡಿಯಲ್ಲಿ  ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದಾರೆ.

ಇನ್ನು ಈ ಬಗ್ಗೆ ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್  ಪ್ರತಿಕ್ರಿಯಿಸಿದ್ದು, ಬಹುತೇಕ ಬಲೂನ್ ಮಾರಾಟಗಾರರು ‘ಹೀಲಿಯಂ’ ಹೆಸರಿನಲ್ಲಿ ಅಪಾಯಕಾರಿ ಅನಿಲ ಬಳಸುತ್ತಾರೆ. ಎಷ್ಟು ಪ್ರಮಾಣದಲ್ಲಿ, ಹೇಗೆ ಬಳಸಬೇಕು ಅನ್ನೋ ತಿಳುವಳಿಕೆ ಅವರಿಗೆ ಇಲ್ಲ. ಅದರಿಂದಲೇ ಜನರಿಗೆ ಅಪಾಯ. ಹೀಗಾಗಿ ಹೀಲಿಯಂ ಬಲೂನ್ ಮಾರಾಟ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮೈಸೂರು ಅರಮನೆ ಮುಂಭಾಗದ ಸ್ಫೋಟಕ್ಕೆ ಅಸಲಿ ಕಾರಣ ಬಹಿರಂಗ

ಆದೇಶದ ಮುಖ್ಯ ಅಂಶಗಳು

  • ಹಬ್ಬ–ಜಾತ್ರೆಗಳು, ಪ್ರವಾಸಿ ಕೇಂದ್ರಗಳು, ಜನಸಂದಣಿ ಪ್ರದೇಶಗಳು, ಸಾರ್ವಜನಿಕ ಸಮಾರಂಭಗಳಲ್ಲಿ ಹೀಲಿಯಂ ಬಳಸಿ ಬಲೂನ್ ತುಂಬುವುದು/ಮಾರಾಟ ಸಂಪೂರ್ಣ ನಿಷೇಧ.
  • ಪ್ರಮಾಣಿತ ಸುರಕ್ಷತಾ ವಿಧಾನಗಳಿಲ್ಲದೆ ಹೀಲಿಯಂ ಸಿಲಿಂಡರ್ ಸಂಗ್ರಹ–ಸಾಗಣೆ–ಬಳಕೆ–ಮಾರಾಟ ಮಾಡಿದರೆ ಕಾನೂನು ಕ್ರಮ.
  • ವೈದ್ಯಕೀಯ ಹಾಗೂ ವೈಜ್ಞಾನಿಕ ಬಳಕೆಗಳಿಗೆ ನಿರ್ಬಂಧ ಇಲ್ಲ.
  • ಸಭೆ–ಸಮಾರಂಭಗಳಲ್ಲಿ ಮುಂಚಿತ ಅನುಮತಿ ಪಡೆದು ಮಾತ್ರ ಹೀಲಿಯಂ ಬಳಕೆ ಸಾಧ್ಯ.
  • ಆದೇಶ ಉಲ್ಲಂಘಿಸಿದರೆ ಪ್ರಕರಣ ದಾಖಲು ಮಾಡಿ ಕಟ್ಟುನಿಟ್ಟಿನ ಕ್ರಮಕ್ಕೆ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚನೆ.

ಏಕೆ ಅಪಾಯಕಾರಿ?

ಹೀಲಿಯಂ ದಹನಶೀಲವಲ್ಲ. ಆದರೆ ಅತ್ಯಧಿಕ ಒತ್ತಡದ ಸಿಲಿಂಡರ್‌ಗಳು, ಕಳಪೆ ವಾಲ್ವ್‌ಗಳು, ಅಪ್ರಮಾಣಿತ ಸಂಗ್ರಹ–ಬಳಕೆ ಸಿಲಿಂಡರ್ ಸ್ಫೋಟಕ್ಕೆ ಕಾರಣವಾಗಬಹುದು. ಜನಸಂದಣಿ ಪ್ರದೇಶಗಳಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದರೆ ಬಹಳ ಜನರಿಗೆ ಜೀವಾಪಾಯವಾಗುತ್ತದೆ.

ಜನರಿಗೆ ಸೂಚನೆ

ಸಾರ್ವಜನಿಕ ಸ್ಥಳಗಳಲ್ಲಿ ಅಪ್ರಮಾಣಿತ ಹೀಲಿಯಂ ಅಥವಾ ಅನಿಲ ಬಳಕೆ ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ. ಆಯೋಜಕರು ಅನುಮತಿ ಸುರಕ್ಷತಾ ಪ್ರಮಾಣಪತ್ರ ಇಲ್ಲದೆ ಹೀಲಿಯಂ ಬಳಕೆ ಮಾಡಿಸಬಾರದು. ಪೋಷಕರು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ‌ ನೀಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

ಘಟನೆ ಹಿನ್ನೆಲೆ

ಡಿಸೆಂಬರ್ 25 2025ರಂದು ಮೈಸೂರು ಅರಮನೆ ಸಮೀಪದ ಜಯಮಾರ್ತಾಂಡ ದ್ವಾರದ ಬಳಿ ರಾಜ್ಯವೇ ಬೆಚ್ಚಿ ಬೀಳಿಸುವ ಘಟನೆ ನಡೆದಿತ್ತು. ಅಷ್ಟೇ ಅಲ್ಲ ದುರ್ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿದ್ದವು. ಅಂದು ಗುರುವಾರ ರಾತ್ರಿ ಬಲೂನ್ ಮಾರಾಟಗಾರ 40 ವರ್ಷದ ಸಲೀಂ ಕೈಯಲ್ಲಿದ್ದ ಹೀಲಿಯಂ ಗ್ಯಾಸ್ ಸಿಲಿಂಡರ್ ಏಕಾಏಕಿ ಸ್ಪೋಟಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದ. ಗಂಭೀರವಾಗಿ ಗಾಯಗೊಂಡಿದ್ದ 42 ವರ್ಷದ ಮಂಜುಳಾ ಹಾಗೂ ಲಕ್ಷ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಈ ಮೂಲಕ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿತ್ತು. ಕೊಟ್ರೇಶ್, ಶಹನಾ ಷಬ್ಬೀರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು‌.

ಘಟನೆ ನಂತರ ಸ್ಪೋಟ ಆಕಸ್ಮಿಕವೇ ಅಥವಾ ಉದ್ದೇಶಿತವೇ ಎಂಬ ಬಗ್ಗೆ ತನಿಖೆ ನಡೆದಿತ್ತು. ಸಾಮಾನ್ಯವಾಗಿ ಮೂವರು ಸೇರಿ ಬಲೂನ್ ಮಾರಾಟಕ್ಕೆ ಬರುತ್ತಿದ್ದರೆ, ಆ ದಿನ ಸಲೀಂ ಒಬ್ಬನೇ ಬಂದಿದ್ದು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿತ್ತು. ಪ್ರಕರಣದ ಗಂಭೀರತೆಯನ್ನು ಗಮನಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ ಮಾಹಿತಿ ಸಂಗ್ರಹಿಸಿತ್ತು. ದೇವರಾಜ ಠಾಣೆ ಪೊಲೀಸರು ಗಾಯಾಳು ಕೊಟ್ರೇಶ್ ನೀಡಿದ ಮಾಹಿತಿ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:15 pm, Sun, 22 February 26