KS Eshwarappa: ಕೆಎಸ್​ ಈಶ್ವರಪ್ಪ ವಿರುದ್ಧ ಮತ್ತೊಂದು ದೂರು ದಾಖಲು

ಸಂಸದ ಡಿಕೆ ಸುರೇಶ್ ಹಾಗೂ ಶಾಸಕ ವಿನಯ ಕುಲಕರ್ಣಿ ಮಾದರಿ ದೇಶದ್ರೋಹಿ ಹೇಳಿಕೆ ನೀಡಿದವರಿಗೆ ಗುಂಡಿಕ್ಕುವ ಕಾನೂನು ತರಬೇಕು ಎಂದು ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಹೇಳಿದ್ದರು. ಬಿಜೆಪಿ ನಾಯಕ ಕೆಎಸ್​ ಈಶ್ವರಪ್ಪ ಹೇಳಿಕೆಗೆ ವಿರೋಧ ವ್ಯಕ್ತವಾಗಿದ್ದು, ಬೆಂಗಳೂರು ಮತ್ತು ದಾವಣಗೆರೆಯಲ್ಲಿ ದೂರು ದಾಖಲಾಗಿವೆ.

KS Eshwarappa: ಕೆಎಸ್​ ಈಶ್ವರಪ್ಪ ವಿರುದ್ಧ ಮತ್ತೊಂದು ದೂರು ದಾಖಲು
ಕೆಎಸ್​ ಈಶ್ವರಪ್ಪ ವಿರುದ್ಧ ಕಾಂಗ್ರೆಸ್​ ದೂರು
Follow us
| Updated By: ವಿವೇಕ ಬಿರಾದಾರ

Updated on: Feb 10, 2024 | 9:57 AM

ಬೆಂಗಳೂರು, ಫೆಬ್ರವರಿ 10: ಸಂಸದ ಡಿ.ಕೆ.ಸುರೇಶ್ (DK Suresh)​ ಮತ್ತು ವಿನಯ್​ ಕುಲಕರ್ಣಿ (Vinay Kulkarni) ಅವರಿಗೆ ಗುಂಡಿಕ್ಕಿ ಕೊಲ್ಲಬೇಕೆಂದು ಹೇಳಿಕೆ ನೀಡಿದ್ದ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ (KS Eshwarappa) ವಿರುದ್ಧ ಆರ್‌ಆರ್ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಶಶಾಂಕ್ ಹಾಗೂ ಸಂಜಯ್ ಅವರು ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭಯೋತ್ಪಾದನೆ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವಂತೆ ಆಗ್ರಹಿಸಿದರು. ಕೆಎಸ್​ ಈಶ್ವರಪ್ಪ ಅವರ ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ (ಫೆ.09) ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು.

ನೋಟಿಸ್​ ಜಾರಿ ಮಾಡಿದ ಪೊಲೀಸರು

ಇದೀಗ ದಾವಣಗೆರೆ ಪೊಲೀಸರು ಕೆಎಸ್​ ಈಶ್ವರಪ್ಪ ಅವರಿಗೆ ನೋಟಿಸ್​ ಜಾರಿ ಮಾಡಿದ್ದಾರೆ. ಅಲ್ಲದೆ ಶಿವಮೊಗ್ಗದ ಮಲ್ಲೇಶ್ವರ ಬಡಾವಣೆಯಲ್ಲಿರುವ ಕೆಎಸ್​ ಈಶ್ವರಪ್ಪ ಅವರ ನಿವಾಸಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.

ಬೆಂಗಳೂರು ಮನೆಗೆ ಮುತ್ತಿಗೆ

ಇನ್ನು ಬೆಂಗಳೂರಿನ ಚಕ್ರವರ್ತಿ ಬಡಾವಣೆಯಲ್ಲಿರುವ ಕೆ.ಎಸ್​.ಈಶ್ವರಪ್ಪ ಅವರ ನಿವಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ತಡೆದು ವಶಕ್ಕೆ ಪಡೆದರು. ಇದೀಗ ಕೆಎಸ್​ ಈಶ್ವರಪ್ಪ ನಿವಾಸಕ್ಕೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಪೊಲೀಸ್ ಭದ್ರತೆ

ಇದನ್ನೂ ಓದಿ: ಡಿಕೆ ಸುರೇಶ್​ಗೆ ಗುಂಡಿಕ್ಕಬೇಕು: ಈಶ್ವರಪ್ಪ ಹೇಳಿಕೆಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಎಚ್​ಕೆ ಪಾಟೀಲ್

ಈಶ್ವರಪ್ಪ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇವೆ: ಜಿ.ಪರಮೇಶ್ವರ್

ಕೆ.ಎಸ್​.ಈಶ್ವರಪ್ಪ ಹೇಳಿಕೆ ವಿಚಾರವಾಗಿ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್​, ಗುಂಡಿಕ್ಕಿ ಕೊಲ್ಲಬೇಕೆಂದು ಹೇಳಿಕೆ ನೀಡಿದ್ದ ಈಶ್ವರಪ್ಪ ವಿರುದ್ಧ ಎಫ್​ಐಆರ್​ ಆಗಿದೆ. ಮಾಜಿ ಶಾಸಕ ಈಶ್ವರಪ್ಪ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇವೆ. ಕಾನೂನು ಮೀರಿ ಯಾರು ಕೂಡ ವರ್ತಿಸಬಾರದು ಎಂದು ಕಿಡಿಕಾರಿದ್ದರು.

ರಾಷ್ಟ್ರ ದ್ರೋಹಿಗಳ ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು

ಫೆಬ್ರವರಿ 08 ರಂದು ದಾವಣಗೆರೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭ ನಡೆದಿದೆ. ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ಕೆಎಸ್​ ಈಶ್ವರಪ್ಪ “ಸಂಸದ ಡಿಕೆ ಸುರೇಶ್ ಹಾಗೂ ಶಾಸಕ ವಿನಯ ಕುಲಕರ್ಣಿ ಮಾದರಿ ದೇಶದ್ರೋಹಿ ಹೇಳಿಕೆ ನೀಡಿದವರಿಗೆ ಗುಂಡಿಕ್ಕುವ ಕಾನೂನು ತನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಗ್ರಹಿಸಿದ್ದರು. ನಾವು ಹೀಗೆ ಬಿಡಲ್ಲ. ನಾವು ಬಿಜೆಪಿಯವರು ಪಾಕಿಸ್ತಾನವನ್ನ ಭಾರತದಲ್ಲಿ ಸೇರ್ಪಡೆ ಮಾಡಿ ಅಖಂಡ ಭಾರತ ಮಾಡುತ್ತೇವೆ ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ