ಕೊರೊನಾ ರೂಪಾಂತರಿ ಒಮಿಕ್ರಾನ್ ಆತಂಕ; ಕೆಂಪೇಗೌಡ ಅಂತರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಹೈ ಅಲರ್ಟ್
ಕೊರೊನಾ ಲಕ್ಷಣಗಳು ಕಂಡು ಬಂದಲ್ಲಿ ಟೆಸ್ಟಿಂಗ್ ಮಾಡಿ ರಿಪೋರ್ಟ್ ಬಂದ ನಂತರವೇ ಅವರನ್ನು ಸಿಬ್ಬಂದಿಗಳು ಮನೆಗೆ ಕಳುಹಿಸುತ್ತಿದ್ದಾರೆ. ಈಗಾಗಲೇ ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಲು ಮೂರು ಪಾಳಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದೆ.

ಬೆಂಗಳೂರು: ದೇಶದಲ್ಲೆಡೆ ಕೊರೊನಾ ರೂಪಾಂತರಿ ಒಮಿಕ್ರಾನ್ (omicron) ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಹೀಗಾಗಿ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹೊಸ ರೂಪಾಂತರಿ ಕೊರೊನಾ ಹರಡದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ. 10 ಹೈರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಬೇರೆ ದೇಶಗಳಿಂದ ಬರುವ ಪ್ರಯಾಣಿಕರ 48 ಗಂಟೆಗಳ ಒಳಗಿನ ನೆಗಟಿವ್ ರಿಪೋರ್ಟ್ ಮತ್ತು ವಿಮಾನ ನಿಲ್ದಾಣದಲ್ಲೇ ಸ್ಕ್ರೀನಿಂಗ್ ಮಾಡಿ, ವಿಳಾಸ, ಪೋನ್ ನಂಬರ್ ಪಡೆದು ಸಿಬ್ಬಂದಿಗಳು ಕಳುಹಿಸುತ್ತಿದ್ದಾರೆ.
ಕೊರೊನಾ ಲಕ್ಷಣಗಳು ಕಂಡು ಬಂದಲ್ಲಿ ಟೆಸ್ಟಿಂಗ್ ಮಾಡಿ ರಿಪೋರ್ಟ್ ಬಂದ ನಂತರವೇ ಅವರನ್ನು ಸಿಬ್ಬಂದಿಗಳು ಮನೆಗೆ ಕಳುಹಿಸುತ್ತಿದ್ದಾರೆ. ಈಗಾಗಲೇ ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಲು ಮೂರು ಪಾಳಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದೆ.
ಕಲಬುರಗಿ: ಜಿಲ್ಲೆಯ ಗಡಿಯಲ್ಲಿ ಹೈ ಅಲರ್ಟ್ ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ಪತ್ತೆ ಹಿನ್ನಲೆ ಕಲಬುರಗಿ ಜಿಲ್ಲೆಯ ಗಡಿಯಲ್ಲಿ ಹೈ ಅಲರ್ಟ್ ಮಾಡಲಾಗಿದೆ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವುದರಿಂದ ಈ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಜಿಲ್ಲೆಯ ಆಳಂದ ತಾಲೂಕಿನ ಹಿರೋಳ್ಳಿ ಚಕ್ ಪೋಸ್ಟ್ನಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಪೋಲಿಸರು ಮಹಾರಾಷ್ಟ್ರದಿಂದ ಬರುವ ವಾಹನಗಳ ತಪಾಸಣೆ ಮಾಡುತ್ತಿದ್ದಾರೆ. ಜಿಲ್ಲೆಯ ಹಿರೋಳ್ಳಿ, ಖಜೂರಿ, ಬಳ್ಳೂರಗಿ, ಚಕ್ ಪೋಸ್ಟ್ಗಳಲ್ಲಿ ವಾಹನ ತಪಾಸಣೆ ನಡೆಸಲಾಗುತ್ತಿದೆ. ಆರ್ಟಿಪಿಸಿಆರ್ ನೆಗಟಿವ್ ರಿಪೋರ್ಟ್ ನೋಡಿ ಸಿಬ್ಬಂದಿಗಳು ಗಡಿಯೊಳಗೆ ಬಿಡುತ್ತಿದ್ದಾರೆ.
ವಿದೇಶದಿಂದ ಬರುವ ಪ್ರಯಾಣಿಕರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಹೊಸ ರೂಪಾಂತರಿ ಕೊರೊನಾ ಭೀತಿ ಹಿನ್ನೆಲೆ, ವಿದೇಶದಿಂದ ಬರುವ ಪ್ರಯಾಣಿಕರಿಗಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಕೊವಿಡ್ ರಿಪೋರ್ಟ್ ಬರುವವರೆಗೂ ಕೂರಲು ಆಸನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಡಾಟಾ ಎಂಟ್ರಿ ಮತ್ತು ರಿಪೋರ್ಟ್ಗಾಗಿ ಕಾಯುವ ಪ್ರಯಾಣಿಕರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಕೆಲ ಪ್ರಯಾಣಿಕರು ನೆಗಟಿವ್ ರಿಪೋರ್ಟ್ ಇಲ್ಲದೆ ಬರುವ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಪ್ರತ್ಯೇಕ ಆಸನದ ವೈಟಿಂಗ್ ಹಾಲ್ ಮಾಡಲಾಗಿದೆ.
ಈಗಾಗಲೇ ದುಬೈ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ಸೇರಿದಂತೆ ಸಾಕಷ್ಟು ಕಡೆಯಿಂದ ಪ್ರಯಾಣಿಕರು ಬರುತ್ತಿದ್ದಾರೆ. ಸರ್ಕಾರದ ಆದೇಶದಂತೆ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಇಂದು ಸರ್ಕಾರದ ಹೊಸ ಗೈಡ್ ಲೈನ್ಸ್ ಬಂದಲ್ಲಿ ಮತ್ತಷ್ಟು ನಿಗಾ ಹೆಚ್ಚಲಿದೆ. ಬೆಂಗಳೂರು ಗ್ರಾಮಾಂತರ ಡಿಸಿ ಶ್ರೀನಿವಾಸ್ ನೇತೃತ್ವದಲ್ಲಿ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಗಾ ವಹಿಸಲಾಗಿದೆ.
ಇದನ್ನೂ ಓದಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚಿದ ಆತಂಕ; ಬೀದಿ ನಾಯಿಗಳ ಕಾಟಕ್ಕೆ ತತ್ತರಿಸಿದ ಪ್ರಯಾಣಿಕರು
Published On - 7:35 am, Sun, 28 November 21