Cyclone Mandous: ಮಾಂಡೌಸ್​ ಚಂಡಮಾರುತದ ಪರಿಣಾಮ; ಡಿ. 13ರವರೆಗೆ ಬೆಂಗಳೂರಿನಲ್ಲಿ ಭಾರೀ ಮಳೆ ಸಾಧ್ಯತೆ

| Updated By: ಸುಷ್ಮಾ ಚಕ್ರೆ

Updated on: Dec 09, 2022 | 5:20 PM

Bengaluru Rains: ತಮಿಳುನಾಡು, ಪುದುಚೆರಿ, ಆಂಧ್ರದ ಕರಾವಳಿಯಲ್ಲಿ ಮಾಂಡೌಸ್​ ಚಂಡಮಾರುತದ ಅಬ್ಬರದ ಹಿನ್ನೆಲೆಯಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ 5 ದಿನ ಹಳದಿ ಅಲರ್ಟ್​ ಘೋಷಿಸಲಾಗಿದೆ.

Cyclone Mandous: ಮಾಂಡೌಸ್​ ಚಂಡಮಾರುತದ ಪರಿಣಾಮ; ಡಿ. 13ರವರೆಗೆ ಬೆಂಗಳೂರಿನಲ್ಲಿ ಭಾರೀ ಮಳೆ ಸಾಧ್ಯತೆ
ಮಾಂಡೌಸ್ ಚಂಡಮಾರುತ
Follow us on

Karnataka Rain: ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ವಾಯಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಇಂದಿನಿಂದ 5 ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ. ಮಾಂಡೌಸ್ ಚಂಡಮಾರುತದ (Cyclone Mandous) ಪರಿಣಾಮದಿಂದ ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಮಳೆಯ (Tamil Nadu Rain) ಅಬ್ಬರ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಬೆಂಗಳೂರಿನಲ್ಲೂ (Bengaluru Rains) ಇಂದಿನಿಂದ ಡಿ. 13ರವರೆಗೆ ಮಳೆ ಸುರಿಯಲಿದೆ. ಹವಾಮಾನ ಇಲಾಖೆ ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಕೊಡಗು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಡಿಸೆಂಬರ್ 13ರವರೆಗೆ ಹಳದಿ ಅಲರ್ಟ್ (Yellow Alert) ಘೋಷಿಸಿದೆ.

ತಮಿಳುನಾಡು, ಪುದುಚೆರಿ, ಆಂಧ್ರದ ಕರಾವಳಿಯಲ್ಲಿ ಮಾಂಡೌಸ್​ ಚಂಡಮಾರುತದ ಅಬ್ಬರದ ಹಿನ್ನೆಲೆಯಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ 5 ದಿನ ಹಳದಿ ಅಲರ್ಟ್​ ಘೋಷಿಸಲಾಗಿದೆ. ಮುಂದಿನ 24 ಗಂಟೆ ಕಾಲ ಹಲವೆಡೆ ಹಗುರ ಮಳೆಯಾಗುವ ಸಾಧ್ಯತೆಯಿದೆ. ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವಣವಿದ್ದು ಮಳೆಯಾಗುವ ಸಾಧ್ಯತೆಯಿದೆ. ಇಂದು ರಾತ್ರಿಯಿಂದ ನಾಳೆಯವರೆಗೆ ನಿರಂತರ ಗಾಳಿ ಬೀಸಲಿದೆ. 65-75 ಕಿ.ಮೀ. ವೇಗದಲ್ಲಿ ನಿರಂತರ ಗಾಳಿಯ ವಾತಾವರಣ ಇರಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 26ರಿಂದ ಕನಿಷ್ಠ 18 ಡಿಗ್ರಿ ಸೆ. ತಲುಪುವ ಸಾಧ್ಯತೆಯಿದೆ ಎಂದುರಾಜ್ಯ ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಿದೆ.

ಮಾಂಡೌಸ್ ಚಂಡಮಾರುತದ ಪರಿಣಾಮದಿಂದ ಬೆಂಗಳೂರಿನ ತಾಪಮಾನ ಮತ್ತು ಗಾಳಿಯ ಗುಣಮಟ್ಟದ ಮೇಲೂ ಪರಿಣಾಮ ಉಂಟಾಗಲಿದೆ ಎಂದು ಹವಾಮಾನ ಇಲಾಖೆಯ (IMD) ಬೆಂಗಳೂರು ವಿಭಾಗದ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ. ನೈಋತ್ಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪ್ರಭಾವದಿಂದಾಗಿ ಇಂದಿನಿಂದ ಡಿಸೆಂಬರ್ 13ರವರೆಗೆ ಬೆಂಗಳೂರಿನಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

ಇದನ್ನೂ ಓದಿ: Bengaluru Weather Today: ಮ್ಯಾಂಡಸ್ ಚಂಡಮಾರುತದ ಎಫೆಕ್ಟ್​; ಬೆಂಗಳೂರಿನಲ್ಲಿ ಇಂದಿನಿಂದ 4 ದಿನ ಮಳೆ ಸಾಧ್ಯತೆ

ತಮಿಳುನಾಡಿನ ಉತ್ತರ ಕರಾವಳಿ, ಪುದುಚೇರಿಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಆಂಧ್ರಪ್ರದೇಶದ ದಕ್ಷಿಣ ಕರಾವಳಿ, ತಮಿಳುನಾಡಿನ ಉತ್ತರ ಒಳನಾಡು ಮತ್ತು ರಾಯಲಸೀಮಾದಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು IMD ಮುನ್ಸೂಚನೆ ತಿಳಿಸಿದೆ. ಮಾಂಡೌಸ್ ಚಂಡಮಾರುತ ಕಳೆದ 6 ಗಂಟೆಗಳಲ್ಲಿ 11 ಕಿಮೀ ವೇಗದಲ್ಲಿ ಸುಮಾರು ಪಶ್ಚಿಮ ವಾಯುವ್ಯಕ್ಕೆ ಚಲಿಸಿದೆ. ಶ್ರೀಹರಿಕೋಟಾದಲ್ಲಿ ಈ ಚಂಡಮಾರುತ ಇಂದು ಮಧ್ಯರಾತ್ರಿ ಗಂಟೆಗೆ 65-75 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ.

ಈ ಕಾರಣದಿಂದಾಗಿ, ಬೆಂಗಳೂರಿನಲ್ಲಿ ಭಾನುವಾರದವರೆಗೆ ಮೋಡ ಕವಿದ ವಾತಾವರಣವನ್ನು ನಿರೀಕ್ಷಿಸಲಾಗಿದೆ. ಈಶಾನ್ಯ ಮಾನ್ಸೂನ್ ಇನ್ನೂ ಮುಗಿಯದ ಕಾರಣ ಮುಂದಿನ 5 ದಿನಗಳ ಕಾಲ ಬೆಂಗಳೂರಿನಲ್ಲೂ ಮಳೆ ಬೀಳಬಹುದು ಎಂದು ಪ್ರಕಟಣೆ ತಿಳಿಸಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಇಂದಿನಿಂದ ಮಳೆಯಾಗುವ ನಿರೀಕ್ಷೆಯಿದೆ.

ಮಾಂಡೌಸ್ ಚಂಡಮಾರುತದ ಹಿನ್ನೆಲೆಯಲ್ಲಿ ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಗೆ ‘ಹಳದಿ’ ಅಲರ್ಟ್ ನೀಡಲಾಗಿದೆ. ಬೆಂಗಳೂರು ಹಾಗೂ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಡಿಸೆಂಬರ್ 12ರವರೆಗೆ ವಾರಾಂತ್ಯದಲ್ಲಿ ಗುಡುಗು ಮತ್ತು ಬಿರುಗಾಳಿಯೊಂದಿಗೆ ಮಳೆಯಾಗುವ ನಿರೀಕ್ಷೆಯಿದೆ. ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಡಿಸೆಂಬರ್ 11 ಮತ್ತು 12ರಂದು ಗುಡುಗು ಮತ್ತು ಮಿಂಚು ಸಹಿತ ಮಳೆ ಸುರಿಯಲಿದೆ.

ಇದನ್ನೂ ಓದಿ: Cyclone Names: ಇಂದು ರಾತ್ರಿ ತಮಿಳುನಾಡಿಗೆ ಅಪ್ಪಳಿಸಲಿದೆ ಮಾಂಡೌಸ್ ಚಂಡಮಾರುತ; ಈ ಸೈಕ್ಲೋನ್​ ಅರ್ಥ ಹೀಗಿದೆ

ಬೆಂಗಳೂರು ಹೊರತುಪಡಿಸಿ, ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಚಿಕ್ಕಮಗಳೂರು, ಕೋಲಾರ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಕೂಡ ಮಳೆಯಾಗಲಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಮಳೆಯಾಗಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ