
ಬೆಂಗಳೂರು, ಮೇ 09: ಇತ್ತೀಚೆಗೆ ನಗರದಲ್ಲಿ ಸುರಿದ ಮಳೆಗೆ ಬೋರಿಂಗ್ ಆಸ್ಪತ್ರೆಯ ಗೋಡೆ ಕುಸಿದು 8 ಮಂದಿ ಮೃತಪಟ್ಟಿದ್ದರು. ಘಟನೆಯ ಬಳಿಕ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಧಿಕಾರಿಗಳು ಕಾಟಾಚಾರಕ್ಕೆ ಸಮೀಕ್ಷೆ ನಡೆಸಿ ಗೋಡೆಗಳ ಪರಿಶೀಲನೆ ಮಾಡಿದ್ದರು. ಆದರೆ ಕೆಲವು ಗೋಡೆಗಳು ಕುಸಿಯುವ ಹಂತದಲ್ಲಿದ್ದರೂ ಅಧಿಕಾರಿಗಳು ಅತ್ತ ಕಡೆ ಗಮನ ಹರಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ನಗರದಲ್ಲಿ ಗೋಡೆಗಳು ಬಲಿಗಾಗಿ ಕಾದುಕುಳಿತಿವೆ. ಯಾವುದೇ ಕ್ಷಣದಲ್ಲಾದರೂ ಕುಸಿಯುವ ಸ್ಥಿತಿಯಲ್ಲಿವೆ. ಗೋಡೆಗಳು, ಕಾಂಪೌಂಡ್ಗಳು ಬಿರುಕು ಬಿಟ್ಟಿದ್ದರೂ ಜಿಬಿಎ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಆಸ್ಪತ್ರೆ, ಕಾಲೇಜು, ಶಾಲೆಗಳ ಕಾಂಪೌಂಡ್ ಗೋಡೆಗಳು ಬಿರುಕು ಬಿಟ್ಟಿದ್ದರೂ ಯಾವುದೇ ಅಧಿಕಾರಿಗಳು ಪರಿಶೀಲಿಸುತ್ತಿಲ್ಲ. ಇದಕ್ಕೆ ಉದಾಹರಣೆಯೆಂದರೆ ಬೆಂಗಳೂರಿನ ಕಿಮ್ಸ್ ಆಸ್ಪತ್ರೆ ಬಳಿ ಇರುವ ಕಾಲೇಜಿನ ಕಾಂಪೌಂಡ್. ಗೋಡೆ ನಿರ್ಮಿಸಿ ಹಲವು ವರ್ಷಗಳೇ ಕಳೆದಿದ್ದು, ಸದ್ಯ ಕುಸಿಯುವ ಹಂತದಲ್ಲಿದೆ. ಆದರೂ ಸಂಬಂಧಪಟ್ಟವರು ಗೋಡೆಯ ಕಡೆ ತಿರುಗಿಯೂ ನೋಡುತ್ತಿಲ್ಲ.
ಇದನ್ನೂ ಓದಿ: ಆಟವಾಡುತ್ತಿದ್ದ ಮಕ್ಕಳ ಮೇಲೆ ಗೇಟ್ ಬಿದ್ದು ದುರಂತ: ಐದು ವರ್ಷದ ಮಗು ಸಾವು
ದುರ್ಘಟನೆ ಸಂಭವಿಸಿ ಪರಿಹಾರ ನೀಡುವುದಕ್ಕಿಂತ ಮೊದಲೇ ಎಚ್ಚೆತ್ತುಕೊಂಡು ಈ ರೀತಿಯ ಅಪಾಯಕಾರಿ ಗೋಡೆಗಳನ್ನು ಮೊದಲು ತೆರವು ಮಾಡಬೇಕಿದೆ. ಜಿಬಿಎ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಈ ರೀತಿ ಗೋಡೆಗಳು ಬಿರುಕು ಬಿಟ್ಟ ಸ್ಥಿತಿಯಲ್ಲಿದ್ದರು ಕೂಡ ಒಬ್ಬ ಅಧಿಕಾರಿಗಳು ಈ ಕಡೆ ಗಮನ ಹರಿಸುತ್ತಿಲ್ಲ.
ಇನ್ನು ಗೋಡೆಯ ಪಕ್ಕದಲ್ಲೇ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದಾರೆ. ಪಾದಚಾರಿ ಮಾರ್ಗದಲ್ಲಿ ಜನರು ಓಡಾಡುತ್ತಿದ್ದಾರೆ. ಮಳೆ ಬಂದರೆ ಸಾಕು ಈ ಗೋಡೆಗಳು ಕುಸಿದು ಬೀಳುವ ಆತಂಕವಿದೆ. ಹಾಗಾಗಿ ಅನಾಹುತ ಸಂಭವಿಸುವ ಮೊದಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಹೊಸ ಮನೆ ಕಟ್ಟುವ ಆಸೆ ಮಣ್ಣುಪಾಲು; ಗೋಡೆ ಕುಸಿದು ಮಾಲೀಕ ಸ್ಥಳದಲ್ಲೇ ಸಾವು!
ಒಟ್ಟಾರೆ ಅಧಿಕಾರಿಗಳು ಕೂಡಲೇ ಈ ರೀತಿಯ ಅಪಾಯಕಾರಿ ಗೋಡೆಗಳನ್ನು ಪರಿಶೀಲಿಸಿ ತೆರವುಗೊಳಿಸಿ, ಹೊಸ ಗೋಡೆಗಳನ್ನು ನಿರ್ಮಿಸುವ ಮೂಲಕ ಮುಂದಾಗಬಹುದಾದ ದುರ್ಘಟನೆಗಳನ್ನು ತಪ್ಪಿಸಬೇಕಿದೆ.
ವರದಿ: ನಟರಾಜ್ ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:17 pm, Sat, 9 May 26