ಗಂಡಸ್ತನ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಹೆಚ್ಡಿ ಕುಮಾರಸ್ವಾಮಿ; ನನ್ನ ಪದ ಬಳಕೆ ನೋವು ತಂದಿದ್ರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು

ಮಾತನಾಡುವ ಭರದಲ್ಲಿ ಗಂಡಸ್ತನದ ಕುರಿತು ಹೇಳಿದ್ದೇನೆ. ಕೂಡಲೇ ಅದನ್ನ ಸರಿ ಮಾಡಿಕೊಂಡಿದ್ದೇನೆ. ನನ್ನ ಪದ ಬಳಕೆ ನೋವು ತಂದಿದ್ರೆ ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

ಗಂಡಸ್ತನ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಹೆಚ್ಡಿ ಕುಮಾರಸ್ವಾಮಿ; ನನ್ನ ಪದ ಬಳಕೆ ನೋವು ತಂದಿದ್ರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು
ಹೆಚ್​ಡಿ ಕುಮಾರಸ್ವಾಮಿ
Edited By: ಆಯೇಷಾ ಬಾನು

Updated on: Mar 31, 2022 | 3:54 PM

ಹಿಜಾಬ್(Hijab) ವಿವಾದ ಶುರುವಾದಾಗಿನಿಂದ ರಾಜ್ಯದಲ್ಲಿ ಒಂದಲ್ಲಾ ಒಂದು ಸರಣಿ ವಿವಾದಗಳು ಹುಟ್ಟುತ್ತಲೇ ಇವೆ. ಸರಣಿ ವಿವಾದಗಳಿಂದ ರಾಜ್ಯದಲ್ಲಿ ಹಿಂದೂ, ಮುಸ್ಲಿಂ(Hindu-Muslim) ಸಮುದಾಯದ ಮಧ್ಯೆ ಬಿರುಕು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ(HD Kumaraswamy), ಗಂಡಸ್ತನ ಇದ್ರೆ ಎಲ್ಲವನ್ನೂ ನಿಲ್ಲಿಸಿ. ವಿಹೆಚ್‌ಪಿ, ಬಜರಂಗದಳದವರು ಸಮಾಜ ಘಾತುಕರು, ಪೋಲಿಗಳು. ಕಾಂಗ್ರೆಸ್ನವರಿಗೆ ತಾಕತ್ತಿಲ್ಲ ಎಂದು ಸಿಎಂ ಬೊಮ್ಮಾಯಿಗೆ(Basavaraj Bommai) ಗಂಡಸ್ತನ ಇದ್ರೆ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದ್ದರು. ಈ ಹೇಳಿಕೆಯ ಬಳಿಕ ಬಿಜೆಪಿ ಮುಖಂಡರು ಹೆಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದ್ರೆ ಈಗ ಹೆಚ್ಡಿ ಕುಮಾರಸ್ವಾಮಿ ಗಂಡಸ್ತನ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಮಾತನಾಡುವ ಭರದಲ್ಲಿ ಗಂಡಸ್ತನದ ಕುರಿತು ಹೇಳಿದ್ದೇನೆ. ಕೂಡಲೇ ಅದನ್ನ ಸರಿ ಮಾಡಿಕೊಂಡಿದ್ದೇನೆ. ನನ್ನ ಪದ ಬಳಕೆ ನೋವು ತಂದಿದ್ರೆ ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ. ಈದ್ಗಾ ಮೈದಾನದಲ್ಲಿ ಅಮಾಯಕ ಮಕ್ಕಳ ಬಲಿದಾನ. ಇದನ್ನು ನೋಡಿದ ಮೇಲೆ ನನಗೆ ರೋಷ ಉಕ್ಕಿ ಬಂತು. ಆವೇಶದಲ್ಲಿ ನಾನು ಗಂಡಸ್ತನ ಎಂದು ಮಾತನಾಡಿದ್ದೇನೆ. ನನ್ನ ಪದ ಬಳಕೆ ನೋವು ತಂದಿದ್ರೆ ವಿಷಾದ ವ್ಯಕ್ತಪಡಿಸ್ತೇನೆ. ಆಗಲೇ ಪದ ಬಳಕೆ ಬಗ್ಗೆ ಅನ್ಯಥಾ ಭಾವಿಸಬೇಡಿ ಅಂದಿದ್ದೇನೆ ಎಂದು ಗಂಡಸ್ತನ ಹೇಳಿಕೆಗೆ ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿರುವ ಕುಮಾರಸ್ವಾಮಿ, ಕುವೆಂಪು ಕೊಟ್ಟ ಸಂದೇಶ ಬಿಜೆಪಿ, ಭಜರಂಗದಳದವರು ಧೂಳಿಪಟ ಮಾಡಲು ಹೋಗ್ತಿದ್ದೀರಾ. ವಿಗ್ರಹ ಮುಸ್ಲಿಮರು ಕೆತ್ತಿದ್ದಾರೆ ಅದನ್ನ ವಿ.ಎಚ್.ಪಿ ಅವ್ರು ಏನ್ ಮಾಡ್ತೀರಾ. ಹಾಲಾಲ್ ಮಾಡಿದ್ದು ನಾವು ಇಷ್ಟು ವರ್ಷ ತಿಂದಿದ್ದೇವೆ‌ ಏನ್ ಮಾಡೋಣ ಹೇಳಿ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮೋದಿ ಕೈಕೆಳಗೆ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡೋ ಮಹಿಳೆಯೊಬ್ಬರು ಚುನಾವಣೆ ಉಸ್ತುವಾರಿಗೆ ಬಂದವರು ಮೀಟ್ ಮಾಂಸ ಕೇಳಿದ್ರು ಅಂತ ಹೇಳಿದ್ದಾರೆ. ಇವ್ರು ಗೋ ಹತ್ಯೆ ಇದು ಅಂತ ಮಾತಾಡ್ತಾರೆ. ಯಾರ ಬಳಿ ಇವೆಲ್ಲ ಹೇಳ್ತೀರಾ. ಹೀಗಾಗಿ ನಾನು ಹೋರಾಟ ಮಾಡೋಕೆ ನಿರ್ಧಾರ ಮಾಡಿದ್ದೇನೆ ಎಂದರು.

ರಾಜ್ಯ ಸರ್ಕಾರಕ್ಕೆ ಒಂದು ತಿಂಗಳ ಸಮಯ ನೀಡುತ್ತೇನೆ, ವಿವಾದ ಬಗೆಹರಿಸಿ
ಇವತ್ತು ಹಲಾಲ್ ತಂದಿದ್ದೀರಿ, ನಾಳೆ ಏನು ತರುತ್ತೀರೋ? ಕರ್ನಾಟಕವನ್ನು ಉತ್ತರ ಭಾರತ ಮಾಡಲು ಹೊರಟಿದ್ದೀರಿ. ನೀವು ಮಹಾತ್ಮ ಗಾಂಧಿಯನ್ನು ವಿರೋಧ ಮಾಡಿದವರು. ನೀವು ಅಧಿಕಾರಕ್ಕೆ ಬಂದಿದ್ದು ಹೇಗೆಂದು ಹೆಚ್‌ಡಿಕೆ ಪ್ರಶ್ನೆ ಮಾಡಿದ್ದಾರೆ. ವೀರ ಸಾವರ್ಕರ್ ಬಗ್ಗೆ ಮಾತಾಡಿದರೆ ವಿವಾದ ಆಗುತ್ತೆ‌. ವೈಯಕ್ತಿಕವಾಗಿ ನನ್ನ ವಾಟ್ಸಾಪ್‌ನಲ್ಲಿ ವೈರಲ್ ಮಾಡ್ತಾರೆ. ಸಾವರ್ಕರ್ ಬಗ್ಗೆ ಒಂದು ಪುಸ್ತಕದಲ್ಲಿ ಬರೆದಿದ್ದಾರೆ. ಸಿಎಎ ಗಲಾಟೆಯಲ್ಲಿ ಹುಡುಕಿ ಹುಡುಕಿ ಬೆಂಕಿ ಹಾಕ್ತೀರಾ. 53 ಜನ ಮಹಿಳೆಯರ ಹತ್ಯೆ ಆಯ್ತು, ಏನ್ ಮಾಡಿದ್ರಿ. ನಾನು ಮಾತಾಡಿದೆ ಅಂತಾ ಏನು ಬೇಕಾದರೂ ಮಾಡಲಿ. IT, ED ಇಟ್ಟುಕೊಂಡು ಏನು ಬೇಕಾದರೂ ಮಾಡಲಿ. ಈ ವಿಚಾರದಲ್ಲಿ ನಾನು ಹುಚ್ಚನಾಗಿದ್ದೇನೆ, ಎಲ್ಲದ್ದಕ್ಕೂ ಸಿದ್ಧ ಎಂದು ಬಿಜೆಪಿ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಒಂದು ತಿಂಗಳ ಸಮಯ ನೀಡುತ್ತೇನೆ. ಈಗ ನಡೆಯುತ್ತಿರುವ ಎಲ್ಲಾ ವಿವಾದಗಳನ್ನು ಬಗೆಹರಿಸಿ. ನಿಮ್ಮ ಹಿಡನ್ ಅಜೆಂಡಾ ಬಿಟ್ಟು ವಿವಾದಗಳನ್ನು ಸರಿಪಡಿಸಿ. ಸರ್ವ ಜನಾಂಗದ ಶಾಂತಿಯ ತೋಟವನ್ನು ಉಳಿಸಿ ಎಂದು ಸರ್ಕಾರಕ್ಕೆ ಕುಮಾರಸ್ವಾಮಿ 1 ತಿಂಗಳು ಗಡುವು ನೀಡಿದ್ದಾರೆ.

ಸರ್ಕಾರಕ್ಕೆ ಪಾದಯಾತ್ರೆ ಎಚ್ಚರಿಕೆ ನೀಡಿದ ಕುಮಾರಸ್ವಾಮಿ
ಸಮಾಜ ಒಡೆಯುವ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳಿ. 1 ತಿಂಗಳಲ್ಲಿ ಉತ್ತಮ ವಾತಾವರಣ ಸೃಷ್ಟಿಸದಿದ್ದರೆ ನಾಡಿನಲ್ಲಿ ಶಾಂತಿ‌ ನೆಲೆಸಲು ಪಾದಯಾತ್ರೆ ಪ್ರಾರಂಭ ಮಾಡ್ತೀನಿ ಎಂದು ಕುಮಾರಸ್ವಾಮಿ ಸರ್ಕಾರಕ್ಕೆ ಪಾದಯಾತ್ರೆ ಎಚ್ಚರಿಕೆ ನೀಡಿದ್ದಾರೆ. 1 ತಿಂಗಳಲ್ಲಿ ಸರಿಪಡಿಸದಿದ್ದರೆ ಮುಗ್ಧ ಮನಸ್ಸು ರಕ್ಷಣೆ ಮಾಡೋಕೆ ರಾಜ್ಯಾದ್ಯಂತ ಪಾದಯಾತ್ರೆ ಮಾಡ್ತೀವಿ ಎಂದಿದ್ದಾರೆ.

ಇಡಿ, ಐಟಿ ಭಯೋತ್ಪಾದಕರ ತರಹ ಕೆಲಸ‌ ಮಾಡುತ್ತಿವೆ
ಕಿಡಿಗೇಡಿಗಳು ಇವತ್ತು ದೇಶ ಒಡೆಯುವ ಕೆಲಸ ಮಾಡ್ತಿದ್ದಾರೆ. ಒಂದು ಕಡೆ ಸ್ವಚ್ಛ ಭಾರತ ಅಂತ ಸಾವಿರಾರು ಕೋಟಿ ಖರ್ಚು. ಆದ್ರೆ ಹೃದಯ ಸ್ವಚ್ಛ ಮಾಡುವ ಕೆಲಸ ಈ ದೇಶದಲ್ಲಿ ಆಗ್ತಿಲ್ಲ. ಇದರ ವಿರುದ್ಧ ಧ್ವನಿ ಎತ್ತುವವರನ್ನು ಹೆದರಿಸುತ್ತಾರೆ. ಅಂಗಸಂಸ್ಥೆಗಳನ್ನು ಇಟ್ಟುಕೊಂಡು ಹೆದರಿಸುತ್ತಾರೆ. ಇಡಿ, ಐಟಿ ಭಯೋತ್ಪಾದಕರ ತರಹ ಕೆಲಸ‌ ಮಾಡುತ್ತಿವೆ. ಈಗ ವಿಶ್ವ ಹಿಂದೂ ಪರಿಷತ್ ಅಂತ ಹುಟ್ಟಿಕೊಂಡಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ H.D.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ದೇಶ, ರಾಜ್ಯ ಛಿದ್ರ ಆಗಬಾರದು ಅಂತ ಅಂಬೇಡ್ಕರ್ ಹೇಳಿದ್ರು
ನಾನು ಅಕಸ್ಮಾತ್ ಆಗಿ ರಾಜಕೀಯಕ್ಕೆ ಬಂದೆ. ಎರಡು ಬಾರಿ ಸಿಎಂ ಆದಾಗ ನಾನು ಇಂತಹ ವಿಚಾರಕ್ಕೆ ಅವಕಾಶ ಕೊಟ್ಟಿರಲಿಲ್ಲ. ದೇಶ, ರಾಜ್ಯ ಛಿದ್ರ ಆಗಬಾರದು ಅಂತ ಅಂಬೇಡ್ಕರ್ ಹೇಳಿದ್ರು. ಭಾರತಕ್ಕೆ ಯಾವುದೇ ಒಂದು ಪ್ರತ್ಯೇಕ ಧರ್ಮ‌ ಇಲ್ಲ ಅಂತ ಅಂಬೇಡ್ಕರ್ ಹೇಳಿದ್ದಾರೆ. ವೃತ್ತಿಗಾಗಿ ದೇಶಕ್ಕೆ ಬಂದವರು ಅಲ್ಲಲ್ಲಿ ಸೇರಿಕೊಂಡರು. ಕರ್ನಾಟಕದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬರಬೇಕಾದ್ರೆ 10 ಲಕ್ಷಕ್ಕೂ ಹೆಚ್ಚು ಜನರ ಜೀವ ಹಾನಿ ಆಯ್ತು. ಅತ್ಯಾಚಾರಗಳು ಆಯ್ತು. ನಾವೆಲ್ಲ ಕುರುಕ್ಷೇತ್ರ ನೆನಪು ಮಾಡಿಕೊಳ್ಳಬೇಕು. ಭಗವದ್ಗೀತೆ ಶಾಲೆಯಲ್ಲಿ ಸೇರಿಸಲು ಹೋಗಿದ್ದಾರೆ. ಮಾಡಿ. ಆದ್ರೆ ಭಗವದ್ಗೀತೆ ಏನು ಹೇಳಿದೆ. ನಿನ್ನ ಕೆಲಸ ನೀನು ಮಾಡು ಅಂತ ಹೇಳಿದೆ.

ಆರ್ಎಸ್ಎಸ್ನಿಂದ ಗುಪ್ತಗಾಮಿನಿ ನಡವಳಿಕೆ
ಆರ್ಎಸ್ಎಸ್ನಿಂದ ಗುಪ್ತಗಾಮಿನಿ ನಡವಳಿಕೆ ನಡೆಯುತ್ತಿದೆ. ರಾಜ್ಯದಲ್ಲಿ ಶಾಂತಿ ವಾತಾವರಣ ತರ್ತೀರಾ, ಕೈ ಜೋಡಿಸ್ತೇನೆ. ಹಿಜಾಬ್ ಆಯ್ತು, ಜಾತ್ರೆಗಳಲ್ಲಿ ಮುಸ್ಲಿಮರಿಗೆ ಬಹಿಷ್ಕಾರ, ಕಾನೂನು ಸಚಿವರು ನೀವೇ ಕಾನೂನು ತಂದಿದ್ದು ಅಂದ್ರು. ನೀವೇ ಯಾವುದ್ಯಾವುದೋ ಕಾನೂನು ತಂದಿದ್ದು ಅಂದ್ರು. ವಿರೋಧ ಪಕ್ಷದವರು ಬಾಯಿ ಮುಚ್ಚಿಕೊಂಡು ಕುಳಿತರು ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ವರುಧಿನಿ ಸಾರಥ್ಯದಲ್ಲೇ ಬದಲಾಯಿತು ತಾಂಬೂಲ; ಹರ್ಷ-ಭುವಿ ನಿಶ್ಚಿತಾರ್ಥಕ್ಕೆ ಮುಹೂರ್ತ ನಿಗದಿ

ಲೋಕಸಭೆ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿಯನ್ನ ಮಂಡ್ಯದಿಂದಲೇ ಸ್ಪರ್ಧೆ ಮಾಡಿಸುತ್ತೇನೆ; ಹೆಚ್ ಡಿ ಕುಮಾರಸ್ವಾಮಿ

Published On - 3:40 pm, Thu, 31 March 22

Web contact

TV9 Kannada

Read More
Follow Us