Fire Accident: ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಅಗ್ನಿ ಅವಘಡ: ಹೊತ್ತಿ ಉರಿದ ಫರ್ನೀಚರ್ ಅಂಗಡಿ

|

Updated on: Mar 09, 2023 | 3:44 PM

ಫರ್ನೀಚರ್ ಅಂಗಡಿದೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಫರ್ನೀಚರ್ ವಸ್ತುಗಳ ಹೊತ್ತಿ ಉರಿದಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರ ದೊಮ್ಮಸಂದ್ರ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಆನೇಕಲ್: ಫರ್ನೀಚರ್ ಅಂಗಡಿದೊಂದರಲ್ಲಿ ಅಗ್ನಿ ಅವಘಡ (Fire Accident) ಸಂಭವಿಸಿ ಫರ್ನೀಚರ್ ವಸ್ತುಗಳ ಹೊತ್ತಿ ಉರಿದಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರ ದೊಮ್ಮಸಂದ್ರ ಮುಖ್ಯ ರಸ್ತೆಯಲ್ಲಿ ನಡೆದಿದೆ. ಶಾಟ್ ಸೆರ್ಕ್ಯುಟ್​ನಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ರಘು ರೆಡ್ಡಿ ಎಂಬುವವರಿಗೆ ಸೇರಿದ ಜಾಗದಲ್ಲಿ ಫರ್ನೀಚರ್ ವ್ಯವಹಾರಕ್ಕೆ ಅಂಗಡಿ ಬಾಡಿಗೆಗೆ ನೀಡಲಾಗಿತ್ತು. ಈ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭಿವಿಸಿದ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಸುಮಾರು 45 ಲಕ್ಷದಷ್ಟು ಬೆಲೆ ಬಾಳುವ ಫರ್ನೀಚರ್ ಸಾಮಾನು ಸುಟ್ಟು ಭಸ್ಮವಾಗಿದೆ ಎನ್ನಲಾಗುತ್ತಿದೆ.

ಬೆಂಕಿ ಸುತ್ತಲೂ ಆವರಿಸಿಕೊಳ್ಳುತ್ತಿದ್ದು, ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಇದರಿಂದಾಗಿ ಅಕ್ಕಪಕ್ಕದ ಅಂಗಡಿಗಳ ಮಾಲಿಕರಿಗೂ ಆತಂಕ ವ್ಯಕ್ತವಾಗಿದ್ದು, ಅಂಗಡಿಗಳನ್ನು ಮುಚ್ಚಿಸಲಾಗಿದೆ. ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಫುಲ್‌ಟ್ರಾಫಿಕ್ ಜಾಮ್ ಉಂಟಾಗಿದೆ. ಕೈಕೊಂಡರಹಳ್ಳಿ, ದೊಮ್ಮಸಂದ್ರ, ಬಡವಾಣೆ ಪವರ್ ಕಟ್ ಆಗಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಕಾಡ್ಗಿಚ್ಚಿಗೆ ಧಗ-ಧಗ ಹೊತ್ತಿ ಉರಿದ ಅರಣ್ಯ ಇಲಾಖೆ ಸಿಬ್ಬಂದಿಯ ಮೂರು ಬೈಕ್​ಗಳು!

ಹೆಚ್​.ಡಿ ಕೋಟೆ ಮೈದಾನದಲ್ಲಿ ಆಕಸ್ಮಿಕ ಬೆಂಕಿ

ಮೈಸೂರು: ಜಿಲ್ಲೆಯ ಹೆಚ್​.ಡಿ ಕೋಟೆ ಮೈದಾನದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿರುವಂತಹ ಘಟನೆ ನಡೆದಿದೆ. ಕಿಡಿಗೇಡಿಗಳು ಸಿಗರೇಟು ಸೇದುವ ವೇಳೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಪಕ್ಕದಲ್ಲೇ ಇದ್ದ ವಿದ್ಯುತ್ ಘಟಕ, ವಾಲ್ಮೀಕಿ ಭವನ ಮತ್ತು ಜೆಎಸ್​.ಎಸ್ ಮಂಗಳ ಮಂಟಪದ ಆವರಣಕ್ಕೆ ಬೆಂಕಿ ವ್ಯಾಪಿಸುವ ಭೀತಿ ಎದುರಾಗಿತ್ತು. ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ‌ ನಂದಿಸಿದ್ದು, ಭಾರಿ ಅನಾಹುತ ತಪ್ಪಿದೆ. ಹೆಚ್​​.ಡಿ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್​ನಲ್ಲಿ ಬೆಂಕಿ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 3 ಎಕರೆಯಷ್ಟು ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿರುವಂತಹ ಘಟನೆ ನಡೆದಿದೆ. ಒಟ್ಟು 1,200 ಎಕರೆ ವಿಸ್ತೀರ್ಣ ಬೆಂಗಳೂರು ವಿವಿ ಹೊಂದಿದೆ. 3 ಎಕರೆಯಷ್ಟು ಅರಣ್ಯ ಬೆಂಕಿಗೆ ಆಹುತೆ ಆಗಿದೆ ಎನ್ನಲಾಗುತ್ತಿದೆ.  ಇನ್ನು ಘಟನೆಗೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವರು ಸಿಗರೇಟ್ ಸೇದಿ ಕ್ಯಾಂಪಸ್​ನ ಒಣ ನೀಲಗಿರಿ ತೋಪಿಗೆ ಬೆಂಕಿಯ ತುಂಡು ಎಸೆದಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಚಾರ್ಮಾಡಿಘಾಟ್​ನ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ಅಪಾರ ಪ್ರಮಾಣದ ವನ್ಯಸಂಪತ್ತು ಬೆಂಕಿಗಾಹುತಿ

ಕಾಡ್ಗಿಚ್ಚಿಗೆ ಧಗ-ಧಗ ಹೊತ್ತಿ ಉರಿದ ಅರಣ್ಯ ಪ್ರದೇಶ

ಚಿಕ್ಕಮಗಳೂರು: ಅರಣ್ಯ ಪ್ರದೇಶಕ್ಕೆ ಬೆಂಕಿ ಹತ್ತಿಕೊಂಡ ಘಟನೆ ತಾಲೂಕಿನ ಸಿಂದಿಗೆರೆ ಗ್ರಾಮದಲ್ಲಿ ನಡೆದಿದೆ. ಕಾಡ್ಗಿಚ್ಚಿನ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿದ ಅರಣ್ಯ ಇಲಾಖೆ ಸಿಬ್ಬಂದಿ ಮೂರು ಬೈಕ್​ಗಳನ್ನು ರಸ್ತೆ ಪಕ್ಕ ನಿಲ್ಲಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಬೆಂಕಿ ಬಿದ್ದ ವ್ಯಾಪ್ತಿಯಲ್ಲಿ ಗಾಳಿ ಜೋರಾಗಿ ಬೀಸಿದ ಪರಿಣಾಮ ಬೆಂಕಿ ಮತ್ತಷ್ಟು ಹೆಚ್ಚಾಗಿದೆ. ಪರಿಣಾಮ ಗಾಳಿಯಲ್ಲಿ ಬಂದ ಬೆಂಕಿಯ ಕಿಡಿ ಅರಣ್ಯ ಇಲಾಖೆ ಸಿಬ್ಬಂದಿಯ ಬೈಕ್​ಗಳಿಗೆ ತಗುಲಿದೆ. ಅದರಂತೆ ಮೂರು ಬೈಕ್​ಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:25 pm, Thu, 9 March 23